Saturday, April 4, 2020

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು



ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು
ವೇದದ ಭಾಗವೇ ಆಗಿರುವ ಬ್ರಾಹ್ಮಣಗಳು ಸ್ವತಃ ಅರ್ಥನಿರೂಪಣೆಯಲ್ಲಿ ತೊಡಗಿವೆ. ಆದರೆ ಇವು ಮಂತ್ರಾರ್ಥಗಳನ್ನು ವಿವರಿಸುವುದಿಲ್ಲ. ಬದಲಿಗೆ ಯಜ್ಞ ಯಾಗಾದಿಗಳಿಗೆ ಕರ್ಮಗಳ ಮಹತ್ವವನ್ನು ತೋರಿಸುವುದು ಹಾಗೂ ಮಂತ್ರ ತಂತ್ರಗಳ ನಡುವಿನ ವಿಶೇಷ ಸಂಬಂಧವನ್ನು ನಿರೂಪಿಸುವುದು. ಅಲ್ಲಲ್ಲಿ ಕೆಲವು ಮಂತ್ರಗಳಿಗೆ ಅರ್ಥ ಅಥವಾ ಕ್ಲಿಷ್ಟಪದಗಳಿಗೆ ವಿವರಗಳನ್ನು ನೀಡಿರುವುದೂ ಉಂಟು. ಇಂತಹ ಪ್ರಾಸಂಗಿಕ ವಿವರಣೆಗಳನ್ನೆಲ್ಲ ಒಟ್ಟುಗೂಡಿಸಿದರೆ ಒಂದು ಗ್ರಂಥವಾಗುವುದು ಹಾಗೂ ಇವುಗಳಿಲ್ಲದಿದ್ದಲ್ಲಿ ಅನೇಕ ಪದಗಳು, ವಾಕ್ಯಗಳೂ ಕೂಡ ಅರ್ಥವಾಗುತ್ತಿರಲಿಲ್ಲ.

ಪ್ರಾತಿಶಾಖ್ಯಗಳೂ ಸರ್ವಾನುಕ್ರಮಣಿ ಮುಂತಾದುವೂ ವೇದವನ್ನು ಅಧ್ಯಯನ ಮಾಡುವವರಿಗೆ ಸಹಾಯಕವಾಗಿವೆಯೇ ಹೊರತು ಅರ್ಥವನ್ನು ಅರಿಯಲು ಅಪೇಕ್ಷಿಸುವವರಿಗೆ ಪ್ರಯೋಜನವಾಗಿಲ್ಲ. ಪ್ರಾತಿಶಾಖ್ಯಗಳು, ವೇದದ ಮೂಲ, ಉಚ್ಚರಿಸಬೇಕಾದ ಸ್ವರಗಳಿಗೆ ಸಂಬಂಧಿಸಿದ ವಿಷಯಗಳನ್ನು ವಿವರಿಸುತ್ತವೆ. ಸರ್ವಾನುಕ್ರಮಣಿಯಲ್ಲಿ ಮಂತ್ರದ ಋಷಿ, ಛಂದಸ್ಸು, ದೇವತೆ ಮುಂತಾದ ವಿಷಯಗಳನ್ನು ತಿಳಿಸುವುದು.

ವೇದದ ಅರ್ಥವಿವರಣೆಯೇ ಪ್ರಮುಖ ಉದ್ದೇಶವಾಗಿರುವ ಗ್ರಂಥವೆಂದರೆ ಯಾಸ್ಕರ ನಿರುಕ್ತ. ನಿರುಕ್ತದಲ್ಲಿ ಯಾಸ್ಕರು ಪದಗಳಿಗೆ ವೈದಿಕವಾದ ಅರ್ಥ ಹಾಗೂ ಸಾಧಾರವಾಗಿ ಈಗ ಬಳಕೆಯಲ್ಲಿರುವ ಸಂಸ್ಕೃತದಲ್ಲಿನ ವ್ಯತ್ಯಸ್ತವಾದ ಅರ್ಥ ಇವೆರಡನ್ನೂ ಅಲ್ಲಲ್ಲಿ ಕೊಟ್ಟಿರುವುದನ್ನು ನೋಡಬಹುದು. ಈ ರೀತಿ ವೇದ ಮತ್ತು ಭಾಷೆಗಳಲ್ಲಿರುವ ಎರಡು ಅರ್ಥಗಳನ್ನು ನೀಡಿರುವುದನ್ನು ಗಮನಿಸಿದರೆ ಯಾಸ್ಕರ ಕಾಲದಲ್ಲಿ ಸಂಸ್ಕೃತದ ಎರಡು ರೂಪಗಳೂ ಬಳಕೆಯಲ್ಲಿತ್ತೆನ್ನಬಹುದು. ಹಾಗೂ ನಿರುಕ್ತದ ಉಪೋದ್ಘಾತದಲ್ಲಿ ಒಂದು ಚರ್ಚೆಯನ್ನು ಕೊಟ್ಟಿರುವರು. ಈ ಚರ್ಚೆಯು ವೇದಗಳ ವ್ಯಾಖ್ಯಾನಕ್ಕೆ ಸಂಬಂಧಿಸಿರುವುದು. ಇದರ ಸಾರಾಂಶವೆಂದರೆ, ವೇದಗಳಿಗೇ ಅರ್ಥವಿಲ್ಲದಿರುವಾಗ ಅದಕ್ಕೆ ವ್ಯಾಖ್ಯಾನ ಮಾಡುವುದರಿಂದ ಪ್ರಯೋಜನವಿಲ್ಲ ಎಂದು.

ಅಸಾಧ್ಯ ವಾಚಕವಾಕ್ಯಗಳು, ಪರಸ್ಪರ ವಿರುದ್ಧಾರ್ಥವುಳ್ಳ ವಾಕ್ಯಗಳು, ಎಲ್ಲರಿಗೂ ಗೊತ್ತಿರುವ ಅರ್ಥವನ್ನೇ ಪುನಃ ವಿವರಿಸುವುದು, ಅರ್ಥವಾಗದ ಪದಗಳು ಇವುಗಳಿಂದ ವೇದಮಂತ್ರಗಳು ಅರ್ಥವಿಲ್ಲದವು. ಅಂತಹ ಗ್ರಂಥಕ್ಕೆ ವ್ಯಾಖ್ಯಾನಮಾಡುವುದು ವ್ಯರ್ಥ ಎಂಬ ಆಪಾದನೆ. ಈ ವಾದಗಳಿಗೆ ಸಾಯಣಾಚಾರ್ಯರ ಉಪೋದ್ಘಾತದಲ್ಲಿ ಸಮಂಜಸವಾದ ಉತ್ತರವನ್ನು ಕೊಟ್ಟಿರುವರು.

ಮೇಲೆ ವಿವರಿಸಿದ ವಾದವಿವಾದಗಳಿಂದ ತಿಳಿದುಬರುವುದೇನೆಂದರೆ ಯಾಸ್ಕರ ಕಾಲದಲ್ಲಿಯೇ ವೇದಗ್ರಂಥವು ಸಾಮಾನ್ಯರ ಬಳಕೆಯಲ್ಲಿರಲಿಲ್ಲ ಎಂಬುದು.

ವೇದವೆಲ್ಲವೂ ಜನಗಳಿಗೆ ತಿಳಿಯುವಂತಿದ್ದರೆ ಶಬ್ದಕೋಶದ ಅವಶ್ಯಕತೆಯಾದರೂ ಏಕೆ? ಹಾಗೂ ನಿರುಕ್ತದಲ್ಲಿ ಪದೇಪದೇ ಪದಗಳಿಗೆ ರೂಪ ವ್ಯುತ್ಪತ್ತಿ (ಯಾವ ಮೂಲಪದದಿಂದ ಬಂದಿದ್ದು) ಮಾಡಿ, ಇತರ ವ್ಯಾಖ್ಯಾನಕಾರರು ಹೇಗೆ ನಿರೂಪಣೆ ಮಾಡಿರುವರು ಎಂಬುದನ್ನೂ ವಿವರಿಸಿ ತಮ್ಮ ಅರ್ಥವೇ ಸರಿಯೆಂದು ವಾದಿಸಲು ಕಾರಣಗಳೇನು? ಪದಗಳು ಪರಿಚಿತವಾಗಿದ್ದಿದ್ದರೆ ಕಷ್ಟಪಟ್ಟು ಅರ್ಥವನ್ನು ಏಕೆ ಪ್ರತಿಪಾದಿಸಬೇಕಿತ್ತು? ಯಾಸ್ಕರು ಅರ್ಥಪ್ರತಿಪಾದನೆಗೆ ವ್ಯಾಕರಣ ಸಹಾಯವನ್ನು ತೆಗೆದುಕೊಂಡಿರುವುದನ್ನು ನೋಡಿದರೆ ಈ ಕಾರ್ಯದಲ್ಲಿ ಅವರಿಗೆ ಸಂಪ್ರದಾಯವೂ ಹೆಚ್ಚಾಗಿ ಸಹಕರಿಸಿದಂತೆ ತೋರುವುದಿಲ್ಲ. ಬಹುಷಃ ಸಂಪ್ರದಾಯವೂ ಆ ಹೊತ್ತಿಗೆ ಕ್ಷೀಣಿಸುತ್ತಾ ಬಂದಿರಬೇಕು. ವೇದದ ಕಾಲಕ್ಕೂ ಯಾಸ್ಕರ ಕಾಲಕ್ಕೂ ಬಹಳ ಅಂತರವಿದ್ದಿರಬೇಕು. ಏನೇ ಆಗಲಿ ವೇದಾರ್ಥವನ್ನು ಅರಿಯಲು ನಿರುಕ್ತದಿಂದ ಅಪಾರ ಉಪಕಾರವಾಗಿರುವುದಂತೂ ಸತ್ಯ.

ವೇದ ಕಾಲದಲ್ಲಿ ಶ್ರದ್ಧೆಯಿಂದಲೇ ಎಲ್ಲ ಕೆಲಸಗಳೂ ನಡೆಯುತ್ತಿದ್ದವು. ಆದ್ದರಿಂದಲೇ ಎಲ್ಲ ಮಂತ್ರಗಳಿಗೂ ಪ್ರಾಮಾಣ್ಯವು ಸಿದ್ಧವಾಗುತ್ತಿತ್ತು. ಆದರೆ, ಯಾಸ್ಕರ ನಿರುಕ್ತ ರಚನೆಯ ಕಾಲಕ್ಕೆ ಜನಗಳಿಗೆ ಶ್ರದ್ಧೆ, ನಂಬಿಕೆಯ ಜೊತೆಗೆ ಎಲ್ಲವೂ ಚೆನ್ನಾಗಿ ಚರ್ಚೆಮಾಡಲ್ಪಟ್ಟು ನ್ಯಾಯಸಮ್ಮತವಾಗಿದೆ ಎಂದು ಅನಿಸಬೇಕಿತ್ತು. ಹೀಗಾಗಿ ಯಾಸ್ಕರು ತಾವು ಹೇಳುವುದಕ್ಕೆ ವ್ಯಾಕರಣ, ಹಿಂದಿನ ಜ್ಞಾನಿಗಳ ಅನುಮೋದಕ ವಾಕ್ಯಗಳನ್ನು ಉಪಯೋಗಿಸಿಕೊಂಡು ಸಮರ್ಥಿಸಬೇಕಿತ್ತು.

ಪಾಣಿನಿಯ ವ್ಯಾಕರಣವು ಸಾಧಾರಣವಾಗಿ ವ್ಯಾಕರಣಕ್ಕೆ ಸಂಬಂಧಿಸಿದ್ದು. ವೇದಗಳ ರೂಪಗಳೆಲ್ಲವನ್ನೂ ಇದರಲ್ಲಿ ನಿರೂಪಿಸಿಲ್ಲ. ಹೀಗಾಗಿ ಇದರಿಂದ ವೇದಾರ್ಥವನ್ನು ತಿಳಿಯಲು ಹೆಚ್ಚಿಗೆ ಉಪಯೋಗವಾಗಿಲ್ಲ.

ಶಂಕರಭಗವತ್ಪಾದರು ಸಾಧಾರಣವಾಗಿ ಉಪನಿಷತ್ತುಗಳಿಗೆ ಮಾತ್ರ ಭಾಷ್ಯವನ್ನು ಬರೆದಿರುವರು. ಸಂಹಿತೆಗಳಿಗೆ ಸರಿಯಾದ ವ್ಯಾಖ್ಯಾನವಿಲ್ಲ. ಉಪನಿಷತ್ತಿಗೆ ವ್ಯಾಖ್ಯಾನ ಬರೆಯುವಾಗ ಅಲ್ಲಲ್ಲಿ ಕೆಲವು ಮಂತ್ರಗಳಿಗೆ ವ್ಯಾಖ್ಯಾನ ಮಾಡಿರುವರು.

ಪೂರ್ವಮೀಮಾಂಸ ಶಾಸ್ತ್ರದ ಉದ್ದೇಶವೇನೋ ವೇದಾರ್ಥವನ್ನು ನಿರೂಪಿಸುವುದೇ ಆದರೂ ಗ್ರಂಥವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಕಂಡುಬರುವುದು ವೇದದ ಅರ್ಥವಲ್ಲ. ಬದಲಿಗೆ ವೇದವನ್ನು ಅರ್ಥಮಾಡಿಕೊಳ್ಳುವ ರೀತಿಯ ಬಗ್ಗೆ ವಿವರಗಳಿರುವುದು. ಇದರ ಪ್ರಕಾರ ವೇದ ಮಂತ್ರಗಳನ್ನು ಯಾವ ಸಂದರ್ಭದಲ್ಲಿ ಉಪಯೋಗಿಸಬೇಕು, ಪರಸ್ಪರ ವಿರುದ್ಧ ವಾಕ್ಯಗಳಿದ್ದಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕು ಇತ್ಯಾದಿ ವಿಷಯಗಳಿಗೆ ಅನ್ವಯಿಸುತ್ತವೆ. ಉದಾಹರಣೆಗೆ - ಒಂದೇ ಮಂತ್ರಕ್ಕೆ ಸಂಬಂಧಿಸಿದ್ದು, ಒಂದಕ್ಕೊಂದು ವಿರುದ್ಧವಾಗಿರುವ ಶ್ರುತಿ, ಲಿಂಗ, ವಾಕ್ಯ, ಪ್ರಕರಣ, ಸ್ಥಾನ ಮತ್ತು ಸಮಾಖ್ಯಾ ಮುಂತಾದವುಗಳಲ್ಲಿ ಮೊದಲು ಬರುವುದಕ್ಕೆ ಪ್ರಾಮುಖ್ಯತೆ ಹೆಚ್ಚು. ಆದ್ದರಿಂದ ಪೂರ್ವ ವಾಕ್ಯಕ್ಕೇ ಪ್ರಾಮುಖ್ಗ್ಯತೆ. ಹೀಗಾಗಿ ಮೀಮಾಂಸಶಾಸ್ತ್ರವು ಅರ್ಥ ನಿರೂಪಣೆಗಿಂತ ಅದರ ರೀತಿಯನ್ನೇ ವಿವರಿಸುತ್ತದೆ.

ಅತಿ ಮುಖ್ಯವಾದ ಹಾಗೂ ನೇರವಾಗಿ ವೇದಾರ್ಥಕ್ಕೇ ಸಂಬಂಧಿಸಿದಂತೆ ರಚಿಸಲ್ಪಟ್ಟ ಗ್ರಂಥವೆಂದರೆ ಸಾಯಣಾಚಾರ್ಯರ ವೇದಾರ್ಥಪ್ರಕಾಶಿಕೆ. ಈ ಗ್ರಂಥದಲ್ಲಿ ಋಗ್ವೇದಕ್ಕೆ ಆಮೂಲಾಗ್ರವಾಗಿ ವಿಸ್ತೃತವಾದ ವ್ಯಾಖ್ಯಾನವು ಬರೆಯಲ್ಪಟ್ಟಿದೆ ಮತ್ತು ಅಮೂಲ್ಯ ವಿಷಯಗಳನ್ನೊಳಗೊಂಡಿರುವ ಹಾಗೂ ಪ್ರೌಢವಾದ ಉಪೋದ್ಘಾತದಿಂದಲೂ ಕೂಡಿದೆ.

ವೇದಾರ್ಥಪ್ರಕಾಶಿಕೆಯಲ್ಲಿ ಸಾಯಣಾಚಾರ್ಯರು ಋಗ್ವೇದದ ಪ್ರತೀ ಮಂತ್ರಕ್ಕೂ ಪದದ ಅರ್ಥ, ಕ್ಲಿಷ್ಟಪದಗಳ ವ್ಯುತ್ಪತ್ತಿ, ಅಲ್ಲಲ್ಲೇ ಬರುವ ವ್ಯಾಕರಣ ವಿಶೇಷಗಳು ಮತ್ತು ಪ್ರತಿ ಮಂತ್ರಕ್ಕೂ ಆದಿಯಲ್ಲಿ ಆ ಮಂತ್ರವನ್ನು ಯಾವ ಯಜ್ಞದಲ್ಲಿ ಎಲ್ಲಿ ಉಪಯೋಗಿಸಬೇಕು ಎಂದು ವಿವರಿಸಿದ್ದಾರೆ. ವೇದವೆಂಬುದು ಒಂದು ಪವಿತ್ರ ಗ್ರಂಥರಾಶಿ. ಅದರಲ್ಲಿರುವ ಪ್ರತಿಯೊಂದು ವಾಕ್ಯವೂ ಪ್ರಮಾಣೀಕೃತವಾದದ್ದು. ಅದನ್ನು ವಿಮರ್ಶೆ ಮಾಡುವುದೇ ತಪ್ಪು. ಮಂತ್ರಗಳು ಯಜ್ಞಯಾಗಾದಿಗಳಲ್ಲಿ ಉಪಯೋಗಿಸುವುದಕ್ಕಾಗಿ ಇದ್ದರೂ, ಪ್ರತಿ ಮಂತ್ರಕ್ಕೂ ಒಬ್ಬೊಬ್ಬ ಅಭಿಮಾನಿ ದೇವತೆಗಳಿರುವರು. ತಂತ್ರಗಳಿಗೆ ಮಂತ್ರಗಳನ್ನು ಅನ್ವಯಿಸುವಾಗ ಇದೇ ದೃಷ್ಟಿಯಿಂದಲೇ ಅವರು ಬರೆದಿರುವುದು.

ನಿರುಕ್ತಕಾರರಂತೆ ಸಾಯಣಾಚಾರ್ಯರೂ ಸಾಧಾರಣವಾಗಿ ಪದಗಳ ವ್ಯುತ್ಪತ್ತಿ ಮಾಡಿದ ನಂತರವೇ ಅರ್ಥವನ್ನು ನಿರೂಪಿಸಿರುವರು. ಅನೇಕ ಕಡೆ ನಿರುಕ್ತದಿಂದ ಉದಾಹರಣೆಗಳನ್ನು ನೀಡಿರುವರು. ಬ್ರಾಹ್ಮಣಗಳು, ಆರಣ್ಯಕಗಳು, ಸರ್ವಾನುಕ್ರಮಣಿ, ಬೃಹದ್ದೇವತಾ ಮುಂತಾದವುಗಳಿಂದಲೂ ಆರಿಸಿಕೊಂಡಿರುವರು. ಒಂದು ವೇಳೆ ಸಾಯಣರು ಭಾಷ್ಯವನ್ನು ಬರೆಯದಿದ್ದರೆ, ಈ ದಿನ ವೇದಾಭ್ಯಾಸವು ಯಾವ ಸ್ಥಿತಿಯಲ್ಲಿರುತ್ತಿತ್ತು ಎಂಬುದನ್ನು ಊಹಿಸಲೂ ಅಸಾಧ್ಯ.

ಹಿಂದಿನ ಕಾಲದಿಂದಲೂ ವೈದಿಕ ಬ್ರಾಹ್ಮಣರು ವೇದವನ್ನು ಶ್ರಮದಿಂದ ಕಂಠಪಾಠಮಾಡಿ ಅದನ್ನು ಅಚ್ಚಳಿಯದೆ ಇರುವಂತೆ ಉಳಿಸಿಕೊಂಡು ಬಂದಿರುವರು. ಆದರೆ ವೇದಾರ್ಥನಿರೂಪಣೆಗೆ ಅವರಿಂದ ತಕ್ಕಷ್ಟು ಸಹಾಯವಾಗಿಲ್ಲದಿರುವುದು ವಿಷಾದಕರ.

ವೇದವನ್ನು ಗುರುಮುಖೇನ ಕಲಿಯುವುದು ಪುರಾತನಕಾಲದಿಂದ ನಡೆದುಬಂದ ಪದ್ಧತಿ. ವೇದಕಾಲದಲ್ಲಿ ಭಾಷೆಗೆ ಲಿಪಿ ಇರಲಿಲ್ಲ. ಹೀಗಾಗಿ ಗುರುವು ಶಿಷ್ಯನಿಗೆ ಸರಿಯಾದ ಉಚ್ಚಾರಣೆಯ ಮೂಲಕ ಹೇಳಿಕೊಟ್ಟು ಬಾಯಿಪಾಠಮಾಡಿಸುತ್ತಿದ್ದರು. ಮೊದಲು ಗುರುವು ಓಂಕಾರಪೂರ್ವಕವಾಗಿ ಪರಮಾತ್ಮನಿಗೂ ತನ್ನ ಗುರುವಿಗೂ ನಮಸ್ಕರಿಸಿ ಬಳಿಕ ವೇದ ಮಂತ್ರಗಳನ್ನು ಪಾದ ಪಾದವಾಗಿ ಅಂದರೆ ಒಂದು ಮಂತ್ರದ ಮೊದಲನೇ ಪಾದವನ್ನು ಸ್ಪಷ್ಟವಾಗಿ ಹಾಗೂ ಸ್ವರಪೂರ್ವಕವಾಗಿ ಉಚ್ಚಾರಮಾಡುವನು. ಗುರುವು ಹೇಳಿದ ಅದೇ ಪಾದವನ್ನು ಶಿಷ್ಯನು ಮನಸ್ಸಿನಲ್ಲಿಟ್ಟುಕೊಂಡು ಅದರಂತೆ ಎರಡು ಅಥವಾ ಮೂರು ಬಾರಿ ಉಚ್ಚರಿಸುವನು. ಶಿಷ್ಯನ ಉಚ್ಚಾರಣೆ ಸರಿಯಾಗಿಲ್ಲದಿದ್ದರೆ, ಗುರುವು ಕೂಡಲೇ ತಿದ್ದಿ ಸರಿಯಾಗಿ ಹೇಳಿಸುವನು. ಬಳಿಕ ಎರಡನೇ ಪಾದವನ್ನು ಹೇಳಿಕೊಡುವನು. ಶಿಷ್ಯನು ಚಿಕ್ಕವಯಸ್ಸಿನವನಾಗಿದ್ದು ಅನುಭವ ಸಾಲದಿದ್ದ ಪಕ್ಷದಲ್ಲಿ ದೊಡ್ಡ ಛಂದಸ್ಸಿನ ಪಾದಗಳನ್ನು ಪದಚ್ಛೇದ ಕ್ರಮದಿಂದ 2-3 ಭಾಗಗಳನ್ನಾಗಿ ಮಾಡಿ ಒಂದೊಂದು ಭಾಗವನ್ನೂ ಹೇಳಿಸುವನು. ಈ ರೀತಿ ಪಾಡ್ಯ, ಅಷ್ಟಮಿ, ಚತುರ್ದಶಿ, ಪೂರ್ಣಿಮಾ, ಅಮಾವಾಸ್ಯಾ, ಸಂಕ್ರಮಣ ಮೊದಲಾದ ಅನಧ್ಯಯನ ದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ಪ್ರಾತಃಕಾಲದಲ್ಲಿ ಸ್ನಾನ, ಸಂಧ್ಯಾವಂದನೆ, ಅಗ್ನಿಕಾರ್ಯ ಮುಂತಾದ ಪ್ರಾತರಾಹ್ನಿಕಗಳ ನಂತರ ಶಿಷ್ಯನು ನಮ್ರನಾಗಿ ಗುರುಗಳ ಮುಂದೆ ಉತ್ತರಾಭಿಮುಖನಾಗಿ ಕುಳಿತು ಒಂದು ತಿಂಗಳೂ ಅಥವಾ ಹೆಚ್ಚಾಗಿಯೋ ಪ್ರತಿದಿನ ಪಾಠವನ್ನು ಕಲಿಯಬೇಕು. ಶಿಷ್ಯನು ಹಿಂದಿನ ಪಾಠವನ್ನು ಗುರುವಿನ ಆದೇಶದಂತೆ ಪ್ರತಿದಿನವೂ ಚೆನ್ನಾಗಿ ಹೇಳಿಕೊಳ್ಳುತ್ತಿರಬೇಕು. ಈ ಕ್ರಮದಿಂದ ಸ್ವಶಾಖೆಯ ಸಂಹಿತೆಯನ್ನು ಮೊದಲಿಗೆ ಮುಗಿಸಿ ಆ ಶಾಖೆಯ ಬ್ರಾಹ್ಮಣ ಮತ್ತು ಆರಣ್ಯಕ, ಉಪನಿಷತ್ತುಗಳನ್ನೂ ಅಧ್ಯಯನಮಾಡಬೇಕು. ಹೀಗೆ ವೇದಾಧ್ಯಯನ ಮಾಡುತ್ತಿರುವಾಗಲೇ ಮಧ್ಯಾಹ್ನ ಕಾಲದಲ್ಲಿಯೂ ಅವಕಾಶವಿದ್ದಾಗ ವೇದಗಳ ಶಿಕ್ಷಾದಿ ಷಡಂಗಗಳನ್ನೂ, ಕಲ್ಪಸೂತ್ರ, ಧರ್ಮಶಾಸ್ತ್ರ, ಪುರಾಣ, ಇತಿಹಾಸ ಮೊದಲಾದ ಇತರ ಗ್ರಂಥಗಳನ್ನೂ ಅಭ್ಯಾಸಮಾಡಬೇಕು. ಈ ರೀತಿ ಒಂದು ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಬೇಕಾದರೆ 12 ವರ್ಷಗಳು ಬೇಕು ಎಂದು ನಿರ್ಣಯಮಾಡಿರುವರು. ಉಪನಯನವಾದ ಬಳಿಕ ಗಾಯತ್ರೀ ಮಂತ್ರೋಪದೇಶವನ್ನು ಪಡೆದ ನಂತರವೇ ಅಧ್ಯಯನ ಮಾಡಬೇಕು. ಅಧ್ಯಯನ ಕಾಲದಲ್ಲಿ ಗುರುವಿನ ಶುಶ್ರೂಷೆಯನ್ನು ಮಾಡುತ್ತಾ ಅವರ ಮನೆಯಲ್ಲೇ ವಾಸಿಸುತ್ತಿರಬೇಕು. ಈ ವಿಚಾರದ ನಿಯಮಗಳು ಗೃಹ್ಯಸೂತ್ರದಲ್ಲಿ ನಿರೂಪಿಸಲ್ಪಟ್ಟಿವೆ. ಸ್ವಶಾಖಾದ್ಯಯನ ಪೂರ್ತಿಯಾದಮೇಲೆ ಕಾಲಾವಕಾಶ ಮತ್ತು ಶಕ್ತಿಯಿದ್ದಲ್ಲಿ ಇತರ ಶಾಖೆಗಳನ್ನೂ ಅಧ್ಯಯನ ಮಾಡಬಹುದು. ವಿದ್ಯಾಭ್ಯಾಸ ಮುಗಿದ ನಂತರ ಗುರುವಿಗೆ ಯಥೋಚಿತ ದಕ್ಷಿಣೆಯನ್ನು ಸಲ್ಲಿಸಿ ಅವರನ್ನು ತೃಪ್ತಿಪಡಿಸಿ ಸ್ನಾತಕವ್ರತವನ್ನು ನೆರವೇರಿಸಿ ವಿವಾಹ ಮಾಡಿಕೊಂಡು ಗೃಹಸ್ಥಾಶ್ರಮವನ್ನು ಸ್ವೀಕರಿಸಬೇಕು. ಇದು ಪ್ರಾಚೀನಸಂಪ್ರದಾಯ.

ಮೂಲ : ಆಸ್ಥಾನ ವಿದ್ವಾನ್ ಹೆಚ್.ಪಿ.ವೆಂಕಟರಾವ್ ಅವರ ಋಗ್ವೇದ ಸಂಹಿತಾ.




Thursday, April 2, 2020

ವೇದಗಳ ಪದಪಾಠಕಾರರು

ವೇದಗಳ ಪದಪಾಠಕಾರರು

ವೇದ ಸಂಹಿತೆಗಳ ಪದಪಾಠವು ಅತ್ಯಂತ ಪ್ರಾಚೀನವಾದುದು. ಸಂಹಿತೆಗಿಂತಲೂ ಪದಪಾಠವೇ ಪ್ರಾಚೀನವೆಂದೂ ಸಂಹಿತೆಗೂ ಅದೇ ಮೂಲಭೂತವೆಂದೂ ಕೆಲವರ ಮತ. ಪದಪಾಠದಿಂದ ಭಾಷ್ಯಕಾರರಿಗೆ ಬಹಳಷ್ಟು ಉಪಯೋಗವಾಗಿದೆ. ಸಾಹಿತ್ಯಸಂಬಂಧವಾದ ಸಂಸ್ಕೃತ ಭಾಷೆಯಲ್ಲಿ ವಿದ್ವಾಂಸರು ತಮಗೆ ತೋಚಿದಂತೆ ಅಥವಾ ತಮ್ಮ ಅಭಿಪ್ರಾಯಕ್ಕೆ ಹೊಂದಿಕೊಳ್ಳುವಂತೆ ಪದವಿಭಾಗವನ್ನು ಮಾಡುವುದೂ, ಒಂದೇ ಪದಕ್ಕೆ ನಾನಾವಿಧವಾದ ಅರ್ಥಗಳನ್ನು ಕಲ್ಪಿಸುವುದೂ, ಸಮಾಸಪದಗಳನ್ನೂ ಸಹ ತಮಗಿಷ್ಟವಾದ ಅರ್ಥಬರುವಂತೆ ವ್ಯತ್ಯಾಸ ಮಾಡುವುದೂ ಸಾಧಾರಣವಾಗಿ ರೂಢಿಯಲ್ಲಿದೆ. ಈ ಕಾರಣದಿಂದ ವೇದಕ್ಕೆ ನಾನಾವಿಧವಾದ ಅರ್ಥಗಳನ್ನೂ, ಅಸಮಂಜಸವಾದ ವಿಚಿತ್ರಾರ್ಥಗಳನ್ನೂ ಕಲ್ಪಿಸಿ ಪ್ರಾಚೀನ ಋಷಿಗಳ ಅಭಿಪ್ರಾಯವೇ ವ್ಯತ್ಯಾಸವಾಗಬಹುದು ಎಂಬ ಶಂಕೆಯಿಂದ ವೇದಗಳ ಪದವಿಭಾಗವನ್ನು ಬಹು ಪುರಾತನಕಾಲದಲ್ಲಿಯೇ ಋಷಿಗಳು ಮಾಡಿರುವರು. ಆದುದರಿಂದ ವೇದದ ಪದಗಳಿಗೆ ಭಾಷ್ಯಕಾರರು ತಮ್ಮ ಬುದ್ಧಿಶಕ್ತಿಗನುಸಾರವಾಗಿ, ನಾನಾವಿಧವಾದ ಅರ್ಥಗಳನ್ನು ಕಲ್ಪಿಸಬಹುದೇ ವಿನಹ ಪದವಿಭಾಗವನ್ನು ತಮಗಿಷ್ಟಬಂದಂತೆ ಮಾಡಲು ಅವಕಾಶವಿಲ್ಲ. ಈ ಕಾರಣದಿಂದ ಸಂಹಿತೆಗಳೂ ಪಾಠಗಳೂ ಅತಿ ಪ್ರಾಚೀನ ಕಾಲದಿಂದಲೂ ಯಾವ ವ್ಯತ್ಯಾಸವನ್ನೂ ಹೊಂದದೆ ಋಷಿಗಳು ಹಿಂದೆ ರಚಿಸಿದಂತೆಯೇ ಈಗಲೂ ಇರುವುದು. ಇದಲ್ಲದೆ ವೇದಾಕ್ಷರಗಳಲ್ಲಿಯೂ, ಸ್ವರಗಳಲ್ಲಿಯೂ, ಉಚ್ಚಾರಣೆಯಲ್ಲಿಯೂ ವ್ಯತ್ಯಾಸಮಾಡುವುದು ಮಹಾಪಾಪವೆಂದು ಋಷಿಗಳು ನಿರ್ಣಯಿಸಿರುವರು. ಈರೀತಿಯಾಗಿ ವೇದಪಾಠವನ್ನು ಅಚ್ಚಳಿಯದಂತೆ ಕಾಪಾಡಿಕೊಂಡು ಬರುವುದಕ್ಕಾಗಿಯೇ ಪ್ರತಿ ವೇದಕ್ಕೂ ಅನೇಕ ಶಿಕ್ಷಾಗ್ರಂಥಗಳೂ, ಪ್ರತಿಶಾಖ್ಯಗಳೂ ರಚಿತವಾಗಿವೆ. ಈ ಗ್ರಂಥಗಳ ಸಹಾಯದಿಂದಲೂ ವೇದಾಭ್ಯಾಸವಿಚಾರದಲ್ಲಿ ಪೂರ್ವ ಸಂಪ್ರದಾಯವನ್ನು ಅನುಸರಿಸುವುದೇ ರೂಢಿಯಾಗಿರುವುದರಿಂದಲೂ ವೇದಪಾಠವು ಯಾವ ವ್ಯತ್ಯಾಸವನ್ನೂ ಹೊಂದದೆ ಹಿಂದಿದ್ದಂತೆಯೇ ಈಗಲೂ ಇರುವುದು.

ಪದ ಪಾಠಗಳು ಸಂಹಿತೆಗಳಿಗೆ ಮಾತ್ರ ಇವೆ. ಬ್ರಾಹ್ಮಣ ಆರಣ್ಯಕ ಮೊದಲಾದ ಇತರ ವೇದ ಭಾಗಗಳಿಗೆ ಪದಪಾಠವಿಲ್ಲ. ಎಂದರೆ ಪದಪಾಠವನ್ನು ಪ್ರತ್ಯೇಕವಾಗಿ ಅಧ್ಯಯನಮಾಡುವ ರೂಢಿಯಿಲ್ಲ. ಭಾಷ್ಯಗಳಿಗೂ ಪದಪಾಠಗಳಿಗೂ ಇಷ್ಟು ಮಾತ್ರ ವ್ಯತ್ಯಾಸ. ಭಾಷ್ಯಗಳಿಂದ ಮಂತ್ರಗಳ ಅರ್ಥ ಮುಂತಾದವು ತಿಳಿಯುತ್ತವೆ. ಅರ್ಥ ತಿಳಿಯಬೇಕಾದರೆ, ಪದವಿಚ್ಛೇದ ಮಾಡಬೇಕು. ಪದಗಳ ಪ್ರಕೃತಿ ಪ್ರತ್ಯಯಜ್ಞಾನ, ಸಮಾಸಗಳು ಮುಂತಾದವು ತಿಳಿಯಬೇಕು. ಇವೆಲ್ಲ ಪದಪಾಠಗಳಿಂದ ತಿಳಿದುಬರುತ್ತವೆ. ಆದುದರಿಂದ ಪದಪಾಠಗಳು ವೇದಗಳಿಗೆ ಪ್ರಾಚೀನವೂ, ಮುಖ್ಯವೂ ಆದ ವೇದಭಾಗಗಳೆಂದು ಭಾವಿಸಬಹುದು. ಈ ಪದಪಾಠಗಳಿಂದ ಭಾಷ್ಯಕಾರರಿಗೆ ಬಹಳ ಉಪಕಾರವಾಗಿದೆ.

ವೇದಗಳನ್ನು ತಿಳಿಯಬೇಕೆನ್ನುವವರು ಎಲ್ಲಾ ಪದಪಾಠಗಳನ್ನೂ ಅಭ್ಯಾಸ ಮಾಡಬೇಕು. ಒಂದೇ ಪದಕ್ಕೆ ಬೇರೆಬೇರೆ ಅರ್ಥವಿರುವ ಸಂದರ್ಭದಲ್ಲಿ ಬೇರೆಬೇರೆ ವಿಧವಾಗಿ ಪದವಿಚ್ಛೇದ, ಅಥವಾ ಶಾಖಾಂತರವಾದ ಪಾಠ, ಅರ್ಥವ್ಯತ್ಯಾಸವಾದಾಗ ಸ್ವರವ್ಯತ್ಯಾಸ ಇವುಗಳೆಲ್ಲವೂ ಪದಪಾಠಗಳಿಂದ ಗೊತ್ತಾಗುತ್ತವೆ. ಪದವಿಭಾಗಕ್ರಮದಲ್ಲಿಯೂ, ಸ್ವರ ಜೋಡಣೆಯಲ್ಲಿಯೂ. ಒಂದು ಗೊತ್ತಾದ ಕ್ರಮವಿರುವುದಲ್ಲದೆ, ಇವುಗಳನ್ನು ಕ್ರಮಪಡಿಸಿದವರು ಎಷ್ಟರಮಟ್ಟಿಗೆ ತಮ್ಮ ಬುದ್ಧಿಶಕ್ತಿಯನ್ನೂ ಶ್ರಮವನ್ನೂ ಉಪಯೋಗಿಸಿರುವರೆಂಬುದು ವೇದಸಂಶೋಧಕರನ್ನು ಆಶ್ಚರ್ಯಪಡಿಸದಿರಲಾರದು.

ನಾಲ್ಕು ವೇದಗಳ ಪದಪಾಠಕಾರರ ಬಗೆಗೆ ವಿವರಗಳಿಗಾಗಿ ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್ ಅವರ "ಋಗ್ವೇದ ಸಂಹಿತಾ" - ಭಾಗ - 1ನ್ನು ಓದಿ.

Monday, March 30, 2020

ಅಶ್ವಮೇಧ ಯಜ್ಞದ ಸಾಂಕೇತಿಕತೆ ಒಂದು ವಿವರಣೆ

ಅಶ್ವಮೇಧ ಯಜ್ಞದ ಸಾಂಕೇತಿಕತೆ ಒಂದು ವಿವರಣೆ

ಅಶ್ವಮೇಧ ಪದವು ಈ ಹೆಸರಿನ ಜನಪ್ರಿಯ ಯಜ್ಞದೊಂದಿಗೆ ಸಂಬಂಧಿತವಾಗಿದೆ. ಈಗ ನಾವು ಅಶ್ವಮೇಧ ಯಾಗದ ವಿಭಿನ್ನ ಅಂಶಗಳನ್ನು ತಿಳಿಯೋಣ:

ಅಶ್ವಮೇಧ ಪದವನ್ನು ವೇದಕಾಲದ ಹಾಗೂ ವೇದಕಾಲಾನಂತರದ ಗ್ರಂಥಗಳಲ್ಲಿ ಪದೇ ಪದೇ ಉಪಯೋಗಿಸಿರುವುದರಿಂದ ಇದು ಅತ್ಯಂತ ಜನಪ್ರಿಯವಾಗಿದೆ. ಕ್ಷತ್ರಿಯ ಯಜ್ಞಗಳೆಂದು ಕರೆಯಲ್ಪಡುವ ನಾಲ್ಕು ಯಜ್ಞಗಳಲ್ಲಿ ಅಶ್ವಮೇಧ ಯಜ್ಞವೇ ಅತ್ಯಂತ ಜನಪ್ರಿಯವಾದದ್ದು. ಉಳಿದ ಮೂರು ಕ್ಷತ್ರಿಯ ಯಜ್ಞಗಳೆಂದರೆ - ವಾಜಪೇಯಿ, ರಾಜಸೂಯ ಮತ್ತು ಸೌತ್ರಾಮಣಿ. ಯಜ್ಞದ ಕೊನೆಯ ಹಂತದಲ್ಲಿ ಅಶ್ವವನ್ನು ಬಲಿಕೊಡುವುದರ ಬಗ್ಗೆ ನಾವು ಅರಿಯುತ್ತೇವೆ. ಈ ಯಜ್ಞದ ಸಾಂಕೇತಿಕ ಅಂಶಗಳ ಕಡೆಗೆ ಇಲ್ಲಿ ನಾವು ಗಮನ ಕೊಡೋಣ.

ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧ ಎಂಬುದಕ್ಕೆ - "ಅಶ್ವಂ ವೈ ರಾಷ್ಟ್ರಂ" ಅಂದರೆ ರಾಷ್ಟ್ರವನ್ನು ಅಶ್ವವೆಂದು ಕರೆದು ಮೇಧಾ ಎಂಬುದನ್ನು ಸಂಯೋಜನೆ ಎಂಬುದಾಗಿ ವಿವರಿಸಲಾಗಿದೆ. ಇದು ಒಂದು ವಿಶೇಷವಾದ ಅರ್ಥವನ್ನು ನೀಡುತ್ತದೆ. ಹಿಂದಿನ ಕಾಲದಲ್ಲಿ ರಾಜರುಗಳು ತಮ್ಮ ರಾಜ್ಯವನ್ನು ಸಂಯೋಜಿಸುವ ಸಲುವಾಗಿ ಈ ಯಾಗವನ್ನು ಮಾಡುತ್ತಿದ್ದರು. ಅಂದರೆ ರಾಜರುಗಳು ತಮ್ಮ ರಾಜ್ಯದ ಸರಹದ್ದನ್ನು ಬಲಪಡಿಸಲು ಅಥವಾ ರಾಜ್ಯವನ್ನು ವಿಸ್ತರಿಸಲು ಅಶ್ವಮೇಧ ಯಾಗವನ್ನು ಮಾಡುತ್ತಿದ್ದರು. ರಾಮಾಯಣ ಮಹಾಭಾರತದಲ್ಲಿ ಅಶ್ವಮೇಧ ಯಾಗವನ್ನು ಮಾಡಿರುವುದನ್ನು ಓದಿರಬಹುದು. ಕ್ರಮೇಣ ಈ ಯಾಗದಲ್ಲಿ ಚಿನ್ಹೆಯಾಗಿ ಉಪಯೋಗಿಸುತ್ತಿದ್ದ ಅಶ್ವವನ್ನು ಮರೆತು ಅಶ್ವಮೇಧಯಜ್ಞದಲ್ಲಿ ಅಶ್ವವನ್ನು ಬಲಿಕೊಡುವುದು ಪದ್ಧತಿಯಾಯಿತು.

ವೇದಗ್ರಂಥಗಳಲ್ಲಿ ಅನೇಕ ಕಡೆಗಳಲ್ಲಿ ಪ್ರಾಣಿಹಿಂಸೆಯನ್ನು ವಿರೋಧಿಸಲಾಗಿದೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೆ ಅಶ್ವಮೇಧ ಪದಕ್ಕೆ ಕುತೂಹಲಕರವಾದ ಅರ್ಥವಿರುವುದು. ಇಲ್ಲಿ ಅಶ್ವ ಎಂದರೆ ಮಾನವನ ಇಂದ್ರಿಯಗಳು, ಮೇಧ ಎಂದರೆ ಸಂಯೋಜನೆ ಎಂದು. ಹೀಗಾಗಿ ಅಶ್ವಮೇಧ ಎಂದರೆ ಆತ್ಮಜ್ಞಾನವನ್ನು ಪಡೆದುಕೊಳ್ಳಲು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು.

ಒಂದು ಆಸಕ್ತಿದಾಯಕ ವಿಷಯವೆಂದರೆ ಅಶ್ವಮೇಧ ಯಜ್ಞದ ಎಲ್ಲ ಮಂತ್ರಗಳೂ ಮೂಲತಃ ಋಗ್ವೇದ ಸಂಹಿತೆಯಲ್ಲೇ ಇರುವುದು. ಒಟ್ಟು 36 ಮಂತ್ರಗಳ ಪೈಕಿ 22 ಮಂತ್ರಗಳು ಸೂಕ್ತ 1-162ರಲ್ಲಿದ್ದರೆ, 13 ಮಂತ್ರಗಳು ಸೂಕ್ತ 1-163ರಲ್ಲಿದ್ದು, ಕೊನೆಯ ಒಂದು ಮಂತ್ರವು ತೈತ್ತೀರಿಯ ಸಂಹಿತೆ 5-7-24ರಲ್ಲಿ ಇರುವುದು.

ಸುಪ್ರಸಿದ್ಧ ವೇದ ವಿದ್ವಾಂಸರಾದ ಪ್ರೊ.ಆರ್.ಎಲ್.ಕಶ್ಯಪ್ ಅವರು ಯೋಗದೃಷ್ಟಿಯಿಂದ ಎಲ್ಲ 36 ಮಂತ್ರಗಳನ್ನೂ ಕೂಲಂಕುಷವಾಗಿ ಪರಿಶೀಲಿಸಿರುವರು. ಅವರ ಪ್ರಕಾರ ಅಶ್ವ ಎಂಬುದು ಜೀವಶಕ್ತಿ ಅಥವಾ ಪ್ರಾಣದ ಸಂಕೇತವೆಂದು ಹಾಗೂ ಇದು ಮಾನವನ ಶರೀರದೊಳಗೂ ಹಾಗೂ ವಿಶ್ವದಲ್ಲೂ ಇರುವುದು ಎಂಬುದಾಗಿ ಅರ್ಥೈಸುತ್ತಾರೆ. ಅವರು ಮೇಧ ಎಂಬ ಪದಕ್ಕೆ ಅರ್ಪಣೆ ಎಂದು ಅರ್ಥೈಸಿ ಅಶ್ವಮೇಧ ಪದಕ್ಕೆ - ಜೀವಶಕ್ತಿ ಅಥವಾ ಪ್ರಾಣವನ್ನು ಅದರೊಂದಿಗೆ ಸಮಸ್ತ ಪ್ರಚೋದನೆಗಳು, ಆಸೆಗಳು, ಸುಖಸಂತೋಷಗಳು ಮತ್ತು ಅವುಗಳೊಂದಿಗಿನ ಭೌತಿಕ ಪ್ರತಿರೂಪಗಳೊಂದಿಗೆ ಅರ್ಪಣೆಮಾಡುವ ಕ್ರಿಯೆ ಎಂದಿರುವರು. ಇಲ್ಲಿ ಅರ್ಪಣೆಯಲ್ಲಿ ಯಜಮಾನನ ನಕಾರಾತ್ಮಕ ಗುಣಗಳನ್ನೂ ಶುದ್ಧೀಕರಣದ ಸಲುವಾಗಿ ಅಗ್ನಿಯಲ್ಲಿ ಅರ್ಪಿಸುವುದೂ ಸೇರಿದೆ.

ಅಶ್ವವು ಪ್ರಮುಖ ಶಕ್ತಿಯಾದ ಪ್ರಾಣವನ್ನು ಸಂಕೇತಿಸುತ್ತದೆ. ಇದು ಸೂರ್ಯ ಹಾಗೂ ಸೂರ್ಯಕಿರಣಗಳನ್ನೂ ಸಂಕೇತಿಸುತ್ತದೆ. ಬೃಹದಾರಣ್ಯಕೋಪನಿಷತ್ತಿನಲ್ಲಿ ಸಮಸ್ತ ವಿಶ್ವದ ಸೃಷ್ಟಿ-ಸ್ಥಿತಿಗಳನ್ನು ಯಜ್ಞದ ಮೂಲಕ ಸಂಕೇತಿಸಿ ವಿವಿಧ ರೀತಿಯಲ್ಲಿ

ವಿವರಿಸಲಾಗಿದೆ. ಇಲ್ಲಿನ ಮೊದಲ ಮಂತ್ರದಲ್ಲೇ ಬಲಿ ಕೊಡುವ ಅಶ್ವದ ಬಗ್ಗೆ ಸಾಂಕೇತಿಕವಾಗಿ ಪ್ರಾಣ ಎಂಬುದಾಗಿ ವಿವರಿಸಲಾಗಿದೆ. ಅಶ್ವದ ವಿವಿಧ ಅಂಗಗಳನ್ನು ವಿಶ್ವದ ವಿವಿಧ ಅಂಶಗಳಾದ ಮುಂಜಾನೆ, ಸೂರ್ಯ, ನದಿಗಳು ಇತ್ಯಾದಿಗಳೊಂದಿಗೆ ಸಾಂಕೇತಿಕವಾಗಿ ವಿವರಿಸಿರುವುದನ್ನು ಈ ಮಂತ್ರದಲ್ಲಿ ಕಾಣಬಹುದು.

ಓಂ ಉಷಾ ವಾ ಅಶ್ವಸ್ಯ ಮೇಧ್ಯಸ್ಯ ಶಿರಃ|
ಸೂರ್ಯಶ್ಚಕ್ಷುಃ ವಾತಃ ಪ್ರಾಣಃ, ವ್ಯಾತ್ತಮಗ್ರಿರ್ವೈಶ್ವಾನರಃ ಸಂವತ್ಸರ ಆತ್ಮಾಶ್ವಸ್ಯ ಮೇಧ್ಯಸ್ಯ|
ದ್ಯೋಃ ಪೃಷ್ಠಮ್ ಅಂತರಿಕ್ಷಮುದರಮ್ ಪೃಥಿವೀ ಪಾಜಸ್ಯಮ್, ದಿಶಃ ಪಾರ್ಶ್ವೆ ಅವಾಂತರದಿಶಃ ಪರ್ಶ್ವವಃ, ಋತವೋಂಗಾನಿ ಮಾಸಾಶ್ಚಾರ್ಧ ಮಾಸಾಶ್ಚ ಪರ್ವಾಣ್ಯ ಹೋರಾತ್ರಾಣಿ ಪ್ರತಿಷ್ಠಾ ನಕ್ಷತ್ರಾಣ್ಯಸ್ಥೀನಿ ನಭೋ ಮಾಸಾಂನ್ಯೂ ವಧ್ಯ ಸಿಕತಾ ಸ್ಸಿಂಧವೋ ಗುದಾ ಯಕೃಚ್ಚ ಕ್ಲೋಮಾ ಗಹನಶ್ಚ ಪರ್ವತಾ ಓಷಧಯಶ್ಚ ವನಸ್ಪತಯಶ್ಚ ಲೋಮಾನ್ಯುದ್ಯನ್ಪೂರ್ವಾರ್ಧೋ ನಿಮ್ಲೋಚಞಜಘನಾರ್ಧೋ ಯದ್ವಿಜೃಂಭತೇ ತದ್ವಿದ್ಯೋತತೇ ಯಾದ್ವಿಧೂನು-ತೇ ತತ್ಸನಯತಿ ಯನ್ಮೇಹತಿ ತದ್ವರ್ಷತಿ ವಾಗೇವಾಸ್ಯ ವಾಕ್||   ಬೃಹದಾರಣ್ಯಕೋಪನಿಷತ್ 1-1-1

ಅಶ್ವಮೇಧ ಯಾಗದಲ್ಲಿ ಅಶ್ವವೇ ಪ್ರಧಾನವಾದುದು. ಹಾಗಾಗಿ ಕ್ರತುವನ್ನು ಅಶ್ವವೆಂದು ಕರೆದಿದೆ. ಇಂತಹ ಅಶ್ವಕ್ಕೆ ಮುಹೂರ್ತವೇ ತಲೆ, ಸೂರ್ಯನೇ ಕಣ್ಣು, ವಾಯುವೇ ಉಸಿರು. ವ್ಯಾತ್ತವು ಅಂದರೆ ತೆರೆದ ಮುಖವು ಅಗ್ನಿಃ - ವೈಶ್ವಾನರನು. ಮೇಧ್ಯವಾದ ಅಶ್ವಕ್ಕೆ ಸಂವತ್ಸರವು ಆತ್ಮ, ದ್ಯುಲೋಕವೇ ಬೆನ್ನು, ಅಂತರಿಕ್ಷವೇ ಉದರ, ಪೃಥಿವಿಯು ಪಾಜಸ್ಯ - ಅಂದರೆ ಪಾದಗಳನ್ನು ಇಡುವ ಹೆಜ್ಜೆಗಳು, ದಿಕ್ಕುಗಳೇ ಪಕ್ಕೆಗಳು, ಅವಾಂತರ ದಿಕ್ಕುಗಳು ಪರ್ಶುಗಳು ಅಂದರೆ ಆಗ್ನೇಯವೇ ಮುಂತಾದ ದಿಕ್ಕುಗಳು ಪಕ್ಕೆಲಬುಗಳು, ಋತಗಳು ಅಂಗಗಳು, ಮಾಸಗಳೂ, ಅರ್ಧಮಾಸಗಳು ಪರ್ವತಗಳು, ಅಹೋರಾತ್ರಿಗಳು, ಪ್ರತಿಷ್ಠೆಗಳು, ನಕ್ಷತ್ರಗಳು ಎಲುಬುಗಳು, ನಭವು ಅಂದರೆ ಅಕಾಶದಲ್ಲಿರುವ ಮೋಡಗಳು. ಉದಯಿಸುವ ಸೂರ್ಯನು ಮೊದಲನೆಯ ಅರ್ಧ, ಅಸ್ತಮಿಸುವ ಸೂರ್ಯನು ಕೆಳಗಿನ ಅರ್ಧ.

ವಿಶ್ವದ ವಿವಿಧ ಅಂಶಗಳೊಂದಿಗೆ ಅಶ್ವದ ಎಲ್ಲ ಸಾದೃಶ್ಯಗಳೂ ಕಾಲದ ಸುತ್ತ ಕೇಂದ್ರೀಕೃತಗೊಂಡಿದ್ದು ಅದನ್ನು ಸಾಂಕೇತಿಕ ಭಾಷೆಯಲ್ಲಿ ವ್ಯಕ್ತಪಡಿಸಲಾಗಿದೆ. ಇಲ್ಲಿ ವಿವರಿಸಿರುವ ಅಶ್ವವು ನಾಲ್ಕು ಕಾಲಿನ ಅಶ್ವವನ್ನಲ್ಲ. ಸಮಯದ ಪರಿಕಲ್ಪನೆಯನ್ನು ಯಜ್ಞದಲ್ಲಿ ಶಾಶ್ವತವಾಗಿ ಸಮರ್ಪಿಸುವುದರ ಬಗ್ಗೆ ಋಷಿಗಳು ವಿವರಿಸಿರುವರು. ದುರದೃಷ್ಟವಶಾತ್ ಕಾಲ ಕ್ರಮೇಣ ಈ ಮಂತ್ರವನ್ನು ಅಶ್ವದ ಆಹುತಿಗೆ ಜೋಡಣೆಮಾಡಲಾಗಿದೆ. ಅಧ್ಯಾತ್ಮದ ಅರ್ಥವನ್ನು ಪಡೆಯಲು ಈ ಯಜ್ಞದ ದೇವತೆಯಾದ ಪ್ರಜಾಪತಿಯ ಪಾತ್ರವು ವಿಶೇಷವಾದದ್ದು ಹಾಗೂ ಇದು ಇದೇ ಮಂಡಲದಲ್ಲಿನ ಮುಂದಿನ ಮಂತ್ರಗಳಲ್ಲಿ (2.1) ಸ್ಪಷ್ಟಪಡಿಸಲಾಗಿದೆ ಹಾಗೂ ಅದರಲ್ಲಿ ಸೃಷ್ಟಿಯ (ಹಿರಣ್ಯಗರ್ಭ) ಬಗ್ಗೆ ವಿವರಿಸಲಾಗಿದೆ.

ಅಶ್ವಮೇಧ ಯಜ್ಞ - ಪ್ರಾಣಾಯಾಮದಂತೆ
ವಪ ಎಂದು ಕರೆಯಲ್ಪಡುವ ಬಲಿಪಶುವಿನ ಹೊಟ್ಟೆ ಮತ್ತು ಎದೆಗಳ ನಡುವಿನ ಭಾಗವನ್ನು ಅಗ್ನಿಗೆ ಅಹುತಿಕೊಡುವುದು ಒಂದು ಪದ್ದತಿ. ಪ್ರೊ.ಕಶ್ಯಪ್ ಅವರು ಅಶ್ವಮೇಧಕ್ಕೆ ಪ್ರಾಣಾಯಾಮದ ಪ್ರಕ್ರಿಯೆಯ ಮೂಲಕ ಗಮನಾರ್ಹವಾದ ಹೋಲಿಕೆಯನ್ನು ಮಾಡುತ್ತಾರೆ. ಪ್ರಾಣಾಯಾಮದಲ್ಲಿ ಉಸಿರನ್ನು ಒಳಗೆಳೆದುಕೊಳ್ಳುವಾಗ ಎದೆ ಮತ್ತು ಹೊಟ್ಟೆಗಳ ನಡುವೆ ಇರುವ ವಪೆಯ ಚಲನೆಯು ಕೆಳಮುಖವಾಗಿರುವುದನ್ನು ಉದರದಲ್ಲಿರುವ ಜಠರಾಗ್ನಿಗೆ ಅರ್ಪಿಸುವುದನ್ನು ಸೂಚಿಸುತ್ತದೆ.

ಪ್ರೇರಣೆ : ಡಾ.ಜಯಂತಿ ಮನೋಹರ ಅವರ Symbolism of Rig-Veda.
ಕನ್ನಡಕ್ಕೆ : ಗುರುಪ್ರಸಾದ್ ಹಾಲ್ಕುರಿಕೆ


ಋಗ್ವೇದ ಭಾಷ್ಯಕಾರರು

ಋಗ್ವೇದ ಭಾಷ್ಯಕಾರರು
ಸಾಯಣಾಚಾರ್ಯರು
(ಕ್ರಿ.ಶ.1315-1382)
ಪರಿಚಯ ಲೇಖನ

ವೈದಿಕ ಭಾಷ್ಯಕಾರರುಗಳಲ್ಲಿ ಸಾಯಣಾಚಾರ್ಯರಿಗೆ ವಿಶೇಷವಾದ ಪೂಜ್ಯಸ್ಥಾನವಿದೆ. ಅವರು ಬರೆದ ವೇದ ಭಾಷ್ಯವು ಅವರ ಅಸಾಧಾರಣ ಯೋಗ್ಯತೆಗೆ ಬೆಳಕಾಗಿದೆ.

ವೇದಸಂಹಿತೆಗಳಿಗೂ ಮತ್ತು ಬ್ರಾಹ್ಮಣಗಳಿಗೂ ಅವರು ಬರೆದಿರುವ ಭಾಷ್ಯಗಳು ಉತ್ಕೃಷ್ಟವಾಗಿರುವುದು ಹಾಗೂ ವೇದಗಳಲ್ಲಿ ಅಡಗಿರುವ ಸೂಕ್ಷ್ಮತತ್ವಗಳನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ಸಹಕಾರಿಯಾಗಿದೆ. ಇವರನ್ನು ಹೊರತುಪಡಿಸಿ ಇತರೆ ಭಾಷ್ಯಕಾರರು ಬರೆದಿರುವ ಭಾಷ್ಯವು ವೇದದ ಕೆಲವು ಭಾಗಗಳಿಗೆ ಮಾತ್ರ ಸಂಕ್ಷೇಪವಾಗಿಯೋ ಅಥವಾ ವಿಸ್ತಾರವಾಗಿಯೋ ಬರೆದಿರುವರು. ಸಾಯಣಾಚಾರ್ಯರು ಹಾಗೂ ಅವರ ಹಿರಿಯ ಸಹೋದರ ಮಾಧವಾಚಾರ್ಯರೂ ವಿಜಯನಗರ ಮಹಾರಾಜರ ಆಶ್ರಯ ಪಡೆದು ವೇದಭಾಷ್ಯಗಳನ್ನು ಮತ್ತು ಅನೇಕ ಉತ್ಕೃಷ್ಟ ಗ್ರಂಥಗಳನ್ನು ರಚಿಸಿ ವಿದ್ವಜ್ಜನರ ಮನ್ನಣೆಯನ್ನು ಗಳಿಸಿದ್ದಾರೆ.

ಸಾಯಣರು ದಕ್ಷಿಣ ಭಾರತದಲ್ಲಿನ ಪ್ರಸಿದ್ಧ ಬ್ರಾಹ್ಮಣ ವಂಶದಲ್ಲಿ ಜನಿಸಿದವರು. ತಂದೆ ಮಾಯಣ; ತಾಯಿ ಶ್ರೀಮತಿ. ಭಾರದ್ವಾಜಗೋತ್ರ, ಕೃಷ್ಣ ಯಜುರ್ವೇದಿ, ಬೊಧಾಯನ ಶಾಖೆ. ಹಿರಿಯ ಸಹೋದರ - ಮಾಧವಾಚಾರ್ಯ; ಕಿರಿಯ ಸಹೋದರ - ಭೋಗನಾಥ.

ಮಾಧವಾಚಾರ್ಯರು ರಚಿಸಿದ ಕೃತಿಗಳು -
ಪರಾಶರಸ್ಮೃತಿ - ವ್ಯಾಖ್ಯಾ - ಇದು ಪರಾಶರ-ಮಾಧವ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇದು ಬಹು ದೊಡ್ಡ ಗ್ರಂಥ.
ಕಾಲನಿರ್ಣಯ ಅಥವಾ ಕಾಲಮಾಧವ
ಜೈಮಿನಿ-ನ್ಯಾಯಮಾಲಾ - ಜೈಮಿನಿಮಹರ್ಷಿಯ ಪೂರ್ವಮೀಮಾಂಸ ದರ್ಶನಕ್ಕೆ ಈ ವ್ಯಾಖ್ಯಾನವು ಪ್ರಮಾಣಗ್ರಂಥ
ಜೀವನ್ಮುಕ್ತಿವಿವೇಕ - ಜೀವನ್ಮುಕ್ತಿ ವಿಚಾರದ ವೇದಾಂತ ಗ್ರಂಥ
ಪಂಚದಶಿ - ಸುಪ್ರಸಿದ್ಧ ಅದ್ವೈತವೇದಾಂತ ಗ್ರಂಥ
ವೈಯಾಸಕನ್ಯಾಯಮಾಲಾ - ವೇದಾಂತಸೂತ್ರಗಳಿಗೆ ವ್ಯಾಖ್ಯಾನ

ಕೊನೆಯ ಎರಡು ಗ್ರಂಥಗಳನ್ನು ಮಾಧವಾಚಾರ್ಯರು ತಮ್ಮ ಗುರುಗಳಾದ ಭಾರತಿತೀರ್ಥರ ಸಹಾಯದಿಂದ ರಚಿಸಿರುವರು.

ಸಾಯಣಾಚಾರ್ಯರ ತಮ್ಮ ಭೋಗನಾಥರು ಕಂಪಣನ ಮಗನಾದ ಎರಡನೇ ಸಂಗಮನಿಗೆ ಸಚಿವರಾಗಿದ್ದರು. ಇವರು ಉತ್ತಮ ಕವಿಗಳು. ಇವರು ರಚಿಸಿದ ಗ್ರಂಥಗಳು -

ರಾಮೋಲ್ಲಾಸ - ರಾಮಾಯಣವನ್ನು ಆಶ್ರಯಿಸಿರುವ ಕಾವ್ಯ
ತ್ರಿಪುರವಿಜಯ - ಈಶ್ವರನ ತ್ರಿಪುರವಧೆಯನ್ನಾಶ್ರಯಿಸಿದ ಗ್ರಂಥ
ಉದಾಹರಣಮಾಲಾ - ಸಂಸ್ಕೃತದ ಅಲಂಕಾರಗಳಿಗೆ ಉದಾಹರಣೆಗಳು.
ಮಹಾಗಣಪತಿಸ್ತವ - ಗಣಪತಿಯ ಸ್ತೋತ್ರ
ಶೃಂಗಾರಮಂಜರೀ - ಶೃಂಗಾರರಸದ್ಯೋತಕ ಗ್ರಂಥ
ಗೌರೀನಾಥಾಷ್ಟಕ - ಗೌರೀನಾಥನ ಕುರಿತ ಎಂಟು ಶ್ಲೋಕಗಳು.

ಗ್ರಂಥಗಳ ಹಾಗೂ ಶಾಸನಗಳ ಆಧಾರದ ಮೇಲೆ ಸಾಯಣಾಚಾರ್ಯರು ವಿಜಯನಗರದ ನಾಲ್ಕು ರಾಜರುಗಳಿಗೆ ಸಂಬಂಧಿಸಿದವರೆಂಬುದು ಸ್ಪಷ್ಟವಾಗುತ್ತದೆ. ಅವರೇ ಕಂಪಣ, ಎರಡನೇ ಸಂಗಮ, ಒಂದನೇ ಬುಕ್ಕ, ಎರಡನೇ ಹರಿಹರ. ಈ ನಾಲ್ಕು ಜನರ ಕಾಲದಲ್ಲಿ ಸಾಯಣಾಚಾರ್ಯರು ಮಂತ್ರಿಪದವಿಯಲ್ಲಿದ್ದು ವಿಜಯನಗರ ಸಾಮ್ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.

ಚತುರ್ವೇದಗಳಿಗೂ ಭಾಷ್ಯವನ್ನು ರಚಿಸಿದ ಸಾಯಣಾಚಾರ್ಯರೇ ಯುದ್ಧರಂಗದಲ್ಲಿ ಅಸಾಮಾನ್ಯ ಯೋಧರಾಗಿ ಕತ್ತಿಯನ್ನು ಹಿಡಿದು ಶೌರ್ಯ ಪ್ರದರ್ಶನಮಾಡಿರುವುದು ಯಾರನ್ನಾದರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಇವರು ಕ್ಲಿಷ್ಟವಾದ ವೇದಮಂತ್ರಗಳಿಗೆ ಅರ್ಥವನ್ನು ತಿಳಿಸುವುದರಲ್ಲಿ ಮಗ್ನರಾದ ಮೀಮಾಂಸಕರು ಮಾತ್ರವಲ್ಲ, ದೊಡ್ಡ ರಾಜ್ಯವನ್ನು ಅಳುವುದರಲ್ಲೂ ದಕ್ಷರು ಮತ್ತು ಸ್ವತಃ ಯುದ್ಧ ರಂಗಕ್ಕಿಳಿದು ಶೌರ್ಯದಿಂದ ಕಾದಬಲ್ಲ ಮಹಾ ಯೋಧರೂ ಆಗಿದ್ದರು. ಇವರು ತಮ್ಮ ರಾಜ ಸಂಗಮನೋಡನೆ ದಂಡೆತ್ತಿ ಹೋಗಿ, ಚೋಳರಾಜನಾದ ಕಂಪನನ್ನೂ, ಗರುಡನಾಗರದ ಪಾಳೆಯಗಾರನನ್ನೂ ಸೋಲಿಸಿದರು.

ಇವರ ಸಾಂಸಾರಿಕ ಜೀವನವೂ ಸುಖಮಯವಾಗಿತ್ತು. ಇವರಿಗೆ ಕಂಪಣ, ಮಾಯಣ ಮತ್ತು ಸಿಂಗಣ ಎಂಬ ಮೂರು ಮಕ್ಕಳಿದ್ದರು. ಕಂಪಣನು ಪ್ರಸಿದ್ಧ ಸಂಗೀತಗಾರನಾದರೆ, ಮಾಯಣನು ಕವಿ. ಸಿಂಗಣನು ವೇದದಲ್ಲಿ, ಅದರಲ್ಲೂ ಪ್ರಮುಖವಾಗಿ ಕ್ರಮ ಮತ್ತು ಜಟಾ ಪಾಠಗಳಲ್ಲಿ ನಿಪುಣ. ಸಾಯಣಾಚಾರ್ಯರು ಎರಡನೇ ಹರಿಹರನ ಆಳ್ವಿಕೆಯ ಅವಧಿಯಲ್ಲಿ ಕ್ರಿ.ಶ.1387ರಲ್ಲಿ ಕಾಲವಾದರು ಎಂಬುದಾಗಿ ಕೆಲವು ಪಂಡಿತರ ಅಭಿಪ್ರಾಯ.

ಸಾಯಣಾಚಾರ್ಯರ ಕೃತಿಗಳು
ಸಾಯಣಾಚಾರ್ಯರು ರಚಿಸಿದ ಗ್ರಂಥಗಳಲ್ಲಿ ವೇದಸಂಹಿತ ಮತ್ತು ಬ್ರಾಹ್ಮಣಗಳ ಭಾಷ್ಯಗಳು ಬಹುಮುಖ್ಯವಾದವು. ಇವುಗಳಲ್ಲದೇ ಇವರು ಅನೇಕ ಗ್ರಂಥಗಳನ್ನು ರಚಿಸಿರುವರು. ನಂತರದ ದಿನಗಳಲ್ಲಿ ಕೆಲವು ಸಾಧಾರಣ ಪಂಡಿತರು ಪ್ರಚಾರವನ್ನು ಗಳಿಸುವ ಉದ್ದೇಶದಿಂದ ತಾವು ರಚಿಸಿದ ಕೃತಿಗಳನ್ನು ಸಾಯಣರು ರಚಿಸಿದ್ದೆಂದು ಹೇಳಿಕೊಂಡಿರುವುದು ಕಂಡುಬರುವುದು. ಆದರೆ, ಈ ಕೆಳಗೆ ಸೂಚಿಸಿರುವ ಎಲ್ಲ ಗ್ರಂಥಗಳೂ ಸಾಯಣರದ್ದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ :-

ಸುಭಾಷಿತಸುಧಾನಿಧಿ - ಇದು ಅನೇಕ ಗ್ರಂಥಗಳಿಂದ ಆರಿಸಿ ರಚಿಸಿದ ಸುಭಾಷಿತಗಳ ಸಮುಚ್ಚಯ ಹಾಗೂ ಇದು ಅವರ ಮೊದಲ ಕೃತಿ ಇರಬಹುದು ಎಂದು ಅನಿಸುತ್ತದೆ. ಗ್ರಂಥದ ಕೊನೆಯಲ್ಲಿರುವ ಅಂಕಿತದಿಂದ ಇದು ಕಂಪ ಅಥವಾ ಕಂಪಣರಾಜನ ಮಂತ್ರಿಯಾಗಿದ್ದಾಗ ರಚಿತವಾಯಿತೆಂದು ಕಂಡುಬರುತ್ತದೆ.

ಪ್ರಾಯಶ್ಚಿತ್ತಸುಧಾನಿಧಿ - ಇದಕ್ಕೆ ಕರ್ಮವಿಪಾಕ ಎಂದೂ ಹೆಸರುಂಟು. ಹಿಂದೂ ಧರ್ಮ ಶಾಸ್ತ್ರದಲ್ಲಿ ಮುಖ್ಯ ಭಾಗವಾದ ಪ್ರಾಯಶ್ಚಿತ್ತಗಳ ಕುರಿತು ರಚಿಸಿದ ಗ್ರಂಥ.

ಧಾತುವೃತ್ತಿ - "ಮಾಧಾವೀಯಾ ಧಾತುವೃತ್ತಿ" ಎಂದು ಪ್ರಸಿದ್ಧಿಯಾದ ಗ್ರಂಥ. ಸಂಸ್ಕೃತಧಾತುಗಳ ಪ್ರಮಾಣಭೂತವಾದ ಗ್ರಂಥ. ಪಾಣಿನಿಯ ಧಾತುಪಾಠದಲ್ಲಿರುವ ಎಲ್ಲ ಧಾತುಗಳನ್ನೂ ಈ ಗ್ರಂಥದಲ್ಲಿ ಚರ್ಚಿಸಲಾಗಿದೆ. ಸಾಯಣರು ತಮ್ಮ ಅಣ್ಣ ಮಾಧವಾಚಾರ್ಯರು ನೀಡಿದ ಪ್ರೋತ್ಸಾಹಕ್ಕಾಗಿ ಈ ಗ್ರಂಥವನ್ನು "ಮಾಧಾವೀಯಾ ಧಾತುವೃತ್ತಿ" ಎಂದು ಕರೆದು ಅವರಿಗೆ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

ಅಲಂಕಾರಸುಧಾನಿಧಿ - ಇದು ಸಂಸ್ಕೃತದ ಅಲಂಕಾರ ಗ್ರಂಥ. ಇದರ ಪ್ರಮುಖ ವೈಶಿಷ್ಟ್ಯವೆಂದರೆ - ಇದರಲ್ಲಿರುವ ಎಲ್ಲ ಉದಾಹರಣೆಗಳು ಗ್ರಂಥಕರ್ತೃವನ್ನೇ ಹೊಗಳುತ್ತದೆ. ಈ ರೀತಿಯ ವೈಶಿಷ್ಟ್ಯವು ಬೇರಾವ ಗ್ರಂಥದಲ್ಲೂ ಕಂಡುಬರುವುದಿಲ್ಲ.

ಪುರುಷಾರ್ಥಸುಧಾನಿಧಿ - ಪುರುಷಾರ್ಥಕ್ಕೆ ಸಂಬಂಧಿಸಿದ ಪೌರಾಣಿಕ ಶ್ಲೋಕಗಳಿಂದ ಕೂಡಿದೆ.
ಆಯುರ್ವೇದಸುಧಾನಿಧಿ - ಆಯುರ್ವೇದ ಗ್ರಂಥ
ಯಜ್ಞತಂತ್ರಸುಧಾನಿಧಿ - ಯಜ್ಞ ಯಾಗಾದಿಗಳಿಗೆ ಸಂಬಂಧಿಸಿದ ಗ್ರಂಥ.

ವೇದಭಾಷ್ಯಗಳು - ಬುಕ್ಕರಾಜನು ತನ್ನ ಗುರುವಾದ ಮಾಧವಾಚಾರ್ಯರನ್ನು ವೇದಭಾಷ್ಯಗಳನ್ನು ರಚಿಸಿ ಎಂದು ಪ್ರಾರ್ಥಿಸಿದನು. ಮಾಧವಾಚಾರ್ಯರು ಕಾರ್ಯಗೌರವದಿಂದ ಈ ಕೆಲಸಕ್ಕೆ ಕೈಹಾಕದೆ, ತಮ್ಮ ಸಹೋದರ ಸಾಯಣಾಚಾರ್ಯರಿಗೆ ಭಾಷ್ಯರಚನೆ ಮಾಡುವಂತೆ ಅಜ್ಞಾಪಿಸಿ ಅವರಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನೀಡಿ ಭಾಷ್ಯಗಳನ್ನು ರಚಿಸುವಂತೆ ಮಾಡಿದರು. ಈ ಭಾಷ್ಯಗಳು ಸಾಯಣಾಚಾರ್ಯರ ಅದ್ವಿತೀಯ ಪಾಂಡಿತ್ಯಕ್ಕೆ ಸಾಕ್ಷಿ. ಇವುಗಳಲ್ಲಿ ಅವರ ಪ್ರತಿಭೆಯು ಪ್ರಕಾಶಿಸುವಂತೆ ಅವರ ಬೇರಾವ ಕೃತಿಗಳಲ್ಲೂ ಪ್ರಕಾಶಕ್ಕೆ ಬಂದಿಲ್ಲ. ಆದುದರಿಂದಲೇ ಈ ಭಾಷ್ಯಗಳನ್ನು ಹಿರಿಯ ಸಹೋದರರ ಉಪಕಾರಸ್ಮರಣೆಗಾಗಿ "ಮಾಧಾವೀಯ" ಎಂದೂ ಕರೆಯಲಾಗಿದೆ. ಸಾಯಣಾಚಾರ್ಯರ ವೇದಭಾಷ್ಯಗಳು ಈ ಸಂಹಿತೆಗಳಿಗೆ ಸಂಬಂಧಿಸಿದೆ -

ಕೃಷ್ಣ ಯಜುರ್ವೇದ - ತೈತ್ತಿರೀಯ ಶಾಖಾ ಸಂಹಿತೆ
ಋಗ್ವೇದ ಸಂಹಿತೆ
ಸಾಮವೇದ ಸಂಹಿತೆ
ಶುಕ್ಲಯಜುರ್ವೇದ - ಕಣ್ವ ಸಂಹಿತೆ
ಅಥರ್ವವೇದ ಸಂಹಿತೆ

ಈ ಕೆಳಕಂಡ ಬ್ರಾಹ್ಮಣ, ಅರಣ್ಯಕ ಹಾಗೂ ಉಪನಿಷತ್ತುಗಳಿಗೆ ಸಾಯಣಾಚಾರ್ಯರು ವ್ಯಾಖ್ಯಾನವನ್ನು ಬರೆದಿರುವರು -
ತೈತ್ತಿರೀಯ - ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತು

ಋಗ್ವೇದದಲ್ಲಿನ ಐತರೇಯ ಬ್ರಾಹ್ಮಣ ಹಾಗೂ ಅರಣ್ಯಕ
ಸಾಮವೇದದ - ತಾಂಡ್ಯ(ಪಂಚವಿಂಶ) ಬ್ರಾಹ್ಮಣ, ಷಡ್‌ವಿಂಶ ಬ್ರಾಹ್ಮಣ, ಸಾಮವಿಧಾನ ಬ್ರಾಹ್ಮಣ, ಆರ್ಷೇಯ ಬ್ರಾಹ್ಮಣ, ದೇವತಾಧ್ಯಾಯ ಬ್ರಾಹ್ಮಣ, ಉಪನಿಷತ್ ಬ್ರಾಹ್ಮಣ, ಸಂಹಿತೋಪನಿಷತ್ ಬ್ರಾಹ್ಮಣ, ವಂಶ ಬ್ರಾಹ್ಮಣ

ಶುಕ್ಲ ಯಜುರ್ವೇದದ - ಶತಪಥ ಬ್ರಾಹ್ಮಣ

ಮೇಲೆ ವಿವರಿಸಿರುವ ವೇದಭಾಷ್ಯಗಳ ಪ್ರಕಾರ ಸಾಯಣಾಚಾರ್ಯರು ಪ್ರಥಮವಾಗಿ ಕೃಷ್ಣಯಜುರ್ವೇದಕ್ಕೆ ಭಾಷ್ಯವನ್ನು ರಚಿಸಿ, ನಂತರ ಉಳಿದ ವೇದಗಳಿಗೆ ಭಾಷ್ಯವನ್ನು ರಚಿಸಿರುವರು. ಋಗ್ವೇದವು ನಾಲ್ಕು ವೇದಗಳಲ್ಲಿ ಅಗ್ರ ಸ್ಥಾನವನ್ನು ಪಡೆದಿರುವುದು ಎಲ್ಲರಿಗೂ ಅನಾದಿಕಾಲದಿಂದ ಗೊತ್ತಿರುವ ವಿಷಯ. ಹೀಗಿದ್ದರೂ ಸಾಯಣಾಚಾರ್ಯರು ಮೊದಲಿಗೆ ಕೃಷ್ಣಯಜುರ್ವೇದಕ್ಕೆ ಮೊದಲು ಭಾಷ್ಯಮಾಡಿದ್ದು ಏಕೆ ಹಾಗೂ ಸರಿಯೇ ಎಂಬ ಪ್ರಶ್ನೆಗಳು ಸ್ವಾಭಾವಿಕವಾಗೆ ಉದ್ಭವಿಸುವುದು. ಇದಕ್ಕೆ ಉತ್ತರವನ್ನು ಆಚಾರ್ಯರು ಋಗ್ವೇದಭಾಷ್ಯ ಭೂಮಿಕೆಯಲ್ಲಿ ಕೊಟ್ಟಿರುವರು. ಅದರ ಪ್ರಕಾರ, ವೇದಗಳಿಗೆ ಪ್ರಮುಖ ಪ್ರಯೋಜನವು ಯಜ್ಞಯಾಗಾದಿಗಳು. ಯಾವುದೇ ಯಜ್ಞದಲ್ಲಿ ಪ್ರಮುಖ ಋತ್ವಿಜನು ಅಧ್ವರ್ಯುವು. ಆತನೇ ಯಜ್ಞಕ್ಕೆ ಒಂದು ರೂಪವನ್ನು ಕೊಡುತ್ತಾನೆ- (ಯಜ್ಞಸ್ಯ ಮಾತ್ರಾಂ ಮಿಮಿಮೀತ ಉತ್ವಃ) ಎಂದು ಹೇಳಿದೆ. ಆಗ ಅಧ್ವರ್ಯುವು ಅನುಸರಿಸಬೇಕಾದುದು ಯಜುರ್ವೇದ. ಹೀಗಾಗಿ ಸಾಯಣಾಚಾರ್ಯರು ಭಾಷ್ಯ ರಚಿಸಲು ಮೊದಲಿಗೆ ಯಜುರ್ವೇದವನ್ನೂ ನಂತರ ಎರಡನೇ ಋತ್ವಿಜನಿಗೆ ಬೇಕಾದ ಋಗ್ವೇದ ಸಂಹಿತೆಯನ್ನು ಅರಿಸಿಕೊಂಡಿರುವರು. ಅಲ್ಲದೆ, ಸಾಯಣಾಚಾರ್ಯರು ಯಜುರ್ವೇದಿಗಳು. ಹೀಗಾಗಿ ಅವರು ಆ ವೇದಕ್ಕೇ ಪ್ರಾಧಾನ್ಯವನ್ನು ಕೊಡುವುದು ಸ್ವಾಭಾವಿಕ.

ವೇದಭಾಷ್ಯ ಭೂಮಿಕೆಗಳು
ಸಾಯಣಾಚಾರ್ಯರು ಪ್ರತಿಯೊಂದು ವೇದಭಾಷ್ಯಕ್ಕೂ ಒಂದೊಂದು ಭೂಮಿಕೆಯನ್ನು ಬರೆದಿದ್ದಾರೆ ಹಾಗೂ ಇವುಗಳು ಮುಖ್ಯವಾದವು. ಇವುಗಳಲ್ಲಿ ವೇದಕ್ಕೆ ಸಂಬಂಧಿಸಿದ ಮುಖ್ಯವಾದ ಅಂಶಗಳನ್ನು ಚರ್ಚಿಸಲಾಗಿದೆ.

ತೈತ್ತಿರೀಯ ಭಾಷ್ಯದ ಉಪೋದ್ಘಾತದಲ್ಲಿ, ವೇದಲಕ್ಷಣ, ಅಧಿಕಾರಿ, ವೇದ ಪ್ರಾಮಾಣ್ಯ(ಸಂಕ್ಷಿಪ್ತ), ಎರಡು ವೇದಭಾಗಗಳು(ಒಂದು ಚತುರ್ವಿಧ ಕರ್ಮಕ್ಕೆ ಹಾಗೂ ಮತ್ತೊಂದು ಬ್ರಹ್ಮ ಮತ್ತು ಬ್ರಹ್ಮಜ್ಞಾನಗಳಿಗೆ ಸಂಬಂಧಿಸಿದುದು) ಮತ್ತು ಯಜ್ಞಗಳ ವಿಭಾಗಗಳು(ದರ್ಶ ಮತ್ತು ಪೌರ್ಣಮಾಸಗಳು ಸಮಸ್ತ ಯಜ್ಞಗಳಿಗೂ ಅವಶ್ಯಕವಾದದ್ದು, ಆದ್ದರಿಂದ ಅವುಗಳಿಗೆ ಪ್ರಕೃತಿ ಎಂತಲೂ ಉಳಿದ ಎಲ್ಲ ಯಜ್ಞಗಳಿಗೆ ವಿಕೃತಿ ಎಂತಲೂ ವಿಧಾನಮಾಡಿರುವರು). ಇವೆಲ್ಲವುಗಳ ಬಗೆಗೂ ಚರ್ಚಿಸಲಾಗಿದೆ.

ಋಗ್ವೇದ ಭಾಷ್ಯಭೂಮಿಕೆ ಅತ್ಯಂತ ಉಪಯುಕ್ತವಾದುದು. ವೈದಿಕ ಜ್ಞಾನಕ್ಕೆ ಸಂಬಂಧಿಸಿದ ಮುಖ್ಯ ಪ್ರಶ್ನೆಗಳನ್ನು ಚರ್ಚಿಸಿ, ಪೂರ್ವಪಕ್ಷವನ್ನು ಅನುವಾದ ಮಾಡಿ ಸಿದ್ಧಾಂತವನ್ನು ಸ್ಥಾಪಿಸಲಾಗಿದೆ. ವೇದ ವೇದಾಂಗಾಗಳನ್ನು ಅಭ್ಯಾಸ ಮಾಡುವವರಿಗೆ ಇದು ಅತ್ಯಂತ ಉಪಯುಕ್ತವಾದದ್ದು.

ವೇದಲಕ್ಷಣ, ವೇದಗಳ ಸ್ವತಃಪ್ರಾಮಾಣ್ಯ, ವೇದಪೌರುಷೇಯತ್ವ, ವೇದ ಮತ್ತು ಬ್ರಾಹ್ಮಣ ಎಂಬ ವಿಭಾಗಕ್ಕೆ ಆಧಾರ, ವೇದ ಪ್ರಯೋಜನ ಇವೆಲ್ಲವನ್ನೂ ಸ್ಪಷ್ಟವಾಗಿ ವಿವರಿಸಿ, ವೇದವನ್ನು ಅರ್ಥಸಹಿತವಾಗಿ ತಿಳಿಯುವವನನ್ನು ಪ್ರಶಂಸೆಮಾಡಿ, ಕಡೆಯಲ್ಲಿ ವೇದಾಂಗಗಳನ್ನೂ ಅವುಗಳು ಹೇಗೆ ವೇದಾರ್ಥವನ್ನು ಪ್ರಕಟಿಸುವುದಕ್ಕೆ ಸಹಾಯಕವಾಗುತ್ತದೆ ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ.

ಸಾಮವೇದದ ಉಪೋದ್ಘಾತದಲ್ಲಿ ವೇದಲಕ್ಷಣವನ್ನು ಸೂಕ್ಷ್ಮವಾಗಿ ವಿವರಿಸಿ, ಸಾಮಗಾನ, ಗಾನದ ರೀತಿ, ಇವೆಲ್ಲವನ್ನೂ ವಿವರವಾಗಿ ಚರ್ಚಿಸಿದ್ದಾರೆ. ಇಲ್ಲಿ ಕೂಡಾ ಪೂರ್ವಮೀಮಾಂಸಾ ಶಾಸ್ತ್ರದ ಭಾಗಗಳನ್ನು ಉದಾಹರಿಸಿರುವರು. ಸಾಮಗಾನಕ್ಕೆ ಸಂಬಂಧಿಸಿದ 67 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.

ಕಣ್ವ ಸಂಹಿತೆಯ ಉಪೋದ್ಘಾತದಲ್ಲಿ ಶುಕ್ಲಯಜುರ್ವೇದ ಭಾಗಗಳ ವಿಷಯವಾಗಿ ಚರ್ಚಿಸಿ, "ಸ್ವಾಧ್ಯಾಯೋsಧ್ಯೇತವ್ಯಃ" ಎಂಬ ವಾಕ್ಯದ ಅರ್ಥವನ್ನು ತಿಳಿಸಿ, ಅನಂತರ ಶುಕ್ಲಯಜುರ್ವೇದದ 40 ಅಧ್ಯಾಯಗಳ ಮುಖ್ಯ ವಿಷಯಗಳನ್ನು ಸಂಗ್ರಹಿಸಿ ವಿವರಿಸಿರುವರು.

ಅಥರ್ವವೇದಭಾಷ್ಯಭೂಮಿಕೆಯಲ್ಲಿರುವ ಪ್ರಮುಖ ಅಂಶಗಳು - ಪುರಾಣಗಳ ಆಧಾರದಮೇಲೆ ಈ ವೇದವು ರಾಜಪುರೋಹಿತ ಮತ್ತು ಬ್ರಹ್ಮ ಇವರುಗಳಿಗೆ ಅತ್ಯಂತ ಉಪಯುಕ್ತವಾದ ವೇದ. ಇದನ್ನು ಅಭ್ಯಾಸ ಮಾಡುವುದೆಂದರೆ - ಮಂತ್ರಗಳ ಅರ್ಥದ ಬಗ್ಗೆ ಜ್ಞಾನವನ್ನು ಹೊಂದುವುದು, ವೇದವು ಸ್ವತಃ ಪ್ರಾಮಾಣ್ಯವು ಮತ್ತು ಪದ ಶಬ್ದಾರ್ಥ ನಿರ್ಣಯವು ಎಂಬಿವುಗಳು.

ಮೇಲೆ ವಿವರಿಸಿದ ಎಲ್ಲ ಭೂಮಿಕೆಗಳಲ್ಲಿ ಚರ್ಚಿತವಾದ ವಿಷಯಗಳನ್ನು ಎರಡು ಗುಂಪಾಗಿ ವಿಂಗಡಿಸಬಹುದು- ಎಲ್ಲ ವೇದಗಳಿಗೂ ಅನ್ವಯಿಸುವ ಅಂಶಗಳು ಹಾಗೂ ಒಂದೊಂದು ವೇದಕ್ಕೆ ಮಾತ್ರ ಅನ್ವಯಿಸುವುದು.

ಮಂತ್ರ ಮತ್ತು ಬ್ರಾಹ್ಮಣಗಳಿಂದ ಕೂಡಿರುವುದೇ ವೇದದ ಲಕ್ಷಣ. ಇದರಲ್ಲಿ ಮಂತ್ರ ಯಾವುದು ಬ್ರಾಹ್ಮಣ ಯಾವುದು ಎಂಬ ಚರ್ಚೆ, ವೇದವು ಅಪೌರುಷೇಯ, ವೇದ ಪೌರುಷೇಯ ಎಂಬ ನೈಯಾಯಿಕ ಮತದವರ ಖಂಡನೆ, ವೇದಗಳಿಗೆ ಅರ್ಥವಿದೆ, ಉಚ್ಚಾರಣೆ ಮಾತ್ರ ಪ್ರಯೋಜನವಲ್ಲ, ಋಕ್, ಯಜುಸ್, ಸಾಮಗಳಿಗಿರುವ ವ್ಯತ್ಯಾಸಗಳು, ವೇದದಲ್ಲಿ ಉಕ್ತವಾದ ವಿಷಯ (ವೇದದಲ್ಲಿ ಎರಡು ಕಾಂಡಗಳು, ಒಂದು ಕರ್ಮಗಳನ್ನು ವಿವರಿಸುವುದು, ಎರಡನೆಯದು ಬ್ರಹ್ಮಸ್ವರೂಪ, ಬ್ರಹ್ಮಪ್ರಾಪ್ತಿ ಮಾರ್ಗಗಳನ್ನು ತಿಳಿಸುವುದು, ಅಂದರೆ ಧರ್ಮ ಮತ್ತು ಬ್ರಹ್ಮ ಎರಡೇ ವೇದದ ವಿಷಯ, ಇವುಗಳ ಜ್ಞಾನವೇ ವೇದದ ಪ್ರಯೋಜನ) - ಇವೆಲ್ಲವೂ ಚತುರ್ವೇದಗಳಲ್ಲಿನ ಸಾಮಾನ್ಯ ಅಂಶಗಳು.

ಇವುಗಳಲ್ಲದೆ ಆಯಾಯ ವೇದಗಳಿಗೆ ಅನ್ವಯಿಸುವ ವಿಷಯಗಳೂ ಇವೆ. ಅವುಗಳೆಂದರೆ - ಮಾಸೇಷ್ಟಿಗಳು, ವೇದಾಧ್ಯಯನ ಮಾಡಿದವನ ಪ್ರಶಂಸೆ, ವೇದಾಂಗಗಳ ಪರಿಚಯ, ಶುಕ್ಲಯಜುರ್ವೇದದ 40 ಅಧ್ಯಾಯಗಳ ಸೂಕ್ಷ್ಮ ಪರಿಚಯ ಇತ್ಯಾದಿ.

ಸಾಯಣಾಚಾರ್ಯರು - ಶ್ರೇಷ್ಠ ಭಾಷ್ಯಕಾರರು

ವೇದಗಳು ಪುರಾತನ ಗ್ರಂಥಗಳು. ಇವುಗಳಲ್ಲಿನ ಭಾಷೆಗೂ ಈಗ ಬಳಕೆಯಲ್ಲಿರುವ ಭಾಷೆಗೂ ವ್ಯತ್ಯಾಸವಿದೆ. ಕ್ಲಿಷ್ಟವಾದ ವಾಕ್ಯಗಳು, ಸಂದಿಗ್ಧ ಪ್ರಯೋಗಗಳು, ರೂಢಿಯಲ್ಲಿಲ್ಲದ ಪದಗಳು ಇವೇ ಮೊದಲಾದುವು ವೇದಗಳಲ್ಲಿ ವಿಶೇಷವಾಗಿದೆ. ಹೀಗಾಗಿ ವೇದಗಳನ್ನು ಸರಿಯಾಗಿ ತಿಳಿಯಬೇಕಾದರೆ, ಅದಕ್ಕೂ ಹೆಚ್ಚಾಗಿ ಇತರರಿಗೆ ತಿಳಿಸಬೇಕಾದರೆ, ವೈದಿಕ ಸಂಪ್ರದಾಯಜ್ಞನಾಗಿರಬೇಕು. ಈ ಸಂಪ್ರದಾಯ ಜ್ಞಾನವು ಆರು ವೇದಾಂಗಗಳಿಂದ ತಿಳಿಯುತ್ತದೆ. ವೇದಾಂಗಗಳು ತಿಳಿಸುವುದೇನೆಂದರೆ ;-

ಶಿಕ್ಷಾ - ವೇದವನ್ನು ಸ್ವರಪೂರ್ವಕವಾಗಿ ಉಚ್ಚರಿಸುವ ರೀತಿಯನ್ನು ವಿವರಿಸುತ್ತದೆ;
ವ್ಯಾಕರಣ - ಪದಗಳ ರೂಪನಿಷ್ಪತ್ತಿಯ ಮೂಲಕ, ಎಂತಹ ಕ್ಲಿಷ್ಟ ಪ್ರಯೋಗಗಳನ್ನೂ ತಿಳಿಯಲು ಸಹಕಾರಿಯಾಗಿದೆ;
ಛಂದಸ್ಸು - ಮಂತ್ರಗಳ ಛಂದಸ್ಸನ್ನು ತಿಳಿಸುವುದು;
ಜ್ಯೋತಿಷ - ಯಜ್ಞಯಾಗಾದಿಗಳನ್ನು ಮಾಡಬೇಕಾದ ಕಾಲವನ್ನು ನಿರ್ಣಯ ಮಾಡಲು ಸಹಕಾರಿ;
ಕಲ್ಪ - ಯಜ್ಞಯಾಗಾದಿಗಳನ್ನು ಮಾಡುವ ವಿಧಾನವನ್ನು ವಿವರಿಸುತ್ತದೆ.

ಇವುಗಳೊಂದಿಗೆ ಉಪಾಂಗಗಳಾದ ಪುರಾಣ, ಇತಿಹಾಸ, ಧರ್ಮಶಾಸ್ತ್ರ, ಅನುಕ್ರಮಣಿ ಹಾಗೂ ಮಂತ್ರಾರ್ಥನಿರ್ಣಯಕ್ಕೆ ಅವಶ್ಯವಾದ ಮೀಮಾಂಸಶಾಸ್ತ್ರ ಇವೆಲ್ಲವುಗಳನ್ನೂ ಚೆನ್ನಾಗಿ ಅಭ್ಯಾಸಮಾಡಿ, ನಂತರವೇ ವೇದವ್ಯಾಖ್ಯಾನಕ್ಕೆ ತೊಡಗಬೇಕು.

ಸಾಯಣಾಚಾರ್ಯರು ಸ್ವತಃ ಮೇಲೆ ವಿವರಿಸಿರುವ ಎಲ್ಲಾ ಭಾಗಗಳನ್ನೂ ಸಾಂಗವಾಗಿ ಅಭ್ಯಾಸಮಾಡಿದ ನಂತರವೇ ವ್ಯಾಖ್ಯಾನವನ್ನು ಮಾಡುವ ಪ್ರಯತ್ನ ಮಾಡಿರುವರು. ವೇದವನ್ನು ಅರಿಯಬೇಕೆಂದಿರುವ ಪ್ರತಿಯೊಬ್ಬರೂ ಈ ಎಲ್ಲ ವಿಷಯಗಳನ್ನು ತಿಳಿದೇ ಮುಂದುವರೆಯಲಿ ಎಂಬ ಉದ್ದೇಶದಿಂದಲೇ, ಉಪೋದ್ಘಾತದಲ್ಲಿ ಎಲ್ಲ ಅಂಶಗಳನ್ನೂ ಚರ್ಚೆಮಾಡಿದ್ದಾರೆ.

ಸಾಯಣಾಚಾರ್ಯರು ಮತ್ತು ಆಧುನಿಕ ಪಂಡಿತರು

ಸಾಯಣಾಚಾರ್ಯರ ಭಾಷ್ಯಗಳು ಸಂಪ್ರದಾಯಾನುಸಾರವಾಗಿ ವೇದಾಭ್ಯಾಸ ಮಾಡುವವರಿಗೆ ಮಾತ್ರವಲ್ಲದೆ, ಆಧುನಿಕ ಜನಾಂಗಕ್ಕೂ ಬಹಳ ಉಪಕಾರಿಯಾಗಿದೆ. ಭಾಷಾಶಾಸ್ತ್ರ ಮತ್ತು ಪುರಾಣಗಳನ್ನು ಪರಸ್ಪರ ಹೋಲಿಸಿ, ಅವುಗಳ ಸಹಾಯದಿಂದ ವೇದಾರ್ಥವನ್ನು ಅರಿಯುವ ಪ್ರಯತ್ನದಲ್ಲಿರುವವರಿಗೂ ಸಾಯಣಭಾಷ್ಯದಲ್ಲಿ ಸ್ವಾರಸ್ಯವಾದ ಅಂಶಗಳಿವೆ.

ವೇದವ್ಯಾಖ್ಯಾನಗಳಲ್ಲಿ ಸಾಯಣಭಾಷ್ಯಗಳಷ್ಟು ಸಮಗ್ರವಾಗಿ ವೇದಮಂತ್ರಗಳಿಗೆ ವ್ಯಾಖ್ಯಾನ ಮಾಡಿರುವ ಭಾಷ್ಯಗಳು ಇಲ್ಲವೆಂದೇ ಹೇಳಬೇಕು.

ಅಪಾರವಾದ ವೇದರಾಶಿಯಲ್ಲಿ ಅಡಗಿರುವ ವಿಶೇಷವಾದ ಅಂಶಗಳನ್ನು ಸಂಶೋಧನೆ ಮಾಡುವ ಕಾರ್ಯದಲ್ಲಿರುವ ವಿದ್ವಾಂಸರಿಗೂ ಕೂಡ, ಸಂಪ್ರದಾಯವಾಗಿ ಬಂದಿರುವ ಅರ್ಥವನ್ನು ಅರಿಯುವುದು ಮುಖ್ಯ. ಅವರ ಪ್ರಯತ್ನಕ್ಕೆ ಇದೇ ಅಡಿಗಲ್ಲೆನ್ನಬಹುದು. ಈ ಸಂಪ್ರದಾಯಾನುಸಾರವಾದ ಅರ್ಥವು ಸಾಯಣಭಾಷ್ಯದಷ್ಟು ಸ್ಪಷ್ಟವಾಗಿಯೂ, ಸಂರ್ಣವಾಗಿಯೂ ಬೇರಾವ ಗ್ರಂಥದಲ್ಲಿಯೂ ಇಲ್ಲ. ಸಾಯಣಭಾಷ್ಯಗಳು ಇಲ್ಲದಿದ್ದಲ್ಲಿ ವೇದಾಭ್ಯಾಸವು ಯಾವ ಮಟ್ಟದಲ್ಲಿರುತ್ತಿತ್ತೆಂಬುದನ್ನು ಊಹಿಸಲೂ ಅಸಾಧ್ಯ.

ಮೂಲ : ಮೂಲ : ಋಗ್ವೇದ ಸಂಹಿತಾ - ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್.
ಮುಂದಿನ ಲೇಖನ :- ವೇದಸಂಹಿತೆಗಳ ಪದಪಾಠಕಾರರು - ಒಂದು ಸಮೀಕ್ಷೆ



  
  

ಋಗ್ವೇದದ ಋಷಿಗಳು

ಋಗ್ವೇದದ ಋಷಿಗಳು

ಋಷಿ ಎಂದರೆ ಜ್ಞಾನಿ ಎಂಬುದು ಮೇಲ್ನೋಟಕ್ಕೆ ಕಂಡುಬರುವ ಅರ್ಥ. ಹಾಗಾಗಿ ಜ್ಞಾನಿಗಳನ್ನೆಲ್ಲಾ ಋಷಿ ಎನ್ನಬಹುದು. ಮುಂದುವರೆದು ಋಷಿ ಎಂಬ ಶಬ್ದಕ್ಕೆ ವೇದ ಮಂತ್ರಗಳನ್ನು ದರ್ಶನ ಮಾಡಿದವನು ಎಂಬ ಅರ್ಥವೂ ಉಂಟು.

ಈಗ ವೇದ ಮಂತ್ರ ದರ್ಶನದ ಬಗ್ಗೆ ಕೆಲವು ವಿಚಾರಗಳು:-

ಅಧ್ಯಯನ ಮಾಡದೆ ಪರಮೇಶ್ವರಾನುಗ್ರಹದಿಂದ ಮಂತ್ರಗಳು ಯಾರಿಗೆ ಗೋಚರಿಸುವುದೋ ಅವರು ಆ ಮಂತ್ರಗಳಿಗೆ ಋಷಿ;
ಯಾರಿಗೆ ಮಂತ್ರವು ಗೋಚರಿಸಿದೆ ಎನ್ನುತೇವೆಯೋ ಅವರಿಗೇ ಮೊದಲು ಗೋಚರಿಸಿತು ಎನ್ನಲಾಗುವುದಿಲ್ಲ;

ಅಧ್ಯಯನ ಮಾಡಿ ಮಂತ್ರಗಳನ್ನು ಸ್ವಾಧೀನ ಮಾಡಿಕೊಂಡವರೂ ಅಥವಾ ದರ್ಶನ ಮಾಡಿದವರೂ ಋಷಿಗಳಾಗಬಹುದು. ಆದರೆ ಈ ದರ್ಶನವು ಅವರಿಗೆ 12ಕ್ಕಿಂತ ಕಡಿಮೆ ಬಾರಿ ಅಧ್ಯಯನ ಮಾಡಿದಾಗ ಮಾತ್ರ ಆಗಿರಬೇಕು. ಅಂದರೆ ಋಷಿತ್ವವು ಮಂತ್ರಗಳು ಮೊದಲಿಗೆ ಗೋಚರಿಸಿದವರಿಗೆ ಮಾತ್ರ ಮೀಸಲಾಗಿರುವುದಿಲ್ಲ. ಇತರರಿಗೂ ಅನ್ವಯಿಸಬಹುದು;

ಋಷಿಗಳಲ್ಲಿ ಮೂರು ಗುಂಪುಗಳಿವೆ -

ಶತರ್ಚಿನರು - ನೂರು ಮಂತ್ರಗಳನ್ನು ಗೋಚರಿಸಿಕೊಂಡವರು;

ಮಧ್ಯಮರು - ಋಗ್ವೇದದಲ್ಲಿನ 2 ರಿಂದ 7ನೇ ಮಂಡಲದ ಋಷಿಗಳಾದ ಗೃತ್ಸಮದ, ವಿಶ್ವಾಮಿತ್ರ, ವಾಮದೇವ, ಗೌತಮ, ಅತ್ರಿ, ಭಾರದ್ವಾಜ, ವಸಿಷ್ಠ, ಪಾವಮಾನ್ಯ ಋಷಿಗಳು ಮಧ್ಯಮರು;

ಕ್ಷುದ್ರ ಸೂಕ್ತ ಮತ್ತು ಮಹಾಸೂಕ್ತ - ಋಗ್ವೇದದ 10ನೇ ಮಂಡಲದ ಋಷಿಗಳು.

ಋಷಿ ಭೇದಗಳು - ಋಷಿಗಳಲ್ಲಿ 4 ಭೇದಗಳುಂಟು -
ಮಹರ್ಷಿ (ಈಶ್ವರ) - ಇವರನ್ನು ಋಷಿಗಳಲ್ಲೆಲ್ಲ ಅತ್ಯುತ್ತಮರೆಂದು ಹಾಗೂ ಪ್ರಥಮ ದರ್ಜೆಯವರು ಪರಿಗಣಿಸುವರು - ಭೃಗು, ಮರೀಚಿ, ಅತ್ರಿ, ಅಂಗೀರಸ್, ಪುಲಹ, ಕ್ರತು, ಮನು, ದಕ್ಷ, ವಸಿಷ್ಠ ಮತ್ತು ಪುಲಸ್ತ್ಯ ಎಂಬ ಮಹರ್ಷಿಗಳು ಬ್ರಹನ ಮಾನಸಪುತ್ರರು. ಇವರನ್ನು ಈಶ್ವರರೆಂದೂ ಕರೆಯುವರು.

ಋಷಿಗಳು - ಉಶನಾಕಾವ್ಯ, ಬೃಹಸ್ಪತಿ, ಕಶ್ಯಪ ಹಾಗೂ ಇತರೆ ಹತ್ತು ಮಂದಿಯು ಎರಡನೇ ವರ್ಗದ ಋಷಿಗಳು. ಇವರೆಲ್ಲರೂ ಭೃಗುಮಹರ್ಷಿಗಳ ಪುತ್ರರು. ಇವರು ತಪಸ್ಸಿನ ಮೂಲಕ ಋಷಿಪದವಿಯನ್ನೇರಿದರು.

ಋಷಿಪುತ್ರ - ಋಷೀಕವರ್ಗವನ್ನು ಒಂದೇ ಗುಂಪಿನಲ್ಲಿ ಸೇರಿಸಲಾಗಿದೆ. ಈ ವರ್ಗದವರು ಋಷಿಗಳ ಔರಸಪುತ್ರರು. ಈ ವರ್ಗದ ಕೆಲವರೆಂದರೆ - ವತ್ಸರ, ಭಾರದ್ವಾಜ, ಶರದ್ವತ, ವಾಜಾಶ್ರವಸ್ ಇತ್ಯಾದಿ.

ಭೃಗುಕುಲದಲ್ಲಿ 19 ಋಷಿಗಳಿದ್ದರು. ಹಿಂದೆ ಅಥರ್ವವೇದಕ್ಕೆ ಇರುವ ಅನೇಕ ಹೆಸರುಗಳಲ್ಲಿ ಭೃಗ್ವಂಗಿರೋವೇದವೆಂದೂ ಗುರುತಿಸುತ್ತಿದ್ದರು. ಅಂದರೆ ಈ ವೇದಗಳ ಹೆಚ್ಚು ಭಾಗ ಮಂತ್ರಗಳನ್ನು ಭೃಗು ಮತ್ತು ಅಂಗೀರಸ ಕುಲದ ಋಷಿಗಳೇ ಬಹಳವಾಗಿ ದರ್ಶನಮಾಡಿದವರು ಎಂಬ ಅಭಿಪ್ರಾಯ.

ಇತರ ಕುಲದ ಋಷಿಗಳ ಪೈಕಿ ಋಷಿ ಪದವಿಗೇರಿದ ಪ್ರಮುಖರಾದವರೆಂದರೆ -

ಅಂಗಿರಾಕುಲ - 33 ಋಷಿಗಳು
ಕಾಶ್ಯಪರು - 6 ಋಷಿಗಳು
ಆತ್ರೇಯರು - 6 ಋಷಿಗಳು
ವಾಸಿಷ್ಠರು - 8 ಋಷಿಗಳು
ಕೌಶಿಕರು (ವಿಶ್ವಾಮಿತ್ರ) - 13
ಅಗಸ್ತ್ಯರು - 3 ಋಷಿಗಳು
ಕ್ಷತ್ರಿಯರು - 2 ಋಷಿಗಳು
ವೈಶ್ಯರು - 3

ಈ ಋಷಿಗಳೆಲ್ಲಾ ವೇದ ಮಂತ್ರಗಳನ್ನು ಮೊದಲಿಗೆ ದರ್ಶನ ಮಾಡಿದವರಲ್ಲ. ಒಂದು ಉದಾಹರಣೆಯೆಂದರೆ - ಮನುವಿಗೆ ಅನೇಕ ಮಕ್ಕಳಿದ್ದರು. ಅವನ ಕೊನೆಯ ಪುತ್ರ ನಾಭಾನೇದಿಷ್ಠ. ಇವನು ತನ್ನ ಗುರುಕುಲಾಭ್ಯಾಸ ಮುಗಿದರೂ ಗುರುಕುಲದಿಂದ ಬಹಳ ದಿನವಾದರೂ ಹಿಂದಿರುಗಿ ಬರಲಿಲ್ಲ. ಹಾಗಾಗಿ ಮನುವಿನ ಅಪ್ಪಣೆಯ ಮೇರೆಗೆ ಆಸ್ತಿಯನ್ನು ಉಳಿದ ಮಕ್ಕಳು ಹಂಚಿಕೊಂಡರು. ನಂತರ ಮರಳಿ ಬಂದ ನಾಭಾನೇದಿಷ್ಠನು ತನ್ನ ಭಾಗದ ಆಸ್ತಿಯನ್ನು ಕೊಡಬೇಕೆಂದು ತಂದೆಯಲ್ಲಿ ಕೇಳಿದನು. ಆಗ ಮನುವು ಅವನಿಗೆ ಎರಡು ಸೂಕ್ತಗಳನ್ನೂ ಹಾಗೂ ಒಂದು ಬ್ರಾಹ್ಮಣವನ್ನೂ ಉಪದೇಶಿಸಿ - "ಅಂಗೀರಸ ಋಷಿಗಳು ಸ್ವರ್ಗವನ್ನು ಪಡೆಯುವ ಉದ್ದೇಶದಿಂದ ಯಜ್ಞವನ್ನು ಮಾಡುತ್ತಿದ್ದಾರೆ. ಆ ಯಜ್ಞದ ಕೆಲವು ಕರ್ಮಗಳು ಸರಿಯಾಗಿ ನಡೆಯುತ್ತಿಲ್ಲ. ನೀನು ಹೋಗಿ ಈ ಮಂತ್ರಗಳನ್ನು ಪಠಿಸಿ, ಆ ಕರ್ಮಗಳನ್ನು ಸರಿಪಡಿಸು. ಆಗ ಅವರು ನಿನಗೆ ದಕ್ಷಿಣೆಯನ್ನು ಕೊಡುತ್ತಾರೆ. ಅದೇ ನಿನ್ನ ಭಾಗದ ಆಸ್ತಿ" ಎಂದು ಹೇಳಿದನು. ಹೀಗೆ ಮನುವಿನಿಂದ ನಾಭಾನೇದಿಷ್ಠನಿಗೆ ಉಪದೇಶವಾದ ಸೂಕ್ತಗಳೆಂದರೆ ಋಗ್ವೇದದ 10ನೇ ಮಂಡಲದಲ್ಲಿನ 61 ಮತ್ತು 62ನೇ ಸುಪ್ರಸಿದ್ಧವಾದ ಸೂಕ್ತಗಳು. ಮನುವು ಉಪದೇಶಿಸಿ ಬ್ರಾಹ್ಮಣವು ತೈತ್ತಿರೀಯಸಂಹಿತೆಯಲ್ಲಿದೆ. ಇದರ ಬಗ್ಗೆ ಭಟ್ಟಭಾಸ್ಕರರು ತೈತ್ತಿರೀಯಸಂಹಿತಾ ಭಾಷ್ಯದಲ್ಲಿ ಉಲ್ಲೇಖಿಸಿರುವರು. ಇವೆಲ್ಲದರ ಅಭಿಪ್ರಾಯವೇನೆಂದರೆ ಮೇಲೆ ತಿಳಿಸಿರುವ ಮಂತ್ರಗಳು ಹಾಗೂ ಬ್ರಾಹ್ಮಣವು ನಾಭಾನೇದಿಷ್ಠನಿಗಿಂತ ಮುಂಚೆ ಇದ್ದರೂ ನಾಭಾನೇದಿಷ್ಠನು ಇವುಗಳಿಂದ ವಿಶೇಷ ಪ್ರಯೋಜನ ಪಡೆದಿದ್ದರಿಂದ ಈತನೇ ಈ ಮಂತ್ರ ಹಾಗೂ ಬ್ರಾಹ್ಮಣಕ್ಕೆ ಋಷಿಯೆಂದು ಪರಿಗಣಿಸಲಾಗಿದೆ. ಹೀಗೆ ಪ್ರಥಮ ಬಾರಿಗೇ ಮಂತ್ರಗಳ ದರ್ಶನವಾಗದೇ ಇದ್ದರೂ ನಂತರ ಉಪದೇಶಿಸಲ್ಪಟ್ಟ ಋಷಿಗಳ ಬಗ್ಗೆ ಹಲವಾರು ಕಡೆಗಳಲ್ಲಿ ಉಲ್ಲೇಖವಿರುವುದು. ಈ ಋಷಿಗಳನ್ನು ಮಂತ್ರದ್ರಷ್ಟಾರರು ಎನ್ನುವುದಕ್ಕಿಂತ ಮಂತ್ರಾರ್ಥಗಳನ್ನು ಪ್ರಕಾಶಪಡಿಸಿದವರು ಅಥವಾ ಮಂತ್ರಗಳನ್ನು ಪ್ರಥಮ ಬಾರಿಗೆ ಯಜ್ಞ ಯಾಗಾದಿಗಳಲ್ಲಿ ಪ್ರಯೋಗಿಸಿದವರು ಎನ್ನಬಹುದು.

ಮಂತ್ರಗಳ ಅರ್ಥದ್ರಷ್ಟೃಗಳಾದ ಋಷಿಗಳು

ವೇದಗಳಲ್ಲಿ ಮಂತ್ರಗಳು ಪದೇ ಪದೇ ಪ್ರಾದುರ್ಭವಿಸಿವೆ. ಒಂದೇ ಮಂತ್ರವು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಋಷಿಗಳಿಂದ ದೃಷ್ಟವಾಗಿವೆ. ಇಷ್ಟೇ ಅಲ್ಲದೆ ಒಂದೇ ಮಂತ್ರವನ್ನು ಸಂದರ್ಭಕ್ಕನುಸಾರವಾಗಿ ಬೇರೆ ಬೇರೆ ಪ್ರಯೋಗವನ್ನು ಮಾಡಿರುವುದನ್ನೂ ಕಾಣಬಹುದು. ಅಂದರೆ ಒಂದೇ ಮಂತ್ರಕ್ಕೆ ಬೇರೆ ಬೇರೆ ಅರ್ಥವನ್ನು ಮಾಡಿರುತ್ತಾರೆ. ಹೀಗಾಗಿ ಋಷಿಗಳು ಅರ್ಥದರ್ಶನವನ್ನೂ ಪಡೆದರು ಎನ್ನಬಹುದು. ಮಂತ್ರದರ್ಶನಕ್ಕೂ ಮಂತ್ರಾರ್ಥದರ್ಶನಕ್ಕೂ ವ್ಯತ್ಯಾಸವಿದೆ.

ಕೆಲವು ಕಡೆಗಳಲ್ಲಿ ಮಂತ್ರಗಳ ಋಷಿಗಳು ತಮ್ಮ ಮೂಲ ನಾಮಧೇಯವನ್ನು ಬಿಟ್ಟು ವೇದದಲ್ಲಿ ಬರುವ ಪದಗಳನ್ನೇ ತಮ್ಮ ಹೆಸರನ್ನಾಗಿ ಸ್ವೀಕರಿಸಿರುವರು.

ಆರ್ಯಧರ್ಮ, ಅಥವಾ ಹಿಂದೂ ಧರ್ಮಕ್ಕೆ ಋಷಿಗಳೇ ಮೂಲಪುರುಷರು. ನಮ್ಮ ಸಂಸ್ಕೃತಿಯ ನಿರ್ಮಾತೃಗಳೇ ಇವರು. ಪ್ರತಿಯೊಬ್ಬ ಋಷಿಯೂ ಧರ್ಮಾಧರ್ಮದ ಸಾರವನ್ನು ತಿಳಿದು ಅದರಂತೆ ಸ್ವತಃ ಧರ್ಮಮಾರ್ಗವನ್ನೇ ಅವಲಂಬಿಸಿದವರು, ಯಥಾರ್ಥವಾದಿಗಳು, ಸತ್ಯವ್ರತರು.

ಋಷಿಗಳು ಸಮಸ್ತವನ್ನೂ ತ್ಯಾಗಮಾಡಿದವರು. ಅವರನ್ನು ನೋಡಿದರೆ ದಟ್ಟದರಿದ್ರರಂತೆ ಇರುತ್ತಾರೆ. ಇಂಥವರೆಲ್ಲಿ? ರಾಜಾಧಿರಾಜರುಗಳೆಲ್ಲಿ? ಆದರೂ, ಧರ್ಮರಕ್ಷಕರೂ, ಪ್ರಚಾರಕರೂ, ಜ್ಞಾನನಿಧಿಗಳೂ ಆದ ಇವರಿಗೆ ಎಲ್ಲೆಲ್ಲಿಯೂ ಗೌರವವಿದ್ದೇ ಇದೆ.

ಮಹಾಭಾರತದಲ್ಲಿನ ಪಾಂಡುವಂಶದ ರಾಜರುಗಳಾದ ಪರೀಕ್ಷಿತ್, ಜನಮೇಜಯ, ಶತಾನೀಕ ಮತ್ತು ಅಶ್ವಮೇಧದತ್ತ ರಾಜರುಗಳು ಸುಮಾರು 225 ವರ್ಷ ರಾಜ್ಯಭಾರ ಮಾಡಿದರು. ಅಶ್ವಮೇಧದತ್ತನ ಮಗ ಅಸೀಮಕೃಷ್ಣನು ಒಂದು ದೀರ್ಘ ಯಾಗವನ್ನು ಮಾಡಿದನು. ಇವನ ಕಾಲದಲ್ಲೂ ಋಷಿಗಳು ಇದ್ದರು. ಧರ್ಮರಾಜನು ಭೂಮಿಯನ್ನು ಬಿಟ್ಟನಂತರ ಕಲಿಯುಗ ಪ್ರಾರಂಭವಾಯಿತೆಂದು ಪರಿಗಣಿಸಿದರೆ ಅದರಿಂದಾಚೆಗೆ 400 ವರ್ಷಗಳು ಋಷಿಗಳಿದ್ದರೆನ್ನಬಹುದು.

ಋಗ್ವೇದದಲ್ಲಿ ಸಾಧಾರಣವಾಗಿ ಒಂದು ಸೂಕ್ತದಲ್ಲಿರುವ ಮಂತ್ರಗಳಿಗೆಲ್ಲಾ ಒಬ್ಬನೇ ಋಷಿ. ಹಾಗೇ ಒಂದು ಸೂಕ್ತದಲ್ಲಿರುವ ಅನೇಕ ಮಂತ್ರಗಳಿಗೆ ಬೇರೆ ಬೇರೆ ಋಷಿಗಳೂ ಇರುವುದುಂಟು. ಋಗ್ವೇದದಲ್ಲಿ ಹೀಗಿರುವುದರಿಂದ ವೇದಮಂತ್ರಗಳನ್ನು 3 ವಿಧವಾಗಿ ವಿಂಗಡಿಸಲಾಗಿದೆ. ಒಬ್ಬ ಋಷಿಯಿಂದ ದೃಷ್ಟವಾದ ಸೂಕ್ತಗಳನ್ನೆಲ್ಲ ಒಂದೆಡೆ ಸೇರಿಸಿ ನಂತರ ಇನ್ನೊಬ್ಬ ಋಷಿಯಿಂದ ದೃಷ್ಟವಾದ ಮಂತ್ರಗಳನ್ನು ಸೇರಿಸಬಹುದು. ಇಂತಹ ಮಂತ್ರಗಳ ಗುಂಪಿಗೆ ಒಂದು ಮಂಡಲವೆನ್ನುವರು. ಋಗ್ವೇದದಲ್ಲಿ 10 ಇಂತಹ ಮಂಡಲಗಳಿವೆ. ಋಷಿಗಳ ಕ್ರಮವನ್ನನುಸರಿಸು ಜೋಡಿಸಿರುವ ಸೂಕ್ತಗಳ ಗುಂಪುಗಳನ್ನು ಅಥವಾ ಮಂಡಲಗಳನ್ನು ಒಟ್ಟುಗೂಡಿಸಿರುವ ಕ್ರಮವೇ ಈಗಿರುವ ಋಗ್ವೇದ ಸಂಹಿತೆ.

ನಿರೀಕ್ಷಿಸಿ - ಮುಂದಿನ ಲೇಖನ - ಋಗ್ವೇದದ ದೇವತೆಗಳು

ಮೂಲ : ಋಗ್ವೇದ ಸಂಹಿತ - ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್



ಋಗ್ವೇದದ ದೇವತೆಗಳು

ಋಗ್ವೇದದ ದೇವತೆಗಳು

ಯಾ ತೇನೋಚ್ಯತೇ ಸಾ ದೇವತಾ - ಮಂತ್ರಗಳಲ್ಲಿ ಪ್ರತಿಪಾದಿಸಲ್ಪಡುವ ವಿಷಯಗಳೇ ಆಯಾ ಮಂತ್ರಕ್ಕೆ ದೇವತೆಗಳು. ಒಂದು ಮಂತ್ರದಲ್ಲಿ ಅಗ್ನಿಸಂಬಂಧಿತ ವಿಷಯಗಳಿದ್ದರೆ ಆ ಮಂತ್ರಕ್ಕೆ ಅಗ್ನಿಯೇ ದೇವತೆ.

ಒಂದು ಮಂತ್ರಕ್ಕೆ ಅಥವಾ ಅನೇಕ ಮಂತ್ರಗಳಿಂದ ಕೂಡಿದ ಸೂಕ್ತಕ್ಕೆ ಒಂದೇ ದೇವತೆ ಇರಬಹುದು. ಹಾಗೆಯೇ ಒಂದು ಸೂಕ್ತದಲ್ಲಿ ವಿವಿಧ ಮಂತ್ರಗಳಿಗೆ ಬೇರೆ ದೇವತೆಗಳಿರಬಹುದು. ಸಾಧಾರಣವಾಗಿ ಒಂದು ಸೂಕ್ತಕ್ಕೆ ಅಥವಾ ಮಂತ್ರಕ್ಕೆ ಒಂದೇ ದೇವತೆ ಇರುವುದು.

ಋಗ್ವೇದದಲ್ಲಿನ ಪ್ರಮುಖ ದೇವತೆಗಳು - ಅಗ್ನಿ, ಇಂದ್ರ, ವರುಣ, ಅಶ್ವಿನಿ ದೇವತೆಗಳು, ಮರುತ್ತು, ವಾಯು, ಆದಿತ್ಯ, ಸವಿತೃ, ಉಷಾ, ರಾತ್ರಿಃ, ಮಿತ್ರ, ವಿಷ್ಣು, ರುದ್ರ, ಸೋಮ, ಅಪಃ, ಮುಂತಾದವರು. ಅಗ್ನಿ ಹಾಗೂ ಇಂದ್ರ ದೇವತೆಗಳಿಗೆ ಅನೇಕ ಸೂಕ್ತಗಳಿವೆ. ಪ್ರತಿ ಮಂಡಲದ ಸೂಕ್ತಗಳ ಜೋಡಣೆಯಲ್ಲಿ ಮೊದಲು ಅಗ್ನಿ, ನಂತರ ಇಂದ್ರ ದೇವತೆಗಳ ಸೂಕ್ತಗಳಿದ್ದು ನಂತರ ಇತರ ದೇವತೆಗಳ ಸೂಕ್ತಗಳಿರುವುದು. 9ನೇ ಮಂಡಲದಲ್ಲಿ ಮಾತ್ರ ಎಲ್ಲ ಸೂಕ್ತಗಳಿಗೂ ಪವಮಾನಃ ಸೋಮಃ ಎಂಬ ಒಂದೇ ದೇವತೆ. ಋಷಿಗಳೂ, ಛಂದಸ್ಸುಗಳು ಮಾತ್ರ ಬೇರೆ.

ಮಂತ್ರಗಳಲ್ಲಿ ಮೇಲೆ ವಿವರಿಸಿರುವ ದೇವತೆಗಳಲ್ಲದೆ ಅಲ್ಲಲ್ಲಿ ಕೆಲವು ಮಂತ್ರಗಳಲ್ಲಿ ನದಿಗಳು, ಗ್ರಾವಾಣಃ, ಜ್ಞಾನಂ, ಬಾಣ, ಬತ್ತಳಿಕೆ, ಯಜ್ಞವೇದಿ, ಊಲೂಖಲ ಇತ್ಯಾದಿ ನಿರ್ಜಿವ ವಸ್ತುಗಳೂ ದೇವತೆಗಳಾಗಿರುವುದನ್ನು ಕಾಣಬಹುದು. ಇದಲ್ಲದೆ ರಾಜರನ್ನು ಕುರಿತ ದಾನಸ್ತುತಿ, ಇಬ್ಬರು ಪುರುಷರ ಅಥವಾ ದೇವತೆಗಳ ಸಂವಾದವೂ ಅನೇಕ ಮಂತ್ರಗಳಿಗೆ ದೇವತೆಗಳಾಗಿರುವುದು. 10ನೇ ಮಂಡಲದಲ್ಲಿ ಇಂತಹ ಕ್ಷುದ್ರದೇವತೆಗಳಿರುವ ಸೂಕ್ತಗಳನ್ನು ನೋಡಬಹುದು.

ಋಗ್ವೇದ ಕಾಲದಲ್ಲಿ ಜನರು ದೇವತೆಗಳನ್ನು ಈಗಿನ ಕಾಲದಂತೆ ಮನೆಗಳಲ್ಲಿ ಪೂಜಿಸುತ್ತಿರಲಿಲ್ಲ. ಕೇವಲ ಯಜ್ಞ ಯಾಗಾದಿಗಳಲ್ಲಿ ಮಾತ್ರ ಅವರನ್ನು ಆಹ್ವಾನಿಸಿ ಪೂಜಿಸುತ್ತಿದ್ದರು. ಹಾಗಾಗಿ ಋಗ್ವೇದದಲ್ಲಿ ವಿವರಿಸಿರುವ ಕರ್ಮಗಳು ಬಡವರಿಗೆ ಆಚರಿಸಲು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಕೇವಲ ಶ್ರೀಮಂತರು ಮಾತ್ರ ಆಚರಿಸಲು ಸಾಧ್ಯವಾಗುತ್ತಿತ್ತು. ಯಜ್ಞ ಯಾಗಾದಿಗಳನ್ನು ಮಾಡುವ ಕರ್ತೃವು ಧನಿಕ ಹಾಗೂ ಉದಾರಿಯಾಗಿರಬೇಕು. ಅದಕ್ಕೆ ಬೆಳೆಬಾಳುವ ಅನೇಕ ಪದಾರ್ಥಗಳು ಬೇಕಿದ್ದು ಜೊತೆಗೆ ಅನೇಕ ಋತ್ವಿಕ್ಕುಗಳು ಇರಬೇಕಿತ್ತು. ಕಾಲಕ್ರಮದಲ್ಲಿ ಬಡವರು ಅಥರ್ವವೇದದಲ್ಲಿ ಸೂಚಿಸಿರುವ ಮಾಟ ಮಂತ್ರಗಳಿಗೆ ಮೊರೆಹೋದರು. ಋತ್ವಿಕ್ಕುಗಳಿದೆ ಬದಲಾಗಿ ಅಲ್ಪತೃಪ್ತರಾದ ಮಾಟಗಾರರೇ ಅವರಿಗೆ ಪುರೋಹಿತರಾದರು.

ಋಗ್ವೇದದಲ್ಲಿ ಬಹುಪಾಲು ದೇವತೆಗಳನ್ನು ಪ್ರಾರ್ಥಿಸುವುದು ಸಂಸಾರದಿಂದ ಮುಕ್ತಿ ಅಥವಾ ಸ್ವರ್ಗಾದಿ ಸುಖವನ್ನು ಪಡೆಯುವ ಸಲುವಾಗಲ್ಲ, ಬದಲಿಗೆ ಆಯುಸ್ಸು, ಐಶ್ವರ್ಯ, ವೀರ್ಯ, ಸಂತಾನ ಇತ್ಯಾದಿ ಪ್ರಾಪಂಚಿಕ ಸುಖಗಳನ್ನು ಪಡೆಯುವ ಸಲುವಾಗಿ. ಇಷ್ಟಲ್ಲದೆ, ಶತ್ರುನಾಶ ಅಥವಾ ಜಯ, ಆರೋಗ್ಯ, ಅಪಾರ ಪ್ರಮಾಣದ ಆಹಾರ ಮತ್ತು ಸೋಮರಸಗಳನ್ನು ನೀಡುವಂತೆ ಬೇಡುತ್ತಿದ್ದರು. ಇವೇ ಜೀವನದ ಮುಖ್ಯ ಗುರಿಗಳಂತೆ ಕಾಣುತ್ತಿದ್ದವು. ಈ ರೀತಿಯ ಬೇಡಿಕೆಗಳು ಅವರಿಗೆ ಆ ಕಾಲದಲ್ಲಿ ತಪ್ಪೆಂಬ ಭಾವನೆಯೇ ಮುಡಿದಂತೆ ಕಾಣುತ್ತಿರಲಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಮಂತ್ರಗಳಲ್ಲಿ ದೇಹದ ನಶ್ವರತೆ, ಮಾಯೆಯಿಂದ ಕೂಡಿದ ಜೀವನ ಇಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದನ್ನು ಕಾಣಬಹುದು.

ಋಗ್ವೇದದ ಮಂತ್ರಗಳು ಕರ್ಮಕ್ಕೆ ಮಾತ್ರ ಉಪಯೋಗಗಳೆಂದ ಮಾತ್ರಕ್ಕೆ ಅವು ಯಜುರ್ವೇದ ಮಂತ್ರಗಳಂತೆ ಸಂಪೂರ್ಣವಾಗಿ ಕರ್ಮಕ್ಕೆ ಅಧೀನವಾಗಿಲ್ಲ. ಈ ಮಂತ್ರಗಳಲ್ಲಿ ಸರಳತೆ ಹಾಗೂ ನಿಷ್ಕಪಟತೆ ಎದ್ದು ಕಾಣುತ್ತದೆ. ಹಲವಾರು ಸ್ತೋತ್ರಗಳು ಹೃದಯಾಂತರಾಳದಿಂದ ಬರುತ್ತದೆ ಹಾಗೂ ಅವುಗಳಲ್ಲಿ ಕಪಟತೆ ಇರುವುದಿಲ್ಲ.

ಋಗ್ವೇದದ ಮಂತ್ರಗಳನ್ನು ಉಚ್ಚರಿಸಿ ದೇವತೆಗಳನ್ನು ಪ್ರಾರ್ಥಿಸಿದಾಗ ಅವರು ಸಹಾಯ ಮಾಡುತ್ತಿದ್ದರು. ಅಂದರೆ, ಈ ದೇವತೆಗಳಿಗೆ ಅಕಾರವಿದೆಯೇ? ಇದ್ದಲ್ಲಿ ಎಂತಹುದು? ಸಾಧಾರಣವಾಗಿ ಋಗ್ವೇದದ ದೇವತೆಗಳೆಲ್ಲ ಪ್ರಕೃತಿಯ ಒಂದೊಂದು ಅಂಶವೂ ಆಕಾರವನ್ನು ಧರಿಸಿ ದೇವತೆಗಳಾಗಿ ಪರಿಣಮಿಸಿದೆ. ಉಷಸ್ಸು ವೇದಕಾಲದ ಋಷಿಗಳಿಗೆ ಆಶ್ಚರ್ಯಕರವಾದದ್ದು ಹಾಗೂ ಪೂಜೆಗೆ ಅರ್ಹವಾದದ್ದು. ಇಂತಹ ಪ್ರಕೃತಿಯ ಅಂಶಗಳು ದೇವತೆಗಳಾದವು. ವೇದದ ದೇವತೆಗಳು ಅರ್ಧ ಮನುಷ್ಯಸ್ವಭಾವವುಳ್ಳವರಾಗಿದ್ದು ಉಳಿದರ್ಧ ತಮ್ಮ ಪ್ರಕೃತಿಯ ಮೂಲಭೂತ ಭಾಗವಾಗಿ ಉಳಿದಿದ್ದಾರೆ.

ಶಬ್ದಶಾಸ್ತ್ರಜ್ಞರು ಕೇವಲ ಮೂರು ದೇವತೆಗಳನ್ನು ಮಾತ್ರ ಪರಿಗಣಿಸುತ್ತಾರೆ. ಭೂಮಿಯಲ್ಲಿ ಅಗ್ನಿ, ಆಕಾಶದಲ್ಲಿ ವಾಯು ಅಥವಾ ಇಂದ್ರ ಮತ್ತು ಊರ್ಧ್ವ ಲೋಕಗಳಲ್ಲಿ ಸೂರ್ಯ.

ದೇವತೆಗಳ ವೈಯುಕ್ತಿಕ ಲಕ್ಷಣಗಳನ್ನು ಪರಿಶೀಲಿಸುವ ಮೊದಲು ಕೆಲವು ವಿಷಯಗಳನ್ನು ಗಮನಿಸಬೇಕು. ಋಗ್ವೇದದಲ್ಲಿನ ದೇವತೆಗಳಿಗೂ ನಂತರ ಪುರಾಣಕಾಲದ ದೇವತೆಗಳಿಗೂ ವ್ಯತ್ಯಾಸವಿದೆ. ಈ ವ್ಯತ್ಯಾಸವು ಕಾಲಾನುಕ್ರಮದಲ್ಲಿ ಬಂದಿವೆ. ವೇದಗಳಲ್ಲಿನ ಪ್ರಮುಖ ದೇವತೆಗಳಿಗೆ ಪುರಾಣದಲ್ಲಿ ಸ್ಥಾನವೇ ಇಲ್ಲದಿರುವುದು, ಅಥವಾ ಇದ್ದರೂ ಅದು ಅಪ್ರಸ್ತುತವಾದದ್ದು. ಹಾಗೇ ವೇದದಲ್ಲಿ ಅಪ್ರಸ್ತುತವಾದ ದೇವತೆಗಳು ಪುರಾಣಕಾಲದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿರುವುದು. ಉದಾಹರಣೆಗೆ ವೇದದಲ್ಲಿ ಅಗ್ನಿ, ಇಂದ್ರರು ಪ್ರಮುಖರಾಗಿದ್ದರೆ, ಪುರಾಣಗಳಲ್ಲಿ ಅವರ ಸ್ಥಾನ ಕಡಿಮೆಯದು. ಬ್ರಹ್ಮ, ವಿಷ್ಣು, ಮಹೇಶ್ವರರ ಮುಂದೆ ಇಂದ್ರ, ಅಗ್ನಿಯರು ಯಃಕಶ್ಚಿತ್ ದೇವತೆಗಳು. ಹಾಗೇ ವೇದದಲ್ಲಿ ಅಷ್ಟೇನೂ ಪ್ರಮುಖವಾಗಿ ಪರಿಗಣಿಸದ ವಿಷ್ಣುವಿಗೆ ಪುರಾಣದಲ್ಲಿ ಉನ್ನತ ಮಟ್ಟದ ಗೌರವ. ವೇದಗಳಲ್ಲಿ ಕಂಡು ಬಾರದೇ ಇರುವ ಲಕ್ಷ್ಮಿ, ಪಾರ್ವತಿ, ಕುಬೇರ ಇತ್ಯಾದಿ ದೇವತೆಗಳನ್ನು ಪುರಾಣದಲ್ಲಿ ಪ್ರಮುಖವಾಗಿ ಗಮನಿಸಬಹುದು. ಆದರೆ ವೇದದಲ್ಲಿ ಪ್ರಸಿದ್ಧರಾದ ದೇವತೆಗಳಾದ ಅರ್ಯಮ, ಭಗ, ಪರ್ಜನ್ಯ, ಉಕ್ಷಸ್ ಮುಂತಾದವರುಗಳು ಪುರಾಣದಲ್ಲಿ ಕಂಡುಬರುವುದಿಲ್ಲ.

ಋಗ್ವೇದದಲ್ಲಿ ಅಗ್ನಿ, ಇಂದ್ರರು ಬಹು ಮುಖ್ಯರಾದ ದೇವತೆಗಳು. ಇಂದ್ರನನ್ನು ಕುರಿತು ಅತಿ ಹೆಚ್ಚಿನ ಮಂತ್ರಗಳಿದ್ದರೆ, ಅಗ್ನಿಗೆ ಮಂತ್ರ ಸಂಖ್ಯೆಯಲ್ಲಿ ಎರಡನೇ ಸ್ಥಾನ. ಅಗ್ನಿಯನ್ನು ವೇದದಲ್ಲಿ ದೇವತೆಯನ್ನಾಗಿ, ಮನುಷ್ಯ, ಪ್ರಕೃತಿಯ ಒಂದು ಘಟನೆ ಹಾಗೂ ಪಂಚಭೂತಗಳಲ್ಲಿ ಒಂದಾದ ತೇಜಸ್ಸು ಎಂಬುದಾಗಿ ವರ್ಣಿಸಲಾಗಿದೆ.

ಆಗ್ನಿ
ಅಗ್ನಿಗೆ 3 ರೂಪಗಳಿರುವುದು. ಭೂಮಿಯ ಮೇಲೆ ಬೆಂಕಿ, ವಾಯುಮಂಡಲದಲ್ಲಿ ವಿದ್ಯುತ್, ಸಿಡಿಲು ಹಾಗೂ ಅಂತರಿಕ್ಷದಲ್ಲಿ ಸೂರ್ಯಮಂಡಲ ರೂಪ. ಭೂಮಿಯ ಮೇಲೆ ಅರಣಿಯಿಂದ ಬೆಂಕಿಯನ್ನು ಉತ್ಪತ್ತಿಮಾಡುತ್ತಾರೆ. ಎರಡು ಮೇಘಗಳ ನಡುವೆ ಇಂದ್ರನು ಅಗ್ನಿಯನ್ನು ಸೃಷ್ಟಿಸುತ್ತಾನೆ ಅಥವಾ ನೀರಿನೊಳಗೂ ಉತ್ಪತ್ತಿ ಮಾಡುತ್ತಾನೆ. ಈ ಅಗ್ನಿಗೂ, ಪ್ರತಿ ಗೃಹದಲ್ಲೂ ನಿತ್ಯವೂ ಹೊತ್ತಿಸುವ ಅಗ್ನಿಗೂ ವ್ಯತ್ಯಾಸವೇನೂ ಇಲ್ಲದಿದ್ದರೂ ವೇದದಲ್ಲಿ ಈ ವಿಧದ ಬೆಂಕಿಯ ವಿಷಯ ಪ್ರಸ್ತಾಪವಾಗಿಲ್ಲ. ವೇದಗಳಲ್ಲಿ ಯಜ್ಞ ಯಾಗಾದಿಗಳಿಗೆ ಸಂಬಂಧಿಸಿದ ಹಾಗೂ ಪಂಚಭೌತಿಕ ಅಗ್ನಿಗಳ ಬಗ್ಗೆ ಮಾತ್ರ ಚರ್ಚಿಸಲಾಗಿದೆ.

ಅಗ್ನಿ ಮಾಡುವ ಕೆಲಸಗಳಲ್ಲಿ ಪ್ರಮುಖವಾದದ್ದು ಕತ್ತಲನ್ನು ಓಡಿಸುವುದು ಹಾಗೂ ಬೆಳಕನ್ನು ನೀಡುವುದು. ಸೂರ್ಯೋದಯವಾದ ಕೂಡಲೇ ಅಗ್ನಿಯನ್ನು ಪ್ರಜ್ವಲಿಸಿ ದೈನಂದಿನ ಕರ್ಮಗಳನ್ನು ಮಾಡಬೇಕು. ಅಂದರೆ ಅಗ್ನಿಯಿಂದಲೇ ದಿನವು ಪ್ರಾರಂಭವಾಗುವುದು. ಅವನೇ ಪುರೋಹಿತರಲ್ಲಿ ಜ್ಯೇಷ್ಠನು. ತುಪ್ಪವನ್ನು ಹೋಮಮಾಡಿದ ಕೂಡಲೇ ಅಗ್ನಿಯು ಉರಿಯ ಅಕಾರನಾಗಿ ಮೇಲೇಳುತ್ತಾನೆ. ಅವನ ದಂತಪಂಕ್ತಿಯು ಶುಭ್ರವಾಗಿದ್ದು ಶಿರವು ತೇಜೋರೂಪವಾಗಿದೆ. ಅವನೇ ಮನೆಗೂ ಹಾಗೂ ಎಲ್ಲರಿಗೂ ಯಜಮಾನ ಹಾಗೂ ಕುಲಪುರೋಹಿತ ಹಾಗೂ ಪರಮ ಜ್ಞಾನಿ. ದೇವತೆಗಳಿಗೂ ಮನುಷ್ಯರಿಗೂ ಮಧ್ಯವರ್ತಿಯಾಗಿ ಯಜ್ಞದ ಹವಿಸ್ಸನ್ನು ದೇವತೆಗಳಿಗೆ ತಲಪಿಸುತ್ತಾನೆ. ಯಜ್ಞ ಕರ್ತೃವು ಇತರ ದೇವತೆಗಳನ್ನು ಕರೆತರುವಂತೆ ಅಗ್ನಿಯನ್ನು ಪ್ರಾರ್ಥಿಸುವರು. ಹೀಗೆ ಅಗ್ನಿಯು, ಪಂಚಭೌತಿಕ, ಯಾಜ್ಞಿಕ ಮತ್ತು ದೈವಿಕ ರೂಪಗಳಲ್ಲಿ ಕಾರ್ಯ ನಿರ್ವಹಿಸುವನು. ಈ ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದರೂ ಅವನು ಸಂಪೂರ್ಣವಾಗಿ ಮನುಷ್ಯನಲ್ಲ ಹಾಗೂ ತನ್ನ ಸ್ವಾಭಾವಿಕ ರೂಪವನ್ನು ತ್ಯಜಿಸಿಲ್ಲ.

ಇಂದ್ರ
ಅಗ್ನಿಯ ನಂತರದ ದೇವತೆಯೆಂದರೆ ಇಂದ್ರ. ಇಂದ್ರನ ಪರವಾದ ಮಂತ್ರಗಳು ಅಗ್ನಿಯ ಪರವಾದ ಮಂತ್ರಗಳಿಗಿಂತ ಹೆಚ್ಚು. ಋಗ್ವೇದದಲ್ಲಿ ಶೇಕಡಾ 25ರಷ್ಟು ಇಂದ್ರನ ಪರವಾಗಿದೆ. ಇಂದ್ರನಿಗೆ ಅನ್ವಯಿಸದೇ ಇರುವ ಗುಣವೇ ಇಲ್ಲ.

ಇಂದ್ರನು ಸ್ವರ್ಗದಿಂದಲೋ, ಭೂಮಿಯಿಂದಲೋ ಹುಟ್ಟಿದನು. ಹುಟ್ಟಿದಕೂಡಲೇ ಸೋಮಪಾನ ಮಾಡಿದನು. ಇವನು ಬಹು ಪುರಾತನ ದೇವತೆ, ಯುವಕ, ಬಲಿಷ್ಠ, ಪರಾಕ್ರಮಿ, ಸ್ಫುರದ್ರೂಪಿ, ಹಿರಣ್ಯಬಾಹುವುಳ್ಳವನು, ಹರಿತಾಶ್ವ (ಹಸಿರು ಕುದುರೆಗಳಿಂದ ಕುಡಿದ ಚಿನ್ನದ ರಥವುಳ್ಳವನು). ಇವನ ಆಯುಧ ವಜ್ರ. ಸೋಮಪಾನದಲ್ಲಿ ಇವನನ್ನು ಮೀರಿಸುವವರ್ಯಾರೂ ಇಲ್ಲ.

ವಿಷ್ಣುವಿನೊಂದಿಗೆ ಇಂದ್ರನು ಅನೇಕ ರಾಕ್ಷಸರನ್ನು ಸಂಹಾರಮಾಡಿದನು. ಇಂದ್ರನ ಅನೇಕ ಗುಣಗಳಲ್ಲಿ ಪ್ರಮುಖವಾದ ಮೂರು ಗುಣಗಳೆಂದರೆ -

1. ಅವನ ಬಲ, ಶಕ್ತಿಗೆ ಅಧಿದೇವತೆ ಮತ್ತು ಬಾಹ್ಯಪ್ರಪಂಚದ ಮೇಲೆ ಅಧಿಕಾರವುಳ್ಳವನು. ಸಾಧಾರಣವಾಗಿ ಧಾರ್ಮಿಕವಾಗಲಿ ಅಥವಾ ನೈತಿಕವಾಗಲಿ ಇವನಿಗೆ ಶ್ರೇಷ್ಠ ಸ್ಥಾನವಿಲ್ಲ.

2. ಇಂದ್ರನು ಯುದ್ಧಪ್ರೇಮಿ ಹಾಗೂ ಯೋಧರೆಲ್ಲರಿಗೂ ಆದರ್ಶ. ಯುದ್ಧದ ಸಮಯದಲ್ಲಿ ಇವನನ್ನು ಪ್ರಾರ್ಥಿಸಿ ಇವನ ಮೂಲಕ ಜಯವನ್ನು ಪಡೆಯುವರು.

3. ವೃತ್ತಾಸುರ ವಧೆ -

ಇಂದ್ರಸ್ಯ ನು ವೀರ್ಯಾಣಿ ಪ್ರ ವೋಚಂ ಯಾನಿ ಚಕಾರ ಪ್ರಥಮಾನ ವಜ್ರೀ|
ಅಹನ್ನಹಿಮನ್ವಪಸ್ತರ್ದ ಪ್ರ ವಕ್ಷಣಾ ಅಭಿನತ್ಪರ್ವತಾನಾಂ (ಋಗ್ವೇದ-1-32-1)

ವೃತ್ರಾಸುರನೆಂಬ ದೈತ್ಯನು ಪರ್ವತಗಳಿಂದ ಹರಿಯುವ ನದಿಗಳನ್ನೂ ಅಂತರಿಕ್ಷದಿಂದ ಬರುವ ನೀರನ್ನೂ ತಡೆಹಿಡಿದಿದ್ದನು. ಇಂದ್ರನು ವಜ್ರಾಯುಧದಿಂದ ಅವನನ್ನು ಕೊಂದು ನೀರು ಹರಿಯುವಂತೆ ಮಾಡಿದನು.

ಈ ವೃತ್ರಾಸುರನು ಯಾರು? ಇವನು ತಡೆದಿದ್ದ ನೀರು ಯಾವುದು? ಇಂದ್ರನು ಬಿಡುಗಡೆ ಮಾಡಿದ ನೀರು ಯಾವುದು? ಈ ಪ್ರಶ್ನೆಗಳಿಗೆ ನಿರುಕ್ತದಲ್ಲಿ ಹಲವಾರು ವ್ಯಾಖ್ಯಾನಗಳಿವೆ.

ಮೊದಲನೆಯದು - ವೃತ್ರ ಎಂಬುದು ಒಂದು ದುರ್ದೇವತೆ. ಇದು ಮೇಘಗಳಲ್ಲಿ ನೀರನ್ನು ಬಿಡದಂತೆ ತಡೆದುಬಿಟ್ಟಿತು. ಮೇಘರಾಜ ಇಂದ್ರನು ಚಂಡಮಾರುತದ ಮೂಲಕ ಈ ಮೋಡಗಳನ್ನು ಛೇದಿಸಿ ಮಳೆ ಸುರಿಯುವಂತೆ ಮಾಡಿದನು. ಈ ಚಂಡಮಾರುತವೆಂಬ ವಾದ(Storm Theory)ವನ್ನು ಒಪ್ಪಿಕೊಂಡರೆ, ಪರ್ವತ ಎಂದರೆ ಮೋಡ ಎಂದು ತಿಳಿಯಬೇಕಾಗುತ್ತದೆ. ಈ ಅರ್ಥವು ಅನೇಕ ಕಡೆ ಕಂಡುಬಂದಿದೆ.

ಯ ಈಂಖಯಂತಿ ಪರ್ವತಾನ್ ತಿರಃ ಸಮುದ್ರಮರ್ಣವಂ (i. 19-7)
ಮುಂದುವರೆದು ಮೇಘರಾಜನು (ಇಂದ್ರನು) ವೃತ್ರಾಸುರನನ್ನು ಕೊಂದಮೇಲೆ ಜಲರಾಶಿಯನ್ನು ಬಿಡುಗಡೆಮಾಡಿದನು, ಸೂರ್ಯನನ್ನು ಸೃಷ್ಟಿಸಿದನು ಮತ್ತು ಗೋವುಗಳನ್ನು ಪತ್ತೆಮಾಡಿದನು.

ಎರಡನೆಯದು - ಸೂರ್ಯೋದಯವೆಂಬ ವಾದ (Dawn Theory). ಇದರ ಪ್ರಕಾರ ಇಂದ್ರನೇ ಸೂರ್ಯ. ಕತ್ತಲನ್ನು ನಾಶಪಡಿಸಿ ಬೆಳಕನ್ನು ಪ್ರಪಂಚದಲ್ಲೆಲ್ಲಾ ಹರಡುತ್ತಾನೆ. "ಗೋ" ಅಂದರೆ ಕಿರಣ ಎಂತಲೂ ಅರ್ಥ. ಆದರೆ ಈ ವಾದದಲ್ಲಿ ಸೂರ್ಯನು ನಾಶಪಡಿಸುವುದು ರಾತ್ರಿಯ ಕತ್ತಲನ್ನೇ ಅಥವಾ ಮೇಘಗಳಿಂದ ಉಂಟಾದ ಕತ್ತಲೆಯೇ ಎಂಬುದ ಅಸ್ಪಷ್ಟವಾಗಿದೆ. ಹಾಗೂ ಇಂದ್ರನು ಮಳೆಯ ದೇವತೆಯಾದರೆ ಪರ್ಜನ್ಯ ದೇವತೆಯ ಕೆಲಸವೇನು?

ಮೂರನೆಯದು - Hildebrandt ವಾದ. ಇದರ ಪ್ರಕಾರ ನೀರನ್ನು ತಡೆದಿರುವ ರಾಕ್ಷಸನು ಚಳಿಗಾಲವೆಂಬುದು. ಇವನು ಚಳಿಗಾಲದಲ್ಲಿ ನೀರನ್ನು ಘನೀಭೂತಮಾಡಿ ತಡೆಯುವನು. ಇಂದ್ರನು ಸೂರ್ಯನ ಪರವಾಗಿ ಬಂದು ನೀರನ್ನು ಹರಿಯುವಂತೆ ಮಾಡುವನು. ಆದರೆ ಈ ವಾದವು ಉಷ್ಣಪ್ರದೇಶಕ್ಕೆ ಸರಿಹೊಂದುವುದಿಲ್ಲ.

ಯಃ ಶಂಬರಂ ಪರ್ವತೇಷು ಕ್ಷಿಯಂತಂ ಚತ್ವಾರಿಂಶ್ಯಾಂ ಶರದ್ಯನ್ವವಿಂದತ್ |
ಓಜಾಯಮಾನಂ ಯೋ ಅಹಿಂ ಜಘಾನ ದಾನುಂ ಶಯಾನಂ ಸಜನಾಸ ಇಂದ್ರಃ || (ii. 12-11)

ಇಂದ್ರನು ಪರ್ವತಗಳಲ್ಲಿ ಅಡಗಿದ್ದ ರಾಕ್ಷಸನನ್ನು 40ನೇ ವರ್ಷದಲ್ಲಿ ಕೊಂದನು ಎಂದಿದೆ. ಇದು ಯಾವ ಕಾಲದಿಂದ 40ನೇ ವರ್ಷ? ಇದಕ್ಕೆ ಪುರಾಣದಲ್ಲಿ ಒಂದು ಕಥೆಯುಂಟು - ಇಂದ್ರನು 100 ಅಶ್ವಮೇಧಯಾಗಗಳನ್ನು ಮಾಡಿ ಇಂದ್ರಪದವಿಯನ್ನು ಪಡೆದನು. ಅದೇ ಸಂದರ್ಭದಲ್ಲಿ ಪರ್ವತಗಳ ಹಾವಳಿ ಹೆಚ್ಚಾಯಿತು. ಆ ಕಾಲದಲ್ಲಿ ಪರ್ವತಗಳಿಗೆಲ್ಲಾ ರೆಕ್ಕೆಗಳಿದ್ದವು. ಅವು ಮನಸ್ಸುಬಂದಲ್ಲಿ ಹಾರಿಹೋಗಿ ಕುಳಿತು ಹಾವಳಿಯನ್ನುಂಟುಮಾಡುತ್ತಿದ್ದವು. ಆಗ ಇಂದ್ರನು ವಜ್ರಾಯುಧದಿಂದ ರೆಕ್ಕೆಗಳನ್ನು ಕತ್ತರಿಸಿದನು. ಈ ಘಟನೆಯು ಇಂದ್ರನು ಇಂದ್ರಪದವಿಯನ್ನು ಪಡೆದ 40ನೆ ವರ್ಷದಲ್ಲಿಯೇ ನಡೆದ ಸಂಗತಿ ಎಂದು ಪುರಾಣದಲ್ಲಿ ವಿವರಿಸಿದೆ. ಈ ಮಂತ್ರದಲ್ಲಿರುವ 40ನೆಯ ವರ್ಷವು ಇದಕ್ಕೆ ಸಂಬಂಧಿಸಿರಬಹುದು.

ಬಾಲಗಂಗಾಧರ ತಿಲಕರು ತಮ್ಮ "Arctic Home" (ಧ್ರುವಪ್ರದೇಶನಿವಾಸಸ್ಥಾನ) ಕೃತಿಯಲ್ಲಿ ಈ ಸಂದರ್ಭಕ್ಕೆ ಬೇರೆ ಅಭಿಪ್ರಾಯವನ್ನು ನೀಡಿದ್ದಾರೆ. ಈ ಇಂದ್ರಾಸುರರ ಯುದ್ಧವು ಕತ್ತಲೆ-ಬೆಳಕುಗಳ ಯುದ್ಧಕ್ಕೆ ಸಂಬಂಧಿಸಿದುದು. ಧ್ರುವಪ್ರದೇಶದಲ್ಲಿ ದೀರ್ಘಕಾಲ ಕತ್ತಲಿರುತ್ತದೆ ಹಾಗೂ ಸಂಧ್ಯಾಕಾಲವೂ ದೀರ್ಘವಾಗಿರುತ್ತದೆ. ಮಂತ್ರದಲ್ಲಿ ಹೇಳಲ್ಪಟ್ಟಿರುವ ಜಲ ಎಂಬುದು ಮೊಡದಿಂದ ಅಥವಾ ನದಿಗಳಲ್ಲಿ ಹರಿಯುವ ನೀರಲ್ಲ. ಇದು ಪ್ರಪಂಚವನ್ನು ಎಲ್ಲೆಡೆಯೂ ಆವರಿಸಿರುವ ನೀರು.

ಪುರಾಣಗಳಲ್ಲಿ - ನಮ್ಮ ಈ ಭೂಗೋಳವು ಒಂದು ಜಲಗೊಳದಿಂದ ಆವೃತವಾಗಿದೆ. ಇದರ ಸುತ್ತಲೂ ವಾಯು, ವಾಯುವಿನ ಸುತ್ತಲೂ ಆಕಾಶ ಎಂದು ಹೇಳಿದೆ. ಜಲವೆಂದರೆ ಭೂಮಿಯನ್ನು ಆವರಿಸಿರುವ ಈ ಜಲಗೋಳ ಪ್ರಪಂಚದಲ್ಲಿ ಕತ್ತಲು-ಬೆಳಕು ಎನ್ನುವುದು ಸೂರ್ಯ-ಚಂದ್ರರ ಚಲನೆಯಿಂದಾಗುತ್ತದೆ. ತಿಲಕರ ಪ್ರಕಾರ ಈ ಸೂರ್ಯ-ಚಂದ್ರರ ಚಲನೆಗಳು ಈ ಜಲರಾಶಿಯ ಚಲನೆಯನ್ನಾಶ್ರಯಿಸಿವೆ. ಈ ಜಲರಾಶಿಯ ಚಲನೆಯು ಈ ರಾಕ್ಷಸನಿಂದ ತಡೆಯಲ್ಪಟ್ಟಿತ್ತು. ಎಂದರೆ, ಇವನ ದೌರ್ಜನ್ಯದಿಂದ ಪ್ರಪಂಚಕ್ಕೆ ಆದ ಹಾನಿಯನ್ನು ಊಹಿಸಲಸಾಧ್ಯ. ಇಂದ್ರನು ಈ ರಾಕ್ಷಸನನ್ನು ಸಂಹಾರಮಾಡಿ ಜಲರಾಶಿಯು ಚಲಿಸುವಂತೆ ಮಾಡಿ ಪ್ರಪಂಚಕ್ಕೆ ಮಹದುಪಕಾರವನ್ನು ಮಾಡಿದನು. ಹೀಗಾಗಿ ಇಂದ್ರನ ಸಾಹಸಗಳಲ್ಲೆಲ್ಲಾ ಇದನ್ನೇ ಅತಿ ಮುಖ್ಯವೆನ್ನುವರು.

ಸೋಮ -
ಋಗ್ವೇದದಲ್ಲಿ ಅಗ್ನಿ, ಇಂದ್ರರುಗಳನ್ನು ಬಿಟ್ಟರೆ ಸೋಮನೇ ಹೆಚ್ಚು ಪ್ರಸಿದ್ಧ ದೇವತೆ. 9ನೇ ಮಂಡಲವು ಸಂಪೂರ್ಣವಾಗಿ ಈ ದೇವತೆಗೆ ಮೀಸಲಾಗಿದೆ. ಇಂದ್ರನನ್ನೂ ಅಗ್ನಿಯನ್ನೂ ಆಹ್ವಾನಿಸುವಾಗ ಸೋಮಪಾನಕ್ಕೆ ಬರಬೇಕೆಂದು ಕವಿಯು ಪ್ರಾರ್ಥಿಸುತ್ತಾನೆ. ಈ ಸೋಮಲತೆಯು ಮೊದಲು ಸ್ವರ್ಗದಲ್ಲಿತ್ತೆಂದೂ ಬಳಿಕ ಭೂಮಿಗೆ ಬಂದಿತೆಂದು ವರ್ಣಿಸಲಾಗಿದೆ. ಭೂಮಿಯಲ್ಲಿ ಇದು ಪರ್ವತಶಿಖರಗಳಲ್ಲಿ ದೊರಕುವುದು. ಇದನ್ನು ತಂದು ಕಲ್ಲುಗಳಿಂದ ಜಜ್ಜಿದಾಗ ಅದರಿಂದ ರಸ ಹೊರಬರುವುದು. ಈ ರಸವನ್ನೇ ಅಮೃತವೆಂದು ಬಣ್ಣಿಸಿರುವರು. ಈ ಸೋಮದ ವ್ಯಾಧಿಹರ ಗುಣವು, ಅಮರತ್ವವನ್ನು ನೀಡುವ ಗುಣವನ್ನು ಋಗ್ವೇದದಲ್ಲಿ ವರ್ಣಿಸಲಾಗಿದೆ. ಸೋಮಸಂಬಂಧದ ಯಾಗಗಳು ಅನೇಕ ಹಾಗೂ ಮುಖ್ಯವಾದದ್ದು.

ಋಗ್ವೇದದ 10ನೇ ಮಂಡಲದ ಕೆಲವು ಸೂಕ್ತಗಳಲ್ಲಿ, ಕೃಷ್ಣಯಜುರ್ವೇದ ಹಾಗೂ ಅಥರ್ವವೇದದಲ್ಲಿಯೂ ಸೋಮನೆಂದರೆ ಔಷಧಿಗಳಿಗೆ ಸ್ವಾಮಿಯಾದ ಚಂದ್ರನೆಂದು ವರ್ಣಿಸಲಾಗಿದೆ. 9ನೇ ಮಂಡಲದಲ್ಲಿ ಇದರ ಬಗ್ಗೆ ವಿಸ್ತಾರವಾಗಿ ವಿವರಣೆಯಿರುವುದು.

ವಿಷ್ಣು
ಋಗ್ವೇದದಲ್ಲಿ ವಿಷ್ಣು ಪರವಾದ ಮಂತ್ರಗಳು ತೀರಾ ಕಡಿಮೆ. ವಿಷ್ಣುವನ್ನು ಇತರೆ ದೇವತೆಗಳೊಂದಿಗೆ ಸ್ತುತಿಸಿರುವರು. ಇಂದ್ರಾವಿಷ್ಣು, ಅಗ್ನಾವಿಷ್ಣು ಇತ್ಯಾದಿ. ಪುರಾಣಗಳಲ್ಲಿ ಸರ್ವೋತ್ತಮವಾದ ಸ್ಥಾನವನ್ನು ಕೊಟ್ಟಿದ್ದರೆ, ವೇದಗಳಲ್ಲಿ ಈ ದೇವತೆಗೆ ಸಾಧಾರಣ ಸ್ಥಾನವನ್ನು ನೀಡಲಾಗಿದೆ.

ವಿಷ್ಣುವಿಗೆ "ಶಿಪಿವಿಷ್ಟ" ಎಂಬ ಹೆಸರು ಇದೆ. ಇದರ ಅರ್ಥವೆಂದರೆ "ಅಪ್ರತಿಪನ್ನ ರಶ್ಮಿಃ" - ತಿರೋಹಿತವಾದ ಪ್ರಕಾಶವುಳ್ಳವನು. ಮತ್ತೊಂದು "ಹೆಚ್ಚು ಪ್ರಕಾಶವುಳ್ಳವನು" ಎಂದು.

ವಿಷ್ಣುವಿಗೆ ಇನ್ನೂ ಅನೇಕ ಮಹಿಮೆಗಳನ್ನು ಹೇಳುವರು. ಸ್ವರ್ಗ ಮತ್ತು ಭೂಲೋಕಗಳನ್ನು ಸೃಷ್ಟಿಮಾಡಿದನು. ಭೂತ ಭವಿಷ್ಯತ್ಕಾಲದಲ್ಲಿ ಯಾರಿಗೂ ವಿಷ್ಣುವಿನ ಗುಣಗಳನ್ನು ತಿಳಿಯಲಸಾಧ್ಯ. ಅವನ ಗುಣಗಳಿಗೂ ಸಾಮರ್ಥ್ಯಕ್ಕೂ ಮಿತಿಯೇ ಇಲ್ಲ. ಅವನು ಸರ್ವಾಂತರ್ಯಾಮಿ.

ಉಷಸ್ಸು
ಋಗ್ವೇದದಲ್ಲಿ ಈ ದೇವತೆಯನ್ನುದ್ದೇಶಿಸಿರುವ ಮಂತ್ರಗಳಷ್ಟು ಉತ್ಕೃಷ್ಟವಾದ ಮತ್ತು ಸುಂದರವಾದ ಮಂತ್ರಗಳು ಎಲ್ಲಿಯೂ ಇಲ್ಲ. ಋಗ್ವೇದದಲ್ಲಿ 20 ಸೂಕ್ತಗಳು ಈ ದೇವತೆಯನ್ನುದ್ದೇಶಿಸಿರುವುದು. ಅವುಗಳಲ್ಲಿ 7ನೇ ಮಂಡಲದಲ್ಲಿ 75ರಿಂದ 81ನೇ ಸೂಕ್ತಗಳು ಈ ದೇವತೆಯ ಪರವಾಗಿದೆ. "ಈ ಸ್ಫುರದ್ರೂಪಿಯಾದ ದೇವತೆಯು ಆಕಾಶಕ್ಕೆ ಪುನಃ ಜೀವಕಳೆಯನ್ನು ಕೊಟ್ಟು ದಿಗಂತದವರೆಗೂ ವ್ಯಾಪಿಸುತ್ತಾಳೆ." (ಋಗ್ವೇದ iii.61-4)

ಉಷಸ್ಸು ಆಕಾಶದ (ದ್ಯೌ) ಮಗಳು ಹಾಗೂ ರಾತ್ರಿಯ ಸೋದರಿ. ಸೂರ್ಯನು ಇವಳ ಪ್ರಿಯನು. ಇವಳು ಪ್ರಪಂಚದ ಅಧಿದೇವತೆ. ಬೆಲೆಬಾಳುವ ವಸ್ತುಗಳನ್ನು ಧರಿಸಿಕೊಂಡು ಹಸನ್ಮುಖಳಾಗಿ ಪ್ರೇಕ್ಷಕರ ಕಣ್ಮನಗಳಿಗೆ ಅನಂದವನ್ನುಂಟುಮಾಡುತ್ತಾಳೆ. ಅಂಧಕಾರವನ್ನು ಪರಿಹಾರಮಾಡಿ, ಎಲ್ಲರನ್ನೂ ಎಚ್ಚರಿಸಿ ತಮ್ಮ ಕೆಲಸಗಳಲ್ಲಿ ತೊಡಗುವಂತೆ ಮಾಡುತ್ತಾಳೆ. ಪುನಃ ಪುನಃ ಜನಿಸುತ್ತಾಳೆ. ಆದ್ದರಿಂದಲೇ ಆಕೆ ನಿತ್ಯ ಯೌವನೆ. ಆದರೆ ಪುರಾತನಳು, ನಿತ್ಯಳು. ಈಕೆಯೇ ಎಲ್ಲ ಜೀವಿಗಳ ಉಸಿರು.

ಋಗ್ವೇದದಲ್ಲಿ ವರ್ಣಿಸಿರುವ ಇತರೆ ಅಷ್ಟೇನೂ ಮಹತ್ವವಿಲ್ಲದ ದೇವತೆಗಳೆಂದರೆ - ವರುಣ, ಆಶ್ವಿನಿದೇವತೆಗಳು, ಸೂರ್ಯ, ಮಿತ್ರ, ಪುಷನ್, ವಿಷ್ಣು, ಉಷಸ್ಸು. ಈ ದೇವತೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್ ಅವರ "ಋಗ್ವೇದ ಸಂಹಿತಾ" ಕೃತಿಯಲ್ಲಿ ನೋಡಿ.

ಮೂಲ : ಋಗ್ವೇದ ಸಂಹಿತಾ - ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್.



ಕಲ್ಪಸೂತ್ರಗಳು

ಕಲ್ಪಸೂತ್ರಗಳು

ಕಲ್ಪಸೂತ್ರಗಳು ಮಂತ್ರೋಚ್ಚಾರಣೆ ಹಾಗೂ ಯಜ್ಞಾದಿಕರ್ಮಗಳಲ್ಲಿ ಉಪಯುಕ್ತವಾದ ವಿಷಯಗಳನ್ನು ವಿವರಿಸುವುದಕ್ಕಾಗಿ ರಚಿಸಿರುವ ನಿಯಮ ಮತ್ತು ವಿಧಿನಿಷೇಧಗಳನ್ನು ಬೋಧಿಸುವ ಗ್ರಂಥಗಳು ಎನ್ನುವರು.

ಕಲ್ಪಸೂತ್ರಗಳಿಂದ ವೇದಾಧ್ಯಯನ ಮಾಡುವವರಲ್ಲಿ ಒಂದು ಹೊಸ ಯುಗವೇ ಆರಂಭವಾಗಿದೆ ಎಂಬ ಭಾವನೆಯುಂಟಾಗಿ, ವೇದಕ್ಕೆ ಪ್ರಾಮುಖ್ಯತೆ ಕಡಿಮೆಯಾಗಿ ಕಲ್ಪಸೂತ್ರವೇ ಮುಖ್ಯ ಆಧಾರವಾಗತೊಡಗಿತು ಎಂಬ ಅಪವಾದವಿದೆ.

ಕಲ್ಪಸೂತ್ರಗಳನ್ನು ದೈನಂದಿನ ಸಂಧ್ಯಾವಂದನೆಗಳಲ್ಲಿ ಬಳಸುವರೇ? ಬಳಸಿದಲ್ಲಿ ಹೇಗೆ ಬಳಸುವರು? ಅದರ ಬಳಕೆಯು ಇತ್ತೀಚೆಗೆ ಕಡಿಮೆಯಾಗುತ್ತಿದೆಯೇ?

ಕಲ್ಪಸೂತ್ರಗಳು
ಕಲ್ಪಸೂತ್ರಗಳು ಮಂತ್ರೋಚ್ಚಾರಣೆ ಹಾಗೂ ಯಜ್ಞಾದಿಕರ್ಮಗಳಲ್ಲಿ ಉಪಯುಕ್ತ ವಿಷಯಗಳನ್ನು ವಿವರಿಸುವುದು ಹಾಗೂ ನಿಯಮ ಮತ್ತು ನಿಷೇಧ ಇತ್ಯಾದಿಗಳನ್ನು ಬೋಧಿಸುವುದು. ಇವುಗಳಿಗೆ ಅದನ್ನು ರಚಿಸಿದ ಋಷಿಗಳ ಹೆಸರುಗಳಿರುವುದು.

ಅಶ್ವಲಾಯನರು ರಚಿಸಿದ ಸೂತ್ರಕ್ಕೆ ಅಶ್ವಲಾಯನಶ್ರೌತಸೂತ್ರ ಎನ್ನುವರು. ಇದರಲ್ಲಿ ಶ್ರೌತಸೂತ್ರ, ಗೃಹ್ಯಸೂತ್ರ, ಧರ್ಮಸೂತ್ರ, ಶುಲ್ವಸೂತ್ರ ಎಂಬ 4 ಭಾಗಗಳಿವೆ.

ಈ ನಾಲ್ಕು ಸೂತ್ರಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ :

ಶ್ರೌತಸೂತ್ರ - ಇದರಲ್ಲಿ ಯಜ್ಞ ಯಾಗಾದಿಗಳನ್ನು ಮಾಡುವ ಕ್ರಮ ಹಾಗೂ ಅವುಗಳಲ್ಲಿ ಉಪಯೋಗಿಸಬೇಕಾದ ಮಂತ್ರಗಳ ವಿವರಣೆ ಇರುವುದು.

ಗೃಹ್ಯಸೂತ್ರ - ಇದರಲ್ಲಿ ದ್ವಿಜರು (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ಅನುಸರಿಸಬೇಕಾದ ಧರ್ಮನಿಯಮಗಳ ಬಗ್ಗೆ ವಿವರಣೆ ಇರುವುದು.

ಧರ್ಮಸೂತ್ರದಲ್ಲಿ ಜನರು ಆಚರಿಸಬೇಕಾದ ಧರ್ಮನಿಯಮಗಳ ಬಗ್ಗೆ ವಿವರಣೆ ಇರುವುದು.

ಶುಲ್ವಸೂತ್ರ - ಯಜ್ಞದಲ್ಲಿ ಉಪಯುಕ್ತವಾದ - ಅಗ್ನಿಕುಂಡ, ವೇದಿಕೆ, ಯಜ್ಞಸಾಮಗ್ರಿಗಳು ಇತ್ಯಾದಿಗಳನ್ನು ರಚಿಸುವ ಕ್ರಮ, ಪ್ರಮಾಣ ಮುಂತಾದ ವಿಶಯಗಳನ್ನು ವಿವರಿಸಲಾಗಿದೆ.

ಪ್ರತಿಯೊಂದು ವೇದಕ್ಕೂ ಈ ನಾಲ್ಕು ಸೂತ್ರಗಳು ಇದ್ದಿರಬಹುದು, ಆದರೆ, ಈಗ ಕೆಲವು ಮಾತ್ರ ದೊರೆಯುವುದು. ಈ ಸೂತ್ರಗಳು ವೇದಾರ್ಥವನ್ನು ಅರಿತುಕೊಳ್ಳಲು ಸಹಕಾರಿ.

ಈ ಸೂತ್ರಗಳ ಆಧಾರವೇ ಬ್ರಾಹ್ಮಣ. ಸಾಯಣಾಚಾರ್ಯರ ಪ್ರಕಾರ:

ಬೋಧಿತಾನಾಂ ಕರ್ಮಣಾಂ ಸುಖಾವಬೊಧಾಯ ಭಗವಾನ್ ಬೊಧಾಯನಃ ಕಲ್ಪಸೂತ್ರಮಕಲ್ಪಯೇತ್|
ಕಲ್ಪಸೂತ್ರಗಳು ವೇದದ ಪ್ರತಿಯೊಂದು ಶಾಖೆಗೂ ಇರುವುದು. ಇವುಗಳಲ್ಲಿ ಹೋತೃವಿಗೆ ಉಪಯೋಗವಾದದ್ದು - ಅಶ್ವಲಾಯನ ಮತ್ತು ಸಾಂಖ್ಯಾಯನ.

ಅಶ್ವಲಾಯನದಲ್ಲಿ ಎರಡು ಭಾಗಗಳಿದ್ದು ಪ್ರತಿಯೊಂದು ಭಾಗದಲ್ಲೂ 6 ಅಧ್ಯಾಯಗಳಿದ್ದು ಪ್ರತಿ ಅಧ್ಯಾಯದಲ್ಲೂ ಕಂಡಿಕೆಗಳೆಂಬ ಸಣ್ಣ ಭಾಗಗಳಿರುವುದು. ಈ ಸೂತ್ರದಲ್ಲಿ ದರ್ಶ, ಪೌರ್ಣಮಾಸ ಇತ್ಯಾದಿ ಯಾಗಗಳ ವಿವರಣೆ ಇರುವುದು.

ಕೃಷ್ಣಯಜುರ್ವೇದಕ್ಕೆ ಬೋಧಾಯನ ಹಾಗೂ ಅಪಸ್ತಂಬ ಸೂತ್ರಗಳಿವೆ. ಹಾಗೇ ಶುಕ್ಲಯಜುರ್ವೇದಕ್ಕೆ ಕಾತ್ಯಾಯನ ಸೂತ್ರಗಳಿದ್ದು, ಸಾಮವೇದಕ್ಕೆ ಲಾಟ್ಯಾಯನ ಮತ್ತು ದ್ರಾಹ್ಯಾಯಣಗಳು ಇರುವುದು.

ಸಂಧ್ಯಾವಂದನೆಗಳಾದ ಮೇಲೆ, ಗುರುಹಿರಿಯರಿಗೆ ಆಶೀರ್ವಾದ ಬಯಸಿ ನಮಸ್ಕರಿಸುವಾಗ ಈ ಸೂತ್ರಗಳನ್ನು ಅನುಸರಿಸಿ, ಅಶ್ವಲಾಯನ, ಬೋಧಾಯನ, ಆಪಸ್ತಂಬ ಮುಂತಾದ ಶಾಖೆಗಳನ್ನು ಹೇಳುತ್ತಾರೆ. ಇದೇ ರೀತಿಯಾಗಿ ವಿವಾಹ ಕಾರ್ಯದಲ್ಲೂ ಪ್ರವರವನ್ನು ಹೇಳುವರು.

ಉದಾಹರಣೆಗೆ :-

"ಅಂಗೀರಸ, ಆಯಾಸ್ಯ, ಗೌತಮತ್ರಯಾರ್ಷೇಯ, ಗೌತಮ ಸಗೋತ್ರಃ ಬೊಧಾಯನ ಸೂತ್ರಃ ….. (ವೇದ) ಶಾಖಾಧ್ಯಾಯಿ) ಶ್ರೀ…….ಶರ್ಮಣಃ (ಶರ್ಮ ಎಂಬುದನ್ನು ಬ್ರಾಹ್ಮಣರಿಗೂ, ವರ್ಮಾ ಎಂಬುದನ್ನು ಕ್ಷತ್ರಿಯರಿಗೂ ಹಾಗೂ ಗುಪ್ತ ಎಂಬುದನ್ನು ವೈಶ್ಯರಿಗೂ) ಅಹಂಭೋಃ ಅಭಿವಾದಯೇ".

"ಅಂಗೀರಸ, ಬಾರ್ಹಸ್ಪತ್ಯ, ಭಾರದ್ವಾಜ, ಮಾಂತ್ರವರ, ಆತ್ಮಭುವಪಂಚಾರ್ಷೇಯ ಆತ್ಮಭುವಪಂಚಾರ್ಷೇಯ ಸಗೋತ್ರಃ …...ಸೂತ್ರಃ (ವೇದ) …. ಶಾಖಾಧ್ಯಾಯಿ ಶ್ರೀ……..ಶರ್ಮಣಃ ಅಹಂಭೋಃ ಅಭಿವಾದಯೇ".

ಇಂದಿನ ಜನಾಂಗದಲ್ಲಿ ಈ ರೀತಿಯಾಗಿ ಪ್ರವರವನ್ನು ಹೇಳಿಕೊಂಡು ಅಭಿವಾದನ ಮಾಡುವುದು ಬಹುತೇಕವಾಗಿ ತಪ್ಪಿಹೋಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ಗೋತ್ರದ ಮೂಲದಲ್ಲಿನ ಮೂರು ಅಥವಾ ಐದು ಋಷಿಗಳನ್ನು ಅರಿತಿರಬೇಕು ಹಾಗೂ ಇದನ್ನು ಸಕಾಲದಲ್ಲಿ ಬಳಸಬೇಕು, ಅಲ್ಲವೇ? ಇದನ್ನು ಅರಿಯಲು ತಪ್ಪದೆ ಒಂಟಿಕೊಪ್ಪಲ್ ಪಂಚಾಂಗವನ್ನು ವೀಕ್ಷಿಸಬಹುದು. ಅದಕ್ಕೆ ಮೊದಲು ನಿಮ್ಮ ಗೋತ್ರ, ವೇದ, ಸೂತ್ರಗಳ ಬಗ್ಗೆ ಅರಿವಿರಲೇಬೇಕು.

ಪ್ರೇರಣೆ : ಡಾ.ಜಯಂತಿ ಮನೋಹರ ಅವರ ಕೃತಿ - "Symbolism of Rigveda"

ಮುಂದುವರೆಯುವುದು….













ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು ವೇದದ ಭಾಗವೇ ಆಗಿರುವ ಬ್ರಾಹ್ಮಣಗಳು ಸ್ವತಃ ಅರ್ಥನಿರೂಪಣೆಯಲ್ಲಿ ತೊಡಗಿವೆ. ಆದರೆ ಇವು ಮಂತ್ರಾರ್ಥಗಳನ್ನು ವಿವರಿಸುವುದಿಲ್ಲ...