Monday, March 30, 2020

ಅಶ್ವಮೇಧ ಯಜ್ಞದ ಸಾಂಕೇತಿಕತೆ ಒಂದು ವಿವರಣೆ

ಅಶ್ವಮೇಧ ಯಜ್ಞದ ಸಾಂಕೇತಿಕತೆ ಒಂದು ವಿವರಣೆ

ಅಶ್ವಮೇಧ ಪದವು ಈ ಹೆಸರಿನ ಜನಪ್ರಿಯ ಯಜ್ಞದೊಂದಿಗೆ ಸಂಬಂಧಿತವಾಗಿದೆ. ಈಗ ನಾವು ಅಶ್ವಮೇಧ ಯಾಗದ ವಿಭಿನ್ನ ಅಂಶಗಳನ್ನು ತಿಳಿಯೋಣ:

ಅಶ್ವಮೇಧ ಪದವನ್ನು ವೇದಕಾಲದ ಹಾಗೂ ವೇದಕಾಲಾನಂತರದ ಗ್ರಂಥಗಳಲ್ಲಿ ಪದೇ ಪದೇ ಉಪಯೋಗಿಸಿರುವುದರಿಂದ ಇದು ಅತ್ಯಂತ ಜನಪ್ರಿಯವಾಗಿದೆ. ಕ್ಷತ್ರಿಯ ಯಜ್ಞಗಳೆಂದು ಕರೆಯಲ್ಪಡುವ ನಾಲ್ಕು ಯಜ್ಞಗಳಲ್ಲಿ ಅಶ್ವಮೇಧ ಯಜ್ಞವೇ ಅತ್ಯಂತ ಜನಪ್ರಿಯವಾದದ್ದು. ಉಳಿದ ಮೂರು ಕ್ಷತ್ರಿಯ ಯಜ್ಞಗಳೆಂದರೆ - ವಾಜಪೇಯಿ, ರಾಜಸೂಯ ಮತ್ತು ಸೌತ್ರಾಮಣಿ. ಯಜ್ಞದ ಕೊನೆಯ ಹಂತದಲ್ಲಿ ಅಶ್ವವನ್ನು ಬಲಿಕೊಡುವುದರ ಬಗ್ಗೆ ನಾವು ಅರಿಯುತ್ತೇವೆ. ಈ ಯಜ್ಞದ ಸಾಂಕೇತಿಕ ಅಂಶಗಳ ಕಡೆಗೆ ಇಲ್ಲಿ ನಾವು ಗಮನ ಕೊಡೋಣ.

ಶತಪಥ ಬ್ರಾಹ್ಮಣದಲ್ಲಿ ಅಶ್ವಮೇಧ ಎಂಬುದಕ್ಕೆ - "ಅಶ್ವಂ ವೈ ರಾಷ್ಟ್ರಂ" ಅಂದರೆ ರಾಷ್ಟ್ರವನ್ನು ಅಶ್ವವೆಂದು ಕರೆದು ಮೇಧಾ ಎಂಬುದನ್ನು ಸಂಯೋಜನೆ ಎಂಬುದಾಗಿ ವಿವರಿಸಲಾಗಿದೆ. ಇದು ಒಂದು ವಿಶೇಷವಾದ ಅರ್ಥವನ್ನು ನೀಡುತ್ತದೆ. ಹಿಂದಿನ ಕಾಲದಲ್ಲಿ ರಾಜರುಗಳು ತಮ್ಮ ರಾಜ್ಯವನ್ನು ಸಂಯೋಜಿಸುವ ಸಲುವಾಗಿ ಈ ಯಾಗವನ್ನು ಮಾಡುತ್ತಿದ್ದರು. ಅಂದರೆ ರಾಜರುಗಳು ತಮ್ಮ ರಾಜ್ಯದ ಸರಹದ್ದನ್ನು ಬಲಪಡಿಸಲು ಅಥವಾ ರಾಜ್ಯವನ್ನು ವಿಸ್ತರಿಸಲು ಅಶ್ವಮೇಧ ಯಾಗವನ್ನು ಮಾಡುತ್ತಿದ್ದರು. ರಾಮಾಯಣ ಮಹಾಭಾರತದಲ್ಲಿ ಅಶ್ವಮೇಧ ಯಾಗವನ್ನು ಮಾಡಿರುವುದನ್ನು ಓದಿರಬಹುದು. ಕ್ರಮೇಣ ಈ ಯಾಗದಲ್ಲಿ ಚಿನ್ಹೆಯಾಗಿ ಉಪಯೋಗಿಸುತ್ತಿದ್ದ ಅಶ್ವವನ್ನು ಮರೆತು ಅಶ್ವಮೇಧಯಜ್ಞದಲ್ಲಿ ಅಶ್ವವನ್ನು ಬಲಿಕೊಡುವುದು ಪದ್ಧತಿಯಾಯಿತು.

ವೇದಗ್ರಂಥಗಳಲ್ಲಿ ಅನೇಕ ಕಡೆಗಳಲ್ಲಿ ಪ್ರಾಣಿಹಿಂಸೆಯನ್ನು ವಿರೋಧಿಸಲಾಗಿದೆ. ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೆ ಅಶ್ವಮೇಧ ಪದಕ್ಕೆ ಕುತೂಹಲಕರವಾದ ಅರ್ಥವಿರುವುದು. ಇಲ್ಲಿ ಅಶ್ವ ಎಂದರೆ ಮಾನವನ ಇಂದ್ರಿಯಗಳು, ಮೇಧ ಎಂದರೆ ಸಂಯೋಜನೆ ಎಂದು. ಹೀಗಾಗಿ ಅಶ್ವಮೇಧ ಎಂದರೆ ಆತ್ಮಜ್ಞಾನವನ್ನು ಪಡೆದುಕೊಳ್ಳಲು ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು.

ಒಂದು ಆಸಕ್ತಿದಾಯಕ ವಿಷಯವೆಂದರೆ ಅಶ್ವಮೇಧ ಯಜ್ಞದ ಎಲ್ಲ ಮಂತ್ರಗಳೂ ಮೂಲತಃ ಋಗ್ವೇದ ಸಂಹಿತೆಯಲ್ಲೇ ಇರುವುದು. ಒಟ್ಟು 36 ಮಂತ್ರಗಳ ಪೈಕಿ 22 ಮಂತ್ರಗಳು ಸೂಕ್ತ 1-162ರಲ್ಲಿದ್ದರೆ, 13 ಮಂತ್ರಗಳು ಸೂಕ್ತ 1-163ರಲ್ಲಿದ್ದು, ಕೊನೆಯ ಒಂದು ಮಂತ್ರವು ತೈತ್ತೀರಿಯ ಸಂಹಿತೆ 5-7-24ರಲ್ಲಿ ಇರುವುದು.

ಸುಪ್ರಸಿದ್ಧ ವೇದ ವಿದ್ವಾಂಸರಾದ ಪ್ರೊ.ಆರ್.ಎಲ್.ಕಶ್ಯಪ್ ಅವರು ಯೋಗದೃಷ್ಟಿಯಿಂದ ಎಲ್ಲ 36 ಮಂತ್ರಗಳನ್ನೂ ಕೂಲಂಕುಷವಾಗಿ ಪರಿಶೀಲಿಸಿರುವರು. ಅವರ ಪ್ರಕಾರ ಅಶ್ವ ಎಂಬುದು ಜೀವಶಕ್ತಿ ಅಥವಾ ಪ್ರಾಣದ ಸಂಕೇತವೆಂದು ಹಾಗೂ ಇದು ಮಾನವನ ಶರೀರದೊಳಗೂ ಹಾಗೂ ವಿಶ್ವದಲ್ಲೂ ಇರುವುದು ಎಂಬುದಾಗಿ ಅರ್ಥೈಸುತ್ತಾರೆ. ಅವರು ಮೇಧ ಎಂಬ ಪದಕ್ಕೆ ಅರ್ಪಣೆ ಎಂದು ಅರ್ಥೈಸಿ ಅಶ್ವಮೇಧ ಪದಕ್ಕೆ - ಜೀವಶಕ್ತಿ ಅಥವಾ ಪ್ರಾಣವನ್ನು ಅದರೊಂದಿಗೆ ಸಮಸ್ತ ಪ್ರಚೋದನೆಗಳು, ಆಸೆಗಳು, ಸುಖಸಂತೋಷಗಳು ಮತ್ತು ಅವುಗಳೊಂದಿಗಿನ ಭೌತಿಕ ಪ್ರತಿರೂಪಗಳೊಂದಿಗೆ ಅರ್ಪಣೆಮಾಡುವ ಕ್ರಿಯೆ ಎಂದಿರುವರು. ಇಲ್ಲಿ ಅರ್ಪಣೆಯಲ್ಲಿ ಯಜಮಾನನ ನಕಾರಾತ್ಮಕ ಗುಣಗಳನ್ನೂ ಶುದ್ಧೀಕರಣದ ಸಲುವಾಗಿ ಅಗ್ನಿಯಲ್ಲಿ ಅರ್ಪಿಸುವುದೂ ಸೇರಿದೆ.

ಅಶ್ವವು ಪ್ರಮುಖ ಶಕ್ತಿಯಾದ ಪ್ರಾಣವನ್ನು ಸಂಕೇತಿಸುತ್ತದೆ. ಇದು ಸೂರ್ಯ ಹಾಗೂ ಸೂರ್ಯಕಿರಣಗಳನ್ನೂ ಸಂಕೇತಿಸುತ್ತದೆ. ಬೃಹದಾರಣ್ಯಕೋಪನಿಷತ್ತಿನಲ್ಲಿ ಸಮಸ್ತ ವಿಶ್ವದ ಸೃಷ್ಟಿ-ಸ್ಥಿತಿಗಳನ್ನು ಯಜ್ಞದ ಮೂಲಕ ಸಂಕೇತಿಸಿ ವಿವಿಧ ರೀತಿಯಲ್ಲಿ

ವಿವರಿಸಲಾಗಿದೆ. ಇಲ್ಲಿನ ಮೊದಲ ಮಂತ್ರದಲ್ಲೇ ಬಲಿ ಕೊಡುವ ಅಶ್ವದ ಬಗ್ಗೆ ಸಾಂಕೇತಿಕವಾಗಿ ಪ್ರಾಣ ಎಂಬುದಾಗಿ ವಿವರಿಸಲಾಗಿದೆ. ಅಶ್ವದ ವಿವಿಧ ಅಂಗಗಳನ್ನು ವಿಶ್ವದ ವಿವಿಧ ಅಂಶಗಳಾದ ಮುಂಜಾನೆ, ಸೂರ್ಯ, ನದಿಗಳು ಇತ್ಯಾದಿಗಳೊಂದಿಗೆ ಸಾಂಕೇತಿಕವಾಗಿ ವಿವರಿಸಿರುವುದನ್ನು ಈ ಮಂತ್ರದಲ್ಲಿ ಕಾಣಬಹುದು.

ಓಂ ಉಷಾ ವಾ ಅಶ್ವಸ್ಯ ಮೇಧ್ಯಸ್ಯ ಶಿರಃ|
ಸೂರ್ಯಶ್ಚಕ್ಷುಃ ವಾತಃ ಪ್ರಾಣಃ, ವ್ಯಾತ್ತಮಗ್ರಿರ್ವೈಶ್ವಾನರಃ ಸಂವತ್ಸರ ಆತ್ಮಾಶ್ವಸ್ಯ ಮೇಧ್ಯಸ್ಯ|
ದ್ಯೋಃ ಪೃಷ್ಠಮ್ ಅಂತರಿಕ್ಷಮುದರಮ್ ಪೃಥಿವೀ ಪಾಜಸ್ಯಮ್, ದಿಶಃ ಪಾರ್ಶ್ವೆ ಅವಾಂತರದಿಶಃ ಪರ್ಶ್ವವಃ, ಋತವೋಂಗಾನಿ ಮಾಸಾಶ್ಚಾರ್ಧ ಮಾಸಾಶ್ಚ ಪರ್ವಾಣ್ಯ ಹೋರಾತ್ರಾಣಿ ಪ್ರತಿಷ್ಠಾ ನಕ್ಷತ್ರಾಣ್ಯಸ್ಥೀನಿ ನಭೋ ಮಾಸಾಂನ್ಯೂ ವಧ್ಯ ಸಿಕತಾ ಸ್ಸಿಂಧವೋ ಗುದಾ ಯಕೃಚ್ಚ ಕ್ಲೋಮಾ ಗಹನಶ್ಚ ಪರ್ವತಾ ಓಷಧಯಶ್ಚ ವನಸ್ಪತಯಶ್ಚ ಲೋಮಾನ್ಯುದ್ಯನ್ಪೂರ್ವಾರ್ಧೋ ನಿಮ್ಲೋಚಞಜಘನಾರ್ಧೋ ಯದ್ವಿಜೃಂಭತೇ ತದ್ವಿದ್ಯೋತತೇ ಯಾದ್ವಿಧೂನು-ತೇ ತತ್ಸನಯತಿ ಯನ್ಮೇಹತಿ ತದ್ವರ್ಷತಿ ವಾಗೇವಾಸ್ಯ ವಾಕ್||   ಬೃಹದಾರಣ್ಯಕೋಪನಿಷತ್ 1-1-1

ಅಶ್ವಮೇಧ ಯಾಗದಲ್ಲಿ ಅಶ್ವವೇ ಪ್ರಧಾನವಾದುದು. ಹಾಗಾಗಿ ಕ್ರತುವನ್ನು ಅಶ್ವವೆಂದು ಕರೆದಿದೆ. ಇಂತಹ ಅಶ್ವಕ್ಕೆ ಮುಹೂರ್ತವೇ ತಲೆ, ಸೂರ್ಯನೇ ಕಣ್ಣು, ವಾಯುವೇ ಉಸಿರು. ವ್ಯಾತ್ತವು ಅಂದರೆ ತೆರೆದ ಮುಖವು ಅಗ್ನಿಃ - ವೈಶ್ವಾನರನು. ಮೇಧ್ಯವಾದ ಅಶ್ವಕ್ಕೆ ಸಂವತ್ಸರವು ಆತ್ಮ, ದ್ಯುಲೋಕವೇ ಬೆನ್ನು, ಅಂತರಿಕ್ಷವೇ ಉದರ, ಪೃಥಿವಿಯು ಪಾಜಸ್ಯ - ಅಂದರೆ ಪಾದಗಳನ್ನು ಇಡುವ ಹೆಜ್ಜೆಗಳು, ದಿಕ್ಕುಗಳೇ ಪಕ್ಕೆಗಳು, ಅವಾಂತರ ದಿಕ್ಕುಗಳು ಪರ್ಶುಗಳು ಅಂದರೆ ಆಗ್ನೇಯವೇ ಮುಂತಾದ ದಿಕ್ಕುಗಳು ಪಕ್ಕೆಲಬುಗಳು, ಋತಗಳು ಅಂಗಗಳು, ಮಾಸಗಳೂ, ಅರ್ಧಮಾಸಗಳು ಪರ್ವತಗಳು, ಅಹೋರಾತ್ರಿಗಳು, ಪ್ರತಿಷ್ಠೆಗಳು, ನಕ್ಷತ್ರಗಳು ಎಲುಬುಗಳು, ನಭವು ಅಂದರೆ ಅಕಾಶದಲ್ಲಿರುವ ಮೋಡಗಳು. ಉದಯಿಸುವ ಸೂರ್ಯನು ಮೊದಲನೆಯ ಅರ್ಧ, ಅಸ್ತಮಿಸುವ ಸೂರ್ಯನು ಕೆಳಗಿನ ಅರ್ಧ.

ವಿಶ್ವದ ವಿವಿಧ ಅಂಶಗಳೊಂದಿಗೆ ಅಶ್ವದ ಎಲ್ಲ ಸಾದೃಶ್ಯಗಳೂ ಕಾಲದ ಸುತ್ತ ಕೇಂದ್ರೀಕೃತಗೊಂಡಿದ್ದು ಅದನ್ನು ಸಾಂಕೇತಿಕ ಭಾಷೆಯಲ್ಲಿ ವ್ಯಕ್ತಪಡಿಸಲಾಗಿದೆ. ಇಲ್ಲಿ ವಿವರಿಸಿರುವ ಅಶ್ವವು ನಾಲ್ಕು ಕಾಲಿನ ಅಶ್ವವನ್ನಲ್ಲ. ಸಮಯದ ಪರಿಕಲ್ಪನೆಯನ್ನು ಯಜ್ಞದಲ್ಲಿ ಶಾಶ್ವತವಾಗಿ ಸಮರ್ಪಿಸುವುದರ ಬಗ್ಗೆ ಋಷಿಗಳು ವಿವರಿಸಿರುವರು. ದುರದೃಷ್ಟವಶಾತ್ ಕಾಲ ಕ್ರಮೇಣ ಈ ಮಂತ್ರವನ್ನು ಅಶ್ವದ ಆಹುತಿಗೆ ಜೋಡಣೆಮಾಡಲಾಗಿದೆ. ಅಧ್ಯಾತ್ಮದ ಅರ್ಥವನ್ನು ಪಡೆಯಲು ಈ ಯಜ್ಞದ ದೇವತೆಯಾದ ಪ್ರಜಾಪತಿಯ ಪಾತ್ರವು ವಿಶೇಷವಾದದ್ದು ಹಾಗೂ ಇದು ಇದೇ ಮಂಡಲದಲ್ಲಿನ ಮುಂದಿನ ಮಂತ್ರಗಳಲ್ಲಿ (2.1) ಸ್ಪಷ್ಟಪಡಿಸಲಾಗಿದೆ ಹಾಗೂ ಅದರಲ್ಲಿ ಸೃಷ್ಟಿಯ (ಹಿರಣ್ಯಗರ್ಭ) ಬಗ್ಗೆ ವಿವರಿಸಲಾಗಿದೆ.

ಅಶ್ವಮೇಧ ಯಜ್ಞ - ಪ್ರಾಣಾಯಾಮದಂತೆ
ವಪ ಎಂದು ಕರೆಯಲ್ಪಡುವ ಬಲಿಪಶುವಿನ ಹೊಟ್ಟೆ ಮತ್ತು ಎದೆಗಳ ನಡುವಿನ ಭಾಗವನ್ನು ಅಗ್ನಿಗೆ ಅಹುತಿಕೊಡುವುದು ಒಂದು ಪದ್ದತಿ. ಪ್ರೊ.ಕಶ್ಯಪ್ ಅವರು ಅಶ್ವಮೇಧಕ್ಕೆ ಪ್ರಾಣಾಯಾಮದ ಪ್ರಕ್ರಿಯೆಯ ಮೂಲಕ ಗಮನಾರ್ಹವಾದ ಹೋಲಿಕೆಯನ್ನು ಮಾಡುತ್ತಾರೆ. ಪ್ರಾಣಾಯಾಮದಲ್ಲಿ ಉಸಿರನ್ನು ಒಳಗೆಳೆದುಕೊಳ್ಳುವಾಗ ಎದೆ ಮತ್ತು ಹೊಟ್ಟೆಗಳ ನಡುವೆ ಇರುವ ವಪೆಯ ಚಲನೆಯು ಕೆಳಮುಖವಾಗಿರುವುದನ್ನು ಉದರದಲ್ಲಿರುವ ಜಠರಾಗ್ನಿಗೆ ಅರ್ಪಿಸುವುದನ್ನು ಸೂಚಿಸುತ್ತದೆ.

ಪ್ರೇರಣೆ : ಡಾ.ಜಯಂತಿ ಮನೋಹರ ಅವರ Symbolism of Rig-Veda.
ಕನ್ನಡಕ್ಕೆ : ಗುರುಪ್ರಸಾದ್ ಹಾಲ್ಕುರಿಕೆ


ಋಗ್ವೇದ ಭಾಷ್ಯಕಾರರು

ಋಗ್ವೇದ ಭಾಷ್ಯಕಾರರು
ಸಾಯಣಾಚಾರ್ಯರು
(ಕ್ರಿ.ಶ.1315-1382)
ಪರಿಚಯ ಲೇಖನ

ವೈದಿಕ ಭಾಷ್ಯಕಾರರುಗಳಲ್ಲಿ ಸಾಯಣಾಚಾರ್ಯರಿಗೆ ವಿಶೇಷವಾದ ಪೂಜ್ಯಸ್ಥಾನವಿದೆ. ಅವರು ಬರೆದ ವೇದ ಭಾಷ್ಯವು ಅವರ ಅಸಾಧಾರಣ ಯೋಗ್ಯತೆಗೆ ಬೆಳಕಾಗಿದೆ.

ವೇದಸಂಹಿತೆಗಳಿಗೂ ಮತ್ತು ಬ್ರಾಹ್ಮಣಗಳಿಗೂ ಅವರು ಬರೆದಿರುವ ಭಾಷ್ಯಗಳು ಉತ್ಕೃಷ್ಟವಾಗಿರುವುದು ಹಾಗೂ ವೇದಗಳಲ್ಲಿ ಅಡಗಿರುವ ಸೂಕ್ಷ್ಮತತ್ವಗಳನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ಸಹಕಾರಿಯಾಗಿದೆ. ಇವರನ್ನು ಹೊರತುಪಡಿಸಿ ಇತರೆ ಭಾಷ್ಯಕಾರರು ಬರೆದಿರುವ ಭಾಷ್ಯವು ವೇದದ ಕೆಲವು ಭಾಗಗಳಿಗೆ ಮಾತ್ರ ಸಂಕ್ಷೇಪವಾಗಿಯೋ ಅಥವಾ ವಿಸ್ತಾರವಾಗಿಯೋ ಬರೆದಿರುವರು. ಸಾಯಣಾಚಾರ್ಯರು ಹಾಗೂ ಅವರ ಹಿರಿಯ ಸಹೋದರ ಮಾಧವಾಚಾರ್ಯರೂ ವಿಜಯನಗರ ಮಹಾರಾಜರ ಆಶ್ರಯ ಪಡೆದು ವೇದಭಾಷ್ಯಗಳನ್ನು ಮತ್ತು ಅನೇಕ ಉತ್ಕೃಷ್ಟ ಗ್ರಂಥಗಳನ್ನು ರಚಿಸಿ ವಿದ್ವಜ್ಜನರ ಮನ್ನಣೆಯನ್ನು ಗಳಿಸಿದ್ದಾರೆ.

ಸಾಯಣರು ದಕ್ಷಿಣ ಭಾರತದಲ್ಲಿನ ಪ್ರಸಿದ್ಧ ಬ್ರಾಹ್ಮಣ ವಂಶದಲ್ಲಿ ಜನಿಸಿದವರು. ತಂದೆ ಮಾಯಣ; ತಾಯಿ ಶ್ರೀಮತಿ. ಭಾರದ್ವಾಜಗೋತ್ರ, ಕೃಷ್ಣ ಯಜುರ್ವೇದಿ, ಬೊಧಾಯನ ಶಾಖೆ. ಹಿರಿಯ ಸಹೋದರ - ಮಾಧವಾಚಾರ್ಯ; ಕಿರಿಯ ಸಹೋದರ - ಭೋಗನಾಥ.

ಮಾಧವಾಚಾರ್ಯರು ರಚಿಸಿದ ಕೃತಿಗಳು -
ಪರಾಶರಸ್ಮೃತಿ - ವ್ಯಾಖ್ಯಾ - ಇದು ಪರಾಶರ-ಮಾಧವ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಇದು ಬಹು ದೊಡ್ಡ ಗ್ರಂಥ.
ಕಾಲನಿರ್ಣಯ ಅಥವಾ ಕಾಲಮಾಧವ
ಜೈಮಿನಿ-ನ್ಯಾಯಮಾಲಾ - ಜೈಮಿನಿಮಹರ್ಷಿಯ ಪೂರ್ವಮೀಮಾಂಸ ದರ್ಶನಕ್ಕೆ ಈ ವ್ಯಾಖ್ಯಾನವು ಪ್ರಮಾಣಗ್ರಂಥ
ಜೀವನ್ಮುಕ್ತಿವಿವೇಕ - ಜೀವನ್ಮುಕ್ತಿ ವಿಚಾರದ ವೇದಾಂತ ಗ್ರಂಥ
ಪಂಚದಶಿ - ಸುಪ್ರಸಿದ್ಧ ಅದ್ವೈತವೇದಾಂತ ಗ್ರಂಥ
ವೈಯಾಸಕನ್ಯಾಯಮಾಲಾ - ವೇದಾಂತಸೂತ್ರಗಳಿಗೆ ವ್ಯಾಖ್ಯಾನ

ಕೊನೆಯ ಎರಡು ಗ್ರಂಥಗಳನ್ನು ಮಾಧವಾಚಾರ್ಯರು ತಮ್ಮ ಗುರುಗಳಾದ ಭಾರತಿತೀರ್ಥರ ಸಹಾಯದಿಂದ ರಚಿಸಿರುವರು.

ಸಾಯಣಾಚಾರ್ಯರ ತಮ್ಮ ಭೋಗನಾಥರು ಕಂಪಣನ ಮಗನಾದ ಎರಡನೇ ಸಂಗಮನಿಗೆ ಸಚಿವರಾಗಿದ್ದರು. ಇವರು ಉತ್ತಮ ಕವಿಗಳು. ಇವರು ರಚಿಸಿದ ಗ್ರಂಥಗಳು -

ರಾಮೋಲ್ಲಾಸ - ರಾಮಾಯಣವನ್ನು ಆಶ್ರಯಿಸಿರುವ ಕಾವ್ಯ
ತ್ರಿಪುರವಿಜಯ - ಈಶ್ವರನ ತ್ರಿಪುರವಧೆಯನ್ನಾಶ್ರಯಿಸಿದ ಗ್ರಂಥ
ಉದಾಹರಣಮಾಲಾ - ಸಂಸ್ಕೃತದ ಅಲಂಕಾರಗಳಿಗೆ ಉದಾಹರಣೆಗಳು.
ಮಹಾಗಣಪತಿಸ್ತವ - ಗಣಪತಿಯ ಸ್ತೋತ್ರ
ಶೃಂಗಾರಮಂಜರೀ - ಶೃಂಗಾರರಸದ್ಯೋತಕ ಗ್ರಂಥ
ಗೌರೀನಾಥಾಷ್ಟಕ - ಗೌರೀನಾಥನ ಕುರಿತ ಎಂಟು ಶ್ಲೋಕಗಳು.

ಗ್ರಂಥಗಳ ಹಾಗೂ ಶಾಸನಗಳ ಆಧಾರದ ಮೇಲೆ ಸಾಯಣಾಚಾರ್ಯರು ವಿಜಯನಗರದ ನಾಲ್ಕು ರಾಜರುಗಳಿಗೆ ಸಂಬಂಧಿಸಿದವರೆಂಬುದು ಸ್ಪಷ್ಟವಾಗುತ್ತದೆ. ಅವರೇ ಕಂಪಣ, ಎರಡನೇ ಸಂಗಮ, ಒಂದನೇ ಬುಕ್ಕ, ಎರಡನೇ ಹರಿಹರ. ಈ ನಾಲ್ಕು ಜನರ ಕಾಲದಲ್ಲಿ ಸಾಯಣಾಚಾರ್ಯರು ಮಂತ್ರಿಪದವಿಯಲ್ಲಿದ್ದು ವಿಜಯನಗರ ಸಾಮ್ರಾಜ್ಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ.

ಚತುರ್ವೇದಗಳಿಗೂ ಭಾಷ್ಯವನ್ನು ರಚಿಸಿದ ಸಾಯಣಾಚಾರ್ಯರೇ ಯುದ್ಧರಂಗದಲ್ಲಿ ಅಸಾಮಾನ್ಯ ಯೋಧರಾಗಿ ಕತ್ತಿಯನ್ನು ಹಿಡಿದು ಶೌರ್ಯ ಪ್ರದರ್ಶನಮಾಡಿರುವುದು ಯಾರನ್ನಾದರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ. ಇವರು ಕ್ಲಿಷ್ಟವಾದ ವೇದಮಂತ್ರಗಳಿಗೆ ಅರ್ಥವನ್ನು ತಿಳಿಸುವುದರಲ್ಲಿ ಮಗ್ನರಾದ ಮೀಮಾಂಸಕರು ಮಾತ್ರವಲ್ಲ, ದೊಡ್ಡ ರಾಜ್ಯವನ್ನು ಅಳುವುದರಲ್ಲೂ ದಕ್ಷರು ಮತ್ತು ಸ್ವತಃ ಯುದ್ಧ ರಂಗಕ್ಕಿಳಿದು ಶೌರ್ಯದಿಂದ ಕಾದಬಲ್ಲ ಮಹಾ ಯೋಧರೂ ಆಗಿದ್ದರು. ಇವರು ತಮ್ಮ ರಾಜ ಸಂಗಮನೋಡನೆ ದಂಡೆತ್ತಿ ಹೋಗಿ, ಚೋಳರಾಜನಾದ ಕಂಪನನ್ನೂ, ಗರುಡನಾಗರದ ಪಾಳೆಯಗಾರನನ್ನೂ ಸೋಲಿಸಿದರು.

ಇವರ ಸಾಂಸಾರಿಕ ಜೀವನವೂ ಸುಖಮಯವಾಗಿತ್ತು. ಇವರಿಗೆ ಕಂಪಣ, ಮಾಯಣ ಮತ್ತು ಸಿಂಗಣ ಎಂಬ ಮೂರು ಮಕ್ಕಳಿದ್ದರು. ಕಂಪಣನು ಪ್ರಸಿದ್ಧ ಸಂಗೀತಗಾರನಾದರೆ, ಮಾಯಣನು ಕವಿ. ಸಿಂಗಣನು ವೇದದಲ್ಲಿ, ಅದರಲ್ಲೂ ಪ್ರಮುಖವಾಗಿ ಕ್ರಮ ಮತ್ತು ಜಟಾ ಪಾಠಗಳಲ್ಲಿ ನಿಪುಣ. ಸಾಯಣಾಚಾರ್ಯರು ಎರಡನೇ ಹರಿಹರನ ಆಳ್ವಿಕೆಯ ಅವಧಿಯಲ್ಲಿ ಕ್ರಿ.ಶ.1387ರಲ್ಲಿ ಕಾಲವಾದರು ಎಂಬುದಾಗಿ ಕೆಲವು ಪಂಡಿತರ ಅಭಿಪ್ರಾಯ.

ಸಾಯಣಾಚಾರ್ಯರ ಕೃತಿಗಳು
ಸಾಯಣಾಚಾರ್ಯರು ರಚಿಸಿದ ಗ್ರಂಥಗಳಲ್ಲಿ ವೇದಸಂಹಿತ ಮತ್ತು ಬ್ರಾಹ್ಮಣಗಳ ಭಾಷ್ಯಗಳು ಬಹುಮುಖ್ಯವಾದವು. ಇವುಗಳಲ್ಲದೇ ಇವರು ಅನೇಕ ಗ್ರಂಥಗಳನ್ನು ರಚಿಸಿರುವರು. ನಂತರದ ದಿನಗಳಲ್ಲಿ ಕೆಲವು ಸಾಧಾರಣ ಪಂಡಿತರು ಪ್ರಚಾರವನ್ನು ಗಳಿಸುವ ಉದ್ದೇಶದಿಂದ ತಾವು ರಚಿಸಿದ ಕೃತಿಗಳನ್ನು ಸಾಯಣರು ರಚಿಸಿದ್ದೆಂದು ಹೇಳಿಕೊಂಡಿರುವುದು ಕಂಡುಬರುವುದು. ಆದರೆ, ಈ ಕೆಳಗೆ ಸೂಚಿಸಿರುವ ಎಲ್ಲ ಗ್ರಂಥಗಳೂ ಸಾಯಣರದ್ದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ :-

ಸುಭಾಷಿತಸುಧಾನಿಧಿ - ಇದು ಅನೇಕ ಗ್ರಂಥಗಳಿಂದ ಆರಿಸಿ ರಚಿಸಿದ ಸುಭಾಷಿತಗಳ ಸಮುಚ್ಚಯ ಹಾಗೂ ಇದು ಅವರ ಮೊದಲ ಕೃತಿ ಇರಬಹುದು ಎಂದು ಅನಿಸುತ್ತದೆ. ಗ್ರಂಥದ ಕೊನೆಯಲ್ಲಿರುವ ಅಂಕಿತದಿಂದ ಇದು ಕಂಪ ಅಥವಾ ಕಂಪಣರಾಜನ ಮಂತ್ರಿಯಾಗಿದ್ದಾಗ ರಚಿತವಾಯಿತೆಂದು ಕಂಡುಬರುತ್ತದೆ.

ಪ್ರಾಯಶ್ಚಿತ್ತಸುಧಾನಿಧಿ - ಇದಕ್ಕೆ ಕರ್ಮವಿಪಾಕ ಎಂದೂ ಹೆಸರುಂಟು. ಹಿಂದೂ ಧರ್ಮ ಶಾಸ್ತ್ರದಲ್ಲಿ ಮುಖ್ಯ ಭಾಗವಾದ ಪ್ರಾಯಶ್ಚಿತ್ತಗಳ ಕುರಿತು ರಚಿಸಿದ ಗ್ರಂಥ.

ಧಾತುವೃತ್ತಿ - "ಮಾಧಾವೀಯಾ ಧಾತುವೃತ್ತಿ" ಎಂದು ಪ್ರಸಿದ್ಧಿಯಾದ ಗ್ರಂಥ. ಸಂಸ್ಕೃತಧಾತುಗಳ ಪ್ರಮಾಣಭೂತವಾದ ಗ್ರಂಥ. ಪಾಣಿನಿಯ ಧಾತುಪಾಠದಲ್ಲಿರುವ ಎಲ್ಲ ಧಾತುಗಳನ್ನೂ ಈ ಗ್ರಂಥದಲ್ಲಿ ಚರ್ಚಿಸಲಾಗಿದೆ. ಸಾಯಣರು ತಮ್ಮ ಅಣ್ಣ ಮಾಧವಾಚಾರ್ಯರು ನೀಡಿದ ಪ್ರೋತ್ಸಾಹಕ್ಕಾಗಿ ಈ ಗ್ರಂಥವನ್ನು "ಮಾಧಾವೀಯಾ ಧಾತುವೃತ್ತಿ" ಎಂದು ಕರೆದು ಅವರಿಗೆ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

ಅಲಂಕಾರಸುಧಾನಿಧಿ - ಇದು ಸಂಸ್ಕೃತದ ಅಲಂಕಾರ ಗ್ರಂಥ. ಇದರ ಪ್ರಮುಖ ವೈಶಿಷ್ಟ್ಯವೆಂದರೆ - ಇದರಲ್ಲಿರುವ ಎಲ್ಲ ಉದಾಹರಣೆಗಳು ಗ್ರಂಥಕರ್ತೃವನ್ನೇ ಹೊಗಳುತ್ತದೆ. ಈ ರೀತಿಯ ವೈಶಿಷ್ಟ್ಯವು ಬೇರಾವ ಗ್ರಂಥದಲ್ಲೂ ಕಂಡುಬರುವುದಿಲ್ಲ.

ಪುರುಷಾರ್ಥಸುಧಾನಿಧಿ - ಪುರುಷಾರ್ಥಕ್ಕೆ ಸಂಬಂಧಿಸಿದ ಪೌರಾಣಿಕ ಶ್ಲೋಕಗಳಿಂದ ಕೂಡಿದೆ.
ಆಯುರ್ವೇದಸುಧಾನಿಧಿ - ಆಯುರ್ವೇದ ಗ್ರಂಥ
ಯಜ್ಞತಂತ್ರಸುಧಾನಿಧಿ - ಯಜ್ಞ ಯಾಗಾದಿಗಳಿಗೆ ಸಂಬಂಧಿಸಿದ ಗ್ರಂಥ.

ವೇದಭಾಷ್ಯಗಳು - ಬುಕ್ಕರಾಜನು ತನ್ನ ಗುರುವಾದ ಮಾಧವಾಚಾರ್ಯರನ್ನು ವೇದಭಾಷ್ಯಗಳನ್ನು ರಚಿಸಿ ಎಂದು ಪ್ರಾರ್ಥಿಸಿದನು. ಮಾಧವಾಚಾರ್ಯರು ಕಾರ್ಯಗೌರವದಿಂದ ಈ ಕೆಲಸಕ್ಕೆ ಕೈಹಾಕದೆ, ತಮ್ಮ ಸಹೋದರ ಸಾಯಣಾಚಾರ್ಯರಿಗೆ ಭಾಷ್ಯರಚನೆ ಮಾಡುವಂತೆ ಅಜ್ಞಾಪಿಸಿ ಅವರಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹವನ್ನು ನೀಡಿ ಭಾಷ್ಯಗಳನ್ನು ರಚಿಸುವಂತೆ ಮಾಡಿದರು. ಈ ಭಾಷ್ಯಗಳು ಸಾಯಣಾಚಾರ್ಯರ ಅದ್ವಿತೀಯ ಪಾಂಡಿತ್ಯಕ್ಕೆ ಸಾಕ್ಷಿ. ಇವುಗಳಲ್ಲಿ ಅವರ ಪ್ರತಿಭೆಯು ಪ್ರಕಾಶಿಸುವಂತೆ ಅವರ ಬೇರಾವ ಕೃತಿಗಳಲ್ಲೂ ಪ್ರಕಾಶಕ್ಕೆ ಬಂದಿಲ್ಲ. ಆದುದರಿಂದಲೇ ಈ ಭಾಷ್ಯಗಳನ್ನು ಹಿರಿಯ ಸಹೋದರರ ಉಪಕಾರಸ್ಮರಣೆಗಾಗಿ "ಮಾಧಾವೀಯ" ಎಂದೂ ಕರೆಯಲಾಗಿದೆ. ಸಾಯಣಾಚಾರ್ಯರ ವೇದಭಾಷ್ಯಗಳು ಈ ಸಂಹಿತೆಗಳಿಗೆ ಸಂಬಂಧಿಸಿದೆ -

ಕೃಷ್ಣ ಯಜುರ್ವೇದ - ತೈತ್ತಿರೀಯ ಶಾಖಾ ಸಂಹಿತೆ
ಋಗ್ವೇದ ಸಂಹಿತೆ
ಸಾಮವೇದ ಸಂಹಿತೆ
ಶುಕ್ಲಯಜುರ್ವೇದ - ಕಣ್ವ ಸಂಹಿತೆ
ಅಥರ್ವವೇದ ಸಂಹಿತೆ

ಈ ಕೆಳಕಂಡ ಬ್ರಾಹ್ಮಣ, ಅರಣ್ಯಕ ಹಾಗೂ ಉಪನಿಷತ್ತುಗಳಿಗೆ ಸಾಯಣಾಚಾರ್ಯರು ವ್ಯಾಖ್ಯಾನವನ್ನು ಬರೆದಿರುವರು -
ತೈತ್ತಿರೀಯ - ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತು

ಋಗ್ವೇದದಲ್ಲಿನ ಐತರೇಯ ಬ್ರಾಹ್ಮಣ ಹಾಗೂ ಅರಣ್ಯಕ
ಸಾಮವೇದದ - ತಾಂಡ್ಯ(ಪಂಚವಿಂಶ) ಬ್ರಾಹ್ಮಣ, ಷಡ್‌ವಿಂಶ ಬ್ರಾಹ್ಮಣ, ಸಾಮವಿಧಾನ ಬ್ರಾಹ್ಮಣ, ಆರ್ಷೇಯ ಬ್ರಾಹ್ಮಣ, ದೇವತಾಧ್ಯಾಯ ಬ್ರಾಹ್ಮಣ, ಉಪನಿಷತ್ ಬ್ರಾಹ್ಮಣ, ಸಂಹಿತೋಪನಿಷತ್ ಬ್ರಾಹ್ಮಣ, ವಂಶ ಬ್ರಾಹ್ಮಣ

ಶುಕ್ಲ ಯಜುರ್ವೇದದ - ಶತಪಥ ಬ್ರಾಹ್ಮಣ

ಮೇಲೆ ವಿವರಿಸಿರುವ ವೇದಭಾಷ್ಯಗಳ ಪ್ರಕಾರ ಸಾಯಣಾಚಾರ್ಯರು ಪ್ರಥಮವಾಗಿ ಕೃಷ್ಣಯಜುರ್ವೇದಕ್ಕೆ ಭಾಷ್ಯವನ್ನು ರಚಿಸಿ, ನಂತರ ಉಳಿದ ವೇದಗಳಿಗೆ ಭಾಷ್ಯವನ್ನು ರಚಿಸಿರುವರು. ಋಗ್ವೇದವು ನಾಲ್ಕು ವೇದಗಳಲ್ಲಿ ಅಗ್ರ ಸ್ಥಾನವನ್ನು ಪಡೆದಿರುವುದು ಎಲ್ಲರಿಗೂ ಅನಾದಿಕಾಲದಿಂದ ಗೊತ್ತಿರುವ ವಿಷಯ. ಹೀಗಿದ್ದರೂ ಸಾಯಣಾಚಾರ್ಯರು ಮೊದಲಿಗೆ ಕೃಷ್ಣಯಜುರ್ವೇದಕ್ಕೆ ಮೊದಲು ಭಾಷ್ಯಮಾಡಿದ್ದು ಏಕೆ ಹಾಗೂ ಸರಿಯೇ ಎಂಬ ಪ್ರಶ್ನೆಗಳು ಸ್ವಾಭಾವಿಕವಾಗೆ ಉದ್ಭವಿಸುವುದು. ಇದಕ್ಕೆ ಉತ್ತರವನ್ನು ಆಚಾರ್ಯರು ಋಗ್ವೇದಭಾಷ್ಯ ಭೂಮಿಕೆಯಲ್ಲಿ ಕೊಟ್ಟಿರುವರು. ಅದರ ಪ್ರಕಾರ, ವೇದಗಳಿಗೆ ಪ್ರಮುಖ ಪ್ರಯೋಜನವು ಯಜ್ಞಯಾಗಾದಿಗಳು. ಯಾವುದೇ ಯಜ್ಞದಲ್ಲಿ ಪ್ರಮುಖ ಋತ್ವಿಜನು ಅಧ್ವರ್ಯುವು. ಆತನೇ ಯಜ್ಞಕ್ಕೆ ಒಂದು ರೂಪವನ್ನು ಕೊಡುತ್ತಾನೆ- (ಯಜ್ಞಸ್ಯ ಮಾತ್ರಾಂ ಮಿಮಿಮೀತ ಉತ್ವಃ) ಎಂದು ಹೇಳಿದೆ. ಆಗ ಅಧ್ವರ್ಯುವು ಅನುಸರಿಸಬೇಕಾದುದು ಯಜುರ್ವೇದ. ಹೀಗಾಗಿ ಸಾಯಣಾಚಾರ್ಯರು ಭಾಷ್ಯ ರಚಿಸಲು ಮೊದಲಿಗೆ ಯಜುರ್ವೇದವನ್ನೂ ನಂತರ ಎರಡನೇ ಋತ್ವಿಜನಿಗೆ ಬೇಕಾದ ಋಗ್ವೇದ ಸಂಹಿತೆಯನ್ನು ಅರಿಸಿಕೊಂಡಿರುವರು. ಅಲ್ಲದೆ, ಸಾಯಣಾಚಾರ್ಯರು ಯಜುರ್ವೇದಿಗಳು. ಹೀಗಾಗಿ ಅವರು ಆ ವೇದಕ್ಕೇ ಪ್ರಾಧಾನ್ಯವನ್ನು ಕೊಡುವುದು ಸ್ವಾಭಾವಿಕ.

ವೇದಭಾಷ್ಯ ಭೂಮಿಕೆಗಳು
ಸಾಯಣಾಚಾರ್ಯರು ಪ್ರತಿಯೊಂದು ವೇದಭಾಷ್ಯಕ್ಕೂ ಒಂದೊಂದು ಭೂಮಿಕೆಯನ್ನು ಬರೆದಿದ್ದಾರೆ ಹಾಗೂ ಇವುಗಳು ಮುಖ್ಯವಾದವು. ಇವುಗಳಲ್ಲಿ ವೇದಕ್ಕೆ ಸಂಬಂಧಿಸಿದ ಮುಖ್ಯವಾದ ಅಂಶಗಳನ್ನು ಚರ್ಚಿಸಲಾಗಿದೆ.

ತೈತ್ತಿರೀಯ ಭಾಷ್ಯದ ಉಪೋದ್ಘಾತದಲ್ಲಿ, ವೇದಲಕ್ಷಣ, ಅಧಿಕಾರಿ, ವೇದ ಪ್ರಾಮಾಣ್ಯ(ಸಂಕ್ಷಿಪ್ತ), ಎರಡು ವೇದಭಾಗಗಳು(ಒಂದು ಚತುರ್ವಿಧ ಕರ್ಮಕ್ಕೆ ಹಾಗೂ ಮತ್ತೊಂದು ಬ್ರಹ್ಮ ಮತ್ತು ಬ್ರಹ್ಮಜ್ಞಾನಗಳಿಗೆ ಸಂಬಂಧಿಸಿದುದು) ಮತ್ತು ಯಜ್ಞಗಳ ವಿಭಾಗಗಳು(ದರ್ಶ ಮತ್ತು ಪೌರ್ಣಮಾಸಗಳು ಸಮಸ್ತ ಯಜ್ಞಗಳಿಗೂ ಅವಶ್ಯಕವಾದದ್ದು, ಆದ್ದರಿಂದ ಅವುಗಳಿಗೆ ಪ್ರಕೃತಿ ಎಂತಲೂ ಉಳಿದ ಎಲ್ಲ ಯಜ್ಞಗಳಿಗೆ ವಿಕೃತಿ ಎಂತಲೂ ವಿಧಾನಮಾಡಿರುವರು). ಇವೆಲ್ಲವುಗಳ ಬಗೆಗೂ ಚರ್ಚಿಸಲಾಗಿದೆ.

ಋಗ್ವೇದ ಭಾಷ್ಯಭೂಮಿಕೆ ಅತ್ಯಂತ ಉಪಯುಕ್ತವಾದುದು. ವೈದಿಕ ಜ್ಞಾನಕ್ಕೆ ಸಂಬಂಧಿಸಿದ ಮುಖ್ಯ ಪ್ರಶ್ನೆಗಳನ್ನು ಚರ್ಚಿಸಿ, ಪೂರ್ವಪಕ್ಷವನ್ನು ಅನುವಾದ ಮಾಡಿ ಸಿದ್ಧಾಂತವನ್ನು ಸ್ಥಾಪಿಸಲಾಗಿದೆ. ವೇದ ವೇದಾಂಗಾಗಳನ್ನು ಅಭ್ಯಾಸ ಮಾಡುವವರಿಗೆ ಇದು ಅತ್ಯಂತ ಉಪಯುಕ್ತವಾದದ್ದು.

ವೇದಲಕ್ಷಣ, ವೇದಗಳ ಸ್ವತಃಪ್ರಾಮಾಣ್ಯ, ವೇದಪೌರುಷೇಯತ್ವ, ವೇದ ಮತ್ತು ಬ್ರಾಹ್ಮಣ ಎಂಬ ವಿಭಾಗಕ್ಕೆ ಆಧಾರ, ವೇದ ಪ್ರಯೋಜನ ಇವೆಲ್ಲವನ್ನೂ ಸ್ಪಷ್ಟವಾಗಿ ವಿವರಿಸಿ, ವೇದವನ್ನು ಅರ್ಥಸಹಿತವಾಗಿ ತಿಳಿಯುವವನನ್ನು ಪ್ರಶಂಸೆಮಾಡಿ, ಕಡೆಯಲ್ಲಿ ವೇದಾಂಗಗಳನ್ನೂ ಅವುಗಳು ಹೇಗೆ ವೇದಾರ್ಥವನ್ನು ಪ್ರಕಟಿಸುವುದಕ್ಕೆ ಸಹಾಯಕವಾಗುತ್ತದೆ ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ.

ಸಾಮವೇದದ ಉಪೋದ್ಘಾತದಲ್ಲಿ ವೇದಲಕ್ಷಣವನ್ನು ಸೂಕ್ಷ್ಮವಾಗಿ ವಿವರಿಸಿ, ಸಾಮಗಾನ, ಗಾನದ ರೀತಿ, ಇವೆಲ್ಲವನ್ನೂ ವಿವರವಾಗಿ ಚರ್ಚಿಸಿದ್ದಾರೆ. ಇಲ್ಲಿ ಕೂಡಾ ಪೂರ್ವಮೀಮಾಂಸಾ ಶಾಸ್ತ್ರದ ಭಾಗಗಳನ್ನು ಉದಾಹರಿಸಿರುವರು. ಸಾಮಗಾನಕ್ಕೆ ಸಂಬಂಧಿಸಿದ 67 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.

ಕಣ್ವ ಸಂಹಿತೆಯ ಉಪೋದ್ಘಾತದಲ್ಲಿ ಶುಕ್ಲಯಜುರ್ವೇದ ಭಾಗಗಳ ವಿಷಯವಾಗಿ ಚರ್ಚಿಸಿ, "ಸ್ವಾಧ್ಯಾಯೋsಧ್ಯೇತವ್ಯಃ" ಎಂಬ ವಾಕ್ಯದ ಅರ್ಥವನ್ನು ತಿಳಿಸಿ, ಅನಂತರ ಶುಕ್ಲಯಜುರ್ವೇದದ 40 ಅಧ್ಯಾಯಗಳ ಮುಖ್ಯ ವಿಷಯಗಳನ್ನು ಸಂಗ್ರಹಿಸಿ ವಿವರಿಸಿರುವರು.

ಅಥರ್ವವೇದಭಾಷ್ಯಭೂಮಿಕೆಯಲ್ಲಿರುವ ಪ್ರಮುಖ ಅಂಶಗಳು - ಪುರಾಣಗಳ ಆಧಾರದಮೇಲೆ ಈ ವೇದವು ರಾಜಪುರೋಹಿತ ಮತ್ತು ಬ್ರಹ್ಮ ಇವರುಗಳಿಗೆ ಅತ್ಯಂತ ಉಪಯುಕ್ತವಾದ ವೇದ. ಇದನ್ನು ಅಭ್ಯಾಸ ಮಾಡುವುದೆಂದರೆ - ಮಂತ್ರಗಳ ಅರ್ಥದ ಬಗ್ಗೆ ಜ್ಞಾನವನ್ನು ಹೊಂದುವುದು, ವೇದವು ಸ್ವತಃ ಪ್ರಾಮಾಣ್ಯವು ಮತ್ತು ಪದ ಶಬ್ದಾರ್ಥ ನಿರ್ಣಯವು ಎಂಬಿವುಗಳು.

ಮೇಲೆ ವಿವರಿಸಿದ ಎಲ್ಲ ಭೂಮಿಕೆಗಳಲ್ಲಿ ಚರ್ಚಿತವಾದ ವಿಷಯಗಳನ್ನು ಎರಡು ಗುಂಪಾಗಿ ವಿಂಗಡಿಸಬಹುದು- ಎಲ್ಲ ವೇದಗಳಿಗೂ ಅನ್ವಯಿಸುವ ಅಂಶಗಳು ಹಾಗೂ ಒಂದೊಂದು ವೇದಕ್ಕೆ ಮಾತ್ರ ಅನ್ವಯಿಸುವುದು.

ಮಂತ್ರ ಮತ್ತು ಬ್ರಾಹ್ಮಣಗಳಿಂದ ಕೂಡಿರುವುದೇ ವೇದದ ಲಕ್ಷಣ. ಇದರಲ್ಲಿ ಮಂತ್ರ ಯಾವುದು ಬ್ರಾಹ್ಮಣ ಯಾವುದು ಎಂಬ ಚರ್ಚೆ, ವೇದವು ಅಪೌರುಷೇಯ, ವೇದ ಪೌರುಷೇಯ ಎಂಬ ನೈಯಾಯಿಕ ಮತದವರ ಖಂಡನೆ, ವೇದಗಳಿಗೆ ಅರ್ಥವಿದೆ, ಉಚ್ಚಾರಣೆ ಮಾತ್ರ ಪ್ರಯೋಜನವಲ್ಲ, ಋಕ್, ಯಜುಸ್, ಸಾಮಗಳಿಗಿರುವ ವ್ಯತ್ಯಾಸಗಳು, ವೇದದಲ್ಲಿ ಉಕ್ತವಾದ ವಿಷಯ (ವೇದದಲ್ಲಿ ಎರಡು ಕಾಂಡಗಳು, ಒಂದು ಕರ್ಮಗಳನ್ನು ವಿವರಿಸುವುದು, ಎರಡನೆಯದು ಬ್ರಹ್ಮಸ್ವರೂಪ, ಬ್ರಹ್ಮಪ್ರಾಪ್ತಿ ಮಾರ್ಗಗಳನ್ನು ತಿಳಿಸುವುದು, ಅಂದರೆ ಧರ್ಮ ಮತ್ತು ಬ್ರಹ್ಮ ಎರಡೇ ವೇದದ ವಿಷಯ, ಇವುಗಳ ಜ್ಞಾನವೇ ವೇದದ ಪ್ರಯೋಜನ) - ಇವೆಲ್ಲವೂ ಚತುರ್ವೇದಗಳಲ್ಲಿನ ಸಾಮಾನ್ಯ ಅಂಶಗಳು.

ಇವುಗಳಲ್ಲದೆ ಆಯಾಯ ವೇದಗಳಿಗೆ ಅನ್ವಯಿಸುವ ವಿಷಯಗಳೂ ಇವೆ. ಅವುಗಳೆಂದರೆ - ಮಾಸೇಷ್ಟಿಗಳು, ವೇದಾಧ್ಯಯನ ಮಾಡಿದವನ ಪ್ರಶಂಸೆ, ವೇದಾಂಗಗಳ ಪರಿಚಯ, ಶುಕ್ಲಯಜುರ್ವೇದದ 40 ಅಧ್ಯಾಯಗಳ ಸೂಕ್ಷ್ಮ ಪರಿಚಯ ಇತ್ಯಾದಿ.

ಸಾಯಣಾಚಾರ್ಯರು - ಶ್ರೇಷ್ಠ ಭಾಷ್ಯಕಾರರು

ವೇದಗಳು ಪುರಾತನ ಗ್ರಂಥಗಳು. ಇವುಗಳಲ್ಲಿನ ಭಾಷೆಗೂ ಈಗ ಬಳಕೆಯಲ್ಲಿರುವ ಭಾಷೆಗೂ ವ್ಯತ್ಯಾಸವಿದೆ. ಕ್ಲಿಷ್ಟವಾದ ವಾಕ್ಯಗಳು, ಸಂದಿಗ್ಧ ಪ್ರಯೋಗಗಳು, ರೂಢಿಯಲ್ಲಿಲ್ಲದ ಪದಗಳು ಇವೇ ಮೊದಲಾದುವು ವೇದಗಳಲ್ಲಿ ವಿಶೇಷವಾಗಿದೆ. ಹೀಗಾಗಿ ವೇದಗಳನ್ನು ಸರಿಯಾಗಿ ತಿಳಿಯಬೇಕಾದರೆ, ಅದಕ್ಕೂ ಹೆಚ್ಚಾಗಿ ಇತರರಿಗೆ ತಿಳಿಸಬೇಕಾದರೆ, ವೈದಿಕ ಸಂಪ್ರದಾಯಜ್ಞನಾಗಿರಬೇಕು. ಈ ಸಂಪ್ರದಾಯ ಜ್ಞಾನವು ಆರು ವೇದಾಂಗಗಳಿಂದ ತಿಳಿಯುತ್ತದೆ. ವೇದಾಂಗಗಳು ತಿಳಿಸುವುದೇನೆಂದರೆ ;-

ಶಿಕ್ಷಾ - ವೇದವನ್ನು ಸ್ವರಪೂರ್ವಕವಾಗಿ ಉಚ್ಚರಿಸುವ ರೀತಿಯನ್ನು ವಿವರಿಸುತ್ತದೆ;
ವ್ಯಾಕರಣ - ಪದಗಳ ರೂಪನಿಷ್ಪತ್ತಿಯ ಮೂಲಕ, ಎಂತಹ ಕ್ಲಿಷ್ಟ ಪ್ರಯೋಗಗಳನ್ನೂ ತಿಳಿಯಲು ಸಹಕಾರಿಯಾಗಿದೆ;
ಛಂದಸ್ಸು - ಮಂತ್ರಗಳ ಛಂದಸ್ಸನ್ನು ತಿಳಿಸುವುದು;
ಜ್ಯೋತಿಷ - ಯಜ್ಞಯಾಗಾದಿಗಳನ್ನು ಮಾಡಬೇಕಾದ ಕಾಲವನ್ನು ನಿರ್ಣಯ ಮಾಡಲು ಸಹಕಾರಿ;
ಕಲ್ಪ - ಯಜ್ಞಯಾಗಾದಿಗಳನ್ನು ಮಾಡುವ ವಿಧಾನವನ್ನು ವಿವರಿಸುತ್ತದೆ.

ಇವುಗಳೊಂದಿಗೆ ಉಪಾಂಗಗಳಾದ ಪುರಾಣ, ಇತಿಹಾಸ, ಧರ್ಮಶಾಸ್ತ್ರ, ಅನುಕ್ರಮಣಿ ಹಾಗೂ ಮಂತ್ರಾರ್ಥನಿರ್ಣಯಕ್ಕೆ ಅವಶ್ಯವಾದ ಮೀಮಾಂಸಶಾಸ್ತ್ರ ಇವೆಲ್ಲವುಗಳನ್ನೂ ಚೆನ್ನಾಗಿ ಅಭ್ಯಾಸಮಾಡಿ, ನಂತರವೇ ವೇದವ್ಯಾಖ್ಯಾನಕ್ಕೆ ತೊಡಗಬೇಕು.

ಸಾಯಣಾಚಾರ್ಯರು ಸ್ವತಃ ಮೇಲೆ ವಿವರಿಸಿರುವ ಎಲ್ಲಾ ಭಾಗಗಳನ್ನೂ ಸಾಂಗವಾಗಿ ಅಭ್ಯಾಸಮಾಡಿದ ನಂತರವೇ ವ್ಯಾಖ್ಯಾನವನ್ನು ಮಾಡುವ ಪ್ರಯತ್ನ ಮಾಡಿರುವರು. ವೇದವನ್ನು ಅರಿಯಬೇಕೆಂದಿರುವ ಪ್ರತಿಯೊಬ್ಬರೂ ಈ ಎಲ್ಲ ವಿಷಯಗಳನ್ನು ತಿಳಿದೇ ಮುಂದುವರೆಯಲಿ ಎಂಬ ಉದ್ದೇಶದಿಂದಲೇ, ಉಪೋದ್ಘಾತದಲ್ಲಿ ಎಲ್ಲ ಅಂಶಗಳನ್ನೂ ಚರ್ಚೆಮಾಡಿದ್ದಾರೆ.

ಸಾಯಣಾಚಾರ್ಯರು ಮತ್ತು ಆಧುನಿಕ ಪಂಡಿತರು

ಸಾಯಣಾಚಾರ್ಯರ ಭಾಷ್ಯಗಳು ಸಂಪ್ರದಾಯಾನುಸಾರವಾಗಿ ವೇದಾಭ್ಯಾಸ ಮಾಡುವವರಿಗೆ ಮಾತ್ರವಲ್ಲದೆ, ಆಧುನಿಕ ಜನಾಂಗಕ್ಕೂ ಬಹಳ ಉಪಕಾರಿಯಾಗಿದೆ. ಭಾಷಾಶಾಸ್ತ್ರ ಮತ್ತು ಪುರಾಣಗಳನ್ನು ಪರಸ್ಪರ ಹೋಲಿಸಿ, ಅವುಗಳ ಸಹಾಯದಿಂದ ವೇದಾರ್ಥವನ್ನು ಅರಿಯುವ ಪ್ರಯತ್ನದಲ್ಲಿರುವವರಿಗೂ ಸಾಯಣಭಾಷ್ಯದಲ್ಲಿ ಸ್ವಾರಸ್ಯವಾದ ಅಂಶಗಳಿವೆ.

ವೇದವ್ಯಾಖ್ಯಾನಗಳಲ್ಲಿ ಸಾಯಣಭಾಷ್ಯಗಳಷ್ಟು ಸಮಗ್ರವಾಗಿ ವೇದಮಂತ್ರಗಳಿಗೆ ವ್ಯಾಖ್ಯಾನ ಮಾಡಿರುವ ಭಾಷ್ಯಗಳು ಇಲ್ಲವೆಂದೇ ಹೇಳಬೇಕು.

ಅಪಾರವಾದ ವೇದರಾಶಿಯಲ್ಲಿ ಅಡಗಿರುವ ವಿಶೇಷವಾದ ಅಂಶಗಳನ್ನು ಸಂಶೋಧನೆ ಮಾಡುವ ಕಾರ್ಯದಲ್ಲಿರುವ ವಿದ್ವಾಂಸರಿಗೂ ಕೂಡ, ಸಂಪ್ರದಾಯವಾಗಿ ಬಂದಿರುವ ಅರ್ಥವನ್ನು ಅರಿಯುವುದು ಮುಖ್ಯ. ಅವರ ಪ್ರಯತ್ನಕ್ಕೆ ಇದೇ ಅಡಿಗಲ್ಲೆನ್ನಬಹುದು. ಈ ಸಂಪ್ರದಾಯಾನುಸಾರವಾದ ಅರ್ಥವು ಸಾಯಣಭಾಷ್ಯದಷ್ಟು ಸ್ಪಷ್ಟವಾಗಿಯೂ, ಸಂರ್ಣವಾಗಿಯೂ ಬೇರಾವ ಗ್ರಂಥದಲ್ಲಿಯೂ ಇಲ್ಲ. ಸಾಯಣಭಾಷ್ಯಗಳು ಇಲ್ಲದಿದ್ದಲ್ಲಿ ವೇದಾಭ್ಯಾಸವು ಯಾವ ಮಟ್ಟದಲ್ಲಿರುತ್ತಿತ್ತೆಂಬುದನ್ನು ಊಹಿಸಲೂ ಅಸಾಧ್ಯ.

ಮೂಲ : ಮೂಲ : ಋಗ್ವೇದ ಸಂಹಿತಾ - ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್.
ಮುಂದಿನ ಲೇಖನ :- ವೇದಸಂಹಿತೆಗಳ ಪದಪಾಠಕಾರರು - ಒಂದು ಸಮೀಕ್ಷೆ



  
  

ಋಗ್ವೇದದ ಋಷಿಗಳು

ಋಗ್ವೇದದ ಋಷಿಗಳು

ಋಷಿ ಎಂದರೆ ಜ್ಞಾನಿ ಎಂಬುದು ಮೇಲ್ನೋಟಕ್ಕೆ ಕಂಡುಬರುವ ಅರ್ಥ. ಹಾಗಾಗಿ ಜ್ಞಾನಿಗಳನ್ನೆಲ್ಲಾ ಋಷಿ ಎನ್ನಬಹುದು. ಮುಂದುವರೆದು ಋಷಿ ಎಂಬ ಶಬ್ದಕ್ಕೆ ವೇದ ಮಂತ್ರಗಳನ್ನು ದರ್ಶನ ಮಾಡಿದವನು ಎಂಬ ಅರ್ಥವೂ ಉಂಟು.

ಈಗ ವೇದ ಮಂತ್ರ ದರ್ಶನದ ಬಗ್ಗೆ ಕೆಲವು ವಿಚಾರಗಳು:-

ಅಧ್ಯಯನ ಮಾಡದೆ ಪರಮೇಶ್ವರಾನುಗ್ರಹದಿಂದ ಮಂತ್ರಗಳು ಯಾರಿಗೆ ಗೋಚರಿಸುವುದೋ ಅವರು ಆ ಮಂತ್ರಗಳಿಗೆ ಋಷಿ;
ಯಾರಿಗೆ ಮಂತ್ರವು ಗೋಚರಿಸಿದೆ ಎನ್ನುತೇವೆಯೋ ಅವರಿಗೇ ಮೊದಲು ಗೋಚರಿಸಿತು ಎನ್ನಲಾಗುವುದಿಲ್ಲ;

ಅಧ್ಯಯನ ಮಾಡಿ ಮಂತ್ರಗಳನ್ನು ಸ್ವಾಧೀನ ಮಾಡಿಕೊಂಡವರೂ ಅಥವಾ ದರ್ಶನ ಮಾಡಿದವರೂ ಋಷಿಗಳಾಗಬಹುದು. ಆದರೆ ಈ ದರ್ಶನವು ಅವರಿಗೆ 12ಕ್ಕಿಂತ ಕಡಿಮೆ ಬಾರಿ ಅಧ್ಯಯನ ಮಾಡಿದಾಗ ಮಾತ್ರ ಆಗಿರಬೇಕು. ಅಂದರೆ ಋಷಿತ್ವವು ಮಂತ್ರಗಳು ಮೊದಲಿಗೆ ಗೋಚರಿಸಿದವರಿಗೆ ಮಾತ್ರ ಮೀಸಲಾಗಿರುವುದಿಲ್ಲ. ಇತರರಿಗೂ ಅನ್ವಯಿಸಬಹುದು;

ಋಷಿಗಳಲ್ಲಿ ಮೂರು ಗುಂಪುಗಳಿವೆ -

ಶತರ್ಚಿನರು - ನೂರು ಮಂತ್ರಗಳನ್ನು ಗೋಚರಿಸಿಕೊಂಡವರು;

ಮಧ್ಯಮರು - ಋಗ್ವೇದದಲ್ಲಿನ 2 ರಿಂದ 7ನೇ ಮಂಡಲದ ಋಷಿಗಳಾದ ಗೃತ್ಸಮದ, ವಿಶ್ವಾಮಿತ್ರ, ವಾಮದೇವ, ಗೌತಮ, ಅತ್ರಿ, ಭಾರದ್ವಾಜ, ವಸಿಷ್ಠ, ಪಾವಮಾನ್ಯ ಋಷಿಗಳು ಮಧ್ಯಮರು;

ಕ್ಷುದ್ರ ಸೂಕ್ತ ಮತ್ತು ಮಹಾಸೂಕ್ತ - ಋಗ್ವೇದದ 10ನೇ ಮಂಡಲದ ಋಷಿಗಳು.

ಋಷಿ ಭೇದಗಳು - ಋಷಿಗಳಲ್ಲಿ 4 ಭೇದಗಳುಂಟು -
ಮಹರ್ಷಿ (ಈಶ್ವರ) - ಇವರನ್ನು ಋಷಿಗಳಲ್ಲೆಲ್ಲ ಅತ್ಯುತ್ತಮರೆಂದು ಹಾಗೂ ಪ್ರಥಮ ದರ್ಜೆಯವರು ಪರಿಗಣಿಸುವರು - ಭೃಗು, ಮರೀಚಿ, ಅತ್ರಿ, ಅಂಗೀರಸ್, ಪುಲಹ, ಕ್ರತು, ಮನು, ದಕ್ಷ, ವಸಿಷ್ಠ ಮತ್ತು ಪುಲಸ್ತ್ಯ ಎಂಬ ಮಹರ್ಷಿಗಳು ಬ್ರಹನ ಮಾನಸಪುತ್ರರು. ಇವರನ್ನು ಈಶ್ವರರೆಂದೂ ಕರೆಯುವರು.

ಋಷಿಗಳು - ಉಶನಾಕಾವ್ಯ, ಬೃಹಸ್ಪತಿ, ಕಶ್ಯಪ ಹಾಗೂ ಇತರೆ ಹತ್ತು ಮಂದಿಯು ಎರಡನೇ ವರ್ಗದ ಋಷಿಗಳು. ಇವರೆಲ್ಲರೂ ಭೃಗುಮಹರ್ಷಿಗಳ ಪುತ್ರರು. ಇವರು ತಪಸ್ಸಿನ ಮೂಲಕ ಋಷಿಪದವಿಯನ್ನೇರಿದರು.

ಋಷಿಪುತ್ರ - ಋಷೀಕವರ್ಗವನ್ನು ಒಂದೇ ಗುಂಪಿನಲ್ಲಿ ಸೇರಿಸಲಾಗಿದೆ. ಈ ವರ್ಗದವರು ಋಷಿಗಳ ಔರಸಪುತ್ರರು. ಈ ವರ್ಗದ ಕೆಲವರೆಂದರೆ - ವತ್ಸರ, ಭಾರದ್ವಾಜ, ಶರದ್ವತ, ವಾಜಾಶ್ರವಸ್ ಇತ್ಯಾದಿ.

ಭೃಗುಕುಲದಲ್ಲಿ 19 ಋಷಿಗಳಿದ್ದರು. ಹಿಂದೆ ಅಥರ್ವವೇದಕ್ಕೆ ಇರುವ ಅನೇಕ ಹೆಸರುಗಳಲ್ಲಿ ಭೃಗ್ವಂಗಿರೋವೇದವೆಂದೂ ಗುರುತಿಸುತ್ತಿದ್ದರು. ಅಂದರೆ ಈ ವೇದಗಳ ಹೆಚ್ಚು ಭಾಗ ಮಂತ್ರಗಳನ್ನು ಭೃಗು ಮತ್ತು ಅಂಗೀರಸ ಕುಲದ ಋಷಿಗಳೇ ಬಹಳವಾಗಿ ದರ್ಶನಮಾಡಿದವರು ಎಂಬ ಅಭಿಪ್ರಾಯ.

ಇತರ ಕುಲದ ಋಷಿಗಳ ಪೈಕಿ ಋಷಿ ಪದವಿಗೇರಿದ ಪ್ರಮುಖರಾದವರೆಂದರೆ -

ಅಂಗಿರಾಕುಲ - 33 ಋಷಿಗಳು
ಕಾಶ್ಯಪರು - 6 ಋಷಿಗಳು
ಆತ್ರೇಯರು - 6 ಋಷಿಗಳು
ವಾಸಿಷ್ಠರು - 8 ಋಷಿಗಳು
ಕೌಶಿಕರು (ವಿಶ್ವಾಮಿತ್ರ) - 13
ಅಗಸ್ತ್ಯರು - 3 ಋಷಿಗಳು
ಕ್ಷತ್ರಿಯರು - 2 ಋಷಿಗಳು
ವೈಶ್ಯರು - 3

ಈ ಋಷಿಗಳೆಲ್ಲಾ ವೇದ ಮಂತ್ರಗಳನ್ನು ಮೊದಲಿಗೆ ದರ್ಶನ ಮಾಡಿದವರಲ್ಲ. ಒಂದು ಉದಾಹರಣೆಯೆಂದರೆ - ಮನುವಿಗೆ ಅನೇಕ ಮಕ್ಕಳಿದ್ದರು. ಅವನ ಕೊನೆಯ ಪುತ್ರ ನಾಭಾನೇದಿಷ್ಠ. ಇವನು ತನ್ನ ಗುರುಕುಲಾಭ್ಯಾಸ ಮುಗಿದರೂ ಗುರುಕುಲದಿಂದ ಬಹಳ ದಿನವಾದರೂ ಹಿಂದಿರುಗಿ ಬರಲಿಲ್ಲ. ಹಾಗಾಗಿ ಮನುವಿನ ಅಪ್ಪಣೆಯ ಮೇರೆಗೆ ಆಸ್ತಿಯನ್ನು ಉಳಿದ ಮಕ್ಕಳು ಹಂಚಿಕೊಂಡರು. ನಂತರ ಮರಳಿ ಬಂದ ನಾಭಾನೇದಿಷ್ಠನು ತನ್ನ ಭಾಗದ ಆಸ್ತಿಯನ್ನು ಕೊಡಬೇಕೆಂದು ತಂದೆಯಲ್ಲಿ ಕೇಳಿದನು. ಆಗ ಮನುವು ಅವನಿಗೆ ಎರಡು ಸೂಕ್ತಗಳನ್ನೂ ಹಾಗೂ ಒಂದು ಬ್ರಾಹ್ಮಣವನ್ನೂ ಉಪದೇಶಿಸಿ - "ಅಂಗೀರಸ ಋಷಿಗಳು ಸ್ವರ್ಗವನ್ನು ಪಡೆಯುವ ಉದ್ದೇಶದಿಂದ ಯಜ್ಞವನ್ನು ಮಾಡುತ್ತಿದ್ದಾರೆ. ಆ ಯಜ್ಞದ ಕೆಲವು ಕರ್ಮಗಳು ಸರಿಯಾಗಿ ನಡೆಯುತ್ತಿಲ್ಲ. ನೀನು ಹೋಗಿ ಈ ಮಂತ್ರಗಳನ್ನು ಪಠಿಸಿ, ಆ ಕರ್ಮಗಳನ್ನು ಸರಿಪಡಿಸು. ಆಗ ಅವರು ನಿನಗೆ ದಕ್ಷಿಣೆಯನ್ನು ಕೊಡುತ್ತಾರೆ. ಅದೇ ನಿನ್ನ ಭಾಗದ ಆಸ್ತಿ" ಎಂದು ಹೇಳಿದನು. ಹೀಗೆ ಮನುವಿನಿಂದ ನಾಭಾನೇದಿಷ್ಠನಿಗೆ ಉಪದೇಶವಾದ ಸೂಕ್ತಗಳೆಂದರೆ ಋಗ್ವೇದದ 10ನೇ ಮಂಡಲದಲ್ಲಿನ 61 ಮತ್ತು 62ನೇ ಸುಪ್ರಸಿದ್ಧವಾದ ಸೂಕ್ತಗಳು. ಮನುವು ಉಪದೇಶಿಸಿ ಬ್ರಾಹ್ಮಣವು ತೈತ್ತಿರೀಯಸಂಹಿತೆಯಲ್ಲಿದೆ. ಇದರ ಬಗ್ಗೆ ಭಟ್ಟಭಾಸ್ಕರರು ತೈತ್ತಿರೀಯಸಂಹಿತಾ ಭಾಷ್ಯದಲ್ಲಿ ಉಲ್ಲೇಖಿಸಿರುವರು. ಇವೆಲ್ಲದರ ಅಭಿಪ್ರಾಯವೇನೆಂದರೆ ಮೇಲೆ ತಿಳಿಸಿರುವ ಮಂತ್ರಗಳು ಹಾಗೂ ಬ್ರಾಹ್ಮಣವು ನಾಭಾನೇದಿಷ್ಠನಿಗಿಂತ ಮುಂಚೆ ಇದ್ದರೂ ನಾಭಾನೇದಿಷ್ಠನು ಇವುಗಳಿಂದ ವಿಶೇಷ ಪ್ರಯೋಜನ ಪಡೆದಿದ್ದರಿಂದ ಈತನೇ ಈ ಮಂತ್ರ ಹಾಗೂ ಬ್ರಾಹ್ಮಣಕ್ಕೆ ಋಷಿಯೆಂದು ಪರಿಗಣಿಸಲಾಗಿದೆ. ಹೀಗೆ ಪ್ರಥಮ ಬಾರಿಗೇ ಮಂತ್ರಗಳ ದರ್ಶನವಾಗದೇ ಇದ್ದರೂ ನಂತರ ಉಪದೇಶಿಸಲ್ಪಟ್ಟ ಋಷಿಗಳ ಬಗ್ಗೆ ಹಲವಾರು ಕಡೆಗಳಲ್ಲಿ ಉಲ್ಲೇಖವಿರುವುದು. ಈ ಋಷಿಗಳನ್ನು ಮಂತ್ರದ್ರಷ್ಟಾರರು ಎನ್ನುವುದಕ್ಕಿಂತ ಮಂತ್ರಾರ್ಥಗಳನ್ನು ಪ್ರಕಾಶಪಡಿಸಿದವರು ಅಥವಾ ಮಂತ್ರಗಳನ್ನು ಪ್ರಥಮ ಬಾರಿಗೆ ಯಜ್ಞ ಯಾಗಾದಿಗಳಲ್ಲಿ ಪ್ರಯೋಗಿಸಿದವರು ಎನ್ನಬಹುದು.

ಮಂತ್ರಗಳ ಅರ್ಥದ್ರಷ್ಟೃಗಳಾದ ಋಷಿಗಳು

ವೇದಗಳಲ್ಲಿ ಮಂತ್ರಗಳು ಪದೇ ಪದೇ ಪ್ರಾದುರ್ಭವಿಸಿವೆ. ಒಂದೇ ಮಂತ್ರವು ಬೇರೆ ಬೇರೆ ಕಾಲಗಳಲ್ಲಿ ಬೇರೆ ಬೇರೆ ಋಷಿಗಳಿಂದ ದೃಷ್ಟವಾಗಿವೆ. ಇಷ್ಟೇ ಅಲ್ಲದೆ ಒಂದೇ ಮಂತ್ರವನ್ನು ಸಂದರ್ಭಕ್ಕನುಸಾರವಾಗಿ ಬೇರೆ ಬೇರೆ ಪ್ರಯೋಗವನ್ನು ಮಾಡಿರುವುದನ್ನೂ ಕಾಣಬಹುದು. ಅಂದರೆ ಒಂದೇ ಮಂತ್ರಕ್ಕೆ ಬೇರೆ ಬೇರೆ ಅರ್ಥವನ್ನು ಮಾಡಿರುತ್ತಾರೆ. ಹೀಗಾಗಿ ಋಷಿಗಳು ಅರ್ಥದರ್ಶನವನ್ನೂ ಪಡೆದರು ಎನ್ನಬಹುದು. ಮಂತ್ರದರ್ಶನಕ್ಕೂ ಮಂತ್ರಾರ್ಥದರ್ಶನಕ್ಕೂ ವ್ಯತ್ಯಾಸವಿದೆ.

ಕೆಲವು ಕಡೆಗಳಲ್ಲಿ ಮಂತ್ರಗಳ ಋಷಿಗಳು ತಮ್ಮ ಮೂಲ ನಾಮಧೇಯವನ್ನು ಬಿಟ್ಟು ವೇದದಲ್ಲಿ ಬರುವ ಪದಗಳನ್ನೇ ತಮ್ಮ ಹೆಸರನ್ನಾಗಿ ಸ್ವೀಕರಿಸಿರುವರು.

ಆರ್ಯಧರ್ಮ, ಅಥವಾ ಹಿಂದೂ ಧರ್ಮಕ್ಕೆ ಋಷಿಗಳೇ ಮೂಲಪುರುಷರು. ನಮ್ಮ ಸಂಸ್ಕೃತಿಯ ನಿರ್ಮಾತೃಗಳೇ ಇವರು. ಪ್ರತಿಯೊಬ್ಬ ಋಷಿಯೂ ಧರ್ಮಾಧರ್ಮದ ಸಾರವನ್ನು ತಿಳಿದು ಅದರಂತೆ ಸ್ವತಃ ಧರ್ಮಮಾರ್ಗವನ್ನೇ ಅವಲಂಬಿಸಿದವರು, ಯಥಾರ್ಥವಾದಿಗಳು, ಸತ್ಯವ್ರತರು.

ಋಷಿಗಳು ಸಮಸ್ತವನ್ನೂ ತ್ಯಾಗಮಾಡಿದವರು. ಅವರನ್ನು ನೋಡಿದರೆ ದಟ್ಟದರಿದ್ರರಂತೆ ಇರುತ್ತಾರೆ. ಇಂಥವರೆಲ್ಲಿ? ರಾಜಾಧಿರಾಜರುಗಳೆಲ್ಲಿ? ಆದರೂ, ಧರ್ಮರಕ್ಷಕರೂ, ಪ್ರಚಾರಕರೂ, ಜ್ಞಾನನಿಧಿಗಳೂ ಆದ ಇವರಿಗೆ ಎಲ್ಲೆಲ್ಲಿಯೂ ಗೌರವವಿದ್ದೇ ಇದೆ.

ಮಹಾಭಾರತದಲ್ಲಿನ ಪಾಂಡುವಂಶದ ರಾಜರುಗಳಾದ ಪರೀಕ್ಷಿತ್, ಜನಮೇಜಯ, ಶತಾನೀಕ ಮತ್ತು ಅಶ್ವಮೇಧದತ್ತ ರಾಜರುಗಳು ಸುಮಾರು 225 ವರ್ಷ ರಾಜ್ಯಭಾರ ಮಾಡಿದರು. ಅಶ್ವಮೇಧದತ್ತನ ಮಗ ಅಸೀಮಕೃಷ್ಣನು ಒಂದು ದೀರ್ಘ ಯಾಗವನ್ನು ಮಾಡಿದನು. ಇವನ ಕಾಲದಲ್ಲೂ ಋಷಿಗಳು ಇದ್ದರು. ಧರ್ಮರಾಜನು ಭೂಮಿಯನ್ನು ಬಿಟ್ಟನಂತರ ಕಲಿಯುಗ ಪ್ರಾರಂಭವಾಯಿತೆಂದು ಪರಿಗಣಿಸಿದರೆ ಅದರಿಂದಾಚೆಗೆ 400 ವರ್ಷಗಳು ಋಷಿಗಳಿದ್ದರೆನ್ನಬಹುದು.

ಋಗ್ವೇದದಲ್ಲಿ ಸಾಧಾರಣವಾಗಿ ಒಂದು ಸೂಕ್ತದಲ್ಲಿರುವ ಮಂತ್ರಗಳಿಗೆಲ್ಲಾ ಒಬ್ಬನೇ ಋಷಿ. ಹಾಗೇ ಒಂದು ಸೂಕ್ತದಲ್ಲಿರುವ ಅನೇಕ ಮಂತ್ರಗಳಿಗೆ ಬೇರೆ ಬೇರೆ ಋಷಿಗಳೂ ಇರುವುದುಂಟು. ಋಗ್ವೇದದಲ್ಲಿ ಹೀಗಿರುವುದರಿಂದ ವೇದಮಂತ್ರಗಳನ್ನು 3 ವಿಧವಾಗಿ ವಿಂಗಡಿಸಲಾಗಿದೆ. ಒಬ್ಬ ಋಷಿಯಿಂದ ದೃಷ್ಟವಾದ ಸೂಕ್ತಗಳನ್ನೆಲ್ಲ ಒಂದೆಡೆ ಸೇರಿಸಿ ನಂತರ ಇನ್ನೊಬ್ಬ ಋಷಿಯಿಂದ ದೃಷ್ಟವಾದ ಮಂತ್ರಗಳನ್ನು ಸೇರಿಸಬಹುದು. ಇಂತಹ ಮಂತ್ರಗಳ ಗುಂಪಿಗೆ ಒಂದು ಮಂಡಲವೆನ್ನುವರು. ಋಗ್ವೇದದಲ್ಲಿ 10 ಇಂತಹ ಮಂಡಲಗಳಿವೆ. ಋಷಿಗಳ ಕ್ರಮವನ್ನನುಸರಿಸು ಜೋಡಿಸಿರುವ ಸೂಕ್ತಗಳ ಗುಂಪುಗಳನ್ನು ಅಥವಾ ಮಂಡಲಗಳನ್ನು ಒಟ್ಟುಗೂಡಿಸಿರುವ ಕ್ರಮವೇ ಈಗಿರುವ ಋಗ್ವೇದ ಸಂಹಿತೆ.

ನಿರೀಕ್ಷಿಸಿ - ಮುಂದಿನ ಲೇಖನ - ಋಗ್ವೇದದ ದೇವತೆಗಳು

ಮೂಲ : ಋಗ್ವೇದ ಸಂಹಿತ - ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್



ಋಗ್ವೇದದ ದೇವತೆಗಳು

ಋಗ್ವೇದದ ದೇವತೆಗಳು

ಯಾ ತೇನೋಚ್ಯತೇ ಸಾ ದೇವತಾ - ಮಂತ್ರಗಳಲ್ಲಿ ಪ್ರತಿಪಾದಿಸಲ್ಪಡುವ ವಿಷಯಗಳೇ ಆಯಾ ಮಂತ್ರಕ್ಕೆ ದೇವತೆಗಳು. ಒಂದು ಮಂತ್ರದಲ್ಲಿ ಅಗ್ನಿಸಂಬಂಧಿತ ವಿಷಯಗಳಿದ್ದರೆ ಆ ಮಂತ್ರಕ್ಕೆ ಅಗ್ನಿಯೇ ದೇವತೆ.

ಒಂದು ಮಂತ್ರಕ್ಕೆ ಅಥವಾ ಅನೇಕ ಮಂತ್ರಗಳಿಂದ ಕೂಡಿದ ಸೂಕ್ತಕ್ಕೆ ಒಂದೇ ದೇವತೆ ಇರಬಹುದು. ಹಾಗೆಯೇ ಒಂದು ಸೂಕ್ತದಲ್ಲಿ ವಿವಿಧ ಮಂತ್ರಗಳಿಗೆ ಬೇರೆ ದೇವತೆಗಳಿರಬಹುದು. ಸಾಧಾರಣವಾಗಿ ಒಂದು ಸೂಕ್ತಕ್ಕೆ ಅಥವಾ ಮಂತ್ರಕ್ಕೆ ಒಂದೇ ದೇವತೆ ಇರುವುದು.

ಋಗ್ವೇದದಲ್ಲಿನ ಪ್ರಮುಖ ದೇವತೆಗಳು - ಅಗ್ನಿ, ಇಂದ್ರ, ವರುಣ, ಅಶ್ವಿನಿ ದೇವತೆಗಳು, ಮರುತ್ತು, ವಾಯು, ಆದಿತ್ಯ, ಸವಿತೃ, ಉಷಾ, ರಾತ್ರಿಃ, ಮಿತ್ರ, ವಿಷ್ಣು, ರುದ್ರ, ಸೋಮ, ಅಪಃ, ಮುಂತಾದವರು. ಅಗ್ನಿ ಹಾಗೂ ಇಂದ್ರ ದೇವತೆಗಳಿಗೆ ಅನೇಕ ಸೂಕ್ತಗಳಿವೆ. ಪ್ರತಿ ಮಂಡಲದ ಸೂಕ್ತಗಳ ಜೋಡಣೆಯಲ್ಲಿ ಮೊದಲು ಅಗ್ನಿ, ನಂತರ ಇಂದ್ರ ದೇವತೆಗಳ ಸೂಕ್ತಗಳಿದ್ದು ನಂತರ ಇತರ ದೇವತೆಗಳ ಸೂಕ್ತಗಳಿರುವುದು. 9ನೇ ಮಂಡಲದಲ್ಲಿ ಮಾತ್ರ ಎಲ್ಲ ಸೂಕ್ತಗಳಿಗೂ ಪವಮಾನಃ ಸೋಮಃ ಎಂಬ ಒಂದೇ ದೇವತೆ. ಋಷಿಗಳೂ, ಛಂದಸ್ಸುಗಳು ಮಾತ್ರ ಬೇರೆ.

ಮಂತ್ರಗಳಲ್ಲಿ ಮೇಲೆ ವಿವರಿಸಿರುವ ದೇವತೆಗಳಲ್ಲದೆ ಅಲ್ಲಲ್ಲಿ ಕೆಲವು ಮಂತ್ರಗಳಲ್ಲಿ ನದಿಗಳು, ಗ್ರಾವಾಣಃ, ಜ್ಞಾನಂ, ಬಾಣ, ಬತ್ತಳಿಕೆ, ಯಜ್ಞವೇದಿ, ಊಲೂಖಲ ಇತ್ಯಾದಿ ನಿರ್ಜಿವ ವಸ್ತುಗಳೂ ದೇವತೆಗಳಾಗಿರುವುದನ್ನು ಕಾಣಬಹುದು. ಇದಲ್ಲದೆ ರಾಜರನ್ನು ಕುರಿತ ದಾನಸ್ತುತಿ, ಇಬ್ಬರು ಪುರುಷರ ಅಥವಾ ದೇವತೆಗಳ ಸಂವಾದವೂ ಅನೇಕ ಮಂತ್ರಗಳಿಗೆ ದೇವತೆಗಳಾಗಿರುವುದು. 10ನೇ ಮಂಡಲದಲ್ಲಿ ಇಂತಹ ಕ್ಷುದ್ರದೇವತೆಗಳಿರುವ ಸೂಕ್ತಗಳನ್ನು ನೋಡಬಹುದು.

ಋಗ್ವೇದ ಕಾಲದಲ್ಲಿ ಜನರು ದೇವತೆಗಳನ್ನು ಈಗಿನ ಕಾಲದಂತೆ ಮನೆಗಳಲ್ಲಿ ಪೂಜಿಸುತ್ತಿರಲಿಲ್ಲ. ಕೇವಲ ಯಜ್ಞ ಯಾಗಾದಿಗಳಲ್ಲಿ ಮಾತ್ರ ಅವರನ್ನು ಆಹ್ವಾನಿಸಿ ಪೂಜಿಸುತ್ತಿದ್ದರು. ಹಾಗಾಗಿ ಋಗ್ವೇದದಲ್ಲಿ ವಿವರಿಸಿರುವ ಕರ್ಮಗಳು ಬಡವರಿಗೆ ಆಚರಿಸಲು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಕೇವಲ ಶ್ರೀಮಂತರು ಮಾತ್ರ ಆಚರಿಸಲು ಸಾಧ್ಯವಾಗುತ್ತಿತ್ತು. ಯಜ್ಞ ಯಾಗಾದಿಗಳನ್ನು ಮಾಡುವ ಕರ್ತೃವು ಧನಿಕ ಹಾಗೂ ಉದಾರಿಯಾಗಿರಬೇಕು. ಅದಕ್ಕೆ ಬೆಳೆಬಾಳುವ ಅನೇಕ ಪದಾರ್ಥಗಳು ಬೇಕಿದ್ದು ಜೊತೆಗೆ ಅನೇಕ ಋತ್ವಿಕ್ಕುಗಳು ಇರಬೇಕಿತ್ತು. ಕಾಲಕ್ರಮದಲ್ಲಿ ಬಡವರು ಅಥರ್ವವೇದದಲ್ಲಿ ಸೂಚಿಸಿರುವ ಮಾಟ ಮಂತ್ರಗಳಿಗೆ ಮೊರೆಹೋದರು. ಋತ್ವಿಕ್ಕುಗಳಿದೆ ಬದಲಾಗಿ ಅಲ್ಪತೃಪ್ತರಾದ ಮಾಟಗಾರರೇ ಅವರಿಗೆ ಪುರೋಹಿತರಾದರು.

ಋಗ್ವೇದದಲ್ಲಿ ಬಹುಪಾಲು ದೇವತೆಗಳನ್ನು ಪ್ರಾರ್ಥಿಸುವುದು ಸಂಸಾರದಿಂದ ಮುಕ್ತಿ ಅಥವಾ ಸ್ವರ್ಗಾದಿ ಸುಖವನ್ನು ಪಡೆಯುವ ಸಲುವಾಗಲ್ಲ, ಬದಲಿಗೆ ಆಯುಸ್ಸು, ಐಶ್ವರ್ಯ, ವೀರ್ಯ, ಸಂತಾನ ಇತ್ಯಾದಿ ಪ್ರಾಪಂಚಿಕ ಸುಖಗಳನ್ನು ಪಡೆಯುವ ಸಲುವಾಗಿ. ಇಷ್ಟಲ್ಲದೆ, ಶತ್ರುನಾಶ ಅಥವಾ ಜಯ, ಆರೋಗ್ಯ, ಅಪಾರ ಪ್ರಮಾಣದ ಆಹಾರ ಮತ್ತು ಸೋಮರಸಗಳನ್ನು ನೀಡುವಂತೆ ಬೇಡುತ್ತಿದ್ದರು. ಇವೇ ಜೀವನದ ಮುಖ್ಯ ಗುರಿಗಳಂತೆ ಕಾಣುತ್ತಿದ್ದವು. ಈ ರೀತಿಯ ಬೇಡಿಕೆಗಳು ಅವರಿಗೆ ಆ ಕಾಲದಲ್ಲಿ ತಪ್ಪೆಂಬ ಭಾವನೆಯೇ ಮುಡಿದಂತೆ ಕಾಣುತ್ತಿರಲಿಲ್ಲ. ಎಲ್ಲೋ ಅಲ್ಲೊಂದು ಇಲ್ಲೊಂದು ಮಂತ್ರಗಳಲ್ಲಿ ದೇಹದ ನಶ್ವರತೆ, ಮಾಯೆಯಿಂದ ಕೂಡಿದ ಜೀವನ ಇಂತಹ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದನ್ನು ಕಾಣಬಹುದು.

ಋಗ್ವೇದದ ಮಂತ್ರಗಳು ಕರ್ಮಕ್ಕೆ ಮಾತ್ರ ಉಪಯೋಗಗಳೆಂದ ಮಾತ್ರಕ್ಕೆ ಅವು ಯಜುರ್ವೇದ ಮಂತ್ರಗಳಂತೆ ಸಂಪೂರ್ಣವಾಗಿ ಕರ್ಮಕ್ಕೆ ಅಧೀನವಾಗಿಲ್ಲ. ಈ ಮಂತ್ರಗಳಲ್ಲಿ ಸರಳತೆ ಹಾಗೂ ನಿಷ್ಕಪಟತೆ ಎದ್ದು ಕಾಣುತ್ತದೆ. ಹಲವಾರು ಸ್ತೋತ್ರಗಳು ಹೃದಯಾಂತರಾಳದಿಂದ ಬರುತ್ತದೆ ಹಾಗೂ ಅವುಗಳಲ್ಲಿ ಕಪಟತೆ ಇರುವುದಿಲ್ಲ.

ಋಗ್ವೇದದ ಮಂತ್ರಗಳನ್ನು ಉಚ್ಚರಿಸಿ ದೇವತೆಗಳನ್ನು ಪ್ರಾರ್ಥಿಸಿದಾಗ ಅವರು ಸಹಾಯ ಮಾಡುತ್ತಿದ್ದರು. ಅಂದರೆ, ಈ ದೇವತೆಗಳಿಗೆ ಅಕಾರವಿದೆಯೇ? ಇದ್ದಲ್ಲಿ ಎಂತಹುದು? ಸಾಧಾರಣವಾಗಿ ಋಗ್ವೇದದ ದೇವತೆಗಳೆಲ್ಲ ಪ್ರಕೃತಿಯ ಒಂದೊಂದು ಅಂಶವೂ ಆಕಾರವನ್ನು ಧರಿಸಿ ದೇವತೆಗಳಾಗಿ ಪರಿಣಮಿಸಿದೆ. ಉಷಸ್ಸು ವೇದಕಾಲದ ಋಷಿಗಳಿಗೆ ಆಶ್ಚರ್ಯಕರವಾದದ್ದು ಹಾಗೂ ಪೂಜೆಗೆ ಅರ್ಹವಾದದ್ದು. ಇಂತಹ ಪ್ರಕೃತಿಯ ಅಂಶಗಳು ದೇವತೆಗಳಾದವು. ವೇದದ ದೇವತೆಗಳು ಅರ್ಧ ಮನುಷ್ಯಸ್ವಭಾವವುಳ್ಳವರಾಗಿದ್ದು ಉಳಿದರ್ಧ ತಮ್ಮ ಪ್ರಕೃತಿಯ ಮೂಲಭೂತ ಭಾಗವಾಗಿ ಉಳಿದಿದ್ದಾರೆ.

ಶಬ್ದಶಾಸ್ತ್ರಜ್ಞರು ಕೇವಲ ಮೂರು ದೇವತೆಗಳನ್ನು ಮಾತ್ರ ಪರಿಗಣಿಸುತ್ತಾರೆ. ಭೂಮಿಯಲ್ಲಿ ಅಗ್ನಿ, ಆಕಾಶದಲ್ಲಿ ವಾಯು ಅಥವಾ ಇಂದ್ರ ಮತ್ತು ಊರ್ಧ್ವ ಲೋಕಗಳಲ್ಲಿ ಸೂರ್ಯ.

ದೇವತೆಗಳ ವೈಯುಕ್ತಿಕ ಲಕ್ಷಣಗಳನ್ನು ಪರಿಶೀಲಿಸುವ ಮೊದಲು ಕೆಲವು ವಿಷಯಗಳನ್ನು ಗಮನಿಸಬೇಕು. ಋಗ್ವೇದದಲ್ಲಿನ ದೇವತೆಗಳಿಗೂ ನಂತರ ಪುರಾಣಕಾಲದ ದೇವತೆಗಳಿಗೂ ವ್ಯತ್ಯಾಸವಿದೆ. ಈ ವ್ಯತ್ಯಾಸವು ಕಾಲಾನುಕ್ರಮದಲ್ಲಿ ಬಂದಿವೆ. ವೇದಗಳಲ್ಲಿನ ಪ್ರಮುಖ ದೇವತೆಗಳಿಗೆ ಪುರಾಣದಲ್ಲಿ ಸ್ಥಾನವೇ ಇಲ್ಲದಿರುವುದು, ಅಥವಾ ಇದ್ದರೂ ಅದು ಅಪ್ರಸ್ತುತವಾದದ್ದು. ಹಾಗೇ ವೇದದಲ್ಲಿ ಅಪ್ರಸ್ತುತವಾದ ದೇವತೆಗಳು ಪುರಾಣಕಾಲದಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿರುವುದು. ಉದಾಹರಣೆಗೆ ವೇದದಲ್ಲಿ ಅಗ್ನಿ, ಇಂದ್ರರು ಪ್ರಮುಖರಾಗಿದ್ದರೆ, ಪುರಾಣಗಳಲ್ಲಿ ಅವರ ಸ್ಥಾನ ಕಡಿಮೆಯದು. ಬ್ರಹ್ಮ, ವಿಷ್ಣು, ಮಹೇಶ್ವರರ ಮುಂದೆ ಇಂದ್ರ, ಅಗ್ನಿಯರು ಯಃಕಶ್ಚಿತ್ ದೇವತೆಗಳು. ಹಾಗೇ ವೇದದಲ್ಲಿ ಅಷ್ಟೇನೂ ಪ್ರಮುಖವಾಗಿ ಪರಿಗಣಿಸದ ವಿಷ್ಣುವಿಗೆ ಪುರಾಣದಲ್ಲಿ ಉನ್ನತ ಮಟ್ಟದ ಗೌರವ. ವೇದಗಳಲ್ಲಿ ಕಂಡು ಬಾರದೇ ಇರುವ ಲಕ್ಷ್ಮಿ, ಪಾರ್ವತಿ, ಕುಬೇರ ಇತ್ಯಾದಿ ದೇವತೆಗಳನ್ನು ಪುರಾಣದಲ್ಲಿ ಪ್ರಮುಖವಾಗಿ ಗಮನಿಸಬಹುದು. ಆದರೆ ವೇದದಲ್ಲಿ ಪ್ರಸಿದ್ಧರಾದ ದೇವತೆಗಳಾದ ಅರ್ಯಮ, ಭಗ, ಪರ್ಜನ್ಯ, ಉಕ್ಷಸ್ ಮುಂತಾದವರುಗಳು ಪುರಾಣದಲ್ಲಿ ಕಂಡುಬರುವುದಿಲ್ಲ.

ಋಗ್ವೇದದಲ್ಲಿ ಅಗ್ನಿ, ಇಂದ್ರರು ಬಹು ಮುಖ್ಯರಾದ ದೇವತೆಗಳು. ಇಂದ್ರನನ್ನು ಕುರಿತು ಅತಿ ಹೆಚ್ಚಿನ ಮಂತ್ರಗಳಿದ್ದರೆ, ಅಗ್ನಿಗೆ ಮಂತ್ರ ಸಂಖ್ಯೆಯಲ್ಲಿ ಎರಡನೇ ಸ್ಥಾನ. ಅಗ್ನಿಯನ್ನು ವೇದದಲ್ಲಿ ದೇವತೆಯನ್ನಾಗಿ, ಮನುಷ್ಯ, ಪ್ರಕೃತಿಯ ಒಂದು ಘಟನೆ ಹಾಗೂ ಪಂಚಭೂತಗಳಲ್ಲಿ ಒಂದಾದ ತೇಜಸ್ಸು ಎಂಬುದಾಗಿ ವರ್ಣಿಸಲಾಗಿದೆ.

ಆಗ್ನಿ
ಅಗ್ನಿಗೆ 3 ರೂಪಗಳಿರುವುದು. ಭೂಮಿಯ ಮೇಲೆ ಬೆಂಕಿ, ವಾಯುಮಂಡಲದಲ್ಲಿ ವಿದ್ಯುತ್, ಸಿಡಿಲು ಹಾಗೂ ಅಂತರಿಕ್ಷದಲ್ಲಿ ಸೂರ್ಯಮಂಡಲ ರೂಪ. ಭೂಮಿಯ ಮೇಲೆ ಅರಣಿಯಿಂದ ಬೆಂಕಿಯನ್ನು ಉತ್ಪತ್ತಿಮಾಡುತ್ತಾರೆ. ಎರಡು ಮೇಘಗಳ ನಡುವೆ ಇಂದ್ರನು ಅಗ್ನಿಯನ್ನು ಸೃಷ್ಟಿಸುತ್ತಾನೆ ಅಥವಾ ನೀರಿನೊಳಗೂ ಉತ್ಪತ್ತಿ ಮಾಡುತ್ತಾನೆ. ಈ ಅಗ್ನಿಗೂ, ಪ್ರತಿ ಗೃಹದಲ್ಲೂ ನಿತ್ಯವೂ ಹೊತ್ತಿಸುವ ಅಗ್ನಿಗೂ ವ್ಯತ್ಯಾಸವೇನೂ ಇಲ್ಲದಿದ್ದರೂ ವೇದದಲ್ಲಿ ಈ ವಿಧದ ಬೆಂಕಿಯ ವಿಷಯ ಪ್ರಸ್ತಾಪವಾಗಿಲ್ಲ. ವೇದಗಳಲ್ಲಿ ಯಜ್ಞ ಯಾಗಾದಿಗಳಿಗೆ ಸಂಬಂಧಿಸಿದ ಹಾಗೂ ಪಂಚಭೌತಿಕ ಅಗ್ನಿಗಳ ಬಗ್ಗೆ ಮಾತ್ರ ಚರ್ಚಿಸಲಾಗಿದೆ.

ಅಗ್ನಿ ಮಾಡುವ ಕೆಲಸಗಳಲ್ಲಿ ಪ್ರಮುಖವಾದದ್ದು ಕತ್ತಲನ್ನು ಓಡಿಸುವುದು ಹಾಗೂ ಬೆಳಕನ್ನು ನೀಡುವುದು. ಸೂರ್ಯೋದಯವಾದ ಕೂಡಲೇ ಅಗ್ನಿಯನ್ನು ಪ್ರಜ್ವಲಿಸಿ ದೈನಂದಿನ ಕರ್ಮಗಳನ್ನು ಮಾಡಬೇಕು. ಅಂದರೆ ಅಗ್ನಿಯಿಂದಲೇ ದಿನವು ಪ್ರಾರಂಭವಾಗುವುದು. ಅವನೇ ಪುರೋಹಿತರಲ್ಲಿ ಜ್ಯೇಷ್ಠನು. ತುಪ್ಪವನ್ನು ಹೋಮಮಾಡಿದ ಕೂಡಲೇ ಅಗ್ನಿಯು ಉರಿಯ ಅಕಾರನಾಗಿ ಮೇಲೇಳುತ್ತಾನೆ. ಅವನ ದಂತಪಂಕ್ತಿಯು ಶುಭ್ರವಾಗಿದ್ದು ಶಿರವು ತೇಜೋರೂಪವಾಗಿದೆ. ಅವನೇ ಮನೆಗೂ ಹಾಗೂ ಎಲ್ಲರಿಗೂ ಯಜಮಾನ ಹಾಗೂ ಕುಲಪುರೋಹಿತ ಹಾಗೂ ಪರಮ ಜ್ಞಾನಿ. ದೇವತೆಗಳಿಗೂ ಮನುಷ್ಯರಿಗೂ ಮಧ್ಯವರ್ತಿಯಾಗಿ ಯಜ್ಞದ ಹವಿಸ್ಸನ್ನು ದೇವತೆಗಳಿಗೆ ತಲಪಿಸುತ್ತಾನೆ. ಯಜ್ಞ ಕರ್ತೃವು ಇತರ ದೇವತೆಗಳನ್ನು ಕರೆತರುವಂತೆ ಅಗ್ನಿಯನ್ನು ಪ್ರಾರ್ಥಿಸುವರು. ಹೀಗೆ ಅಗ್ನಿಯು, ಪಂಚಭೌತಿಕ, ಯಾಜ್ಞಿಕ ಮತ್ತು ದೈವಿಕ ರೂಪಗಳಲ್ಲಿ ಕಾರ್ಯ ನಿರ್ವಹಿಸುವನು. ಈ ರೀತಿಯ ವ್ಯಕ್ತಿತ್ವವನ್ನು ಹೊಂದಿದ್ದರೂ ಅವನು ಸಂಪೂರ್ಣವಾಗಿ ಮನುಷ್ಯನಲ್ಲ ಹಾಗೂ ತನ್ನ ಸ್ವಾಭಾವಿಕ ರೂಪವನ್ನು ತ್ಯಜಿಸಿಲ್ಲ.

ಇಂದ್ರ
ಅಗ್ನಿಯ ನಂತರದ ದೇವತೆಯೆಂದರೆ ಇಂದ್ರ. ಇಂದ್ರನ ಪರವಾದ ಮಂತ್ರಗಳು ಅಗ್ನಿಯ ಪರವಾದ ಮಂತ್ರಗಳಿಗಿಂತ ಹೆಚ್ಚು. ಋಗ್ವೇದದಲ್ಲಿ ಶೇಕಡಾ 25ರಷ್ಟು ಇಂದ್ರನ ಪರವಾಗಿದೆ. ಇಂದ್ರನಿಗೆ ಅನ್ವಯಿಸದೇ ಇರುವ ಗುಣವೇ ಇಲ್ಲ.

ಇಂದ್ರನು ಸ್ವರ್ಗದಿಂದಲೋ, ಭೂಮಿಯಿಂದಲೋ ಹುಟ್ಟಿದನು. ಹುಟ್ಟಿದಕೂಡಲೇ ಸೋಮಪಾನ ಮಾಡಿದನು. ಇವನು ಬಹು ಪುರಾತನ ದೇವತೆ, ಯುವಕ, ಬಲಿಷ್ಠ, ಪರಾಕ್ರಮಿ, ಸ್ಫುರದ್ರೂಪಿ, ಹಿರಣ್ಯಬಾಹುವುಳ್ಳವನು, ಹರಿತಾಶ್ವ (ಹಸಿರು ಕುದುರೆಗಳಿಂದ ಕುಡಿದ ಚಿನ್ನದ ರಥವುಳ್ಳವನು). ಇವನ ಆಯುಧ ವಜ್ರ. ಸೋಮಪಾನದಲ್ಲಿ ಇವನನ್ನು ಮೀರಿಸುವವರ್ಯಾರೂ ಇಲ್ಲ.

ವಿಷ್ಣುವಿನೊಂದಿಗೆ ಇಂದ್ರನು ಅನೇಕ ರಾಕ್ಷಸರನ್ನು ಸಂಹಾರಮಾಡಿದನು. ಇಂದ್ರನ ಅನೇಕ ಗುಣಗಳಲ್ಲಿ ಪ್ರಮುಖವಾದ ಮೂರು ಗುಣಗಳೆಂದರೆ -

1. ಅವನ ಬಲ, ಶಕ್ತಿಗೆ ಅಧಿದೇವತೆ ಮತ್ತು ಬಾಹ್ಯಪ್ರಪಂಚದ ಮೇಲೆ ಅಧಿಕಾರವುಳ್ಳವನು. ಸಾಧಾರಣವಾಗಿ ಧಾರ್ಮಿಕವಾಗಲಿ ಅಥವಾ ನೈತಿಕವಾಗಲಿ ಇವನಿಗೆ ಶ್ರೇಷ್ಠ ಸ್ಥಾನವಿಲ್ಲ.

2. ಇಂದ್ರನು ಯುದ್ಧಪ್ರೇಮಿ ಹಾಗೂ ಯೋಧರೆಲ್ಲರಿಗೂ ಆದರ್ಶ. ಯುದ್ಧದ ಸಮಯದಲ್ಲಿ ಇವನನ್ನು ಪ್ರಾರ್ಥಿಸಿ ಇವನ ಮೂಲಕ ಜಯವನ್ನು ಪಡೆಯುವರು.

3. ವೃತ್ತಾಸುರ ವಧೆ -

ಇಂದ್ರಸ್ಯ ನು ವೀರ್ಯಾಣಿ ಪ್ರ ವೋಚಂ ಯಾನಿ ಚಕಾರ ಪ್ರಥಮಾನ ವಜ್ರೀ|
ಅಹನ್ನಹಿಮನ್ವಪಸ್ತರ್ದ ಪ್ರ ವಕ್ಷಣಾ ಅಭಿನತ್ಪರ್ವತಾನಾಂ (ಋಗ್ವೇದ-1-32-1)

ವೃತ್ರಾಸುರನೆಂಬ ದೈತ್ಯನು ಪರ್ವತಗಳಿಂದ ಹರಿಯುವ ನದಿಗಳನ್ನೂ ಅಂತರಿಕ್ಷದಿಂದ ಬರುವ ನೀರನ್ನೂ ತಡೆಹಿಡಿದಿದ್ದನು. ಇಂದ್ರನು ವಜ್ರಾಯುಧದಿಂದ ಅವನನ್ನು ಕೊಂದು ನೀರು ಹರಿಯುವಂತೆ ಮಾಡಿದನು.

ಈ ವೃತ್ರಾಸುರನು ಯಾರು? ಇವನು ತಡೆದಿದ್ದ ನೀರು ಯಾವುದು? ಇಂದ್ರನು ಬಿಡುಗಡೆ ಮಾಡಿದ ನೀರು ಯಾವುದು? ಈ ಪ್ರಶ್ನೆಗಳಿಗೆ ನಿರುಕ್ತದಲ್ಲಿ ಹಲವಾರು ವ್ಯಾಖ್ಯಾನಗಳಿವೆ.

ಮೊದಲನೆಯದು - ವೃತ್ರ ಎಂಬುದು ಒಂದು ದುರ್ದೇವತೆ. ಇದು ಮೇಘಗಳಲ್ಲಿ ನೀರನ್ನು ಬಿಡದಂತೆ ತಡೆದುಬಿಟ್ಟಿತು. ಮೇಘರಾಜ ಇಂದ್ರನು ಚಂಡಮಾರುತದ ಮೂಲಕ ಈ ಮೋಡಗಳನ್ನು ಛೇದಿಸಿ ಮಳೆ ಸುರಿಯುವಂತೆ ಮಾಡಿದನು. ಈ ಚಂಡಮಾರುತವೆಂಬ ವಾದ(Storm Theory)ವನ್ನು ಒಪ್ಪಿಕೊಂಡರೆ, ಪರ್ವತ ಎಂದರೆ ಮೋಡ ಎಂದು ತಿಳಿಯಬೇಕಾಗುತ್ತದೆ. ಈ ಅರ್ಥವು ಅನೇಕ ಕಡೆ ಕಂಡುಬಂದಿದೆ.

ಯ ಈಂಖಯಂತಿ ಪರ್ವತಾನ್ ತಿರಃ ಸಮುದ್ರಮರ್ಣವಂ (i. 19-7)
ಮುಂದುವರೆದು ಮೇಘರಾಜನು (ಇಂದ್ರನು) ವೃತ್ರಾಸುರನನ್ನು ಕೊಂದಮೇಲೆ ಜಲರಾಶಿಯನ್ನು ಬಿಡುಗಡೆಮಾಡಿದನು, ಸೂರ್ಯನನ್ನು ಸೃಷ್ಟಿಸಿದನು ಮತ್ತು ಗೋವುಗಳನ್ನು ಪತ್ತೆಮಾಡಿದನು.

ಎರಡನೆಯದು - ಸೂರ್ಯೋದಯವೆಂಬ ವಾದ (Dawn Theory). ಇದರ ಪ್ರಕಾರ ಇಂದ್ರನೇ ಸೂರ್ಯ. ಕತ್ತಲನ್ನು ನಾಶಪಡಿಸಿ ಬೆಳಕನ್ನು ಪ್ರಪಂಚದಲ್ಲೆಲ್ಲಾ ಹರಡುತ್ತಾನೆ. "ಗೋ" ಅಂದರೆ ಕಿರಣ ಎಂತಲೂ ಅರ್ಥ. ಆದರೆ ಈ ವಾದದಲ್ಲಿ ಸೂರ್ಯನು ನಾಶಪಡಿಸುವುದು ರಾತ್ರಿಯ ಕತ್ತಲನ್ನೇ ಅಥವಾ ಮೇಘಗಳಿಂದ ಉಂಟಾದ ಕತ್ತಲೆಯೇ ಎಂಬುದ ಅಸ್ಪಷ್ಟವಾಗಿದೆ. ಹಾಗೂ ಇಂದ್ರನು ಮಳೆಯ ದೇವತೆಯಾದರೆ ಪರ್ಜನ್ಯ ದೇವತೆಯ ಕೆಲಸವೇನು?

ಮೂರನೆಯದು - Hildebrandt ವಾದ. ಇದರ ಪ್ರಕಾರ ನೀರನ್ನು ತಡೆದಿರುವ ರಾಕ್ಷಸನು ಚಳಿಗಾಲವೆಂಬುದು. ಇವನು ಚಳಿಗಾಲದಲ್ಲಿ ನೀರನ್ನು ಘನೀಭೂತಮಾಡಿ ತಡೆಯುವನು. ಇಂದ್ರನು ಸೂರ್ಯನ ಪರವಾಗಿ ಬಂದು ನೀರನ್ನು ಹರಿಯುವಂತೆ ಮಾಡುವನು. ಆದರೆ ಈ ವಾದವು ಉಷ್ಣಪ್ರದೇಶಕ್ಕೆ ಸರಿಹೊಂದುವುದಿಲ್ಲ.

ಯಃ ಶಂಬರಂ ಪರ್ವತೇಷು ಕ್ಷಿಯಂತಂ ಚತ್ವಾರಿಂಶ್ಯಾಂ ಶರದ್ಯನ್ವವಿಂದತ್ |
ಓಜಾಯಮಾನಂ ಯೋ ಅಹಿಂ ಜಘಾನ ದಾನುಂ ಶಯಾನಂ ಸಜನಾಸ ಇಂದ್ರಃ || (ii. 12-11)

ಇಂದ್ರನು ಪರ್ವತಗಳಲ್ಲಿ ಅಡಗಿದ್ದ ರಾಕ್ಷಸನನ್ನು 40ನೇ ವರ್ಷದಲ್ಲಿ ಕೊಂದನು ಎಂದಿದೆ. ಇದು ಯಾವ ಕಾಲದಿಂದ 40ನೇ ವರ್ಷ? ಇದಕ್ಕೆ ಪುರಾಣದಲ್ಲಿ ಒಂದು ಕಥೆಯುಂಟು - ಇಂದ್ರನು 100 ಅಶ್ವಮೇಧಯಾಗಗಳನ್ನು ಮಾಡಿ ಇಂದ್ರಪದವಿಯನ್ನು ಪಡೆದನು. ಅದೇ ಸಂದರ್ಭದಲ್ಲಿ ಪರ್ವತಗಳ ಹಾವಳಿ ಹೆಚ್ಚಾಯಿತು. ಆ ಕಾಲದಲ್ಲಿ ಪರ್ವತಗಳಿಗೆಲ್ಲಾ ರೆಕ್ಕೆಗಳಿದ್ದವು. ಅವು ಮನಸ್ಸುಬಂದಲ್ಲಿ ಹಾರಿಹೋಗಿ ಕುಳಿತು ಹಾವಳಿಯನ್ನುಂಟುಮಾಡುತ್ತಿದ್ದವು. ಆಗ ಇಂದ್ರನು ವಜ್ರಾಯುಧದಿಂದ ರೆಕ್ಕೆಗಳನ್ನು ಕತ್ತರಿಸಿದನು. ಈ ಘಟನೆಯು ಇಂದ್ರನು ಇಂದ್ರಪದವಿಯನ್ನು ಪಡೆದ 40ನೆ ವರ್ಷದಲ್ಲಿಯೇ ನಡೆದ ಸಂಗತಿ ಎಂದು ಪುರಾಣದಲ್ಲಿ ವಿವರಿಸಿದೆ. ಈ ಮಂತ್ರದಲ್ಲಿರುವ 40ನೆಯ ವರ್ಷವು ಇದಕ್ಕೆ ಸಂಬಂಧಿಸಿರಬಹುದು.

ಬಾಲಗಂಗಾಧರ ತಿಲಕರು ತಮ್ಮ "Arctic Home" (ಧ್ರುವಪ್ರದೇಶನಿವಾಸಸ್ಥಾನ) ಕೃತಿಯಲ್ಲಿ ಈ ಸಂದರ್ಭಕ್ಕೆ ಬೇರೆ ಅಭಿಪ್ರಾಯವನ್ನು ನೀಡಿದ್ದಾರೆ. ಈ ಇಂದ್ರಾಸುರರ ಯುದ್ಧವು ಕತ್ತಲೆ-ಬೆಳಕುಗಳ ಯುದ್ಧಕ್ಕೆ ಸಂಬಂಧಿಸಿದುದು. ಧ್ರುವಪ್ರದೇಶದಲ್ಲಿ ದೀರ್ಘಕಾಲ ಕತ್ತಲಿರುತ್ತದೆ ಹಾಗೂ ಸಂಧ್ಯಾಕಾಲವೂ ದೀರ್ಘವಾಗಿರುತ್ತದೆ. ಮಂತ್ರದಲ್ಲಿ ಹೇಳಲ್ಪಟ್ಟಿರುವ ಜಲ ಎಂಬುದು ಮೊಡದಿಂದ ಅಥವಾ ನದಿಗಳಲ್ಲಿ ಹರಿಯುವ ನೀರಲ್ಲ. ಇದು ಪ್ರಪಂಚವನ್ನು ಎಲ್ಲೆಡೆಯೂ ಆವರಿಸಿರುವ ನೀರು.

ಪುರಾಣಗಳಲ್ಲಿ - ನಮ್ಮ ಈ ಭೂಗೋಳವು ಒಂದು ಜಲಗೊಳದಿಂದ ಆವೃತವಾಗಿದೆ. ಇದರ ಸುತ್ತಲೂ ವಾಯು, ವಾಯುವಿನ ಸುತ್ತಲೂ ಆಕಾಶ ಎಂದು ಹೇಳಿದೆ. ಜಲವೆಂದರೆ ಭೂಮಿಯನ್ನು ಆವರಿಸಿರುವ ಈ ಜಲಗೋಳ ಪ್ರಪಂಚದಲ್ಲಿ ಕತ್ತಲು-ಬೆಳಕು ಎನ್ನುವುದು ಸೂರ್ಯ-ಚಂದ್ರರ ಚಲನೆಯಿಂದಾಗುತ್ತದೆ. ತಿಲಕರ ಪ್ರಕಾರ ಈ ಸೂರ್ಯ-ಚಂದ್ರರ ಚಲನೆಗಳು ಈ ಜಲರಾಶಿಯ ಚಲನೆಯನ್ನಾಶ್ರಯಿಸಿವೆ. ಈ ಜಲರಾಶಿಯ ಚಲನೆಯು ಈ ರಾಕ್ಷಸನಿಂದ ತಡೆಯಲ್ಪಟ್ಟಿತ್ತು. ಎಂದರೆ, ಇವನ ದೌರ್ಜನ್ಯದಿಂದ ಪ್ರಪಂಚಕ್ಕೆ ಆದ ಹಾನಿಯನ್ನು ಊಹಿಸಲಸಾಧ್ಯ. ಇಂದ್ರನು ಈ ರಾಕ್ಷಸನನ್ನು ಸಂಹಾರಮಾಡಿ ಜಲರಾಶಿಯು ಚಲಿಸುವಂತೆ ಮಾಡಿ ಪ್ರಪಂಚಕ್ಕೆ ಮಹದುಪಕಾರವನ್ನು ಮಾಡಿದನು. ಹೀಗಾಗಿ ಇಂದ್ರನ ಸಾಹಸಗಳಲ್ಲೆಲ್ಲಾ ಇದನ್ನೇ ಅತಿ ಮುಖ್ಯವೆನ್ನುವರು.

ಸೋಮ -
ಋಗ್ವೇದದಲ್ಲಿ ಅಗ್ನಿ, ಇಂದ್ರರುಗಳನ್ನು ಬಿಟ್ಟರೆ ಸೋಮನೇ ಹೆಚ್ಚು ಪ್ರಸಿದ್ಧ ದೇವತೆ. 9ನೇ ಮಂಡಲವು ಸಂಪೂರ್ಣವಾಗಿ ಈ ದೇವತೆಗೆ ಮೀಸಲಾಗಿದೆ. ಇಂದ್ರನನ್ನೂ ಅಗ್ನಿಯನ್ನೂ ಆಹ್ವಾನಿಸುವಾಗ ಸೋಮಪಾನಕ್ಕೆ ಬರಬೇಕೆಂದು ಕವಿಯು ಪ್ರಾರ್ಥಿಸುತ್ತಾನೆ. ಈ ಸೋಮಲತೆಯು ಮೊದಲು ಸ್ವರ್ಗದಲ್ಲಿತ್ತೆಂದೂ ಬಳಿಕ ಭೂಮಿಗೆ ಬಂದಿತೆಂದು ವರ್ಣಿಸಲಾಗಿದೆ. ಭೂಮಿಯಲ್ಲಿ ಇದು ಪರ್ವತಶಿಖರಗಳಲ್ಲಿ ದೊರಕುವುದು. ಇದನ್ನು ತಂದು ಕಲ್ಲುಗಳಿಂದ ಜಜ್ಜಿದಾಗ ಅದರಿಂದ ರಸ ಹೊರಬರುವುದು. ಈ ರಸವನ್ನೇ ಅಮೃತವೆಂದು ಬಣ್ಣಿಸಿರುವರು. ಈ ಸೋಮದ ವ್ಯಾಧಿಹರ ಗುಣವು, ಅಮರತ್ವವನ್ನು ನೀಡುವ ಗುಣವನ್ನು ಋಗ್ವೇದದಲ್ಲಿ ವರ್ಣಿಸಲಾಗಿದೆ. ಸೋಮಸಂಬಂಧದ ಯಾಗಗಳು ಅನೇಕ ಹಾಗೂ ಮುಖ್ಯವಾದದ್ದು.

ಋಗ್ವೇದದ 10ನೇ ಮಂಡಲದ ಕೆಲವು ಸೂಕ್ತಗಳಲ್ಲಿ, ಕೃಷ್ಣಯಜುರ್ವೇದ ಹಾಗೂ ಅಥರ್ವವೇದದಲ್ಲಿಯೂ ಸೋಮನೆಂದರೆ ಔಷಧಿಗಳಿಗೆ ಸ್ವಾಮಿಯಾದ ಚಂದ್ರನೆಂದು ವರ್ಣಿಸಲಾಗಿದೆ. 9ನೇ ಮಂಡಲದಲ್ಲಿ ಇದರ ಬಗ್ಗೆ ವಿಸ್ತಾರವಾಗಿ ವಿವರಣೆಯಿರುವುದು.

ವಿಷ್ಣು
ಋಗ್ವೇದದಲ್ಲಿ ವಿಷ್ಣು ಪರವಾದ ಮಂತ್ರಗಳು ತೀರಾ ಕಡಿಮೆ. ವಿಷ್ಣುವನ್ನು ಇತರೆ ದೇವತೆಗಳೊಂದಿಗೆ ಸ್ತುತಿಸಿರುವರು. ಇಂದ್ರಾವಿಷ್ಣು, ಅಗ್ನಾವಿಷ್ಣು ಇತ್ಯಾದಿ. ಪುರಾಣಗಳಲ್ಲಿ ಸರ್ವೋತ್ತಮವಾದ ಸ್ಥಾನವನ್ನು ಕೊಟ್ಟಿದ್ದರೆ, ವೇದಗಳಲ್ಲಿ ಈ ದೇವತೆಗೆ ಸಾಧಾರಣ ಸ್ಥಾನವನ್ನು ನೀಡಲಾಗಿದೆ.

ವಿಷ್ಣುವಿಗೆ "ಶಿಪಿವಿಷ್ಟ" ಎಂಬ ಹೆಸರು ಇದೆ. ಇದರ ಅರ್ಥವೆಂದರೆ "ಅಪ್ರತಿಪನ್ನ ರಶ್ಮಿಃ" - ತಿರೋಹಿತವಾದ ಪ್ರಕಾಶವುಳ್ಳವನು. ಮತ್ತೊಂದು "ಹೆಚ್ಚು ಪ್ರಕಾಶವುಳ್ಳವನು" ಎಂದು.

ವಿಷ್ಣುವಿಗೆ ಇನ್ನೂ ಅನೇಕ ಮಹಿಮೆಗಳನ್ನು ಹೇಳುವರು. ಸ್ವರ್ಗ ಮತ್ತು ಭೂಲೋಕಗಳನ್ನು ಸೃಷ್ಟಿಮಾಡಿದನು. ಭೂತ ಭವಿಷ್ಯತ್ಕಾಲದಲ್ಲಿ ಯಾರಿಗೂ ವಿಷ್ಣುವಿನ ಗುಣಗಳನ್ನು ತಿಳಿಯಲಸಾಧ್ಯ. ಅವನ ಗುಣಗಳಿಗೂ ಸಾಮರ್ಥ್ಯಕ್ಕೂ ಮಿತಿಯೇ ಇಲ್ಲ. ಅವನು ಸರ್ವಾಂತರ್ಯಾಮಿ.

ಉಷಸ್ಸು
ಋಗ್ವೇದದಲ್ಲಿ ಈ ದೇವತೆಯನ್ನುದ್ದೇಶಿಸಿರುವ ಮಂತ್ರಗಳಷ್ಟು ಉತ್ಕೃಷ್ಟವಾದ ಮತ್ತು ಸುಂದರವಾದ ಮಂತ್ರಗಳು ಎಲ್ಲಿಯೂ ಇಲ್ಲ. ಋಗ್ವೇದದಲ್ಲಿ 20 ಸೂಕ್ತಗಳು ಈ ದೇವತೆಯನ್ನುದ್ದೇಶಿಸಿರುವುದು. ಅವುಗಳಲ್ಲಿ 7ನೇ ಮಂಡಲದಲ್ಲಿ 75ರಿಂದ 81ನೇ ಸೂಕ್ತಗಳು ಈ ದೇವತೆಯ ಪರವಾಗಿದೆ. "ಈ ಸ್ಫುರದ್ರೂಪಿಯಾದ ದೇವತೆಯು ಆಕಾಶಕ್ಕೆ ಪುನಃ ಜೀವಕಳೆಯನ್ನು ಕೊಟ್ಟು ದಿಗಂತದವರೆಗೂ ವ್ಯಾಪಿಸುತ್ತಾಳೆ." (ಋಗ್ವೇದ iii.61-4)

ಉಷಸ್ಸು ಆಕಾಶದ (ದ್ಯೌ) ಮಗಳು ಹಾಗೂ ರಾತ್ರಿಯ ಸೋದರಿ. ಸೂರ್ಯನು ಇವಳ ಪ್ರಿಯನು. ಇವಳು ಪ್ರಪಂಚದ ಅಧಿದೇವತೆ. ಬೆಲೆಬಾಳುವ ವಸ್ತುಗಳನ್ನು ಧರಿಸಿಕೊಂಡು ಹಸನ್ಮುಖಳಾಗಿ ಪ್ರೇಕ್ಷಕರ ಕಣ್ಮನಗಳಿಗೆ ಅನಂದವನ್ನುಂಟುಮಾಡುತ್ತಾಳೆ. ಅಂಧಕಾರವನ್ನು ಪರಿಹಾರಮಾಡಿ, ಎಲ್ಲರನ್ನೂ ಎಚ್ಚರಿಸಿ ತಮ್ಮ ಕೆಲಸಗಳಲ್ಲಿ ತೊಡಗುವಂತೆ ಮಾಡುತ್ತಾಳೆ. ಪುನಃ ಪುನಃ ಜನಿಸುತ್ತಾಳೆ. ಆದ್ದರಿಂದಲೇ ಆಕೆ ನಿತ್ಯ ಯೌವನೆ. ಆದರೆ ಪುರಾತನಳು, ನಿತ್ಯಳು. ಈಕೆಯೇ ಎಲ್ಲ ಜೀವಿಗಳ ಉಸಿರು.

ಋಗ್ವೇದದಲ್ಲಿ ವರ್ಣಿಸಿರುವ ಇತರೆ ಅಷ್ಟೇನೂ ಮಹತ್ವವಿಲ್ಲದ ದೇವತೆಗಳೆಂದರೆ - ವರುಣ, ಆಶ್ವಿನಿದೇವತೆಗಳು, ಸೂರ್ಯ, ಮಿತ್ರ, ಪುಷನ್, ವಿಷ್ಣು, ಉಷಸ್ಸು. ಈ ದೇವತೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್ ಅವರ "ಋಗ್ವೇದ ಸಂಹಿತಾ" ಕೃತಿಯಲ್ಲಿ ನೋಡಿ.

ಮೂಲ : ಋಗ್ವೇದ ಸಂಹಿತಾ - ಆಸ್ಥಾನ ವಿದ್ವಾನ್ ಶ್ರೀ ಹೆಚ್.ಪಿ.ವೆಂಕಟರಾವ್.



ಕಲ್ಪಸೂತ್ರಗಳು

ಕಲ್ಪಸೂತ್ರಗಳು

ಕಲ್ಪಸೂತ್ರಗಳು ಮಂತ್ರೋಚ್ಚಾರಣೆ ಹಾಗೂ ಯಜ್ಞಾದಿಕರ್ಮಗಳಲ್ಲಿ ಉಪಯುಕ್ತವಾದ ವಿಷಯಗಳನ್ನು ವಿವರಿಸುವುದಕ್ಕಾಗಿ ರಚಿಸಿರುವ ನಿಯಮ ಮತ್ತು ವಿಧಿನಿಷೇಧಗಳನ್ನು ಬೋಧಿಸುವ ಗ್ರಂಥಗಳು ಎನ್ನುವರು.

ಕಲ್ಪಸೂತ್ರಗಳಿಂದ ವೇದಾಧ್ಯಯನ ಮಾಡುವವರಲ್ಲಿ ಒಂದು ಹೊಸ ಯುಗವೇ ಆರಂಭವಾಗಿದೆ ಎಂಬ ಭಾವನೆಯುಂಟಾಗಿ, ವೇದಕ್ಕೆ ಪ್ರಾಮುಖ್ಯತೆ ಕಡಿಮೆಯಾಗಿ ಕಲ್ಪಸೂತ್ರವೇ ಮುಖ್ಯ ಆಧಾರವಾಗತೊಡಗಿತು ಎಂಬ ಅಪವಾದವಿದೆ.

ಕಲ್ಪಸೂತ್ರಗಳನ್ನು ದೈನಂದಿನ ಸಂಧ್ಯಾವಂದನೆಗಳಲ್ಲಿ ಬಳಸುವರೇ? ಬಳಸಿದಲ್ಲಿ ಹೇಗೆ ಬಳಸುವರು? ಅದರ ಬಳಕೆಯು ಇತ್ತೀಚೆಗೆ ಕಡಿಮೆಯಾಗುತ್ತಿದೆಯೇ?

ಕಲ್ಪಸೂತ್ರಗಳು
ಕಲ್ಪಸೂತ್ರಗಳು ಮಂತ್ರೋಚ್ಚಾರಣೆ ಹಾಗೂ ಯಜ್ಞಾದಿಕರ್ಮಗಳಲ್ಲಿ ಉಪಯುಕ್ತ ವಿಷಯಗಳನ್ನು ವಿವರಿಸುವುದು ಹಾಗೂ ನಿಯಮ ಮತ್ತು ನಿಷೇಧ ಇತ್ಯಾದಿಗಳನ್ನು ಬೋಧಿಸುವುದು. ಇವುಗಳಿಗೆ ಅದನ್ನು ರಚಿಸಿದ ಋಷಿಗಳ ಹೆಸರುಗಳಿರುವುದು.

ಅಶ್ವಲಾಯನರು ರಚಿಸಿದ ಸೂತ್ರಕ್ಕೆ ಅಶ್ವಲಾಯನಶ್ರೌತಸೂತ್ರ ಎನ್ನುವರು. ಇದರಲ್ಲಿ ಶ್ರೌತಸೂತ್ರ, ಗೃಹ್ಯಸೂತ್ರ, ಧರ್ಮಸೂತ್ರ, ಶುಲ್ವಸೂತ್ರ ಎಂಬ 4 ಭಾಗಗಳಿವೆ.

ಈ ನಾಲ್ಕು ಸೂತ್ರಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ :

ಶ್ರೌತಸೂತ್ರ - ಇದರಲ್ಲಿ ಯಜ್ಞ ಯಾಗಾದಿಗಳನ್ನು ಮಾಡುವ ಕ್ರಮ ಹಾಗೂ ಅವುಗಳಲ್ಲಿ ಉಪಯೋಗಿಸಬೇಕಾದ ಮಂತ್ರಗಳ ವಿವರಣೆ ಇರುವುದು.

ಗೃಹ್ಯಸೂತ್ರ - ಇದರಲ್ಲಿ ದ್ವಿಜರು (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ಅನುಸರಿಸಬೇಕಾದ ಧರ್ಮನಿಯಮಗಳ ಬಗ್ಗೆ ವಿವರಣೆ ಇರುವುದು.

ಧರ್ಮಸೂತ್ರದಲ್ಲಿ ಜನರು ಆಚರಿಸಬೇಕಾದ ಧರ್ಮನಿಯಮಗಳ ಬಗ್ಗೆ ವಿವರಣೆ ಇರುವುದು.

ಶುಲ್ವಸೂತ್ರ - ಯಜ್ಞದಲ್ಲಿ ಉಪಯುಕ್ತವಾದ - ಅಗ್ನಿಕುಂಡ, ವೇದಿಕೆ, ಯಜ್ಞಸಾಮಗ್ರಿಗಳು ಇತ್ಯಾದಿಗಳನ್ನು ರಚಿಸುವ ಕ್ರಮ, ಪ್ರಮಾಣ ಮುಂತಾದ ವಿಶಯಗಳನ್ನು ವಿವರಿಸಲಾಗಿದೆ.

ಪ್ರತಿಯೊಂದು ವೇದಕ್ಕೂ ಈ ನಾಲ್ಕು ಸೂತ್ರಗಳು ಇದ್ದಿರಬಹುದು, ಆದರೆ, ಈಗ ಕೆಲವು ಮಾತ್ರ ದೊರೆಯುವುದು. ಈ ಸೂತ್ರಗಳು ವೇದಾರ್ಥವನ್ನು ಅರಿತುಕೊಳ್ಳಲು ಸಹಕಾರಿ.

ಈ ಸೂತ್ರಗಳ ಆಧಾರವೇ ಬ್ರಾಹ್ಮಣ. ಸಾಯಣಾಚಾರ್ಯರ ಪ್ರಕಾರ:

ಬೋಧಿತಾನಾಂ ಕರ್ಮಣಾಂ ಸುಖಾವಬೊಧಾಯ ಭಗವಾನ್ ಬೊಧಾಯನಃ ಕಲ್ಪಸೂತ್ರಮಕಲ್ಪಯೇತ್|
ಕಲ್ಪಸೂತ್ರಗಳು ವೇದದ ಪ್ರತಿಯೊಂದು ಶಾಖೆಗೂ ಇರುವುದು. ಇವುಗಳಲ್ಲಿ ಹೋತೃವಿಗೆ ಉಪಯೋಗವಾದದ್ದು - ಅಶ್ವಲಾಯನ ಮತ್ತು ಸಾಂಖ್ಯಾಯನ.

ಅಶ್ವಲಾಯನದಲ್ಲಿ ಎರಡು ಭಾಗಗಳಿದ್ದು ಪ್ರತಿಯೊಂದು ಭಾಗದಲ್ಲೂ 6 ಅಧ್ಯಾಯಗಳಿದ್ದು ಪ್ರತಿ ಅಧ್ಯಾಯದಲ್ಲೂ ಕಂಡಿಕೆಗಳೆಂಬ ಸಣ್ಣ ಭಾಗಗಳಿರುವುದು. ಈ ಸೂತ್ರದಲ್ಲಿ ದರ್ಶ, ಪೌರ್ಣಮಾಸ ಇತ್ಯಾದಿ ಯಾಗಗಳ ವಿವರಣೆ ಇರುವುದು.

ಕೃಷ್ಣಯಜುರ್ವೇದಕ್ಕೆ ಬೋಧಾಯನ ಹಾಗೂ ಅಪಸ್ತಂಬ ಸೂತ್ರಗಳಿವೆ. ಹಾಗೇ ಶುಕ್ಲಯಜುರ್ವೇದಕ್ಕೆ ಕಾತ್ಯಾಯನ ಸೂತ್ರಗಳಿದ್ದು, ಸಾಮವೇದಕ್ಕೆ ಲಾಟ್ಯಾಯನ ಮತ್ತು ದ್ರಾಹ್ಯಾಯಣಗಳು ಇರುವುದು.

ಸಂಧ್ಯಾವಂದನೆಗಳಾದ ಮೇಲೆ, ಗುರುಹಿರಿಯರಿಗೆ ಆಶೀರ್ವಾದ ಬಯಸಿ ನಮಸ್ಕರಿಸುವಾಗ ಈ ಸೂತ್ರಗಳನ್ನು ಅನುಸರಿಸಿ, ಅಶ್ವಲಾಯನ, ಬೋಧಾಯನ, ಆಪಸ್ತಂಬ ಮುಂತಾದ ಶಾಖೆಗಳನ್ನು ಹೇಳುತ್ತಾರೆ. ಇದೇ ರೀತಿಯಾಗಿ ವಿವಾಹ ಕಾರ್ಯದಲ್ಲೂ ಪ್ರವರವನ್ನು ಹೇಳುವರು.

ಉದಾಹರಣೆಗೆ :-

"ಅಂಗೀರಸ, ಆಯಾಸ್ಯ, ಗೌತಮತ್ರಯಾರ್ಷೇಯ, ಗೌತಮ ಸಗೋತ್ರಃ ಬೊಧಾಯನ ಸೂತ್ರಃ ….. (ವೇದ) ಶಾಖಾಧ್ಯಾಯಿ) ಶ್ರೀ…….ಶರ್ಮಣಃ (ಶರ್ಮ ಎಂಬುದನ್ನು ಬ್ರಾಹ್ಮಣರಿಗೂ, ವರ್ಮಾ ಎಂಬುದನ್ನು ಕ್ಷತ್ರಿಯರಿಗೂ ಹಾಗೂ ಗುಪ್ತ ಎಂಬುದನ್ನು ವೈಶ್ಯರಿಗೂ) ಅಹಂಭೋಃ ಅಭಿವಾದಯೇ".

"ಅಂಗೀರಸ, ಬಾರ್ಹಸ್ಪತ್ಯ, ಭಾರದ್ವಾಜ, ಮಾಂತ್ರವರ, ಆತ್ಮಭುವಪಂಚಾರ್ಷೇಯ ಆತ್ಮಭುವಪಂಚಾರ್ಷೇಯ ಸಗೋತ್ರಃ …...ಸೂತ್ರಃ (ವೇದ) …. ಶಾಖಾಧ್ಯಾಯಿ ಶ್ರೀ……..ಶರ್ಮಣಃ ಅಹಂಭೋಃ ಅಭಿವಾದಯೇ".

ಇಂದಿನ ಜನಾಂಗದಲ್ಲಿ ಈ ರೀತಿಯಾಗಿ ಪ್ರವರವನ್ನು ಹೇಳಿಕೊಂಡು ಅಭಿವಾದನ ಮಾಡುವುದು ಬಹುತೇಕವಾಗಿ ತಪ್ಪಿಹೋಗಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ತಮ್ಮ ಗೋತ್ರದ ಮೂಲದಲ್ಲಿನ ಮೂರು ಅಥವಾ ಐದು ಋಷಿಗಳನ್ನು ಅರಿತಿರಬೇಕು ಹಾಗೂ ಇದನ್ನು ಸಕಾಲದಲ್ಲಿ ಬಳಸಬೇಕು, ಅಲ್ಲವೇ? ಇದನ್ನು ಅರಿಯಲು ತಪ್ಪದೆ ಒಂಟಿಕೊಪ್ಪಲ್ ಪಂಚಾಂಗವನ್ನು ವೀಕ್ಷಿಸಬಹುದು. ಅದಕ್ಕೆ ಮೊದಲು ನಿಮ್ಮ ಗೋತ್ರ, ವೇದ, ಸೂತ್ರಗಳ ಬಗ್ಗೆ ಅರಿವಿರಲೇಬೇಕು.

ಪ್ರೇರಣೆ : ಡಾ.ಜಯಂತಿ ಮನೋಹರ ಅವರ ಕೃತಿ - "Symbolism of Rigveda"

ಮುಂದುವರೆಯುವುದು….













ಬ್ರಾಹ್ಮಣ ಮತ್ತು ಅರಣ್ಯಕಗಳಲ್ಲಿ ಕಂಡ ಉಲ್ಲೇಖಗಳು

ಬ್ರಾಹ್ಮಣ ಮತ್ತು ಅರಣ್ಯಕಗಳಲ್ಲಿ ಕಂಡ ಉಲ್ಲೇಖಗಳು

ವೇದಗಳಲ್ಲಿನ ಅನೇಕ ಮಂತ್ರಗಳಲ್ಲಿ ಆಧ್ಯಾತ್ಮಿಕ ಜ್ಞಾನವು ಒಳಗೊಂಡಿರುವುದು. ವೇದಮಂತ್ರಗಳಲ್ಲಿನ ಆಧ್ಯಾತ್ಮಿಕ-ಮಾನಸಿಕ ಅರ್ಥಗಳನ್ನು ಬ್ರಾಹ್ಮಣ ಗ್ರಂಥಗಳಲ್ಲಿ ಸಂಕೇತರೂಪಗಳಲ್ಲಿ ಗುರುತಿಸಿ ಮತ್ತು ದಾಖಲಿಸಿರುವುದು ಆಸಕ್ತಿಯನ್ನು ಹುಟ್ಟಿಸುವುದು. ಈ ಸಾಂಕೇತಿಕ ರೂಪಗಳನ್ನು ಸಂಹಿತೆಗಳೊಂದಿಗೆ ಅನುಸರಿಸಬಹುದಾದ ಪಠ್ಯಗಳ ರೂಪದಲ್ಲಿ ಅಭಿವೃದ್ಧಿಪಡಿಸಲಾಗಿದೆ. ವೇದ ಗ್ರಂಥ ಸಂಗ್ರಹದಲ್ಲಿ ಸಂಹಿತೆ ಮತ್ತು ಬ್ರಾಹ್ಮಣ ಪಠ್ಯಗಳ ನಂತರ ಅರಣ್ಯಕಗಳು ಕಂಡುಬರುವುದು.

ವೇದಸಂಹಿತೆಗಳ ಆಧ್ಯಾತ್ಮಿಕ ವ್ಯಾಖ್ಯಾನಗಳನ್ನು ಪುನರ್ನಿರ್ಮಿಸಲು ವೇದಕಾಲೋತ್ತರದ ಅನೇಕ ಋಷಿಮುನಿಗಳು ಮತ್ತು ಆಚಾರ್ಯರುಗಳು ಮೂರು ಮಹಾನ್ ಪ್ರಯತ್ನವನ್ನು ಮಾಡಿರುವುದನ್ನು ಶ್ರೀ ಅರವಿಂದರು ಗುರುತಿಸಿರುವರು. ಅವುಗಳಲ್ಲಿ ಬ್ರಾಹ್ಮಣ ಗ್ರಂಥಗಳ ಕಾಲವು ಮೊದಲನೆಯದು. ಉಪನಿಷತ್ತುಗಳು ಮತ್ತು ಭಗವದ್ಗೀತೆಯ ಕಾಲಗಳು ಕ್ರಮವಾಗಿ ಎರಡನೆಯ ಹಾಗೂ ಮೂರನೆಯ ಕಾಲಗಳು. ಋಗ್ವೇದ ಮಂತ್ರಗಳಲ್ಲಿ ಕಂಡುಬರುವ ಆಧ್ಯಾತ್ಮಿಕ ವ್ಯಾಖ್ಯಾನಗಳ ಸಂಪ್ರದಾಯಗಳನ್ನು ಬ್ರಾಹ್ಮಣ, ಅರಣ್ಯಕ, ಉಪನಿಷತ್ತು, ಮಹಾಭಾರತಗಳಲ್ಲಿ ಮುಂದುವರೆಸಿರುವುದರ ಬಗ್ಗೆ ಅನೇಕ ಉಲ್ಲೇಖಗಳನ್ನು ಕಪಾಲಿ ಶಾಸ್ತ್ರಿಗಳು ಉದ್ಧರಿಸಿರುವರು.

ಬ್ರಾಹ್ಮಣ ಗ್ರಂಥಗಳಲ್ಲಿನ ಅನೇಕ ಉದ್ಧೃತ ಭಾಗಗಳು ವೇದಮಂತ್ರಗಳಲ್ಲಿನ ಅರ್ಥಗಳ ಬಗ್ಗೆ ವಿವರಣೆಗಳನ್ನು ಅವುಗಳ ವಿನಿಯೋಗದೊಂದಿಗೆ ನೀಡುತ್ತವೆ. ಬೇರೆ ಬೇರೆ ಯಜ್ಞಗಳಲ್ಲಿ ಅನುಸರಿಸುವ ವಿಧಿ-ವಿಧಾನಗಳ ನಡುವೆ ಕಂಡುಬರುವ ಆತ್ಮ ಮತ್ತು ವಿಶ್ವಗಳ ಬಗ್ಗೆ ಬ್ರಾಹ್ಮಣ ಗ್ರಂಥಗಳಲ್ಲಿ ಚರ್ಚೆಗಳನ್ನು ನಾವು ಕಾಣಬಹುದು. ಈ ಚರ್ಚೆಗಳು ನಮ್ಮನ್ನು ದೇವತೆಗಳು ಮತ್ತು ಯಜ್ಞಗಳ ಮಾನಸಿಕ ಅಂಶಗಳೆಡೆಗೆ ಕೊಂಡೊಯ್ಯುವುದು. ಇವುಗಳು ಯಾಸ್ಕ ಮುನಿಗಳು ತಮ್ಮ ನಿರುಕ್ತದಲ್ಲಿ ಉಪಯೋಗಿಸಿರುವ ವೇದ ಪದಗಳ ವ್ಯುತ್ಪತ್ತಿಯ ಹಿನ್ನೆಲೆಯನ್ನು ಪ್ರಕಟಪಡಿಸುವುದು. ಅಂತಿಮ ಸತ್ಯದ ಬಗೆಗಿನ ಆಧ್ಯಾತ್ಮಿಕ ಚರ್ಚೆಗಳ ಬಗ್ಗೆ ಅನೇಕ ಉದ್ಧೃತ ಭಾಗಗಳನ್ನು ಬ್ರಾಹ್ಮಣ ಗ್ರಂಥಗಳಲ್ಲಿ ಕಾಣಬಹುದು.

ವೇದಗಳಲ್ಲಿನ ನೈಜ ಇಂಗಿತಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದೃಢಪಡಿಸಲು ಕಪಾಲಿ ಶಾಸ್ತ್ರಿಗಳು ಬ್ರಾಹ್ಮಣ ಗ್ರಂಥಗಳಿಂದ ಅನೇಕ ಉದ್ಧೃತ ಭಾಗಗಳನ್ನು ಉಲ್ಲೇಖಿಸಿರುವರು. ಅವುಗಳ ಪ್ರಕಾರ ಯಜ್ಞದಲ್ಲಿ ಯಜಮಾನನು ಸ್ವತಃ ತನ್ನನ್ನೇ ಹವಿಸ್ಸನ್ನಾಗಿ ಅರ್ಪಿಸುವನು, ಇದು ಅಂತರ್ಯಜ್ಞದ ಪರಿಕಲ್ಪನೆಯನ್ನು ಸಮರ್ಥಿಸುತ್ತದೆ.

ಐತರೇಯ ಬ್ರಾಹ್ಮಣದಲ್ಲಿನ ಹೇಳಿಕೆ : ಯಜಮಾನೋ ವೈ ಯೂಪಃ
"ಯಜಮಾನನೇ ಬಲಿಪೀಠ - ಯೂಪ. ಅವನೇ ಕಲ್ಲು ಅಥವಾ ಬಂಡೆ. ಅಗ್ನಿಯು ದೇವತೆಗಳ ಗರ್ಭಾಶಯ. ಅಗ್ನಿಯ ಮೂಲಕ ನೀಡಿದ ಹವಿಸ್ಸುಗಳಿಂದ ಜನಿಸಿದ ಯಜಮಾನನು ತನ್ನ ಸ್ವರ್ಣಶರೀರದೊಂದಿಗೆ ಸ್ವರ್ಗದೆಡೆಗೆ ಉರ್ಧ್ವಮುಖವಾಗಿ ಹೊರಡುವನು." ಮುಂದುವರೆದು ಅದು,"ಯಾರು ತಮ್ಮನ್ನೇ ದೇವತೆಗಳಿಗೆ (ಇಲ್ಲಿ ಅಗ್ನಿಯೇ ಎಲ್ಲ ದೇವತೆಗಳನ್ನೂ ಪ್ರತಿನಿಧಿಸುವನು) ಅರ್ಪಿಸಿಕೊಳ್ಳುವರೋ, ಅವರು ಸ್ವರ್ಗದೆಡೆಗೆ ಹೋಗುವರು."

ಕೌಷಿತಕ ಬ್ರಾಹ್ಮಣದಲ್ಲೂ ಇದೇ ರೀತಿಯ ಹೇಳಿಕೆಯು ಕಂಡುಬರುವುದು : "ಯಾರು ತಮ್ಮನ್ನೇ ಅರ್ಪಿಸಿಕೊಳ್ಳುವರೋ ಅವರು ಅಗ್ನಿ ಹಾಗೂ ಸೋಮರುಗಳನ್ನು ಪ್ರವೇಶಿಸುವರು; ಉಪವಾಸದ ದಿನ ತಮ್ಮನ್ನೇ ಪಶುವನ್ನಾಗಿ ಅರ್ಪಿಸಿಕೊಂಡಲ್ಲಿ ಅವರು ತಮ್ಮನ್ನೇ ವಿಮೋಚನೆಗೊಳಿಸಿಕೊಳ್ಳುವರು. ಈ ರೀತಿಯಾಗಿ ಎಲ್ಲ ಬಂಧನಗಳಿಂದ ವಿಮೋಚನೆಗೊಂಡು, ಯಜಮಾನನು ಯಜ್ಞವನ್ನು ಮುಂದುವರಿಸುವನು"(10.3).

ಬೇರೆ ಬೇರೆ ಬ್ರಾಹ್ಮಣ ಗ್ರಂಥಗಳಲ್ಲಿ ಕಂಡುಬರುವ ಈ ರೀತಿಯ ಉದ್ಧೃತಗಳು ಯಜ್ಞದ ಸಾಂಕೇತಿಕ ಗುಣಗಳನ್ನು ಸ್ಪಷ್ಟವಾಗಿ ತೋರ್ಪಡಿಸುವುದು.

ಶತಪಥ ಬ್ರಾಹ್ಮಣದಲ್ಲಿನ ಹೇಳಿಕೆಯನ್ನು ಗಮನಿಸೋಣ:

ತದೇಷ ಶ್ಲೋಕೋ ಭವತಿ ವಿಧ್ಯಯಾ ತದರೋಹಂತಿ ಯತ್ರ ಕಾಮಃ ಪರಾಗತಾಃ ನ ತತ್ರ ದಕ್ಷಿಣಾ ಯಾಂತಿ ನಾವಿದ್ವಾoಸಸ್ತಪಸ್ವಿನಃ ಇತಿ ನ ಹೈವ ತಂ ಲೋಕಂ ದಕ್ಷಿಣಾಭಿರ್ನ ತಪಸಾ ಅನೇವಂಬಿದ್ ಅಷ್ಮುತಾ ಏವಂಬಿದಮ್ ಹೈವ ಸ ಲೋಕಃ ಶತಪಥಬ್ರಾಹ್ಮಣೇ|

"ಇದೇ ನಿರ್ಣಯ(ಶ್ಲೋಕ). ಎಲ್ಲಿ ಆಸೆಗಳನ್ನು ಬಿಡುವರೋ ಅಲ್ಲಿಂದ ಅವರು ತಮ್ಮಲ್ಲಿನ ಜ್ಞಾನದೊಂದಿಗೆ ಮೇಲೇರುವರು. ಅಲ್ಲಿಗೆ ಜ್ಞಾನವಿಲ್ಲದೆ ಆಹುತಿಗಳು ತಲಪುವುದಿಲ್ಲ."

ಹಾಗೆಯೇ ಋಷಿಮುನಿಗಳು ಮತ್ತು ವೇದ ದೇವತೆಗಳಿಗೆ ಸಾಂಕೇತಿಕ ವಿವರಣೆಗಳನ್ನು ಶತಪಥ ಬ್ರಾಹ್ಮಣದಲ್ಲಿ ಕಾಣಬಹುದು.

8-1-1-6 ಪ್ರಾಣವೇ ವಶಿಷ್ಠ - ಪ್ರಾಣೋ ವೈ ವಶಿಷ್ಠ ಋಷಿಃ
8-1-1-9 ಮನಸ್ಸೇ ಭಾರದ್ವಾಜ ಋಷಿ - ಮನೋ ವೈ ಭರದ್ವಾಜೋ ಋಷಿಃ
8-1-2-6 ಕಿವಿಗಳೇ ವಿಶ್ವಾಮಿತ್ರ ಋಷಿ - ಶ್ರೋತ್ರಂ ವೈ ವಿಶ್ವಾಮಿತ್ರ ಋಷಿಃ
8-1-2-3 ಜಮದಗ್ನಿ ಋಷಿಯೇ ಪ್ರಜಾಪತಿ - ಪ್ರಜಾಪತಿ ವೈ ಜಮದಗ್ನಿ ಋಷಿಃ
8-1-2-9 ಮಾತುಗಳೇ ವಿಶ್ವಕರ್ಮಾ ಋಷಿ - ವಾಗ್ವೈ ವಿಶ್ವಕರ್ಮಾ ಋಷಿಃ

ಯಾಸ್ಕಾಚಾರ್ಯರ ನಿರುಕ್ತದಲ್ಲೂ ಇದೇ ರೀತಿಯ ನಿರ್ವಚನಗಳನ್ನು ಕಾಣಬಹುದು:

ಮೇಧಾವಿನಾಮಾನ್ಯುತ್ತರಾಪಿ ಚತುರ್ವಿಂಶತಿಃ|
ಕಣ್ವ ಇತಿ ಮೇಧಾವಿನಾಮ|
ಗೃತ್ಸ್ನ ಇತಿ ಮೇಧಾವಿನಾಮ| ಋಭುಃ ಇತಿ ಮೇಧಾವಿನಾಮ|

"ಕಣ್ವ ಎಂದರೆ ಬುದ್ಧಿಜೀವಿಗಳು, ಗೃತ್ಸ್ನ ಮತ್ತು ಋಭು ಎಂದರೆ ಹೆಚ್ಚಿನ ಬೌದ್ಧಿಕ ಶಕ್ತಿಯನ್ನು ಹೊಂದಿರುವ ಜನಗಳು (ಋಷಿಗಳು)."

ವೇದಗಳಲ್ಲಿ ಉಲ್ಲೇಖಿಸಲಾದ 33 ದೇವ-ದೇವತೆಗಳನ್ನೂ ಶತಪಥ ಬ್ರಾಹ್ಮಣದಲ್ಲಿ ಸಾಂಕೇತಿಕವಾಗಿ ವಿವರಿಸಲಾಗಿದೆ :

ಕತಮೆ ತೇ ತ್ರಯತ್ರಿಂಶತ್ ಇತಿ ಅಷ್ಟೌ ವಸವಃ|
ಏಕಾದಶಃ ರುದ್ರಾಃ ದ್ವಾದಶಾದಿತ್ಯಾಃ ತ ಏಕತ್ರಿಂಶತ್ ಇಂದ್ರಶ್ಚೈವ ಪ್ರಜಾಪತಿಶ್ಚ ತ್ರಯಸ್ತ್ರಿಂಶಾವಿತಿ||

ಕತಮೇ ವಸವಃ ಇತಿ| ಅಗ್ನಿಶ್ಚ ಪೃಥಿವೀ ಚ ವಾಯುಶ್ಚಾಂತರಿಕ್ಷಂ ಚಾದಿತ್ಯಶ್ಚ ಘೌಶ್ವ ಚಂದ್ರಮಾಶ್ವ ನಕ್ಷತ್ರಾಣಿ ಚೈತೆ ವಸವ ಏತೇಷು ಹಿದಂ ಸರ್ವೇ ವಸುಹಿತಂ ಏತೇ ಹಿದಂ ಸರ್ವೇ ವಾಸಯಂತೆ ತಧ್ಯದಿದಂ ಸರ್ವಂ ವಾಸಯಂತೆ ತಸ್ಮಾದ್ ವಸವ ಇತಿ| ಕತಮೆ ರುದ್ರ ಇತಿ| ಕತಮ ಏಕೋ ದೇವ ಇತಿ ಸ ಬ್ರಹ್ಮೋsತ್ಯಾದಿತ್ಯಾ ಚಾತ್ರತೆ || ಶತಪಥ ಬ್ರಾಹ್ಮಣೇ

"ಅಗ್ನಿ, ಪೃಥ್ವಿ, ವಾಯು, ಅಂತರಿಕ್ಷ, ಆದಿತ್ಯ, ದ್ಯೌಃ, ಚಂದ್ರಮಾ ಮತ್ತು ನಕ್ಷತ್ರಗಳನ್ನು ಅಷ್ಟವಸುಗಳೆಂದು ಕರೆಯಲಾಗುವುದೇಕೆಂದರೆ ಅವುಗಳು ಸಮಸ್ತ ಸೃಷ್ಟಿಗಳ ವಾಸಸ್ಥಾನವಾಗಿರುವುದರಿಂದ. ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು ಮತ್ತು ಆತ್ಮ ಸೇರಿ ಅವುಗಳನ್ನು ಏಕಾದಶರುದ್ರರೆಂದು ಕರೆಯಲಾಗುವುದು. ಹನ್ನೆರಡು ಮಾಸಗಳೇ ದ್ವಾದಶ ಆದಿತ್ಯರುಗಳು, ಇಂದ್ರನೇ ವಿದ್ಯುಶ್ಚಕ್ತಿ (ಸ್ಥಾನಯೀತುನಃ), ಪ್ರಜಾಪತಿಯೇ ಸೃಜನಶೀಲ ಶಕ್ತಿ ಮತ್ತು ಇವೆಲ್ಲ ದೇವತೆಗಳನ್ನೂ ನಿಯಂತ್ರಿಸುವವನೇ ಬ್ರಹ್ಮನ್".

ಬ್ರಾಹ್ಮಣ ಗ್ರಂಥಗಳಲ್ಲಿ ಅನೇಕ ದೊಡ್ಡದಾದ ಮತ್ತು ಸಣ್ಣ ಪುಟ್ಟ ಆಖ್ಯಾಯಿಕಗಳು ಇರುವುದು. ಇವುಗಳನ್ನು ನೈಜ ಘಟನೆಗಳೆಂದು ಪರಿಗಣಿಸಲಾಗುವುದಿಲ್ಲ. ಇಂತಹ ಆಖ್ಯಾಯಿಕೆಗಳಲ್ಲಿ ಆಚಾರ್ಯರು ದೇವರು ಮತ್ತು ಮಾನಸಿಕ ತತ್ತ್ವಗಳ ನಿಗೂಢಾರ್ಥಗಳನ್ನು ಗುಪ್ತವಾಗಿ ಅಳವಡಿಸಿರುವರು. ತಾಂಡ್ಯ ಬ್ರಾಹ್ಮಣದಲ್ಲಿ ಇಂತಹ ಆಖ್ಯಾಯಿಕೆಗಳನ್ನು ಗಮನಿಸಬಹುದು. ಉದಾಹರಣೆಗೆ - ಒಂದು ಘಟನೆಯಂತೆ ವಾಗ್ದೇವತೆಯು ದೇವತೆಗಳನ್ನು ತ್ಯಜಿಸಿ ನೀರೊಳಗೆ ಮತ್ತು ವನಸ್ಪತಿಗಳೊಳಗೆ ಪ್ರವೇಶಿಸಿದಳು (6-5-10-12) ಎಂಬುದಾಗಿ. ಮತ್ತೊಂದು ಕಥೆಯ ಪ್ರಕಾರ ಯಾಗ ಶಾಲೆಯಿಂದ ಯಜ್ಞನು ಅಶ್ವರೂಪವನ್ನು ತಾಳಿ ದೇವತೆಗಳಿಂದ ಓಡಿಹೋದನು (ತಾಂಡ್ಯ ಬ್ರಾಹ್ಮಣ (6-7-18) ಎಂದು.

ಶತಪಥ ಮತ್ತು ಐತರೇಯ ಬ್ರಾಹ್ಮಣಗಳಲ್ಲಿ (2-1-6-8 ಮತ್ತು 1-4-23, 6-2-11) ದೇವ-ದಾನವರ ನಡುವಿನ ಯುದ್ಧಗಳ ಬಗ್ಗೆ ವಿವರಗಳಿರುವುದು. ಇವುಗಳನ್ನು ಭೂಮಿಯ ಮೇಲಾಗಲಿ ಅಥವಾ ಅಂತರಿಕ್ಷಾದಲ್ಲಾಗಲಿ ನಡೆದ ಯುದ್ಧಗಳ ದಾಖಲೆಗಳನ್ನಾಗಿ ಪರಿಗಣಿಸಲಾಗುವುದಿಲ್ಲ. ಈ ರೀತಿಯ ಘಟನೆಗಳನ್ನು ಅನುಗುಣವಾದ ವೇದ ಮಂತ್ರಗಳಿಂದ ಆಮದಾದ ವಿಷಯಗಳೆಂದು ಪರಿಗಣಿಸಬಹುದು ಹಾಗೂ ಈ ವಿಷಯಗಳನ್ನು ಸಾಂಕೇತಿಕವಾಗಿ ಗಮನಿಸಿದಾಗ ಆ ಘಟನೆಗಳ ಅಂತರಂಗದ ಸಂಘಟಿತ ಅರ್ಥವು ಹೊಳೆಯುವುದು. ಶತಪಥ ಬ್ರಾಹ್ಮಣದಲ್ಲಿ ಒಂದು ಅಸಕ್ತಿಯುತವಾದ ಕಥೆಯೆಂದರೆ - ಮನಸ್ಸು ಮತ್ತು ಮಾತುಗಳ ನಡುವೆ ನಡೆದ ವಾದ-ವಿವಾದಗಳು. ಇದು ಅನೇಕ ಮಾನಸಿಕ ಒಳನೋಟಗಳನ್ನು ಬಹಿರಂಗಪಡಿಸುತ್ತದೆ. ಇದೇ ರೀತಿಯ ಅಲೋಚನೆಗಳು ಐತರೇಯ ಬ್ರಾಹ್ಮಣದಲ್ಲೂ ಕಂಡುಬರುವುದು. ಅದರ ಪ್ರಕಾರ, "ಶ್ರದ್ಧಾ ಮತ್ತು ಸತ್ಯ, ಇವೆರಡರ ಜಂಟಿ ಪ್ರಯತ್ನಗಳಿಂದ ಸಾಧಕನು ಸ್ವರ್ಗವನ್ನು ಹೊಂದಬಹುದು." ಎಂದು:

ಶ್ರದ್ಧಾ ಪತ್ನಿ ಸತ್ಯಂ ಯಜಮಾನಃ| ಶ್ರದ್ಧಾ ಸತ್ಯಂ ತದಿತ್ಯುತ್ತಮಂ ಮಿಥುನಮ್|
ಶ್ರದ್ಧಾ ಸತ್ಯೇನ ಮಿಥುನೇನ ಸ್ವರ್ಗಾನ್ ಲೋಕಾನ್ ಜಯತೀತಿ|| (ಐ.ಬ್ರಾ.)

ಬ್ರಾಹ್ಮಣ ಗ್ರಂಥಗಳ ಪ್ರಮುಖ ಉದ್ದೇಶವು ವಿವಿಧ ಯಜ್ಞಗಳಲ್ಲಿನ ಪ್ರಕ್ರಿಯೆ ಹಾಗೂ ಕಾರ್ಯವಿಧಾನಗಳ ಬಗ್ಗೆ ವಿವರಿಸುವುದಾದರೂ, ಅವುಗಳಲ್ಲಿ ಯಜ್ಞಕ್ಕೆ ಸಂಬಂಧಿಸಿದ ವಿವಿಧ ಅರ್ಥಗಳನ್ನು ಕಾಣಬಹುದು. ಶತಪಥ ಬ್ರಾಹ್ಮಣದಲ್ಲಿ - "ಪ್ರಜಾಪತಿಯೇ ಯಜ್ಞ, ಏಷ ವೈ ಪ್ರತ್ಯಕ್ಷಂ ಯಜ್ಞೋಯತ್ ಪ್ರಜಾಪತಿಃ| (4-3-4-3) ಮತ್ತು "ಯಜ್ಞವೇ ವಿಷ್ಣು ಹಾಗೂ ಆದಿತ್ಯ., ಯಜ್ನೋ ವೈ ವಿಷ್ಣುಃ| ಸ ಯಃ ಯಾಜ್ನೋsಸೌ ಆದಿತ್ಯಃ| (14-1-1-16), "ಯಜ್ಞವನ್ನು ಆಚರಿಸುವುದು ಉತ್ತಮ ಕಾರ್ಯ", ಯಜ್ನೋ ವೈ ಶ್ರೇಷ್ಠತಮಂ ಕರ್ಮ (1-7-3-5). ಒಟ್ಟಿನಲ್ಲಿ ಹೇಳುವುದಾದರೆ ಎಲ್ಲ ಉತ್ತಮ ಕಾರ್ಯಗಳನ್ನೂ ಯಜ್ಞವನ್ನಾಗಿ ಪರಿಗಣಿಸಬಹುದು.

ಪುರುಷಸೂಕ್ತದಲ್ಲಿನ ಆಲೋಚನೆಗಳು ಶತಪಥ ಬ್ರಾಹ್ಮಣ ಗ್ರಂಥದಲ್ಲೂ ಪ್ರತಿಧ್ವನಿಸಿದ್ದು ಅದರಲ್ಲಿ ಯಜ್ಞದಿಂದ ಉಂಟಾಗಿರುವ ಸಮಸ್ತ ಸೃಷ್ಟಿ ಕ್ರಿಯೆಗಳನ್ನು ಸವಿವರವಾಗಿ ವರ್ಣಿಸಲಾಗಿದೆ. ಇವುಗಳನ್ನು ತೈತ್ತಿರೀಯ ಬ್ರಾಹ್ಮಣದಲ್ಲೂ ಕಾಣಬಹುದು :

ವಿಶ್ವ ಸೃಜಾಗಂ ಸಹಸ್ರವತ್ಸರಮ್| ಏತೇನ ವೈ ವಿಶ್ವಸೃಜ ಇದಂ ವಿಶ್ವಮಸೃಜತ್ ಯದ್ವಿಶ್ವಮಸೃಜಂತ| ತಸ್ಮಾದ್ವಿಶ್ವಸೃಜಹ| ವಿಶ್ವಮೇನಾನುಪ್ರಜಾಯತೆ| ಬ್ರಾಹ್ಮಣಸ್ಸಾಯುಜ್ಯoಗಸಾಲೋಕತಾಂ ಯಾಂತಿ||

ಇದೇ ಪಠ್ಯವು (ಹನ್ನೊಂದನೇ ಕಾಂಡದ) ಐದು ವಿಧದ ಯಜ್ಞಗಳ ಬಗ್ಗೆ - ಅಂದರೆ - ಭೂತಯಜ್ಞ, ಮನುಷ್ಯಯಜ್ಞ, ಪಿತೃಯಜ್ಞ, ದೇವಯಜ್ಞ ಹಾಗೂ ಬ್ರಹ್ಮಯಜ್ಞಗಳ ಬಗ್ಗೆಯೂ ವಿವರಿಸುತ್ತದೆ. ಇಲ್ಲಿ ಸ್ವಾಧ್ಯಾಯಯಜ್ಞ ಅಂದರೆ ವೇದಾಧ್ಯಯನದ ಬಗ್ಗೆ ಬ್ರಹ್ಮಯಜ್ಞದ ರೂಪಾಂತರವೆಂಬುದಾಗಿ ವರ್ಣಿಸಲಾಗಿದೆ. ಅಂದರೆ ವೇದಾಧ್ಯಯನವು ಬ್ರಹ್ಮಯಜ್ಞವೇ ಆಗುವುದು:

"ಋಗ್ವೇದದ ಅಧ್ಯಯನವು ಹಾಲನ್ನು ಅರ್ಪಿಸಿದಂತೆ; ಯಜುರ್ವೇದದ ಅಧ್ಯಯನ ಮಾಡುವುದು ಆಜ್ಯವನ್ನು ಸಮರ್ಪಿಸಿದಂತೆ; ಸಾಮವೇದವನ್ನು ಅಧ್ಯಯನ ಮಾಡುವುದು ಸೋಮರಸವನ್ನು ಅರ್ಪಿಸಿದಂತೆ; ಅಥರ್ವಾಂಗೀರಸದ ಅಧ್ಯಯನವು ಮೇದಸ್ಸನ್ನು ಅರ್ಪಿಸಿದಂತೆ"(1-1-5-7).

ತೈತ್ತಿರಿಯ ಸಂಹಿತೆಯಲ್ಲಿನ ಬ್ರಾಹ್ಮಣ ಉದ್ಧೃತದಲ್ಲಿನ ಮತ್ತೊಂದು ಸಾಂಕೇತಿಕ ಹೇಳಿಕೆಯು ಇಂದ್ರನು ವೃತ್ರಾಸುರನನ್ನು ಸಂಹಾರಮಾಡಿದ ಘಟನೆಯನ್ನು ವಿವರಿಸುವುದೇನೆಂದರೆ - "ಯಜ್ಞವೇ ಸಿಡಿಲು - ವಜ್ರ, ಮಾನವನ ಶತ್ರುವೇ ರೋಷ, ಉದ್ವೇಗ - ಕ್ಷುದ್. ಹಸಿವನ್ನು ಮಾನವನು ಒಪ್ಪಿಕೊಳ್ಳದಿದ್ದಾಗ, ಅವನು ಶತ್ರುವನ್ನು ತಿನ್ನದೇ ಸಿಡಿಲಿನಂತೆ ನೇರವಾಗಿ ಹೊಡೆಯುವನು". (ತೈತ್ತೀರಿಯ ಸಂಹಿತೆ 1-6-7-4):

ವಜ್ರೋ ವೈ ಯಜ್ಞಃ ಕ್ಷುತ್ ಖಲು ಮನುಷ್ಯಸ್ಯ ಭ್ರಾತೃವ್ಯೋ ಯದನಾಶ್ವಾನುಪವಸತಿ ವಜ್ರೇಣೈವ ಸಾಕ್ಷಾತ್ ಕ್ಷುದಂ ಭ್ರಾತೃವ್ಯ ಹಂತಿ| ಯಜಮಾನೋ ವೈ ಪುರೊಡಶಃ ಪಶವ ಏತೇ ಆಹುತೀ ಪದಭಿತಃ ಪುರೋಡಶಮೇತೇ ಆಹುತಿ| (ತೈತ್ತಿರೀಯ ಸಂಹಿತೆ).
ವೃತ್ರವು ಹಸಿವೆಂಬುದಾಗಿ ತೈತ್ತಿರೀಯದಲ್ಲಿ ಸ್ಪಷ್ಟವಾಗಿ ಸಂಕೇತಿಸಲಾಗಿದೆ. (2-4-12-6).
ಮತ್ತು 1.5.2.3ರ ಮಂತ್ರದಲ್ಲಿ ಅರ್ಪಿಸಬೇಕಾದ ಪುರೋಡಶಾ ಉಂಡೆಯೇ ಸ್ವತಃ ಯಜಮಾನನು - ಅವನೇ ಪಶು - ಬಲಿ." ಪ್ರಜಾಪತಿಯು ತನ್ನದೇ ಅಂಗ - 'ವಪ' ವನ್ನು ಅರ್ಪಿಸುವನು - ಪ್ರಜಾಪತಿರಾತ್ಮಾನೋ ವಪಾಮುದಕ್ಖಿದತ್ - ತೈ. ಸಂ
ಸರ್ವೆಭ್ಯೋ ವಾ ಏಷ ದೇವತೇಭ್ಯ ಆತ್ಮಾನಾಂ ಆಲಭತೇ ಯೋ ದೀಕ್ಷತೆ | ಅಗ್ನಿಃ ಸರ್ವಾ ದೇವತಾಃ | ಸ ಯದಗ್ನಿಷ್ಠೋಮಿಯಂ ಪಶುಮಾಲಭತೆ ಸರ್ವೆಭ್ಯ ಏವ ದೇವತೇಭ್ಯಃ ಯಜಮಾನಃ ಆತ್ಮಾನಂ ನಿಷ್ಕ್ರಣಿತೆ |

ಮತ್ತೊಂದು ಮಂತ್ರ(1-2 - 1.4)ದಲ್ಲಿ, "ಯಜಮಾನನು ತನ್ನೆಲ್ಲವನ್ನೂ ದೇವತೆಗಳಿಗೆ ಅರ್ಪಿಸುವನು. ಎಲ್ಲ ದೇವತೆಗಳೂ ಅಗ್ನಿಯೆ. ಅವನು ಅಗ್ನಿಸ್ತೋಮೀಯ ವಿಧಿಯಲ್ಲಿ ತನ್ನನ್ನೇ ಪಶುವನ್ನಾಗಿ ಅರ್ಪಿಸಿಕೊಳ್ಳುವನು ಮತ್ತು ದೇವತೆಗಳು ಅವನನ್ನು (ಯಜಮಾನ) ಪರಿಪೂರ್ಣನನ್ನಾಗಿ ಮಾಡುವರು."

ತೈತ್ತಿರಿಯ ಬ್ರಾಹ್ಮಣದಲ್ಲಿನ ಎಂಟನೇ ಪ್ರಪಾಠಕದಲ್ಲಿನ ಎರಡನೇ ಕಾಂಡದಲ್ಲಿ ಋಗ್ವೇದದಲ್ಲಿನ (10-129) ನಾಸದೀಯ ಸೂಕ್ತದ ಸಂಪೂರ್ಣ ಪಾಠವು ಕಂಡುಬರುವುದು. ಹೀಗೆ ಈ ರೀತಿಯ ಪಾಠಗಳು ಬೇರೆ ಬೇರೆ ಕಡೆಗಳಲ್ಲಿ ಕಂಡುಬಂದರೂ, ಅವುಗಳ ಪ್ರಧಾನ ಉದ್ದೇಶವು ಯಜ್ಞದಲ್ಲಿನ ವಿವಿಧ ಪ್ರಕ್ರಿಯೆಗಳ ಬಗೆಗಿನ ವಿಧಿ ವಿಧಾನಗಳನ್ನು ವಿವರಿಸುವುದೇ ಆಗಿರುವುದು.

ಬ್ರಾಹ್ಮಣ ಗ್ರಂಥಗಳಲ್ಲಿ ಯಜ್ಞಕಾರ್ಯದಲ್ಲಿ ವಿವಿಧ ದೇವತೆಗಳನ್ನು ಆಹ್ವಾನಿಸುವುದಕ್ಕೆ ಸಂಬಂಧಿಸಿದ ಮಂತ್ರಗಳು-ವಿನಿಯೋಗಗಳ ಉಪಯೋಗಗಳ ಬಗ್ಗೆ ವಿಧಿಗಳು ಹಾಗೂ ಅದರೊಂದಿಗೆ ಅಧ್ಯಾತ್ಮಿಕ ವಿಷಯಗಳನ್ನು ಒಳಗೊಂಡಿರುವುದು. ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಅಥವಾ ನಿರ್ದಿಷ್ಟ ಫಲವನ್ನು ಹೊಂದಲು ನಿರ್ದಿಷ್ಟ ಮಂತ್ರಗಳನ್ನು ನಿಗದಿಪಡಿಸಲಾಗಿದೆ.

ಬ್ರಾಹ್ಮಣ ಗ್ರಂಥದ ಕರ್ತೃಗಳಾದ ಋಷಿ ಮತ್ತು ಅಚಾರ್ಯರುಗಳಿಗೆ ಪ್ರಪಂಚದಲ್ಲಿ ಆರೋಗ್ಯಯುತ ಜೀವನಕ್ಕಾಗಿ ದೈವೀ ಶಕ್ತಿಯನ್ನು ಆಹ್ವಾನಿಸುವ ಪ್ರಾಮುಖ್ಯತೆಯ ಅರಿವಿತ್ತು. ಅಲ್ಲದೇ ಅವರಿಗೆ ಬಾಹ್ಯ ಹಾಗೂ ಅಂತರ್ಯಜ್ಞಗಳಲ್ಲಿ ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಭಾವಗಳನ್ನು ಈ ದೇವತೆಗಳು ಉಂಟುಮಾಡುವುದರ ಬಗ್ಗೆಯೂ ಅರಿವಿತ್ತು. ಆದರೆ, ಪ್ರಾಪಂಚಿಕ ಪ್ರಯೋಜನಗಳನ್ನು ಪಡೆಯುವುದರಲ್ಲಿ ಅಸಕ್ತಿಯುಳ್ಳ ಜನಗಳು ಯಜ್ಞದಲ್ಲಿನ ಬಾಹ್ಯ ಕ್ರಿಯೆಗಳಿಗೆ ಮಾತ್ರ ಪ್ರಾಮುಖ್ಯತೆಯನ್ನು ನೀಡತೊಡಗಿದರು. ಆದರೆ, ಆರಣ್ಯಕ ಮತ್ತು ಉಪನಿಷತ್ತುಗಳ ಕಾಲದಲ್ಲಿ, ಕಾಲಕ್ರಮೇಣ, ಆಧ್ಯಾತ್ಮಿಕ ಅನ್ವೇಷಣೆಗಳಿಗೆ ಪುನಃ ಪ್ರಾಮುಖ್ಯತೆ ಬಂದಿತು.

ಆರಣ್ಯಕ ಗ್ರಂಥಗಳು
ಆರಣ್ಯಕ ಗ್ರಂಥಗಳು ಬ್ರಾಹ್ಮಣ ಗ್ರಂಥ ಮತ್ತು ಉಪನಿಷತ್ತುಗಳನ್ನು ಸೇರಿಸುವ ಸೇತುವೆ ಆಗಿರುವುದು. ಈ ಗ್ರಂಥಗಳು ಪ್ರಮುಖವಾಗಿ ಗೃಹಸ್ಥ ಕರ್ತವ್ಯಗಳಿಂದ ನಿವೃತ್ತಿಗೊಂಡ ಹಾಗೂ ಶಾಂತಿಯನ್ನು ಅರಸುತ್ತಾ ಅರಣ್ಯದಲ್ಲಿ ವಾಸಿಸಲು ಇಚ್ಛಿಸುವ ಜನಗಳೆಡೆಗೆ ಆಧಾರಿತವಾಗಿದೆ. ಈ ಗ್ರಂಥಗಳಲ್ಲೂ ಯಜ್ಞ ವಿಧಾನಗಳ ಬಗ್ಗೆ ವಿವರಣೆಗಳು ಕಂಡುಬರುವುದು. ಆದರೆ, ಅವುಗಳಲ್ಲಿ ಹೆಚ್ಚಾಗಿ ಸಾಂಕೇತಿಕತೆಗೆ, ವಿಶೇಷವಾಗಿ ಅಂತರ್ಯಜ್ಞದ ಸಾಂಕೇತಿಕತೆಯೆಡೆಗೆ ಒತ್ತು ಕಂಡುಬರುವುದು.

ವಿಶಿಷ್ಟವಾಗಿ ಆರಣ್ಯಕ ಗ್ರಂಥಗಳು ಬ್ರಾಹ್ಮಣ ಗ್ರಂಥಗಳ ಉಪಾಂತ ಅಧ್ಯಾಯಗಳಾಗಿವೆ. ಕೆಲವು ಸಮಯದಲ್ಲಿ ಅವುಗಳು ಬೇರೆಯದೇ ಆದ ಗ್ರಂಥಗಳಾಗಿಯೂ ಕಂಡುಬರುವುದು. ಉದಾಹರಣೆಗೆ : ಋಗ್ವೇದಕ್ಕೆ ಬೇರೆಯದೇ ಆದ ಆರಣ್ಯಕವಿರುವುದು - ಅದೇ ಐತರೇಯ ಆರಣ್ಯಕ ಹಾಗೂ ಇದು ಋಗ್ವೇದದ ಐತರೇಯ ಬ್ರಾಹ್ಮಣ ಗ್ರಂಥದೊಂದಿಗೆ ಸಂಯೋಜಿತವಾಗಿದೆ. ಆರಣ್ಯಕಗಳನ್ನು ಬ್ರಾಹ್ಮಣ ಗ್ರಂಥಗಳ ಕಡೆಯ ಅಧ್ಯಾಯಗಳನ್ನಾಗಿಯೂ ಪರಿಗಣಿಸಲಾಗಿದೆ. ಶುಕ್ಲ ಯಜುರ್ವೇದದ ಶತಪಥ ಬ್ರಾಹ್ಮಣ ಹಾಗೂ ಸಾಮವೇದದ ಛಾಂದೋಗ್ಯ ಬ್ರಾಹ್ಮಣಗಳಲ್ಲೂ ಆರಣ್ಯಕಗಳು ಕಡೆಯಲ್ಲಿ ಕಂಡುಬರುವುದು. ಅವುಗಳಲ್ಲಿ ನಿಗೂಢವಾದ ಆಲೋಚನೆಗಳು ಹಾಗೂ ಧಾರ್ಮಿಕ ಸಿದ್ಧಾಂತಗಳು ಮತ್ತು ತಾತ್ವಿಕ ಚರ್ಚೆಗಳು ಕಂಡುಬರುವುದು. ಇದಕ್ಕೆ ಉದಾಹರಣೆಯೆಂದರೆ - ಋಗ್ವೇದಕ್ಕೆ ಸಂಬಂಧಿಸಿದ ಐತರೇಯ ಆರಣ್ಯಕ ಮತ್ತು ಕೃಷ್ಣ ಯಜುರ್ವೇದಕ್ಕೆ ಸಂಬಂಧಿಸಿದ ತೈತ್ತಿರೀಯ ಆರಣ್ಯಕಗಳು.

ಆರಣ್ಯಕಗಳಲ್ಲಿನ ಕೆಲವು ಉದ್ಧೃತಭಾಗಗಳನ್ನು ಈ ಕೆಳಗೆ ಗಮನಿಸೋಣ:

"ತಸೈವಮ್ ವಿದುಷೋ ಯಜ್ಞಸ್ಯಾತ್ಮಾ ಯಜಮಾನ; ಶ್ರದ್ಧಾ ಪತ್ನಿ ಶರೀರಮಿದ್ಧ್ಮಮ್"
ಯಾರಿಗೆ ಇದು ಅರಿವಾಗುವುದೋ ಅವರಿಗೆ, ಯಜ್ಞದ ಯಜಮಾನ ಅವರೆ, ನಂಬಿಕೆಯೇ ಪತ್ನಿ ಮತ್ತು ಶರೀರವೇ ಇಂಧನ" ಇವುಗಳು ಆರಣ್ಯಕ ಗ್ರಂಥಗಳಲ್ಲಿ ಅನೇಕ ಕಡೆಗಳಲ್ಲಿ ಕಂಡುಬರುವುದು. ಉಪನಿಷತ್ತುಗಳೊಂದಿಗೆ ಸಂಯೋಜಿತಗೊಂಡ ಆರಣ್ಯಕಗಳನ್ನು ಆರಣ್ಯಕೋಪನಿಷತ್ತ್ ಎಂದು ಕರೆಯಲಾಗುವುದು - ಉದಾ: ಶುಕ್ಲ ಯಜುರ್ವೇದಕ್ಕೆ ಸಂಬಂಧಿಸಿದ ಬೃಹದಾರಣ್ಯಕೋಪನಿಷತ್. ವೇದಾಂತ ಸಂಪ್ರದಾಯಗಳು ಆರಣ್ಯಕ ಹಾಗೂ ಉಪನಿಷತ್ತುಗಳು ಜೋಡಿಸಿ ಅವುಗಳನ್ನು ಜ್ಞಾನಕಾಂಡ ಎಂದು ಮತ್ತು ವೇದ ಸಂಹಿತೆಗಳು ಹಾಗೂ ಬ್ರಾಹ್ಮಣಗಳನ್ನು ಜೋಡಿಸಿ ಕರ್ಮಕಾಂಡ ಎಂದು ಕರೆಯುತ್ತಾರೆ. ಋಗ್ವೇದ ಸಂಹಿತೆಗಳಲ್ಲಿ ಗಹನವಾದ ನಿಗೂಢ ಜ್ಞಾನಗಳು ಸಾಂಕೇತಿಕತೆಯ ಪರದೆಯ ಹಿಂದೆ ಅಡಗಿದ್ದು ಅವುಗಳನ್ನು ಆರಣ್ಯಕ ಹಾಗೂ ಉಪನಿಷತ್ತುಗಳಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲಾಗಿದೆ.

ಪ್ರೇರಣೆ : ಡಾ.ಜಯಂತಿ ಮನೋಹರ ಅವರ ಕೃತಿ : Symbolism of Rig-Veda
ಕನ್ನಡಕ್ಕೆ : ಗುರುಪ್ರಸಾದ್ ಹಾಲ್ಕುರಿಕೆ







ಋಗ್ವೇದದ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತದ ಸಾರಾಂಶ

ಋಗ್ವೇದದ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತದ ಸಾರಾಂಶ


ಪೀಠಿಕೆ:

ಇಲ್ಲಿ ಎರಡು ಉಪಾಖ್ಯಾನಗಳಿವೆ. ಅದರಲ್ಲಿ ಮೊದಲನೇ ಉಪಾಖ್ಯಾನದ ಪ್ರಕಾರ:

ವಾಜಾಶ್ರವಸ್ಸೆಂಬ ಋಷಿಗೆ ನಚಿಕೇತನೆಂಬ ಪುತ್ರನಿದ್ದನು. ವಾಜಾಶ್ರವಸ್ಸನು ಯಜ್ಞವನ್ನು ಮಾಡಿ ತನ್ನಲ್ಲಿದ್ದ ಬಡಕಲಾದ ಹಸುಗಳನ್ನು ಬ್ರಾಹ್ಮಣರಿಗೆ ದಾನಮಾಡಿದನು. ಇದನ್ನು ಕಂಡ ನಚಿಕೇತನು ಹೀಗೆ ಮಾಡುವುದರಿಂದ ಯಾವ ಪುಣ್ಯವು ಒದಗುವುದು, ಬದಲಾಗಿ ಒಳ್ಳೆಯ ವಸ್ತುಗಳನ್ನು ದಾನಮಾಡೆಂದು ತಂದೆಗೆ ಹೇಳಿದನು. ಅದಕ್ಕೆ ತಂದೆಯು ನಿನ್ನನ್ನು ಬಿಟ್ಟರೆ ನನ್ನ ಬಳಿ ಎನೂ ಇಲ್ಲವೆಂದನು. ಆಗ ನಚಿಕೇತನು ತನ್ನನ್ನೇ ದಾನಮಾಡೆಂದು ಪೀಡಿಸತೊಡಗಿದನು. ತಂದೆಯು ಕೋಪದಲ್ಲಿ ಅವನನ್ನು ಮೃತ್ಯುವಿಗೆ ದಾನಮಾಡಿರುವೆ ಎಂದನು. ಹಾಗಾಗಿ ನಚಿಕೇತನು ಯಮಾಲಯಕ್ಕೆ ಹೋಗಿ ಅಲ್ಲಿ ಯಮನನ್ನು ಕಾಣದೆ, ಮೂರು ಹಗಲು ಮೂರು ರಾತ್ರೆ ಉಪವಾಸವಿದ್ದನು. ಯಮನು ಬಂದು ಬಾಲಕನನ್ನು (ಅತಿಥಿ) ನೋಡಿ ಅವನನ್ನು ಉಪವಾಸವಿರುವಂತೆ ಮಾಡಿದ್ದಕ್ಕೆ ದೊರಕುವ ಪಾಪಕ್ಕೆ ಹೆದರಿ, ಅದರ ಪರಿಹಾರಾರ್ಥವಾಗಿ ಮೂರು ವರಗಳನ್ನು ನೀಡುವನು.

ಮತ್ತೊಂದು ಉಪಾಖ್ಯಾನದ ಪ್ರಕಾರ:

ಗೌತಮ ಗೋತ್ರದ ವಾಜಶ್ರವಃ ಎಂಬ ಋಷಿಗೆ ಉದ್ದಾಲಕನೆಂಬ ಪುತ್ರನಿದ್ದನು. ಅವನ ಮಗನೇ ನಚಿಕೇತ. ಉದ್ದಾಲಕನು ವಿಶ್ವಜಿತ್ ಎಂಬ ಯಾಗವನ್ನು ಮಾಡಿ ತನ್ನಲ್ಲಿದ್ದ ಸರ್ವಸ್ವವನ್ನೂ ದಾನಮಾಡಿದನು. ತನ್ನ ತಂದೆಯ ದಾನ ಕಾರ್ಯವು ಉಪನಯನವಾಗಿರದ ನಚಿಕೇತನ ಮನಸ್ಸಿನ ಮೇಲೆ ಪರಿಣಾಮವುಂಟಾಗಿ ದಾನ ಕಾರ್ಯದಲ್ಲಿ ವಿಶೇಷವಾದ ಶ್ರದ್ಧೆಯುಂಟಾಗಿ ತಾನು ತನ್ನ ತಂದೆಯ ಸ್ವತ್ತಾದ್ದರಿಂದ ತನ್ನನ್ನೂ ದಾನ ಮಾಡೆಂದು ತಂದೆಯನ್ನು ಸತತವಾಗಿ ಪೀಡಿಸತೊಡಗಿದ. ಮೊದ ಮೊದಲು ಉದ್ದಾಲಕನು ನಚಿಕೇತನಿಗೆ ಉತ್ತರಿಸದಿದ್ದರೂ ಕೊನೆಗೆ ಕೋಪಗೊಂಡು ಅವನನ್ನು ಮೃತ್ಯುವಿಗೆ (ಯಮ) ದಾನಮಾಡುವೆನೆಂದನು. ತಂದೆಯ ಮಾತಿನಂತೆ ನಚಿಕೇತನು ಮೃತ್ಯುವಿನ ಬಳಿಗೆ ಹೋಗಲು ಸಿದ್ಧನಾದನು. ಆಗ ವಾಗ್ದೇವತೆಯು ಅಶರೀರವಾಣಿಯ ಮೂಲಕ ನಚಿಕೇತನಿಗೆ ಅವನು ಯಮನ ಮನೆಗೆ ಹೋದಾಗ ಅವನು ಹೊರಗೆ ಹೋಗಿರುವನೆಂದೂ ಹಾಗೂ ಮೂರು ದಿನ ಬರುವುದಿಲ್ಲವೆಂದು ತಿಳಿಸಿ, ಆದರೂ ಮೂರು ದಿನ ಅಲ್ಲೇ ಇದ್ದು ಏನು ಆಹಾರ ಕೊಟ್ಟರೂ ತಿನ್ನಕೂಡದೆಂದು ತಿಳಿಸಿತು. ಆಕಾಶವಾಣಿಯು ಮುಂದುವರೆದು, ಯಮನು ಮನೆಗೆ ಬಂದ ನಂತರ ನೀನು ಏನನ್ನು ತಿಂದೆ ಎಂದು ಕೇಳಿದರೆ ನೀನು ಮೊದಲ ದಿನ ಪ್ರಜೆಯನ್ನು ತಿಂದೆ ಎಂದೂ ಹೀಗೆ ಎರಡನೇ ಹಾಗೂ ಮೂರನೇ ದಿನಗಳಲ್ಲಿ ಕ್ರಮವಾಗಿ ಪಶು ಹಾಗೂ ಇತರೆ ಸಂಪತ್ತುಗಳನ್ನು ಮತ್ತು ಯಮನು ಮಾಡಿದ ಸತ್ಕರ್ಮಗಳನ್ನು ತಿಂದೆ ಎಂದು ಹೇಳಬೇಕೆಂದು ತಿಳಿಸಿತು.

(ಇಲ್ಲಿ ಒಂದು ಸಂಶಯ ಬರುವುದು ಸಾಮಾನ್ಯ. ಅದೇನೆಂದರೆ ಒಂದು ಪಕ್ಷ ಜೀವಿಯು ಯಮಲೋಕಕ್ಕೆ ಸಶರೀರಿಯಾಗಿ ಹೋದಲ್ಲಿ (ಇದೂ ಅಸಾಧ್ಯವಾದದ್ದೆ), ಅಲ್ಲಿ ಹಸಿವು ನೀರಡಿಕೆಗಳು ಉಂಟಾಗುವುದೇ ಎಂಬುದು. ಇದಕ್ಕೆ ಸ್ವಲ್ಪ ವಿವರಣೆಯು ಅವಶ್ಯಕ. ಅದೇನೆಂದರೆ, ಗೃಹಸ್ಥ ಧರ್ಮದ ಪ್ರಕಾರ ಮನೆಗೆ ಬಂದ ಅತಿಥಿಗೆ ಸತ್ಕಾರವನ್ನು ಮಾಡದೆ, ಅನ್ನಾಹಾರಗಳಿಂದ ತೃಪ್ತಿಪಡಿಸದಿದ್ದರೆ ಆ ಗೃಹಸ್ಥನಿಗೆ ಪಾಪವುಂಟಾಗುವುದು. ಅತಿಥಿಯು ಒಂದು ದಿನ ಉಪವಾಸವಿದ್ದರೆ ಅದರಿಂದ ಗೃಹಸ್ಥನ ಸಂತತಿಯು ನಾಶವಾಗುವುದು. ಹೀಗೇ ಎರಡನೇ ದಿನವೂ ಉಪವಾಸವಿದ್ದಲ್ಲಿ ಮನೆಯ ಯಜಮಾನನ ಪಶು, ಧನ ಧಾನ್ಯ ಮೊದಲಾದ ಸಂಪತ್ತುಗಳು ನಾಶವಾಗುವುದು. ಮೂರನೇ ದಿನವೂ ಉಪವಾಸವಿದ್ದಲ್ಲಿ ಯಜಮಾನನು ಅದುವರೆಗೂ ಮಾಡಿರುವ ಸತ್ಕಾರ್ಯಗಳ ಪುಣ್ಯವೆಲ್ಲವೂ ನಶಿಸುವುದು ಎಂದು ಧರ್ಮಶಾಸ್ತ್ರದಲ್ಲಿ ವಿವರಿಸಲಾಗಿದೆ. ಇದಕ್ಕಾಗಿಯೇ ನಚಿಕೇತನು ಸಶರೀರಿಯಾಗಿ ಹೋಗಿದ್ದು ಹಾಗೂ ಹಸಿವು ನೀರಡಿಕೆಗಳನ್ನು ಅನುಭವಿಸಿದ್ದು.)

ನಚಿಕೇತನು ಯಮನ ನಿವಾಸಕ್ಕೆ ಬಂದನು ಹಾಗೂ ವಾಗ್ದೇವತೆಯ ಹಿತೋಪದೇಶದಂತೆ ಯಮನೊಂದಿಗೆ ನಡೆದುಕೊಂಡನು.

ಮೂಲ: ಋಗ್ವೇದಸಂಹಿತಾ - ಭಾಗ - 30ರ ಆಯ್ದ ಭಾಗಗಳು.
ಅನುವಾದಕರು: ಆಸ್ಥಾನ ಮಹಾವಿದ್ವಾನ್ ಹೆಚ್.ಪಿ.ವೆಂಕಟರಾವ್
ಸಂಗ್ರಹ: ಗುರುಪ್ರಸಾದ್ ಹಾಲ್ಕುರಿಕೆ

ಮುಂದಿನ ಭಾಗ - ನಚಿಕೇತ-ಯಮರ ಸಂವಾದ

ಋಗ್ವೇದದ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತ - ಭಾಗ - 2

ಋಗ್ವೇದದ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತ - ಭಾಗ - 2


ವೈಃ

ನಚಿಕೇತನು ಯಮನ ನಿವಾಸಕ್ಕೆ ಬಂದನು ಹಾಗೂ ವಾಗ್ದೇವತೆಯ ಹಿತೋಪದೇಶದಂತೆ ಯಮನೊಂದಿಗೆ ನಡೆದುಕೊಂಡನು.

ಯಮನು ಪಶ್ಚಾತ್ತಾಪದಿಂದ ನಚಿಕೇತನಿಗೆ ಹೀಗಂದನು - ನೀನು ನನ್ನ ಮನೆಯಲ್ಲಿ ಮೂರು ದಿನ ಉಪವಾಸವಿದ್ದೆ ಎಂದು ತಿಳಿಯಿತು. ಅತಿಥಿಯು ಉಪವಾಸವಿದ್ದರೆ ಯಜಮಾನನಿಗೆ ಶ್ರೇಯಸ್ಸು ಉಂಟಾಗುವುದಿಲ್ಲ. ಆದ್ದರಿಂದ ಉಪವಾಸದಿಂದಿದ್ದ ಮೂರುದಿನಗಳಿಗಾಗಿ ನಿನಗೆ ಬೇಕಾದ ಮೂರು ವರಗಳನ್ನು ಕೇಳುವಂಥವನಾಗು, ಅವುಗಳನ್ನು ಕೊಡುವೆನು ಎಂದನು.

ನಚಿಕೇತನು ಕೇಳಿದ ಮೊದಲ ವರ - ನಾನು ಮೃತ್ಯುವಶನಾಗದೆ (ಸಾಯದೆ) ಈಗಿರುವಂತೆಯೇ ನನ್ನ ತಂದೆಯ ಬಳಿಗೆ ಹೋಗಬೇಕು ಹಾಗೂ ನನ್ನ ತಂದೆಯು ನನ್ನನ್ನು ಪ್ರೀತಿಯಿಂದ ಆದರಿಸಬೇಕು ಹಾಗೂ ಅವರ ಚಿಂತೆಯು ನಾಶವಾಗಿ ಶಾಂತಚಿತ್ತರಾಗಿರಬೇಕು.

ಎರಡನೇ ವರ - ಶ್ರೌತಸ್ಮಾರ್ತಕರ್ಮಗಳು ಅಕ್ಷಯವಾದ ಫಲಗಳನ್ನು ಕೊಡುವ ವಿಧಾನವನ್ನು ಹೇಳಬೇಕು.. (ಮತ್ತೊಂದು ರೀತಿಯಲ್ಲಿ ಹೇಳುವುದಾದರೆ - ಸ್ವರ್ಗಸಾಧನವಾದ ಅಗ್ನಿಯನ್ನು ಉಪಾಸನೆ ಮಾಡುವ ಕ್ರಮವನ್ನೂ, ಜ್ಞಾನವನ್ನೂ ಕರುಣಿಸು). ಇದಕ್ಕೆ ನಡೆಸಬೇಕಾದ ಯಜ್ಞವು ನಾಚಿಕೇತಮಗ್ನಿಮ್ ಎಂದು ಕರೆಯಲ್ಪಟ್ಟಿತು.

ಮೂರನೇ ವರ - ಪುರುಷನು ತಾನು ಮಾಡುವ ಕರ್ಮಾದಿಗಳಿಂದ ಅನೇಕ ಜನ್ಮಗಳನ್ನು ಪಡೆದು ಅನೇಕ ಬಾರಿ ಮೃತ್ಯುವಶನಾಗುವನು. ಆದ್ದರಿಂದ ಸಂಸಾರದಿಂದ ಮುಕ್ತನಾಗಲು ಮೃತ್ಯುವನ್ನು ಜಯಿಸುವ ಉಪಾಯವನ್ನು ಹೇಳು. (ಮತ್ತೊಂದು ರೀತಿಯಲ್ಲಿ ಹೇಳುವುದಾದರೆ - ಮನುಷ್ಯನು ಮರಣ ಹೊಂದಿದ ಮೇಲೆ ಅವನ ಆತ್ಮವು ಇರುವುದೆಂದು ಕೆಲವರೂ, ಇರುವುದಿಲ್ಲವೆಂದು ಮತ್ತೆ ಕೆಲವರು ಹೇಳುವರು. ಈ ವಿಷಯದಲ್ಲಿ ನಿಶ್ಚಯ ಜ್ಞಾನವನ್ನು ನನಗೆ ವಿಷದವಾಗಿ ತಿಳಿಸು.)

ಯಮನು ಮೊದಲೆರಡು ವರಗಳನ್ನು ನೀಡಿ ಮೂರನೇ ವರವನ್ನು ನೀಡುವ ಮೊದಲು ನಚಿಕೇತನ ಮನೋಬಲವನ್ನು ಪರೀಕ್ಷಿಸಲು ಪ್ರಾರಂಭಿಸಿದನು. ಈ ನಿಟ್ಟಿನಲ್ಲಿ ನಚಿಕೇತ-ಯಮರಾಜರ ನಡುವಿನ ಸಂಭಾಷಣೆಯ ಸಾರಾಂಶವನ್ನು ಈ ಕೆಳಗೆ ನೋಡೋಣ:

ಯಮ : ಹೇ ನಚಿಕೇತನೆ! ಪೂರ್ವದಲ್ಲಿ ದೇವತೆಗಳೂ ಸಹ ಈ ವಿಷಯದಲ್ಲಿ ಬೇಕಾದಷ್ಟು ಚರ್ಚೆ ಮಾಡಿರುವರು. ಇದನ್ನು ಸುಲಭವಾಗಿ ಅರಿಯುವುದು ಅಸಾಧ್ಯ. ಇದು ಅತ್ಯಂತ ಸೂಕ್ಷ್ಮ ವಿಚಾರ. ನೀನು ಹಟವನ್ನು ಮಾಡಬೇಡ, ನನ್ನನ್ನು ನಿರ್ಬಂಧಿಸಬೇಡ.

ನಚಿಕೇತ : ನಾನು ಕೇಳುವ ವಿಷಯವು ದೇವತೆಗಳಿಗೂ ತಿಳಿಯದೆಂದೂ, ಅವರೂ ದೀರ್ಘ ಚರ್ಚೆ ಮಾಡಿರುವರೆಂದು ನೀನೇ ಹೇಳಿರುವೆ. ಅಂದರೆ ಇದು ನಿನ್ನನ್ನು ಬಿಟ್ಟು ಬೇರಾರಿಗೂ ಅರಿಯದು ಎಂದಾಯಿತು. ಅದನ್ನು ವಿವರಿಸಲು ನಿನಗೆ ಮಾತ್ರ ಸಾಧ್ಯ. ದಯವಿಟ್ಟು ಅದನ್ನು ನನಗೆ ಅನುಗ್ರಹಿಸು.

ಯಮ : ಹೇ ನಚಿಕೇತನೇ! ನೂರು ವರ್ಷ ಜೀವಿಸಿರುವ ಪುತ್ರಪೌತ್ರಾದಿಗಳನ್ನು, ಪಶುಸಂಪತ್ತು, ಧನಕನಕ ವಸ್ತುವಾಹನಗಳನ್ನು, ಯಥೇಶ್ಚವಾದ ಆಯಸ್ಸನ್ನು ಕೇಳು ಕೊಡುವೆ. ಆದರೆ ಮರಣದ ವಿಷಯದಲ್ಲಿ ಮಾತ್ರ ಪ್ರಶ್ನಿಸಬೇಡ.

ನಚಿಕೇತ : ಹೇ ಯಮನೆ! ನೀನು ಕೊಡಬೇಕೆಂದಿರುವ ಎಲ್ಲವೂ ಕ್ಷಣಿಕ, ನಶ್ವರ. ನಮ್ಮ ಜೀವನವೂ ನಶ್ವರ. ಮರಣಾನಂತರ ನೀನು ಕೊಡುವ ಸಕಲ ಸಂಪತ್ತುಗಳಿಂದ ಏನು ಪ್ರಯೋಜನ? ಎಲ್ಲವೂ ಮತ್ತೆ ನಿನಗೇ ಸೇರುವುದು. ನಿನ್ನ ಅನುಗ್ರಹ ಇರುವವರೆಗೂ ನನ್ನ ಆಯುಷ್ಯಕ್ಕೆ ಯಾವ ತೊಂದರೆಯೂ ಇಲ್ಲ. ಜರಾಮರಣರಹಿತರಾದ ದೇವತೆಗಳಿರುವ ಲೋಕಕ್ಕೆ ಬಂದು ಮನುಷ್ಯನಾದವನು ಕ್ಷಣಿಕ ಸುಖವನ್ನು ಬೇಡುವುದೇ? ಹೇ ಯಮನೇ! ಯಾವ ತತ್ತ್ವದ ವಿಷಯದಲ್ಲಿ ದೀರ್ಘ ಚರ್ಚೆ ನಡೆದಿರುವುದೋ, ಯಾವುದು ಪರಲೋಕದಲ್ಲಿ ಮಹತ್ತ್ವವುಳ್ಳದ್ದೋ, ಯಾವುದು ಗೂಢವಾಗಿರುವುದೋ ಅಂತಹ ವರವನ್ನು ಬಿಟ್ಟು ನಾನು ಬೇರೆ ವರವನ್ನು ಅಪೇಕ್ಷಿಸುವುದಿಲ್ಲ.

ಯಮ : ಹೇ ನಚಿಕೇತನೆ! ನೀನು ಇಷ್ಟು ಕೇಳಿದಮೇಲೆ ಹೇಳುವೆನು ಕೇಳು. ಲೋಕದಲ್ಲಿ ಶ್ರೇಯಸ್ಸು ಮತ್ತು ಪ್ರೇಯಸ್ಸು ಎಂದು ಎರಡು ಮಾರ್ಗಗಳಿವೆ. ಇವೆರಡೂ ಬೇರೆ ಬೇರೆ, ಹಾಗೇ ಫಲಗಳೂ ಬೇರೆ. ಪ್ರೇಯಸ್ಸಿನಲ್ಲಿ (ಐಹಿಕ ಸುಖಗಳಲ್ಲಿ) ನಿರತನಾದವನು ಕರ್ಮಪ್ರವೃತ್ತನಾಗುವನು. ಅವನ ಪುರುಷಾರ್ಥವು ನಾಶವಾಗುವುದು. ಶ್ರೇಯಸ್ಸಿನ ಮಾರ್ಗವನ್ನು ಅನುಸರಿಸುವವನಿಗೆ ಸಮಸ್ತ ಕಲ್ಯಾಣ ಉಂಟಾಗುವುದು. ಹೀಗಾಗಿ ಬುದ್ಧಿವಂತನು ಶ್ರೇಯಸ್ಸಿನ ಮಾರ್ಗವನ್ನೇ ಅಪೇಕ್ಷಿಸುವನು. ಆದರೆ ಅನೇಕ ಜನರು ಇಹಲೋಕದ ಸುಖಗಳಿಗೆ ಮನಸೋತು ಪ್ರೇಯಸ್ಸನ್ನು ಬಯಸುವರು. ಅವರು ವಿವೇಚನಾರಹಿತರು. ಹೀಗಾಗಿ ಅಂತಹ ಜನಗಳು ಪುನಃ ಪುನಃ ಜನ್ಮವೆತ್ತಿ ಆಯಾ ಜನ್ಮಗಳಲ್ಲಿ ನನಗೆ (ಮೃತ್ಯುವಿಗೆ) ವಶರಾಗುವರು. ಯಾವ ಜ್ಞಾನವು ಅಂದರೆ ಆತ್ಮಜ್ಞಾನವು ಸರ್ವಶ್ರೇಷ್ಠವೆನಿಸುವುದೋ ಅಂತಹ ಆತ್ಮಜ್ಞಾನವನ್ನು (ಬ್ರಹ್ಮಜ್ಞಾನ) ಕೇಳಿ ತಿಳಿದುಕೊಳ್ಳುವ ಸುಸಂಧಿಯು ಅನೇಕರಿಗೆ ದೊರೆಯಲಾರದು. ಅಂತಹ ಜ್ಞಾನವನ್ನು ಉಪದೇಶಿಸುವ ಗುರುವು ಸಿಗುವುದೂ ದುರ್ಲಭ. ಒಂದು ವೇಳೆ ಗುರುವು ಸಿಕ್ಕಿದರೂ ಅದರಲ್ಲಿ ಆಸಕ್ತಿ ಹುಟ್ಟಿ ಆತ್ಮಜ್ಞಾನವನ್ನು ತಿಳಿದುಕೊಳ್ಳುವ ಇಚ್ಛೆ ಉಂಟಾಗುವುದೂ ಕೂಡ ತೀರ ಆಶ್ಚರ್ಯವೇ. ಈ ಆತ್ಮಜ್ಞಾನದಲ್ಲಿ ಅನೇಕ ಭಿನ್ನಾಭಿಪ್ರಾಯವಿರುವುದರಿಂದ ಸಾಮಾನ್ಯ ಮನುಷ್ಯನು ಇದನ್ನು ಹೇಳಿದರೆ ಅದು ಚೆನ್ನಾಗಿ ತಿಳಿಯುವುದಿಲ್ಲ. ಸರಿಯಾದ ಆತ್ಮಜ್ಞಾನಿಯೇ ಇದನ್ನು ಉಪದೇಶಿಸಬೇಕು. ಹಾಗಾದಾಗ ಅವನು ಎಲ್ಲವನ್ನೂ ತಿಳಿದು ಸರ್ವಜ್ಞನಾಗುವನು. ಈ ಆತ್ಮಜ್ಞಾನವು ಕೇವಲ ತರ್ಕ ಅಥವಾ ಊಹೆಯಿಂದ ತಿಳಿದುಕೊಳ್ಳಲಾಗುವುದಿಲ್ಲ, ಜ್ಞಾನಿಯಾದ ಗುರುವಿನಿಂದಲೇ ತಿಳಿದಿಕೊಳ್ಳಬೇಕು. ಅನಿತ್ಯ ವಸ್ತುಗಳ ಸಹಾಯದಿಂದ ಬ್ರಹ್ಮಜ್ಞಾನವು ಪ್ರಾಪ್ತವಾಗದು. ವಿವೇಕಿಯು ಸಾಕ್ಷಾತ್ಕರಿಸಲು ಕಷ್ಟಸಾಧ್ಯವಾದರೂ ಹೃದಯ ಗುಹೆ ಸ್ಥಿರವಾದುದೂ ಶಾಶ್ವತವೂ, ತೇಜಸ್ಸಿನಿಂದ ಬೆಳಗುತ್ತಿರುವ ಆತ್ಮನನ್ನು ಯೋಗದಿಂದ ಲಭ್ಯವಾಗುವ ಜ್ಞಾನದಿಂದ ಸಾಕ್ಷಾತ್ಕರಿಸಿ ಸುಖ-ದುಃಖಗಳನ್ನು ದಾಟುವನು. ಇಂತಹ ಅನಂದಸ್ಥಾನದ ಬಾಗಿಲು ನಿನಗೆ ತೆರೆದಿರುವುದು ಎಂದು ತಿಳಿಯುವೆನು.

ನಚಿಕೇತ : ಯಾವ ವಸ್ತುವು ಧರ್ಮ ಮತ್ತು ಅಧರ್ಮಗಳಿಂದ ಭಿನ್ನವೂ, ಕಾರ್ಯಕಾರಣಗಳಿಂದ ಬೇರೆಯಾದುದೂ, ಭೂತಭವಿಷ್ಯತ್ತುಗಳಿಂದಲೂ ಬೇರೆಯಾದುದೂ ಇರುವುದೆಂದು ನೀನು ಅರಿತಿರುವೆಯೋ ಅದನ್ನು ನನಗೆ ವಿವರಿಸು.

ಯಮ : ಸಕಲ ವೇದಗಳು ಯಾವ ಪರಮಪದವನ್ನು ಹೋಗಳುವವೋ, ಯಾವ ಪರಮಪದ ಪ್ರಾಪ್ತಿಗಾಗಿ ವಿವೇಕಶಾಲಿಗಳು ಬ್ರಹ್ಮಚರ್ಯವನ್ನು ಪಾಲಿಸುತ್ತಾ ಕಠಿಣತಪಸ್ಸನ್ನು ಮಾಡುವರೋ ಅಂತಹ ಪರಮಗತಿಯ ವಿಷಯವನ್ನು ನಾನು ಸಂಕ್ಷೇಪವಾಗಿ ಹೇಳುವೆನು. ಅದೇ ಓಂ ಪ್ರಣವ, ಇದೇ ಅಕ್ಷರಬ್ರಹ್ಮ. ಇದು ಅವಿನಾಶಿ. ಇದರ ಜ್ಞಾನವನ್ನು ಪಡೆದವನು ಅವನು ಇಚ್ಛಿಸುವ ಪರಮಪದವನ್ನು ಪಡೆಯುವನು. ಇದೇ ಸರ್ವಶ್ರೇಷ್ಠ ಸಾಧನ. ಈ ಸಾಧನವನ್ನು ಅರಿತವನು ಬ್ರಹ್ಮ ಲೋಕದಲ್ಲಿಯೂ ಗೌರವಿಸಲ್ಪಡುವನು. ಜ್ಞಾನಮಯವಾದ ಆತ್ಮನಿಗೆ ಜನ್ಮಮೃತ್ಯುಗಳಿಲ್ಲ. ಇದು ಮತ್ತೊಂದು ವಸ್ತುವಿನಿಂದ ಜನಿಸಿಲ್ಲ. ಅದು ಉತ್ಪನ್ನರಹಿತ, ನಿತ್ಯ, ಶಾಶ್ವತ ಹಾಗೂ ಸನಾತನ. ಆದ್ದರಿಂದ ಶರೀರವು ಮೃತವಾದರೂ ಅದರಲ್ಲಿ ನೆಲಸಿರುವ ಆತ್ಮಕ್ಕೆ ನಾಶವಿಲ್ಲ. ನಾನು ಕೊಲ್ಲುವೆನು, ಕೊಲ್ಲಲ್ಪಡುವೆನು ಎನ್ನುವ ಪುರುಷರು ಅಜ್ಞಾನಿಗಳು. ಏಕೆಂದರೆ ಆತ್ಮನು ಕೊಲ್ಲುವುದೂ ಹಾಗೂ ಕೊಲ್ಲಲ್ಪಡುವುದೂ ಇಲ್ಲ. ಹೃದಯಗಹ್ವರದಲ್ಲಿ ಇರುವ ಆತ್ಮವು ಅಣುವಿಗಿಂತ ಅಣುವಾಗಿರುವುದು ಹಾಗೂ ಸೂಕ್ಷ್ಮಕ್ಕಿಂತ ಸೂಕ್ಷ್ಮವಾದದ್ದು. ಇದು ಸರ್ವವ್ಯಾಪಿಯಾದ್ದರಿಂದ ಮಹತ್ತಾದ ವಸ್ತುವಿಗಿಂತ ಮಹತ್ತಾದದ್ದು. ಕಾಮರಹಿತನಾದವನಿಗೆ ಮಾತ್ರ ಆತ್ಮದರ್ಶನವಾಗುವುದು. ಒಂದೇ ಸ್ಥಳದಲ್ಲಿದ್ದರೂ, ಮಲಗಿದ್ದರೂ ಆತ್ಮವು ದೂರಹೋಗಬಲ್ಲುದು. ಇಂತಹ ಸರ್ವವ್ಯಾಪಿ, ಸರ್ವಶ್ರೇಷ್ಠ ಆತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡವನು ಶೋಕರಹಿತನು. ಇದನ್ನು ಪ್ರವಚನದಿಂದಾಗಲಿ, ಬುದ್ಧಿಯಿಂದಾಗಲಿ, ಇತರರು ಹೇಳಿದ್ದನ್ನು ಕೇಳುವುದರಿಂದಾಗಲಿ ಪಡೆಯಲಾಗುವುದಿಲ್ಲ.

ಪುರುಷನ ಹೃದಯಗುಹೆಯಲ್ಲಿ ನೆಲಸಿ ಕರ್ಮಫಲಗಳನ್ನು ಅನುಭವಿಸುತ್ತ ಜೀವಾತ್ಮ-ಪರಮಾತ್ಮಗಳೆಂಬ ಎರಡು ಆತ್ಮಗಳು ನೆರಳು-ಬೆಳಕುಗಳಂತೆ ಸದಾ ಇರುವುದೆಂದು ಬ್ರಹ್ಮಜ್ಞಾನಿಗಳು ಹೇಳುವರು. ಯಜ್ಞಾದಿ ಕರ್ಮಗಳನ್ನು ಮಾಡಿ ಬ್ರಹ್ಮೋಪಾಸನೆ ಮಾಡುವ ಭಕ್ತನಿಗೆ ಸಂಸಾರ ಸಾಗರವನ್ನು ದಾಟಿಸುವ ಸೇತುವೆಯಂತಿರುವ ನಚಿಕೇತನೆಂಬ ಅಗ್ನಿಯನ್ನೂ, ಸಂಸಾರಸಾಗರವನ್ನು ದಾಟಲು ಬಯಸುವವರಿಗೆ ಅದನ್ನು ದಾಟಿಸುವ ಪರಬ್ರಹ್ಮನನ್ನೂ ನಾವು ಬಲ್ಲೆವು. ಈ ಶರೀರವೇ ಒಂದು ರಥ. ಆತ್ಮನು ಅದರ ರಥಿಕ, ಬುದ್ದಿಯೇ ಸಾರಥಿ, ಅಶ್ವವನ್ನು ಹತೋಟಿಯಲ್ಲಿಡುವ ಕಡಿವಾಣವೇ ಮನಸ್ಸು, ಇಂದ್ರಿಯಗಳೇ ಅಶ್ವಗಳು. ಇಂದ್ರಿಯಗಳಿಗೆ ಸಂಬಂಧಿಸಿದ ವಿಷಯಸುಖಗಳೇ ಮಾರ್ಗ. ಇಂದ್ರಿಯ, ಮನಸ್ಸುಗಳಿಂದ ಮುಕ್ತನಾದ ಆತ್ಮವು ಸುಖ-ದುಃಖಗಳನ್ನು ಅನುಭವಿಸುವುದೆಂದು ಜ್ಞಾನಿಗಳು ಹೇಳುವರು. ಮನಸ್ಸು ಸದಾ ಚಂಚಲವಾಗಿರುವುದರಿಂದ ಅಜ್ಞಾನಿಯ ಇಂದ್ರಿಯಗಳು, ದುಷ್ಟಕುದುರೆಗಳು ಸಾರಥಿಯ ವಶವಾಗದಿರುವಂತೆ ಸ್ವೆಚ್ಛಾಚಾರಿಗಳಾಗಿ ಅವನ ವಶದಲ್ಲಿರುವುದಿಲ್ಲ. ಆದರೆ ಜ್ಞಾನಿಯ ಇಂದ್ರಿಯಗಳು ಪಳಗಿದ ಕುದುರೆಗಳು ಸಾರಥಿಯ ವಶದಲ್ಲಿರುವಂತೆ ಅವನ ವಶದಲ್ಲಿರುವುದು. ಯಾವ ಜ್ಞಾನಿಯು ತನ್ನ ಜ್ಞಾನವನ್ನೇ ಸಾರಥಿಯನ್ನಾಗಿ ಮಾಡಿಕೊಂಡು ಮನಸ್ಸನ್ನು ಸಂಯಮದಲ್ಲಿಟ್ಟುಕೊಳ್ಳುವನೋ ಅವನು ಸರ್ವವ್ಯಾಪಿಯಾದ ಪರಮಪದವನ್ನು ಪಡೆಯುವನು. ಆ ಶ್ರೇಷ್ಠ ಸ್ಥಾನವೇ (ಮುಕ್ತಿಯು) ವಿಷ್ಣುವಿನ ಪರಮ ಪದ.

ಇಂದ್ರಿಯಗಳಿಗಿಂತ ಸೂಕ್ಷ್ಮವಾದ ವಸ್ತುಗಳು ಅಥವಾ ತನ್ಮಾತ್ರೆಗಳು ಪಂಚಭೂತಗಳ ಸೂಕ್ಷ್ಮಸ್ವರೂಪಗಳು. ಈ ತನ್ಮಾತ್ರೆಯನ್ನು ದಾಟಿದರೆ ಮನಸ್ಸು, ಅದರಾಚೆಗೆ ಬುದ್ಧಿ, ಅನಂತರ ಮಹದಾತ್ಮ, ನಂತರ ಅದರಾಚೆಗೆ ಶ್ರೇಷ್ಠವಾದ ಅವ್ಯಕ್ತ, ಅದನ್ನೂ ದಾಟಿದರೆ ಪರಬ್ರಹ್ಮ (ಪರಮಪುರುಷ) ಇರುವುದು. ಇದೇ ಅಂತಿಮ ಪರಮಪದ.

ಶ್ರೇಷ್ಠನಾದ ಪರಮಪುರುಷನೇ ಎಲ್ಲ ಜೀವಿಗಳಲ್ಲಿ ಗೂಢವಾಗಿ ನೆಲಸಿರುವ ಆತ್ಮನು. ಅವನನ್ನು ವೀಕ್ಷಿಸಲು ಯೋಗಿಗಳಿಗೂ ಹಾಗೂ ತಪಸ್ವಿಗಳಿಗೂ ಮಾತ್ರ ಸಾಧ್ಯವಾಗುವುದು. ಜ್ಞಾನಿಯಾದ ಪುರುಷನು ತನ್ನ ವಾಕ್ಷ್ಯಕ್ತಿಯನ್ನು ಅದಕ್ಕಿಂತ ಸೂಕ್ಷ್ಮವಾದ ಮನಸ್ಸಿನಲ್ಲಿ ಲೀನಮಾಡಬೇಕು. ಅನಂತರ ಮನಸ್ಸನ್ನು ಅದಕ್ಕಿಂತ ಸೂಕ್ಷ್ಮವಾದ ಜ್ಞಾನಮಯ ಅಥವಾ ಚೇತನಾಮಯ ಆತ್ಮನಲ್ಲಿ ಲೀನಮಾಡಬೇಕು. ಬಳಿಕ ಚೇತನಾಮಯ ಆತ್ಮವನ್ನು ಮಹದಾತ್ಮನಲ್ಲಿಯೂ, ಮಹದಾತ್ಮನನ್ನು ಶಾಂತಾತ್ಮನಲ್ಲಿಯೂ ಲೀನಮಾಡಬೇಕು. ಆದ್ದರಿಂದ ನಿಮಗಿಂತ ಶ್ರೇಷ್ಠರಾದ ಜ್ಞಾನಿಗಳ ಬಳಿಗೆ ಹೋಗಿ ಬ್ರಹ್ಮಜ್ಞಾನವನ್ನು ಪಡೆದುಕೊಳ್ಳಿ. ಈ ಕಾರ್ಯವು ಹರಿತವಾದ ಕತ್ತಿಯ ಅಲುಗಿನ ಮೇಲೆ ನಡೆಯುವಷ್ಟೇ ಕಷ್ಟವಾದದ್ದು. ಈ ಆತ್ಮವು ಶಬ್ದ, ರೂಪ, ರಸ, ಗಂಧ, ಸ್ಪರ್ಶರಹಿತ ಹಾಗೂ ಅವ್ಯಯವಾದದ್ದು. ಅದು ಅನಾದಿ, ಅನಂತವಾದದ್ದು. ಈ ಮಹತ್ತತ್ತ್ವದಿಂದಾಚೆಗೆ ಅಂದರೆ ಇದಕ್ಕಿಂತಲೂ ಸೂಕ್ಷ್ಮವಾಗಿ ಅದರ ಉತ್ಪತ್ತಿಗೂ ಕಾರಣವಾಗಿರುವ ಸತ್ಯಸ್ವರೂಪವಾದ ಆತ್ಮತತ್ತ್ವವನ್ನು ಅರಿತವನಿಗೆ ಮೃತ್ಯು ಭಯವಿಲ್ಲ.

ಮೃತ್ಯುದೇವನು ನಚಿಕೇತನಿಗೆ ಹೇಳಿದ ಈ ಉಪಾಖ್ಯಾನವನ್ನು ಹೇಳುವವನೂ, ಕೇಳುವವನೂ ಬ್ರಹ್ಮಲೋಕದಲ್ಲಿ ಗೌರವಿಸಲ್ಪಟ್ಟು ಪೂಜ್ಯನಾಗುತ್ತಾನೆ. ಇದನ್ನು ಯಾರು ಬ್ರಾಹ್ಮಣರ ಸಭೆಯಲ್ಲಿ, ಶ್ರಾದ್ಧಕಾಲದಲ್ಲಿ ಯಾವ ಪುರುಷನು ಇತರರಿಗೆ ಶ್ರವಣ ಮಾಡಿಸುವನೋ ಆ ಪುರುಷನು ಮಾಡುವ ಕರ್ಮವು ಫಲಪ್ರದವಾಗುವುದು.

ಮುಂದುವರೆದು ಯಮನು ನಚಿಕೇತನಿಗೆ ಹೀಗೆ ವಿವರಿಸಿದನು ;

ಸ್ವಯಂಭುವಾದ ಪರಮಾತ್ಮನು ತನ್ನ ಶಕ್ತಿಗಳನ್ನು ಬಹಿರ್ಮುಖವಾಗಿ ಹರಿಯಬಿಟ್ಟನು. ಆದ್ದರಿಂದ ಇಂದ್ರಿಯಗಳು ಬಾಹ್ಯವಸ್ತುಗಳನ್ನು ಮಾತ್ರ ನೋಡಬಲ್ಲವು. ಅವುಗಳಿಗೆ ಸೂಕ್ಷ್ಮಸ್ವರೂಪದ ಅಂತರಾತ್ಮವು ಗೋಚರಿಸುವುದಿಲ್ಲ. ವಿವೇಕಿಯು ಅಮೃತತ್ವವನ್ನು ಬಯಸಿದಲ್ಲಿ ಅವನು ಅಂತರ್ಮುಖನಾಗಿ ಅಂತರಾತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವನು.

ಮುಂದುವರೆದು ಆತ್ಮನ ಕಾರ್ಯ ಮತ್ತು ಗುಣಗಳನ್ನು ಈ ರೀತಿಯಾಗಿ ಯಮನು ವಿವರಿಸಿರುವನು :

ರೂಪ, ರಸ, ಗಂಧ, ಶಬ್ದ ಹಾಗೂ ಸ್ಪರ್ಶವೆಂಬ ಪಂಚಸುಖಗಳಿಂದ ಉಂಟಾಗುವ ಸುಖದ ಜ್ಞಾನವು ಆತ್ಮನಿಂದ ಆಗುವುದು. ಜಾಗೃತ್-ಸ್ವಪ್ನ ಸ್ಥಿತಿಗಳಲ್ಲಿ ಆಗುವ ವ್ಯಾಪಾರಗಳು ಯಾವುದರ ಬಲದಿಂದ ಜರುಗುತ್ತವೆಯೋ ಅಂತಹ ಸರ್ವವ್ಯಾಪಿಯಾದ ಆತ್ಮನನ್ನು ಸಾಕ್ಷಾತ್ಕರಿಸಿಕೊಂಡಮೇಲೆ ವಿವೇಕಿಯಾದವನು ಶೋಕರಹಿತನಾಗುವನು. ದೇಹಸಂಬಂಧಿಯಾದ ಜೀವನ ಸಮೀಪದಲ್ಲಿದ್ದು ಫಲವನ್ನು ಅನುಭವಿಸುವ ಮತ್ತು ಭೂತ ಭವಿಷ್ಯತ್ತುಗಳಿಗೆ ಒಡೆಯನಾದ ಆತ್ಮನನ್ನು ಅರಿತವನು ಭಯರಹಿತನಾಗುವನು. ಯಾವುದು ತಪಸ್ಸಿಗಿಂತ ಮೊದಲೇ ಅಂದರೆ ಅನಾದಿಕಾಲದಿಂದಲೂ ಇದ್ದಿತೋ, ಯಾವುದು ಉದಕ ಮತ್ತು ತತ್ತ್ವಗಳ ಸೃಷ್ಟಿಗಿಂತಲೂ ಪೂರ್ವದಲ್ಲಿ ಇದ್ದಿತೋ, ಯಾವುದು ಯಾರಿಗೂ ಅರಿಯದಂತೆ ಹೃದಯ ಗುಹೆಯೊಳಗೆ ಪ್ರವೇಶಿಸಿ ಪಂಚಭೂತಗಳೊಡನೆ (ಶರೀರದ ನಾನಾ ಅಂಗಗಳೊಡನೆ ಸಂಪರ್ಕದಿಂದ) ಇರುವುದನ್ನು ಜ್ಞಾನಿಗಳು ತಿಳಿಯುವರೋ ಅದೇ ಆತ್ಮ. ಸಕಲ ದೇವತಾತ್ಮಳಾದ ಅದಿತಿ ದೇವಿಯು ಯಾವ ಆತ್ಮದಿಂದ ಉತ್ಪನ್ನಳಾದಳೋ, ಯಾವುದು ಜೀವಿಯ ಶರೀರದಲ್ಲಿ ಪಂಚಭೂತಗಳೊಡನೆ ಸಂಪರ್ಕದಿಂದ ಗೂಢವಾಗಿ ನೆಲಸಿರುವುದೋ ಅದೇ ಆತ್ಮ. ಸ್ತ್ರೀಯರ ಗರ್ಭದಲ್ಲಿರುವಂತೆ ಎರಡು ಅರಣಿಗಳ ಮಧ್ಯದಲ್ಲಿರುವವನೂ, ಯಜ್ಞಾದಿಗಳಲ್ಲಿ ಯಜಮಾನನು ಅರ್ಪಿಸುವ ಹವಿಸ್ಸನ್ನು ದೇವತೆಗಳ ಬಳಿಗೆ ಒಯ್ಯುವವನೂ, ನಿತ್ಯವೂ ಎಚ್ಚರಿಕೆಯಿಂದ ಪೂಜ್ಯನಾದವನೂ ಆದ ಯಾವ ಅಗ್ನಿ ಇರುವನೋ ಅವನೇ ಈ ಆತ್ಮ. ಆತ್ಮನಿಂದಲೇ ಸೂರ್ಯನು ಉದಯಿಸುವನು ಹಾಗೂ ಆತ್ಮನಲ್ಲಿಯೇ ಸೂರ್ಯನು ಅಸ್ತಂಗತನಾಗುವನು. ಸಕಲ ದೇವತೆಗಳೂ ಆತ್ಮನಲ್ಲಿಯೇ ಜನಿಸಿ ಅವನಲ್ಲಿಯೇ ಲೀನವಾಗುವರು. ಇಂತಹ ಶಕ್ತಿ ಸಾಮರ್ಥ್ಯಗಳು ಇರುವುದು ಕೇವಲ ಆತ್ಮನಲ್ಲಿ ಮಾತ್ರ. ಆತ್ಮನಲ್ಲಿ ನಾನಾವಿಧದ ಭೇದಗಳಿರುವುದೆಂದು ತಿಳಿಯುವವನು ಅಜ್ಞಾನದಿಂದ ಮೋಹಿತನಾದವನು ಹಾಗೂ ಇವನು ಪುನರ್ಜನ್ಮಗಳಲ್ಲಿ ಸಿಲುಕುವನು. ಇಲ್ಲಿ ನಾನಾತ್ವ ಎಂದರೇನು ಎಂಬುದನ್ನು ಅರಿಯೋಣ - ಪ್ರಪಂಚದಲ್ಲಿ ನಾನಾವಿಧವಾದ ಅನೇಕ ಜೀವರಾಶಿಗಳಿರುವುದು. ಅವುಗಳಲ್ಲೆಲ್ಲಾ ಒಂದೇ ಅದ ಆತ್ಮವು ಅಂತರಾತ್ಮನಾಗಿ (ಹೃದಯ ಗುಹೆಯೊಳಗೆ) ಗೂಢವಾಗಿ ನೆಲಸಿರುವನು. ಆದ್ದರಿಂದ ಈ ವಿಧವಾದ ಜೀವಿಗಳು, ಅವುಗಳಲ್ಲಿರುವ ಆತ್ಮವೂ ಬೇರೆ ಎಂಬುದಾಗಿ ನಾನಾತ್ವವನ್ನು ಆರೋಪಿಸುವವನು ಮರಣಕ್ಕೆ ಪದೇ ಪದೇ ಈಡಾಗುವನು. ಅನೇಕ ಜೀವಿಗಳಿದ್ದರೂ ಅವುಗಳಲ್ಲಿರುವ ಆತ್ಮ ಒಂದೇ ಹೊರತು ಬೇರೆ ಬೇರೆಯಲ್ಲ. ಹೀಗೆ ಅನೇಕ ಜೀವಿಗಳಲ್ಲಿ ಏಕಕಾಲದಲ್ಲಿ ನೆಲೆಸಿರುವುದು ಆತ್ಮನ ವೈಶಿಷ್ಟ್ಯ. ಮನುಷ್ಯನ ಹೃದಯ ಮಧ್ಯದಲ್ಲಿ (ಅಂತಃಕರಣ) ಆತ್ಮನನ್ನು ಪುರುಷ ಎನ್ನುವರು.

ಎಲೈ ಗೌತಮನೇ! (ಗೌತಮ ವಂಶದಲ್ಲಿ ಜನಿಸಿದ ನಚಿಕೇತನೆ), ಶುದ್ಧೋದಕದಲ್ಲಿ ಬೇರೆ ಶುದ್ಧವಾದ ನೀರನ್ನು ಬೆರೆಸಿದರೆ ಅವೆರಡೂ ಒಂದಾಗಿ ಯಾವ ವ್ಯತ್ಯಾಸವೂ ಇಲ್ಲದಂತೆ ಏಕರೂಪವಾಗಿರುವುದೋ ಅದರಂತೆ ಬ್ರಹ್ಮಜ್ಞಾನಿಯ ಆತ್ಮವು ಬ್ರಹ್ಮ ರೂಪವಾದ ಆತ್ಮನಲ್ಲಿ ಲೀನವಾಗುವುದು.

ಮುಂದುವರೆದು ಯಮನು ಹೀಗೆ ವಿವರಿಸಿದನು :-

ಶರೀರವನ್ನು ಒಂದು ಪಟ್ಟಣವೆನ್ನುವರು. ಇದಕ್ಕೆ 11 ದ್ವಾರಗಳಿರುವುದು - ಶಿರಸ್ಸು(ಬ್ರಹ್ಮರಂಧ್ರ), ನಾಭಿ, 2 ಕಣ್ಣುಗಳು, 2 ಕಿವಿಗಳು, 2 ನಾಸಿಕದ್ವಾರ, 2 ಅಧೋರಂಧ್ರಗಳು (ಜಲ, ಮಲದ್ವಾರ), ಮುಖ. ಇಂತಹ ಪಟ್ಟಣದಲ್ಲಿ ಶುದ್ಧಚೈತನ್ಯಾತ್ಮನು ನೆಲೆಸಿರುವನು. ಹಂಸವತೀ ಋಕ್ಕೆಂದು ಪ್ರಸಿದ್ಧವಾದ ಹಂಸಃ ಶುಚಿಷತ್ ಎಂಬ ಮಂತ್ರವಿರುವುದು. ಈ ಮಂತ್ರಕ್ಕೆ ಸೂರ್ಯನು ದೇವತೆಯಾಗಿದ್ದರೂ, ಇಲ್ಲಿ ಅದಿತ್ಯರೂಪದಿಂದ ಜಗತ್ತನ್ನು ಬೆಳಗುತ್ತಿರುವ ಆತ್ಮನೇ ಸೂರ್ಯ ಎಂದು ಅರ್ಥೈಸಲಾಗಿದೆ. ಈ ಆತ್ಮವು ಆಕಾಶದಲ್ಲಿ ಸೂರ್ಯರೂಪ, ಅಂತರಿಕ್ಷದಲ್ಲಿ ವಾಯು, ಯಜ್ಞವೇದಿಯಲ್ಲಿ ಅಗ್ನಿರೂಪದಿಂದಲೂ, ಯಜಮಾನನ ಮನೆಯಲ್ಲಿ ಅತಿಥಿರೂಪದಿಂದಲೂ ವಾಸಿಸುತ್ತಿರುವುದು. ಆತ್ಮವು ಶರೀರದಲ್ಲಿರುವ ಪ್ರಾಣವಾಯುವನ್ನು ಮೇಲಕ್ಕೆತ್ತುವುದು ಹಾಗೂ ಅಪಾನವಾಯುವನ್ನು ಕೆಳಕ್ಕೆ ದೂಡುವುದು. ದೇಹವನ್ನು ಬಿಟ್ಟು ಹೊರಟುಹೋಗುವ ದೇಹಿಯು ಈ ಶರೀರವನ್ನು ತ್ಯಜಿಸಿದ ಮೇಲೆ ಅಲ್ಲಿ ಏನು ಉಳಿಯುವುದು? ಅಂದರೆ ಮನುಷ್ಯನು ಮೃತನಾಗಿ ಶರೀರವನ್ನು ತ್ಯಜಿಸಿ ಹೋದಮೇಲೆ ಆ ಮೃತಶರೀರದಲ್ಲಿ ಆತ್ಮನು ವಾಸಿಸುವುದಿಲ್ಲ. ಮನುಷ್ಯರು ಜೀವಿಸುತ್ತಿರುವುದು ಪ್ರಾಣವಾಯುಶಕೆಯಿಯಿಂದಲೂ ಅಲ್ಲ, ಅಪಾನವಾಯುವಿನ ಬಲದಿಂದಲೂ ಅಲ್ಲ. ಇವೆರಡೂ ಯಾವ ಆತ್ಮನ ಆಶ್ರಯದಲ್ಲಿರುವುದೋ ಅದರ ಬಲದಿಂದ ಜನರು ಬದುಕಿರುವರು. ಅಂದರೆ ಆತ್ಮನು ಶರೀರದಲ್ಲಿರುವವರೆಗೂ ಮನುಷ್ಯನು ಜೀವಿಸಿರುವನು. ಆತ್ಮನು ಶರೀರವನ್ನು ತ್ಯಜಿಸಿದ ಕೂಡಲೇ ಮೃತಶರೀರದಲ್ಲಿ ಪ್ರಾಣಾಪಾನವಾಯುಗಳೂ, ಚೈತನ್ಯವೂ ಇರುವುದಿಲ್ಲ.

ಹೇ ನಚಿಕೇತನೆ! ಸನಾತನವಾದ ಬ್ರಹ್ಮರಹಸ್ಯವನ್ನು ಹೇಳುವೆ ಕೇಳು. ವಿವೇಕಿಯಾದ ಪುರುಷನು ಬ್ರಹ್ಮಜ್ಞಾನವನ್ನು ಪಡೆಯುವುದರಿಂದ ಸಂಸಾರದಿಂದ ಬಿಡುಗಡೆ ಹೊಂದಿ ಮರಣಾನಂತರ ಪರಮಪದವನ್ನು ಸೇರುವನು. ಅಲ್ಲಿಂದ ಮುಂದಕ್ಕೆ ಅವನಿಗೆ ಪುನರ್ಜನ್ಮವಿರುವುದಿಲ್ಲ. ಬ್ರಹ್ಮಜ್ಞಾನವಿಲ್ಲದ ವ್ಯಕ್ತಿಗೆ ಅವನ ಕರ್ಮಾಫಲಾನುಸಾರ ಮರಣಾನಂತರ ಪುನರ್ಜನ್ಮವನ್ನು ನಾನಾ ಶರೀರಗಳಲ್ಲಿ ಪಡೆಯುವನು. ಕೆಲವರು ಜಡರೂಪವನ್ನು ಹೊಂದುವರು. ಜೀವಿಯು ನಿದ್ರೆಯಲ್ಲಿರುವಾಗಲೂ ಆತ್ಮನು ಎಚ್ಚರವಾಗಿದ್ದು ಅವರ ಕಾಮನೆಗಳಿಗನುಸಾರವಾಗಿ ಆಶೋತ್ತರಗಳನ್ನು ನಿರ್ಮಿಸುತ್ತಿರುವನು. ಆತ್ಮನೇ ಪರಿಶುದ್ಧನೂ, ಪವಿತ್ರನೂ, ನಿತ್ಯನೂ ಆದ ಬ್ರಹ್ಮನು. ನದಿಯ ನೀರನ್ನು ನಾನಾ ಪಾತ್ರೆಗಳಲ್ಲಿ ತುಂಬಿದರೆ ಆ ನೀರು ಆಯಾ ಪಾತ್ರೆಗಳ ಆಕಾರ, ರೂಪಗಳಿಗೆ ಅನುಸಾರವಾಗಿ ನಾನಾ ರೂಪಗಳನ್ನು ಧರಿಸುವುದು. ಹಾಗೇ ಒಂದೇ ಅದ ಆತ್ಮವು ಅನೇಕ ಜೀವಿಗಳ ಶರೀರಗಳಲ್ಲಿ ಅವುಗಳ ಆಕಾರ, ರೂಪಗಳಿಗನುಸಾರವಾಗಿ ಒಳಗೂ ಹೊರಗೂ ವ್ಯಾಪಿಸಿರುವುದು. ಜೀವಿಗಳಲ್ಲಿರುವ ಆತ್ಮನಿಗೆ ಸುಖದುಃಖಗಳಿಲ್ಲವೇ ಎಂದರೆ, ಇಲ್ಲ. ಅದು ಕೇವಲ ಶರೀರಕ್ಕೆ ಮಾತ್ರ. ಅನಿತ್ಯ ವಸ್ತುಗಳಲ್ಲಿ ನಿತ್ಯನೂ, ಎಲ್ಲ ಚೇತನಗಳಲ್ಲಿದ್ದರೂ ಒಬ್ಬನೇ ಆದ ಚೈತನ್ಯನೂ, ಎಲ್ಲರ ಆಶೋತ್ತರಗಳನ್ನು ಪೂರೈಸುವವನೂ ಆದ ಪರಮಾತ್ಮನು ತಮ್ಮ ಆತ್ಮನಲ್ಲಿಯೇ ಇರುವನೆಂಬುದನ್ನು ಯಾರು ಅರಿಯುವರೋ ಅವರು ಶಾಶ್ವತ ಸುಖವನ್ನು ಅನುಭವಿಸುವರು. ಪರಮಪದವೆಂಬ ಸ್ಥಾನದಲ್ಲಿ (ನಿರ್ವಿಕಾರವಾದ ಆತ್ಮನಲ್ಲಿ ಅಥವಾ ಮುಕ್ತಿಯಲ್ಲಿ) ಈ ಲೋಕದಲ್ಲಿರುವಂತೆ ಸೂರ್ಯನು ಪ್ರಕಾಶಿಸುವುದಿಲ್ಲ, ಚಂದ್ರ, ನಕ್ಷತ್ರಗಳ ಬೆಳಕೂ ಇರುವುದಿಲ್ಲ, ಮಿಂಚಿನ ಪ್ರಕಾಶವೂ ಇರುವುದಿಲ್ಲ. ಹೀಗಿರುವಾಗ ಅಗ್ನಿಯ ಪಾಡೇನು? ಅಗ್ನಿಯೂ ಇರುವುದಿಲ್ಲ. ಅಂದರೆ ಪರಮಪದದಲ್ಲಿ ಸದಾ ಕತ್ತಲು ಅವರಿಸಿರುವುದೇ? ಇಲ್ಲ. ಆತ್ಮವು ಸ್ವಯಂಪ್ರಕಾಶಿಸುವ ಗುಣವುಳ್ಳದ್ದು. ಅದು ಪ್ರಕಾಶಿಸಿದ ನಂತರವೇ ಉಳಿದೆಲ್ಲವೂ ಪ್ರಕಾಶಿಸುವುದು. ಕೇವಲ ಅದರ ಬೆಳಕಿನಿಂದ ಸಮಸ್ತವೂ ಬೆಳಗುವುದು.

ಇದೇ ಪರಮಪದದ ವರ್ಣನೆಯನ್ನು ಮತ್ತೊಂದು ರೀತಿ ವರ್ಣಿಸಿದರೆ - ಜನನ-ಮರಣ ಪ್ರವಾಹವೇ ಸನಾತನವಾದ ಅಶ್ವತ್ಥವೃಕ್ಷವು. ಇದರ ಬೇರುಗಳು ಉರ್ಧ್ವಮುಖವಾಗಿ ಹರಡಿಕೊಂಡಿರುವುದು. ಕೊಂಬೆಗಳು ಅಧೋಮುಖವಾಗಿರುವವು. ಈ ವೃಕ್ಷದ ಮೂಲವೇ ಶುದ್ಧವಸ್ತುವಾದ ಬ್ರಹ್ಮ. ಅಂದರೆ ಬ್ರಹ್ಮನಿಂದಲೇ ಸಂಸಾರ ಹಾಗೂ ಬಾಹ್ಯಪ್ರಪಂಚವು ಉದ್ಭವಿಸಿರುವುದು. ಸರ್ವಲೋಕಗಳೂ ಅದರ ಆಶ್ರಯದಲ್ಲೇ ಇರುವುದು. ಅದರ ಆಚೆಗೆ ಯಾರೂ ಹೋಗಲಾರರು. ಅದೇ ಅಂತಿಮ ಸ್ಥಾನವಾದ್ದರಿಂದ ಅದರ ಮುಂದಕ್ಕೆ ಅಥವಾ ಆಚೆಗೆ ಏನೂ ಇಲ್ಲ.

ನಮ್ಮ ದೃಷ್ಟಿಗೆ ಗೋಚರವಾಗುವ ಈ ವಿಶ್ವವೂ ಪ್ರಾಣದಲ್ಲಿಯೇ ಅಂದರೆ ಪ್ರಾಣದಲ್ಲಿ ಚೈತನ್ಯರೂಪವೂ, ಸರ್ವವ್ಯಾಪಿಯಾದ ಬ್ರಹ್ಮದಲ್ಲಿಯೇ ಚಲಿಸುವುದು. ವಿಶ್ವಕ್ಕೆ ಕಾರಣೀಭೂತವಾದ ಈ ಬ್ರಹ್ಮದ ಅನಂತ ಸ್ವರೂಪವನ್ನು ಯೋಚಿಸುವುದಕ್ಕೂ ಆಗದು. ಇದು ಮನುಷ್ಯನ ಬುದ್ಧಿಗೆ ನಿಲುಕದು. ಆದರೂ ಯೋಗ ಸಾಧನೆಗಳಿಂದ ಆತ್ಮಸಾಕ್ಷಾತ್ಕಾರ ಮಾಡಿಕೊಂಡ ಜ್ಞಾನಿಗಳಿಗೆ ಇದು ಅರಿವಾಗಿ ಅಮೃತರಾಗುವರು. ವಿಶ್ವದ ಉತ್ಪತ್ತಿಸ್ಥಿತಿಲಯಗಳಿಗೆ ಕಾರಣೀಭೂತವಾದ ಪರಮಾತ್ಮನ ಆಜ್ಞೆಯಿಂದಲೇ ಆಗ್ನಿಯು ಸುಫ್ಯೂವುದು, ಸೂರ್ಯ-ಚಂದ್ರರು, ಇಂದ್ರ, ವಾಯುವು ಹಾಗೂ ಮೃತ್ಯುವೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವರು.

ಈ ಶರೀರವು ಪತನವಾಗುವುದಕ್ಕೆ ಮೊದಲೇ ಆತ್ಮಜ್ಞಾನವಾದರೆ ಉತ್ತಮ, ಇಲ್ಲದಿದ್ದಲ್ಲಿ ಪುನರ್ಜನ್ಮವೆತ್ತ ಬೇಕಾಗುವುದು. ಆತ್ಮಜ್ಞಾನಿಗೆ ಬ್ರಹ್ಮಸಾಕ್ಷಾತ್ಕಾರವು ಕನ್ನಡಿಯಲ್ಲಿನ ಮುಖದಂತೆ ಸ್ಪಷ್ಟವಾಗಿ ಕಾಣಿಸುವುದು.

ಮನುಷ್ಯನ ಅಂತಃಕರಣದಲ್ಲಿ ಕಾಮನೆಗಳು ಇಲ್ಲವಾದಲ್ಲಿ ಅವನು ಜೀವನ್ಮುಕ್ತನಾಗಿ ಬ್ರಹ್ಮಾನಂದವನ್ನು ಅನುಭವಿಸುವನು. ಮನಸ್ಸಿನಲ್ಲಿ ಮನೆಮಾಡಿಕೊಂಡಿರುವ ಮಿಥ್ಯಾಬಂಧನಗಳು ನಶಿಸಿದಾಗ ಮನುಷ್ಯನು ಮುಕ್ತಿಯನ್ನು ಪಡೆಯುವನು.

ಮನುಷ್ಯನ ಶರೀರದಲ್ಲಿ 101 ನಾಡಿಗಳಿರುವುದು. ಅವುಗಳಲ್ಲಿ ಸುಷುಮ್ನಾ ನಾಡಿಯು ಶಿರಸ್ಸಿನ ತುದಿಯಲ್ಲಿ ಬ್ರಹ್ಮರಂಧ್ರದವರೆಗೂ ಹೋಗಿರುವುದು. ಈ ನಾಡಿಯಲ್ಲಿ ಪ್ರಾಣವಾಯುವನ್ನು ಚಲಿಸುವಂತೆ ಮಾಡಿ ಬ್ರಹ್ಮರಂಧ್ರದ ಮೂಲಕ ಪ್ರಾಣವು ಹೋದಲ್ಲಿ ಆ ಮನುಷ್ಯನಿಗೆ ಮುಕ್ತಿಯು ದೊರೆಯುವುದು. ಬೇರಾವುದೇ ರಂಧ್ರಗಳ ಮೂಲಕ ಪ್ರಾಣವು ಹೋದಲ್ಲಿ ಅವನಿಗೆ ಪುನರ್ಜನ್ಮ ಖಚಿತ.

ಅಂಗುಷ್ಠ ಪ್ರಮಾಣದಲ್ಲಿ ಪುರುಷನು ಅಂದರೆ ಅಂತರಾತ್ಮನು ಹೃದಯದಲ್ಲಿರುವನು. ಇದನ್ನು ಅರಿಯಬೇಕಾದರೆ ಸಿಪ್ಪೆಯನ್ನು ಸುಲಿದು ಒಳಗಿರುವ ವಸ್ತುವನ್ನು ತೆಗೆಯುವಂತೆ ಆತ್ಮಜ್ಞಾನದಿಂದ ಬೇರ್ಪಡಿಸಬೇಕು. ಅದೇ ದಿವ್ಯ ತೇಜಸ್ಸಿನಿಂದ ಬೆಳಗುತ್ತಿರುವ ಅಮೃತ ವಸ್ತು.

ಮೃತ್ಯುವು ಅಥವಾ ಯಮನು ಉಪದೇಶಿಸಿದ ಸಂಪೂರ್ಣ ಯೋಗ ವಿಧಾನವನ್ನು ಹಾಗೂ ಬ್ರಹ್ಮವಿದ್ಯೆಯನ್ನರಿತುಕೊಂಡು ನಚಿಕೇತನು ಬ್ರಹ್ಮ ಪದವನ್ನು ಪಡೆದನು.

ಇಲ್ಲಿಗೆ ಕಠೋಪನಿಷತ್ತಿನ ಸೂಕ್ಷ್ಮವಿವರಣೆ ಮುಗಿಯಿತು.

ಮೂಲ : ಋಗ್ವೇದ ಸಂಹಿತೆ - ಭಾಗ - 27

….ಮುಂದುವರೆಯುವುದು



Sunday, March 29, 2020

ಋಗ್ವೇದದ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತ

ಭಾಗ - 3 - ಋಗ್ವೇದದ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತದ ಏಳು ಮಂತ್ರಗಳ ಭಾವಾರ್ಥ ಹಾಗೂ
ವಿಶೇಷ ವಿಷಯಗಳು



ಜಿಜ್ಞಾಸು ನಚಿಕೇತನು ಯಮ ನಿವಾಸಕ್ಕೆ ಸೂಕ್ಷ್ಮರೂಪದಲ್ಲಿ ಪಯಣಿಸಿ ಅಲ್ಲಿಂದ ಮರಳಿ ಬರುವ ವಿಷಯವೆಲ್ಲ ಕಠೋಪನಿಷತ್ತಿನಲ್ಲಿರುವುದು ಸರ್ವರಿಗೂ ತಿಳಿದಿರುವುದು. ಬೇರೆ ಯಾವ ಉಪನಿಷತ್ತಿನಲ್ಲೂ ಇದರ ಬಗ್ಗೆ ಉಲ್ಲೇಖವಿಲ್ಲ. ಆದರೆ ಋಗ್ವೇದದಲ್ಲಿನ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತವು ಆ ರೀತಿಯ ಕಲ್ಪನೆಯನ್ನು ಸಾಂಕೇತಿಕ ಭಾಷೆಯಲ್ಲಿ ಸೂಚಿಸುವುದು.

7 ಮಂತ್ರಗಳ ಈ ಸೂಕ್ತವು ನಚಿಕೇತನ ಯಮಲೋಕ ಯಾತ್ರೆಯ ಮೇಲೆ ಸ್ವಲ್ಪ ಬೆಳಕನ್ನು ಚೆಲ್ಲುವುದು. ಋಗ್ವೇದದಲ್ಲಿ ಯಮ ಒಬ್ಬ ಆದಿತ್ಯ. ಅಥವಾ ಕಠೋಪನಿಷತ್ತಿನಲ್ಲಿರುವಂತೆ ಅವನು ವಿವಸ್ವಾನನ ಪುತ್ರ. ಋಷಿಯಾದ ಕುಮಾರನು ತನ್ನ ಆತ್ಮೋನ್ನತಿಯ, ಆಧ್ಯಾತ್ಮಿಕ ಸಿದ್ಧಿಯ, ಎಲ್ಲೆ ಮೀರಿದ ರಹಸ್ಯಜ್ಞಾನದಿಂದ, ಭೌತಿಕ ಜೀವನದ ಪಂಚಭೌತಿಕ ಶರೀರಸ್ಥವಾದ, ಭೌತ ಪ್ರಜ್ಞಾಸ್ತರವನ್ನು ಅತಿಕ್ರಮಿಸಿ, ಪ್ರಗತಿಹೊಂದಿ, ತನ್ನ ಆಧ್ಯಾತ್ಮಿಕ ಸೂಕ್ಷ್ಮಶರೀರದಲ್ಲಿ ಉನ್ನತ ಪ್ರಜ್ಞೆಯ ವಿಶಾಲ ಊರ್ಧ್ವಲೋಕಗಳತ್ತ ಪಯಣಿಸಿ, ಸರ್ವಭೂತಪತಿಯನ್ನು ದರ್ಶಿಸುತ್ತಾನೆ.

ಭಾಷ್ಯಕಾರರ ಪ್ರಕಾರ ಈ ಸೂಕ್ತಕ್ಕೆ ಎರಡು ವಿಧವಾಗಿ ಅರ್ಥವಿವರಣೆ ಮಾಡಬಹುದು. ಅದರ ಪ್ರಕಾರ ಯಮನ ಪರವಾಗಿ ಒಂದು ಅರ್ಥ ಹಾಗೂ ಆದಿತ್ಯನ ಪರವಾಗಿ ಇನ್ನೊಂದು ಅರ್ಥ. ಅವುಗಳನ್ನೇ ಇಲ್ಲಿ ನೀಡಲಾಗಿದೆ.

ಯಸ್ಮ್ನಿನ್ನಿತಿ ಸಪ್ತರ್ಚo ಸಪ್ತಮಂ ಸೂಕ್ತo ಯಮಗೋತ್ರಸ್ಯ ಕುಮಾರಸ್ಯಾರ್ಷo |
ಅನುಷ್ಟುಭಂ ಯಮದೇವತ್ಯಂ |
ತಥಾ ಚಾನುಕ್ರಾಂತಂ
ಯಸ್ಮಿನ್ಕುಮಾರೋ ಯಮಾಯನೋ ಯಾಮಮಾನುಷ್ಟುಭಂ ಶ್ಚಿತಿ ||

ಮಂಡಲ - 10; ಅನುವಾಕ - 11; ಸೂಕ್ತ - 135;ಅಷ್ಟಕ - 8; ಅಧ್ಯಾಯ - 7; ವರ್ಗ - 23.
ಸೂಕ್ತದಲ್ಲಿರುವ ಋಕ್ಸಂಖ್ಯೆ - 7;
ಋಷಿ - ಕುಮಾರೋ ಯಮಾಯನಃ
ದೇವತೆ - ಯಮ; ಛಂದಸ್ಸು - ಅನುಷ್ಟುಪ್

ಯಸ್ಮಿನ್ವೃಕ್ಷೇ ಸುಪಾಲಾಶೇ ದೇವೈಃ ಸಂಪಿಬತೇ ಯಮಃ|
ಅತ್ರಾ ನೋ ವಿಶ್ಪತಿಃ ಪಿತಾ ಪುರಾಣಾನ್ ಅನು ವೇನತಿ || 1 ||

ಯಮನ ಪರವಾದ ಅರ್ಥ:-
ಉತ್ತಮವಾದ ಎಲೆಗಳಿಂದ ದಟ್ಟವಾಗಿ ನಿಬಿಡವಾದ ವೃಕ್ಷದ ನೆರಳು ಯಾವರೀತಿ ವಿಶ್ರಾಂತಿಗೆ ಸುಖಕರವಾಗಿರುವುದೋ ಅದರಂತೆ ಸುಖಕರವಾದ ಯಮನ ಆಸ್ಥಾನದಲ್ಲಿ (ಯಮಾಲಯದಲ್ಲಿ) ವಿವಸ್ವಂತನ ಮಗನಾದ ಯಮನು ತನ್ನ ಪರಿಜನರೊಡನೆ ಸುಖವಾಗಿ ವಾಸಮಾಡುತ್ತಾನೆ. ಇಂತಹ ಈ ಯಮಲೋಕದಲ್ಲಿ ಬಹುಕಾಲದಿಂದ ವಾಸಮಾಡುತ್ತಿರುವ ಪಿತೃಗಳ ಸಮೀಪದಲ್ಲಿಯೇ ನಾನೂ (ನಚಿಕೇತನು) ವಾಸಮಾಡಬೇಕೆಂದು ಜನರಲ್ಲಿ ಶ್ರೇಷ್ಠವಾದ ನನ್ನ ತಂದೆಯು ಅಪೇಕ್ಷಿಸುತ್ತಾನೆ.

ಅದಿತ್ಯಪರವಾದ ಅರ್ಥ
ಉತ್ತಮವಾದ ಎಲೆಗಳಿಂದ ನಿಬಿಡವಾದ ವೃಕ್ಷದ ನೆರಳಿನಂತೆ ಸುಖಕರವಾದ ಸ್ವರ್ಗದಲ್ಲಿ (ಅಂತರಿಕ್ಷದಲ್ಲಿ) ಪ್ರಕಾಶಮಾನವಾದ ತನ್ನ ಕಿರಣಗಳಿಂದ ಆದಿತ್ಯನು ಬೆಳಗುತ್ತಿರುವನು. ಪ್ರಜೆಗಳಿಗೆ ವೃಷ್ಟಿಪ್ರಕಾಶನಾದಿಗಳನ್ನು ಕೊಟ್ಟು ಸಲಹುವವನೂ ಸರ್ವರಿಗೂ ಪ್ರಾಣಭೂತನೂ ಆದ ಆ ಆದಿತ್ಯನು ಹಿಂದಿನ ಸ್ತೋತೃಜನರನ್ನೂ ನಮ್ಮನ್ನೂ ಅನುಗ್ರಹಿಸಬೇಕೆಂದು ಬಯಸುತ್ತಾನೆ.

ಪುರಾಣಾನ್ ಅನುವೇನಂತಂ ಚರಂತಂ ಪಾಪಯಾಮುಯಾ|
ಅಸೂಯನ್ನ ಭ್ಯ ಚಾಕಾಶಂ ತಸ್ಮಾ ಅಸ್ಪೃಹಯಂ ಪುನಃ || 2 ||

ಯಮನ ಪರವಾದ ಅರ್ಥ
(ನಚಿಕೇತನ ವಾಕ್ಯ) ಪುರಾತನರಾದ ಪಿತೃಗಳನ್ನು ನಾನು ಅನುಸರಿಸಿ ಹೋಗಲೆಂದು ಬಯಸುತ್ತಿರುವ, ದುರ್ಬುದ್ಧಿಯುಕ್ತನಾದ ವಾಜಾಶ್ರವಸ್ಸೆಂಬ ನನ್ನ ತಂದೆಯನ್ನು ಮೊದಲು ನಾನು ನನ್ನ ಮನಸ್ಸಿನ ಉದ್ವೇಗದಿಂದ ನೋಡಿದೆನು. ಅನಂತರ ತಂದೆಯ ಆಜ್ಞೆಯನ್ನು ಪಾಲಿಸಬೇಕೆಂಬ ಕರ್ತವ್ಯದಿಂದ ಮೃತ್ಯುವಿನ ಬಳಿಗೆ ಹೋಗಲು ಇಚ್ಛಿಸಿದೆನು.




ಈ ಋಕ್ಕಿನಲ್ಲಿರುವ ವಾಕ್ಯವನ್ನು ನಚಿಕೇತನು ಆಡಿರುವನು- ನನ್ನ ತಂದೆ ವಾಜಾಶ್ರವಸ್ಸನು ದುರ್ಬುದ್ಧಿಯಿಂದ ಪಿತೃಗಳ ಬಳಿ ವಾಸಿಸೆಂದು ಬಯಸಿರುವನು. ಇದನ್ನು ಕೇಳಿ ಮೊದಲು ನನ್ನ ಮನಸ್ಸಿಗೆ ಬಹಳ ಕೋಪ ಹಾಗೂ ವ್ಯಥೆಯುಂಟಾಯಿತು. ತಂದೆಯಾದವನೇ ತನ್ನ ಮಗನನ್ನು ಮೃತ್ಯುವಿನ ಸಮೀಪಕ್ಕೆ ಕಳುಹಿಸುವುದುಂಟೆ? ಇದೇಕೆ ಇವನಿಗೆ ಈ ದುರ್ಬುದ್ಧಿ ಉಂಟಾಯಿತು ಎಂಬ ಆಕ್ರೋಶವು ನನ್ನ ಮನಸ್ಸಿನಲ್ಲಿ ಉಂಟಾಯಿತು. ಅನಂತರ ಹಾಗೇ ಯೋಚಿಸುವಲ್ಲಿ ತಂದೆಯ ಆಜ್ಞೆಯನ್ನು ಪಾಲಿಸುವುದೇ ಪುತ್ರನ ಕರ್ತವ್ಯವೆಂದು ತಿಳಿದು ಮೃತ್ಯುವಿನ ಬಳಿ ಹೋಗುವೆನೆಂದು ಮನಸ್ಸಿನಲ್ಲಿ ನಿರ್ಧರಿಸಿದೆನು ಎಂಬುದಾಗಿ ಈ ಮಂತ್ರದ ಮುಖ್ಯ ಅಭಿಪ್ರಾಯ.

ಆದಿತ್ಯಪರವಾದ ಅರ್ಥ
(ಋಷಿಕುಮಾರನ ವಾಕ್ಯ) ಪುರಾತನರಾದ ಸ್ತೋತೃಜನರನ್ನು (ಪೂರ್ವಕಾಲದ ಋಷಿಗಳನ್ನು ಅಥವಾ ಪಿತೃಗಳನ್ನು) ಅಪೇಕ್ಷಿಸುತ್ತಿರುವವನೂ ಉದಯಾಸ್ತಮಾನಗಳ ಮಧ್ಯಕಾಲದಲ್ಲಿ ಅಂತರಿಕ್ಷದಲ್ಲಿ ಸಂಚರಿಸುತ್ತಿರುವವನೂ ಆದ ಆದಿತ್ಯನನ್ನು ಸ್ತೋತ್ರಮಾಡಲು ಅಸಮರ್ಥನಾದ ಇಲ್ಲವೇ ಮನಸ್ಸಿಲ್ಲದ ನೀಚಬುದ್ಧಿಯಿಂದ ಮೊದಲಿಗೆ ಅಸೂಯೆಯಿಂದ ಕೂಡಿದವನಾಗಿ ನೋಡಿದೆನು. ಆದಿತ್ಯನ ಮಹಾತ್ಮೆಯನ್ನು ತಿಳಿದನಂತರ ಈಗ ಆದಿತ್ಯನನ್ನು ಸ್ತುತಿಗಳಿಂದಲೂ ಪರಿಚರಣ ಕರ್ಮಗಳಿಂದಲೂ ಪಡೆಯಲು ಇಚ್ಛಿಸಿದೆನು.

(ಕುಮಾರ ಋಷಿಯ ವಾಕ್ಯ) - ತನ್ನನ್ನು ಹಿಂದಿನಿಂದಲೂ ಸ್ತೋತ್ರ ಮಾಡುತ್ತಿರುವ ಪುರಾತನ ಋಷಿಗಳನ್ನು ಅಥವಾ ಪಿತೃಗಳನ್ನು ಅನುಗ್ರಹಿಸಬೇಕೆಂದು ಅಪೇಕ್ಷಿಸುತ್ತಿರುವವನೂ ಉದಯಕಾಲದಿಂದ ಅಸ್ತಮಕಾಲದವರೆಗೂ ಅಂತರಿಕ್ಷದಲ್ಲಿ ಸಂಚರಿಸುತ್ತಿರುವವನೂ ಆದ ಆದಿತ್ಯನನ್ನು ನಾನು ಸ್ತೋತ್ರಮಾಡಲು ಕೈಲಾಗದೆ ದುರ್ಬುದ್ಧಿಯಿಂದಲೂ ಅಸೂಯೆಯಿಂದಲೂ ಯುಕ್ತನಾಗಿ ಈ ಸೂರ್ಯನೇನು ಮಹಾ? ಪ್ರಪಂಚದಲ್ಲಿ ಕಂಡುಬರುವ ವಸ್ತುಗಳಲ್ಲಿ ಇವನೂ ಒಂದು ಎಂಬ ಭಾವನೆಯಿಂದ ನೋಡಿದೆನು. ಅನಂತರ ಈ ಆದಿತ್ಯನ ಮಹಾತ್ಮೆಯನ್ನು

ತಿಳಿದ ಬಳಿಕ ನನ್ನ ಆ ಕೆಟ್ಟ ಬುದ್ಧಿಯನ್ನು ಬಿಟ್ಟು ಆದಿತ್ಯನನ್ನು ಸ್ತೋತ್ರಗಳಿಂದಲೂ ಪರಿಚರಣ ಕರ್ಮಗಳಿಂದಲೂ ಪ್ರಸನ್ನನಾಗುವಂತೆ ಮಾಡಿಕೊಳ್ಳಲು ಬಯಸಿದೆನು.

ಈ ಮೇಲಿನ ವಾಕ್ಯಗಳನ್ನು ಕುಮಾರನೆಂಬ ಋಷಿಯು ಹೇಳಿದ್ದಾನೆ. ಅದಿತ್ಯನ ಮಹಾತ್ಮೆಯು ಮೊದಲು ತನಗೆ ಗೊತ್ತಿಲ್ಲವಾದ್ದರಿಂದ ಅವನನ್ನು ಅಲಕ್ಷ್ಯದಿಂದಲೂ ದುರ್ಬುದ್ಧಿಯಿಂದಲೂ ನೋಡಿದೆನೆಂದೂ ಅನಂತರ ಜ್ಞಾನೋದಯವಾದ ಮೇಲೆ ಆದಿತ್ಯನ ಮಹಿಮೆಯ ಅರಿವುಂಟಾಗಿ ಅವನನ್ನು ಸ್ತುತಿಸಿ ಅವನ ಅನುಗ್ರಹವನ್ನು ಪಡೆಯಬೇಕೆಂದು ಇಚ್ಛಿಸಿದೆನು ಎಂದು ಹೇಳಿಕೊಂಡಿದ್ದಾನೆ.

ಯಂ ಕುಮಾರ ನವಂ ರಥಮಚಕ್ರಂ ಮನಸಾಕೃ ಣೋ |
ಏಕೇಷಂ ವಿಶ್ವತಃ ಪ್ರಾಂಚಮಪಶ್ಯನ್ನಧಿ ತಿಷ್ಠಸಿ||3||

ಯಮನಪರವಾದ ಅರ್ಥ
ಎಲೈ ನಚಿಕೇತನೇ! ಹೊಸದಾದ ಅಂದರೆ ಇದುವರೆಗೂ ನೋಡದಿರುವುದೂ ಚಕ್ರವಿಲ್ಲದ್ದೂ, ಒಂದೇ ಅಚ್ಚಿನ ಮರವುಳ್ಳದ್ದೂ ಆದರೂ, ಸಮಸ್ತ ಪ್ರದೇಶಗಳಲ್ಲೂ ಚೆನ್ನಾಗಿ ಸಂಚರಿಸಬಲ್ಲದ್ದೂ ಆದ ಯಾವ ರಥವನ್ನು ಹತ್ತಿ ನನ್ನ ಬಳಿಗೆ ಬರಬೇಕೆಂದು ಮನಸ್ಸಿನಲ್ಲಿ ನಿಶ್ಚಯಮಾಡಿದಿಯೋ (ಅಂತಹ ರಥವನ್ನು) ವಿವೇಚನಾಶಕ್ತಿರಹಿತನಾಗಿ ಹತ್ತಿ ಕುಳಿತಿದ್ದೀಯೆ.

(ಯಮನ ವಾಕ್ಯ) ಎಲೈ ನಚಿಕೇತನೇ! ನೀನು ನನ್ನ ಬಳಿಗೆ ಬರಬೇಕೆಂದು ಮನಸ್ಸಿನಲ್ಲಿ ಆಲೋಚಿಸಿ ಅದಕ್ಕಾಗಿ ನಿನ್ನ ಮನಸ್ಸಿನಲ್ಲೇ ಒಂದು ಹೊಸ ರಥವನ್ನು ಕಲ್ಪನೆ ಮಾಡಿಕೊಂಡಿದ್ದೆ. ಆ ರಥದ ಸ್ವರೂಪವು ಬಹು ವಿಚಿತ್ರವಾದದ್ದು. ಅದು ಯಾರೂ ಎಂದೂ ನೋಡಿರದೆ ಹೊಸದಾಗಿರಬೇಕು. ಅದಕ್ಕೆ ಚಕ್ರಗಳಿಲ್ಲ, ಒಂದೇ ಅಚ್ಚಿನ ಮರ. ಆದರೂ ಅದು ಎಲ್ಲೆಡೆ ಸಂಚರಿಸುವಂತಿರಬೇಕು. ಇಂತಹ ರಥವನ್ನು ನಿನ್ನ ಮನಸ್ಸಿನಲ್ಲಿ ಕಲ್ಪನೆ ಮಾಡಿಕೊಂಡು ಹತ್ತಿ ಕುಳಿತಿರುವೆ. ಎಂದರೆ ನನ್ನ (ಮೃತ್ಯು) ಬಳಿಗೆ ಬರುವುದು ಯುಕ್ತವೇ ಅಲ್ಲವೇ ಎಂದು ಯೋಚಿಸದೆ ಸುಮ್ಮನೆ ಹೊರಡಲೇಬೇಕೆಂಬ ಸ್ಥಿರಮನಸ್ಸಿನಿಂದ ಆ ರಥವನ್ನು ಹತ್ತಿ ಕುಳಿತಿರುವೆ ಎಂದರೆ ನನ್ನ ಬಳಿಗೆ ಬರಬೇಕೆಂದು ಮನಸ್ಸಿನಲ್ಲಿ ನಿಶ್ಚಯಮಾಡಿರುವೆ.

ಆದಿತ್ಯಪರವಾದ ಅರ್ಥ
ತನ್ನನ್ನು ಸ್ತೋತ್ರಮಾಡುತ್ತಿರುವ ಋಷಿಕುಮಾರನನ್ನು ಸಂಬೋಧಿಸಿ ಅದಿತ್ಯನು ಅವನಿಗೆ ಪ್ರತ್ಯಕ್ಷನಾಗಿ ದೇಹ ಮತ್ತು ಆತ್ಮಗಳಿಗಿರುವ ಭೇದಭಾವವನ್ನು ತಿಳಿಸಿ ವಿವೇಕ ಜ್ಞಾನವನ್ನು ಬೋಧಿಸುವನು.

ಆದಿತ್ಯನು ಈ ರೀತಿ ಹೇಳುವನು - ಎಲೈ ಋಷಿಕುಮಾರಾನೇ, ಈ ದೇಹವೇ ಒಂದು ರಥದಂತಿರುವುದು, ಇದಕ್ಕೆ ಚಕ್ರವಿಲ್ಲ. ಒಂದೇ ಅಚ್ಚಿನ ಮರವಿರುವುದು ಎಂದರೆ ರಥಕ್ಕೆ ಅಚ್ಚಿನಮರವು ಆಧಾರವಾಗಿರುವಂತೆ ಶರೀರಕ್ಕೆ ಪ್ರಾಣವೇ ಆಧಾರವಾಗಿರುವುದು. ಈ ಶರೀರವು ಪಾದಗಳ ಸಹಾಯದಿಂದ ಎಲ್ಲೆಡೆ ಸಂಚರಿಸಬಲ್ಲದು. ಇದು ನಿನಗೆ ಹೇಗೆ ಪ್ರಾಪ್ತಿಯಾಯಿತೆಂಬುದನ್ನು ಹೇಳುವೆನು ಕೇಳು - ಮನಸ್ಸಿನಲ್ಲಿ ಹುಟ್ಟುವ ಸಂಕಲ್ಪದಿಂದ ಕಾರ್ಯವನ್ನು ಮಾಡಬೇಕೆಂಬ ಕಾಮವು ಉಂಟಾಗುವುದು. ಹೀಗೆ ಅಪೇಕ್ಷೆಯುಂಟಾದರೆ ಪಾಪ-ಪುಣ್ಯ ಕರ್ಮಗಳು ಮಾಡಲ್ಪಡುವುವು. ಈ ವಿಧದ ಕರ್ಮಗಳನ್ನು ಅನುಭೋಗಿಸುವುದಕ್ಕಾಗಿ ಶರೀರವು ಪ್ರಾಪ್ತವಾಗುವುದು. ಈ ರೀತಿಯ ಮನಸ್ಸಂಕಲ್ಪದಿಂದಾಗಿಯೇ ಪ್ರಾಣಿಗೆ ಶರೀರ ಪ್ರಾಪ್ತವಾಗುವುದು. ಈ ಶರೀರವನ್ನು ನಿನ್ನ ಮನಸ್ಸಿನ ಸಂಕಲ್ಪದಿಂದಲೇ ನಿರ್ಮಿಸಿಕೊಂಡಿರುವೆ. ಹಾಗೂ ಪರಬ್ರಹ್ಮನಾದ ನನ್ನ ಸ್ವರೂಪವನ್ನು ತಿಳಿಯದೆ ಆ ದೇಹವೆಂಬ ರಥದಲ್ಲಿಯೇ ಕುಳಿತಿರುವೆ. ಎಂದರೆ, ಬ್ರಹ್ಮಜ್ಞಾನವನ್ನು ಪಡೆಯದೆ ಮುಕ್ತಿಯನ್ನೂ ಪಡೆಯದೆ ಶರೀರದಲ್ಲೇ ನೆಲಸಿದ್ದು ಸಂಸಾರ ಸಾಗರದಲ್ಲಿ ಬಳಲುತ್ತಿರುವೆ ಎಂದು ಆದಿತ್ಯನು ಋಷಿಕುಮಾರನಿಗೆ ದೇಹಾತ್ಮಕ ವಿವೇಕವನ್ನು ಉಪದೇಶಿಸಿರುವರು.

ಯಂ ಕುಮಾರ ಪ್ರಾವರ್ತಯೋ ರಥಂ ವಿಪ್ರೇಭ್ಯಸ್ಪರಿ|
ತಂ ಸಾಮಾನು ಪ್ರಾವರ್ತತ ಸಮಿತೋ ನಾವ್ಯಾಹಿತಂ||4||

ಯಮನ ಪರವಾದ ಅರ್ಥ
ಹೇ ನಚಿಕೇತನೇ! ನನ್ನ ಬಳಿಗೆ ಬರುವುದಕ್ಕಾಗಿ ನೀನು ಹತ್ತಿ ಕುಳಿತು ಭೂಲೋಕದಲ್ಲಿರುವ ಮೇಧಾವಿ ಜನರ ಮೇಲ್ಭಾಗದಲ್ಲಿ ಅಂದರೆ ಅಂತರಿಕ್ಷದ ಮೂಲಕ ನನ್ನ ಬಳಿ ಬಂದೆಯೋ ಅಂತಹ ರಥವನ್ನು ಹಾಗೂ ನಿನ್ನ ತಂದೆಯಿಂದ ನಿನಗೆ ಮಾಡಿದ ಹಿತೋಪದೇಶವೂ ಅದರೊಂದಿಗೆ ನಿನ್ನನ್ನು ಯಮನ ಸಮೀಪಕ್ಕೆ ಹೋಗಿ ಮಾತನಾಡು ಎಂಬ ಸಾಂತ್ವನ ವಚನವೂ ನಿನ್ನನ್ನು ಅನುಸರಿಸಿ ಬಂದಿತು.

ಎಲೈ ನಚಿಕೇತ ಕುಮಾರನೇ, ನನ್ನ ಬಳಿಗೆ ಬರುವುದಕ್ಕಾಗಿ ನೀನು ರಥವನ್ನು ಹತ್ತಿ ಅದರ ಸಹಾಯದಿಂದ ಭೂಮಿಯ ಮೇಲಿರುವ ಬುದ್ಧಿವಂತ ಜನರ ಮೇಲೆ ಅಂತರಿಕ್ಷದಲ್ಲಿ ಹಾದು ಬಂದು ನನ್ನ ಸಮೀಪಕ್ಕೆ ಬಂದಿರುವೆ. ಆ ಕಾಲದಲ್ಲಿ ನಿನ್ನ ತಂದೆಯು ಮಾಡಿದ ಹಿತೋಪದೇಶರೂಪದ ಸಾಂತ್ವನವಚನವೂ ಆ ರಥದ ಜೊತೆಯಲ್ಲಿಯೇ ನಿನ್ನನ್ನು ಅನುಸರಿಸಿ ಬಂದಿತು. ಅಂದರೆ ತಂದೆಯ ಹಿತೋಪದೇಶವು ನಿನ್ನ ಜ್ಞಾಪಕದಲ್ಲಿತ್ತು.

ಸಾಧಾರಣವಾಗಿ ಪಿತೃಲೋಕವೂ (ಯಮಲೋಕ), ಸ್ವರ್ಗಲೋಕವೂ ಎತ್ತರವಾದ ಪ್ರದೇಶದಲ್ಲಿರುವುದೆಂದು ಅಭಿಪ್ರಾಯ. ಹಾಗಾಗಿ ಅಲ್ಲಿರುವ ಯಮಾಲಯಕ್ಕೆ ಹೋಗಲು ಭೂಮಿಯ ಮೇಲಿರುವ ಮನುಷ್ಯರು ಮೇಲೆ ಹಾದು ಹೋಗಬೇಕು. ವಿಪ್ರ ಶಬ್ದಕ್ಕೆ ಮೇಧಾವಿಗಳು, ಬುದ್ಧಿವಂತರು ಎಂಬ ಅರ್ಥವಿರುವುದು. ಮನುಷ್ಯನು ಎಷ್ಟೇ ಬುದ್ಧಿವಂತನಾದರೂ ಯಾವ ಸಾಧನದ ಸಹಾಯವೂ ಇಲ್ಲದೆ ಅಂತರಿಕ್ಧಕ್ಕೆ ಹೋಗಲು ಅಸಾಧ್ಯ. ಆದ್ದರಿಂದಲೇ ಜನರು ಬುದ್ಧಿವಂತರಾಗಿದ್ದರೂ ಅವರು ಭೂಮಿಯ ಮೇಲೇ ಇರುವರು. ನಚಿಕೇತನು ಯಮಾಲಯಕ್ಕೆ ಹೋಗುವಾಗ ಭೂಮಿಯ ಮೇಲಿರುವ ಪರ್ವತಗಳು, ಜೀವಿಗಳನ್ನು ಕೆಳಗೇ ಬಿಟ್ಟು ತಾನು ಮಾತ್ರ ಮೇಲೆ ಹೋದನೆಂಬುದನ್ನು ವಿವರಿಸಲು ಇಲ್ಲಿ ವಿಪ್ರೇಭ್ಯ ಪರಿ ಎಂಬ ಪದಗಳನ್ನು ಋಷಿಯು ಬಳಸಿರುವರು.

ಅದಿತ್ಯಪರವಾದ ಅರ್ಥ
ಎಲೈ ಋಷಿಕುಮಾರನೇ! ನೀನು ಶರೀರವೆಂಬ ರಥದಲ್ಲಿ ಕುಳಿತು (ಎಂದರೆ ಶರೀರಧಾರಿಯಾದ ಮಾನವನಾಗಿ) ಮೇಧಾವಿಗಳ ಮಧ್ಯದಲ್ಲಿ ಸಂಸಾರಕರ್ಮಗಳಲ್ಲಿ ತೊಡಗಿರುವೆ ಹಾಗೂ ವೇದವಾಕ್ಯಗಳಲ್ಲಿ ಅಡಕವಾಗಿರುವುದೂ ಋಕ್ಸಾಮಮಂತ್ರಗಳಿಂದ ನೆರವೇರಿಸಲ್ಪಡುವುದೂ ಅದ ಯಜ್ಞಕರ್ಮಾದಿಗಳನ್ನು ಮಾಡುತ್ತಿರುವೆ. ಈ ಕರ್ಮಗಳನ್ನು ಮಾಡಿದ ಬಳಿಕ ಅದರ ಫಲವಾಗಿ ಸತ್ಯಜ್ಞಾನಾದಿಸ್ವರೂಪನೂ, ನಿರ್ಲಿಪ್ತನೂ ಆದ ಪರಮಾತ್ಮನನ್ನು ನಿನ್ನ ಶುದ್ಧ ಬುದ್ಧಿಯಿಂದ ಸಾಕ್ಧಾತ್ಕರಿಸಿಕೊಂಡು ಪರಮಾತ್ಮನನ್ನು ಸೇರುವೆ ಎಂಬ ಅಭಿಪ್ರಾಯವು.

ಈ ಮಂತ್ರದ ಪೂರ್ವಾರ್ಧದಲ್ಲಿ ಶರೀರಧಾರಿಯಾದ ಮಾನವನು ಸಂಸಾರದಲ್ಲಿ ಪ್ರವೃತ್ತನಾಗುವುದನ್ನೂ ಉತ್ತರಾರ್ಧದಲ್ಲಿ ಸಂಸಾರದಿಂದ ಮುಕ್ತನಾಗಿ ನಿವೃತ್ತಿ ಮಾರ್ಗದಿಂದ ಪರಮಾತ್ಮನನ್ನು ಸಾಕ್ಷಾತ್ಕರಿಸಿಕೊಂಡು ಸದ್ಗತಿಯನ್ನು ಪಡೆಯುವುದನ್ನು ವಿವರಿಸಲಾಗಿದೆ.

ಕಃ ಕುಮಾರಮಜನಯದ್ರಥo ಕೋ ನಿರವರ್ತಯತ್|
ಕಃ ಸ್ವಿತ್ತದದ್ಯ ನೋ ಬ್ರುಯಾದನುದೇಯೀ ಯಥಾಭವತ್||5||

ಯಮನ ಪರವಾದ ಅರ್ಥ
ಯಾವ ಪುರುಷನು ಕುಮಾರನನ್ನು (ಯಮನ ಬಳಿಗೆ ಕಳುಹಿಸುವುದಕ್ಕಾಗಿ) ಉತ್ಪತ್ತಿಮಾಡುತ್ತಾನೋ, ಯಾವ ಪುರುಷನು (ಬಾಲಕನನ್ನು ಯಮನ ಸಮೀಪಕ್ಕೆ ಕಳುಹಿಸುವುದಕ್ಕಾಗಿ) ರಥವನ್ನು ಸಿದ್ಧಗೊಳಿಸುವನೋ, ಯಾವ ರೀತಿ ಕುಮಾರನು ಯಮನಿಗೆ ಒಪ್ಪಿಸಲ್ಪಡುವವನಾಗುತ್ತಾನೆಯೋ (ಅನಂತರ ಅಲ್ಲಿಂದ ಹಿಂದಕ್ಕೆ ಬರಲು) ಅನುಗುಣವಾದ ಉಪಾಯವನ್ನು ಈಗ ನಮಗೆ ಯಾವ ಪುರುಷನು ಹೇಳುತ್ತಾನೆ?

ಪ್ರಪಂಚ ವ್ಯವಹಾರದಲ್ಲಿ ಮೃತ್ಯುವಿನ ವಶಕ್ಕೆ ಒಪ್ಪಿಸುವುದಕ್ಕಾಗಿ ಯಾವ ಪುರುಷನು ತಾನೆ ಪುತ್ರನನ್ನು ಉತ್ಪತ್ತಿಮಾಡುವನು? ತಾನು ಪಡೆದ ಪುತ್ರನನ್ನು ರಥದಲ್ಲಿ ಕುಳ್ಳಿರಿಸಿ ಯಮನ ಸಮೀಪಕ್ಕೆ ಹೋಗುವಂತೆ ಯಾವ ಪುರುಷನು ತಾನೆ ಕಳಿಸುವನು? ಹಾಗೂ ಯಮನ ಬಳಿಗೆ ಕಳಿಸಿದ ನಂತರ ತನ್ನ ಪುತ್ರನನ್ನು ಹಿಂದಕ್ಕೆ ಬರುವ ಉಪಾಯವನ್ನು ಯಾವ ಪುರುಷನು ಹೇಳಿಕೊಡುವನು?

ತಾನೇ ಹಡೆದ ತನ್ನ ಸ್ವಂತ ಪುತ್ರನನ್ನು ಮೃತ್ಯುವಿನ ವಶಕ್ಕೆ ಒಪ್ಪಿಸುವ ತಂದೆಯು ಪ್ರಪಂಚದಲ್ಲಿ ಇರುವರೆ? ಮತ್ತು ತಂದೆಯೇ ಸ್ವತಃ ಮಗನನ್ನು ಯಮನ ಬಳಿಗೆ ಹೋಗೆಂದು ಹೇಳಿ, ಅವನು ಹೋಗುವುದಕ್ಕೆ ರಥವನ್ನು ಸಿದ್ಧಮಾಡಿಕೊಟ್ಟು ಅಲ್ಲಿಂದ ಮತ್ತೆ ಹಿಂತಿರುಗುವ ಉಪಾಯವನ್ನು ಹೇಳಿಕೊಟ್ಟು ಮಗನನ್ನು ಯಮನ ಬಳಿಗೆ ಕಳಿಸುವ ತಂದೆಯೂ ಪ್ರಪಂಚದಲ್ಲಿರುವನೆ? ಒಂದು ವೇಳೆ ಇದ್ದಲ್ಲಿ ಅವನು ಶುದ್ಧ ಮೂರ್ಖನು.

ಆದಿತ್ಯ ಪರವಾದ ಅರ್ಥ
ಕುಮಾರನೆಂಬ ಋಷಿಯು ತಾನು ಪರಮಾತ್ಮನ ಅಂಶವೇ ಎಂದೂ ಪರಮಾತ್ಮನಿಗೂ ತನಗೂ ತಾದಾತ್ಮ್ಯ ಇರುವುದೆಂದೂ ಪರಮಾತ್ಮನನ್ನು ಬಿಟ್ಟು ಅನ್ಯ ವಸ್ತುವು ಇಲ್ಲವೆಂದೂ ಎಲ್ಲವೂ ಪರಮಾತ್ಮನ ಸ್ವತ್ತೇ ಆಗಿರುವುದೆಂದೂ ತಿಳಿದು ಈ ಮಂತ್ರಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಖಂಡಿಸುವನು.

ಕುಮಾರನೆಂಬ ನನ್ನನ್ನು ಯಾವ ತಂದೆಯು ಉತ್ಪತ್ತಿ ಮಾಡಿದನು? ಪ್ರಪಂಚವೂ ಅದರಲ್ಲಿರುವ ಸಮಸ್ತ ಜೀವಿಗಳೂ ಪರಮಾತ್ಮನ ಸ್ವರೂಪವೇ ಆಗಿದ್ದು ಅವನನ್ನು ಬಿಟ್ಟು ಬೇರೆ ವಸ್ತುವೇ ಇಲ್ಲದಿರುವಾಗ ಪುತ್ರನಾರು? ತಂದೆ ಯಾರು? ತಂದೆಯು ಪುತ್ರನನ್ನು ಉತ್ಪತ್ತಿಮಾಡುವುದೆಂದರೇನು? ಇವೆಲ್ಲವೂ ಬರೀ ಭ್ರಾಂತಿ. ನಮ್ಮ ಶರೀರವೇ ಒಂದು ರಥ. ಅದರಲ್ಲಿ ಪರಮಾತ್ಮನ ಅಂಶವಾದ ನಾನು (ಋಷಿಕುಮಾರನು) ನೆಲೆಸಿರುವೆನು. ಇದನ್ನು ಈ ರೀತಿ ಇರುವಂತೆ ಮಾಡಿದವರು ಯಾರು? ಪರಮಾತ್ಮನೇ ಹೊರತು ಬೇರೆ ಅಲ್ಲ. ಪ್ರಪಂಚದಲ್ಲಿ ಆತ್ಮನನ್ನು (ಪರಮಾತ್ಮ) ಬಿಟ್ಟು ಬೇರೆ ಇರುವುದೆಂದು ಯಾರು ಹೇಳುತ್ತಾರೆ? ಹಾಗೆ ಹೇಳುವವನು ಮೂರ್ಖನು ಮತ್ತು ಅವನ ಮಾತು ಶುದ್ಧ ಸುಳ್ಳು. ಏಕೆಂದರೆ ಆತ್ಮವನ್ನು (ಪರಮಾತ್ಮ) ಬಿಟ್ಟು ಬೇರೇನೂ ಇಲ್ಲವೆಂದು ಮುಖ್ಯವಾದ ಅಭಿಪ್ರಾಯ.

ಈ ಮಂತ್ರದಲ್ಲಿ ಬರುವ ಅನುದೇಯಿ ಪದಕ್ಕೆ ಐರೋಪ್ಯ ಪಂಡಿತರು ಅಂತ್ಯಸಂಸ್ಕಾರದಲ್ಲಿ ಮಾಡುವ ದಾನ ಎಂಬುದಾಗಿ ಅನುವಾದಿಸಿರುವರು. ಇದು ಅಸ್ಪಷ್ಟತೆಯಿಂದ ಕೂಡಿರುವುದು. ಈ ರೀತಿಯ ಅನುವಾದವು ಸೂಕ್ತದ ವಸ್ತುವು ಮೃತಶರೀರದ (ಕುಮಾರ) ಅಂತ್ಯಸಂಸ್ಕಾರ ಕುರಿತದ್ದು ಎಂಬ ಊಹೆಯ ಆಧಾರಿತವಾದದ್ದು.

ಕಪಾಲಿ ಶಾಸ್ತ್ರಿಗಳ ವಿವರಣೆಯ ಪ್ರಕಾರ ಅನುದೇಯಿ ಪದದ ನಿಖರವಾದ ಅರ್ಥ - "ಯುಕ್ತ ಕ್ರಮದಲ್ಲಿ ಕೊಡಲ್ಪಡಬೇಕಾದದ್ದು" (ಅನುಕ್ರಮೇಣ ದಾತವ್ಯಂ) ಎಂದಾಗುತ್ತದೆ. ಋಷಿಯು (ನಚಿಕೇತನು), ತನ್ನ ಊರ್ಧ್ವಗಮನದಲ್ಲಿ, ಸುವ್ಯವಸ್ಥಿತ ರೀತಿಯಲ್ಲಿ ತನ್ನನ್ನು ಶ್ರೇಷ್ಠತರ ವ್ಯಕ್ತಿಗೆ ಸಮರ್ಪಿಸಿಕೊಳ್ಳುತ್ತಾನೆ. ನಂತರ ಅವನು ಯುಕ್ತ ಸ್ಥಾನದಲ್ಲಿ ಪುನಃ ಸ್ಥಾಪಿಸಲ್ಪಡುತ್ತಾನೆ. ಭೂಮಿಯ ಸ್ತರದಿಂದ ಉನ್ನತ ಸ್ತರಕ್ಕೆ ಹೋಗುವಾಗ ಸ್ವಾಭಾವಿಕವಾಗಿ ಅವನ ಮುಂಭಾಗವು ಮೊದಲಿಗೆ ಪಾರ್ಥಿವ ಪ್ರಜ್ಞಾಸ್ತರಕ್ಕಿಂತ ಮೇಲೆದ್ದು ಬರುತ್ತದೆ, ಅನಂತರ ಮೇಲಿರುವ ವಿಶ್ವದ ನೆಲೆಗಟ್ಟು ಅವನೆದುರಿಗೆ ವಿಸ್ತಾರವಾಗಿ ಹರಡಿಕೊಂಡಿದ್ದು ಗೋಚರಿಸುವುದು. ಅನಂತರ ಅವನು ಪಿತೃವಿನತ್ತ ಚಲಿಸುವಾಗ ಅವನು ಚಲಿಸುವ ಮಾರ್ಗವು ಅವನ ಹಿಂಭಾಗದಲ್ಲಿ ಸ್ಪಷ್ಟವಾಗಿರುವುದು.

ಇದೇ ಅನುದೇಯಿ ಪದವು ಮುಂದಿನ ಮಂತ್ರದಲ್ಲೂ ಬರುತ್ತದೆ.

ಯಥಾಭವದನುದೇಯಿ ತತೋ ಆಗ್ರಮಜಾಯತ|
ಪುರಸ್ತಾದ್ಬುದ್ನ ಆತತಃ ಪಶ್ಚಾನ್ನಿರಯಣಂ ಕೃತಂ||6||

ಯಮನ ಪರವಾದ ಅರ್ಥ
ತಂದೆಯಾದ ವಾಜಾಶ್ರವಸ್ಸು ತನ್ನ ಮಗನಾದ ನಚಿಕೇತನಿಗೆ ಯಮನ ಮನೆಗೆ ಹೋಗು ಎಂದು ಹೇಳುವುದಕ್ಕೆ ಮೊದಲೇ ನಚಿಕೇತನು ಯಮನ ಮನೆಯಿಂದ ಮರಳಿ ಬರುವ ಉಪಾಯವು ಅವನ ಮನಸ್ಸಿನಲ್ಲಿ ಹೊಳೆಯಿತು. ಆದ್ದರಿಂದ ಯಮನ ಮನೆಗೆ ಹೋಗು ಎಂದು ಹೇಳುವುದಕ್ಕೆ ಮೊದಲೇ ತಂದೆಯು ಮಗನ ಪುನರಾಗಮನದ ಉಪಾಯವನ್ನು ನಿಶ್ಚಯಿಸಿದ್ದನು.

ತಂದೆಯು ಮಗನಾದ ನಚಿಕೇತನನ್ನು ಯಮನ ಮನೆಗೆ ಹೋಗು ಎಂದು ಹೇಳಿದನಷ್ಟೆ. ಆದರೆ ಹಾಗೆ ಹೇಳುವುದಕ್ಕೆ ಮೊದಲೇ ಅವನು ಅಲ್ಲಿಂದ ಹಿಂದಕ್ಕೆ ಹೇಗೆ ತನ್ನ ಬಳಿಗೆ ಬರಬೇಕೆಂಬ ವಿಷಯದಲ್ಲಿ ಉಪಾಯವನ್ನು ಯೋಚಿಸಿಯೇ ಹಾಗೆ ಹೇಳಿದನು. ಕೋಪದ ಭರದಲ್ಲಿ ಯಮನ ಮನೆಗೆ ಹೋಗು ಎಂದು ಹೇಳಿದರೂ ಅನಂತರ ಕೋಪವನ್ನು ತ್ಯಜಿಸಿ ಸಮಾಧಾನವಾದ ಮನಸ್ಸಿನಿಂದ ತನ್ನ ಪುತ್ರನು ಯಮನ ಮನೆಯಿಂದ ಹಿಂದಕ್ಕೆ ಬರಲು ತಕ್ಕ ಉಪಾಯವನ್ನು ಮಾಡಿದನು ಎಂಬ ಅಭಿಪ್ರಾಯ.

ಆದಿತ್ಯ ಪರವಾದ ಅರ್ಥವು
ಆತ್ಮವ್ಯತಿರಿಕ್ತವಾದ ವಸ್ತುವು ಈ ಪ್ರಪಂಚದಲ್ಲಿ ಇದೆ ಎಂಬುದಾಗಿ ಸಾಮಾನ್ಯರ ಮನಸ್ಸಿನಲ್ಲಿ ತೋರುವುದಷ್ಟೆ. ಈ ರೀತಿಯ ಮಿಥ್ಯಾಬುದ್ಧಿಯು ಮನದಲ್ಲಿ ಉಂಟಾಗುವುದಕ್ಕೆ ಮೊದಲೇ ಮನಸ್ತತ್ತ್ವವು (ಎಂದರೆ ಪ್ರಾಣಿಗಳ ಮನಸ್ಸು) ಸೃಷ್ಟಿಸಲ್ಪಟ್ಟಿತು. ಮನಸ್ಸು ಸೃಷ್ಟಿಸಲ್ಪಟ್ಟಮೇಲೆ ಮನಸ್ಸಿನ ವ್ಯಾಪಾರಗಳು ನಡೆಯುವವು. ಅನಂತರ ಮನಸ್ಸಿನ ವ್ಯಾಪಾರದ ಆಲೋಚನೆ ಎಂದರೆ ಆತ್ಮವ್ಯತಿರಿಕ್ತವಾದ ವಸ್ತುಗಳು ಇರುವವು ಎಂಬ ಮಿಥ್ಯಾ ಬುದ್ಧಿಯು ಉತ್ಪನ್ನವಾಯಿತು. ಸೃಷ್ಟಿಪೂರ್ವದಲ್ಲಿ ಬ್ರಹ್ಮವು ಅವ್ಯಕ್ತಾವಸ್ಥೆಯಲ್ಲಿದ್ದಾಗ ಈ ಜಗತ್ತು ಆ ಅವ್ಯಕ್ತಾವಸ್ಥೆಯಲ್ಲಿ ಕಾರಣರೂಪದಿಂದ ಇದ್ದವು. ಅನಂತರ ಅವ್ಯಕ್ತವು ವ್ಯಕ್ತಸ್ಥಿತಿಗೆ ಬಂದಾಗ ಜಗತ್ತಿನ ವಸ್ತುಗಳು ಕಾರಣಾವಸ್ಥೆಯಿಂದ .ಕಾರ್ಯಾವಸ್ಥೆಗೆ ಬಂದವು. ಇದೆಲ್ಲವೂ ಬ್ರಹ್ಮ ಸೃಷ್ಟಿ. ಉದಾಹರಣೆಗೆ ಮಡಕೆ ಮೊದಲಾದ ಮಣ್ಣಿನ ವಸ್ತುಗಳು ನಾನಾ ವಿಧದ ಆಕಾರಗಳಿಂದ ಕಾಣುತ್ತಿದ್ದರೂ ಅವುಗಳ ಮೂಲ ಕೇವಲ ಮಣ್ಣು ಮಾತ್ರ. ಹಾಗೇ ಜಗತ್ತಿನಲ್ಲಿ ಕಂಡುಬರುವ ವಸ್ತುಗಳೂ ನಾನಾಬಗೆಯದ್ದಾಗಿದ್ದರೂ ಅವುಗಳ ಮೂಲವು ಬ್ರಹ್ಮನೇ. ಆದ್ದರಿಂದ ಅದಿತ್ಯನ ಅನುಗ್ರಹದಿಂದ ಬ್ರಹ್ಮಭಾವವನ್ನು ಪಡೆದಿರುವ ನನಗೆ ನನಗಿಂತ ಬೇರೆಯಾದ ವಸ್ತುವು ಪ್ರಪಂಚದಲ್ಲಿ ಇಲ್ಲವೆಂಬ ಪರಿಜ್ಞಾನವು ಉಂಟಾಗಿರುವುದೆಂದು ಋಷಿಯು ವರ್ಣಿಸಿರುವನು.

ಇದಂ ಯಮಸ್ಯ ಸಾಧನಂ ದೇವಮಾನಂ ಯದುಚ್ಯತೇ|
ಇಯಮಸ್ಯ ಧಮ್ಯತೇ ನಾಳೀರಯಂ ಗೀರ್ಭಿಃ ಪರಿಷ್ಕೃತಃ||7||

ಯಮನ ಪರವಾದ ಅರ್ಥ
ದೇವತೆಗಳಿಂದ ನಿರ್ಮಿತವಾದ ಈ ಯಮಲೋಕವೇ ಯಮನ ನಿವಾಸಸ್ಥಾನವೆಂದು ಪ್ರಸಿದ್ಧವಾಗಿದೆ. ಈ ಯಮನ ಪ್ರೀತ್ಯರ್ಥವಾಗಿ ವೇನುವೆಂಬ ವಾದ್ಯವಿಶೇಷವನ್ನು ಊದುತ್ತಾರೆ ಮತ್ತು ಈ ಯಮನು ಸ್ತುತಿರೂಪವಾದ ವಾಕ್ಯಗಳಿಂದ ಪ್ರಶಂಸಿಸಲ್ಪಡುತ್ತಾನೆ.

ಆದಿತ್ಯ ಪರವಾದ ಅರ್ಥ
ದೇವತೆಗಳಿಂದ ಅಥವಾ ಪ್ರಕಾಶಮಾನವಾದ ರಶ್ಮಿಗಳಿಂದ ಯಾವ ಸ್ಥಾನವು ನಿರ್ಮಿತವಾಗಿದೆಯೋ ಅದು ಆದಿತ್ಯಮಂಡಲವೆಂದು ಪ್ರಸಿದ್ಧವಾಗಿದೆ. ಈ ಆದಿತ್ಯಮಂಡಲವೇ ಅದಿತ್ಯನ ಸ್ಥಾನ. ಈ ಅದಿತ್ಯನ ಪ್ರೀತ್ಯರ್ಥವಾಗಿ ಸ್ತುತಿರೂಪವಾದ ವಾಕ್ಯಗಳನ್ನು ಪಠಿಸುತ್ತಾ ಸ್ತೋತ್ರಾದಿಗಳಿಂದ ಜನರು ಆದಿತ್ಯನನ್ನು ಸ್ತುತಿಸುತ್ತಾರೆ.

ಈ ಸೂಕ್ತದಲ್ಲಿನ ಮಂತ್ರಗಳು ಅರ್ಥಗರ್ಭಿತವಾಗಿವೆ. ಅದರಂತೆ ಋಷಿಕುಮಾರನು ಯಮಾಲಯದೆಡೆಗೆ ಹೋಗುವುದು ತನ್ನ ಮನಸ್ಸಿನಲ್ಲಿ ರಚಿತವಾದ ರಥದಲ್ಲಿ. ಈ ರಥಕ್ಕೆ ಚಕ್ರಗಳಿಲ್ಲ, ಒಂದೇ ಸ್ತಂಭ. ಎಲ್ಲೆಡೆಗೂ ಚಲಿಸುವಂಥದ್ದು, ಹಾಗೂ ಅವನ ಉರ್ಧ್ವಗತಿಯ ಪ್ರತಿಯೊಂದು ಹಂತದಲ್ಲೂ ಚಲಿಸುವಂಥದ್ದು, ಅವನ ಪ್ರಯಾಣದ ಹಿಂಭಾಗದಲ್ಲಿ ಹಾದಿಯು ಸೃಷ್ಟಿಸಲ್ಪಡುವುದು. ದಾರಿಯು ಮುಕ್ತವಾಗುತ್ತಾ ಹೋಗುವುದು. ಅದರಿಂದಾಗಿ ಯಮಾಲಯದಿಂದ ಮರಳಿ ಪಾರ್ಥಿವ ಜೀವನಕ್ಕೆ ಬರುವುದು ಸುಲಭವಾಗುತ್ತದೆ. ಅಲ್ಲದೆ, ಈ ಜೀವನ ಮತ್ತು ಅದರಾಚೆಗೆ ಎನಿರುವುದೋ ಅದರೊಂದಿಗಿನ ಸಂವಹನವೂ ಸ್ವಾಭಾವಿಕವೂ ನಿಶ್ಚಿತವೂ ಆಗುವುದು. ಈ ಸೂಕ್ತದ ಒಗಟಿನಂತಿರುವ ಸ್ವರೂಪ, ಕುತೂಹಲದ ಮುಸುಕನ್ನೆಳೆದ ಸಂಭಾಷಣೆ, ಯಮನು ಬಳಸಿದ ಒಗಟಿನಂತಹ ಶಬ್ದಗಳು, ಆ ಋಷಿಯು ಸಿದ್ಧಿಸಿಕೊಂಡ ಆಧ್ಯಾತ್ಮಿಕ ಸ್ಥಿತಿಯ ರಹಸ್ಯಮಯ ಸ್ವರೂಪವನ್ನು ತೋರುತ್ತದೆ.

ಇಲ್ಲಿಗೆ ಋಗ್ವೇದದ ಹತ್ತನೇ ಮಂಡಲದಲ್ಲಿನ 135ನೇ ಸೂಕ್ತವು ಮುಗಿದಿದೆ.

ಮೂಲ : ಋಗ್ವೇದ ಸಂಹಿತ - ಭಾಗ - 30
ಸಂಗ್ರಹ : ಗುರುಪ್ರಸಾದ್ ಹಾಲ್ಕುರಿಕೆ



ಯಜ್ಞ - ಸಂಕೇತಾರ್ಥ - ಒಂದು ಸಂಕ್ಷಿಪ್ತ ಲೇಖನ

ಯಜ್ಞ - ಸಂಕೇತಾರ್ಥ - ಒಂದು ಸಂಕ್ಷಿಪ್ತ ಲೇಖನ

ದೀರ್ಘ ಹಾಗೂ ಫಲಪ್ರದವಾದ ಪ್ರಾಪಂಚಿಕ ಜೀವನ ಹಾಗೂ ಅಧ್ಯಾತ್ಮಿಕ ಪರಿಪೂರ್ಣತೆಯನ್ನು ಹೊಂದಲು ಅತ್ಯಂತ ಶಕ್ತಿಶಾಲಿ ಮಾರ್ಗವೇ ಯಜ್ಞ.
ಯಜ್ಞಗಳಲ್ಲಿ ಎರಡು ವಿಧ - ಬಾಹ್ಯ ಯಜ್ಞ ಮತ್ತು ಅಂತರ್ಯಜ್ಞ.
ಉದ್ದೇಶವನ್ನವಲಂಬಿಸಿ ಹಾಗೂ ನಿರ್ದಿಷ್ಟ ಫಲವನ್ನು ಪಡೆಯುವ ಸಲುವಾಗಿ ವೈವಿಧ್ಯಪೂರ್ಣವಾದ ಆಚರಣೆಗಳ ಮೂಲಕ ಆಚರಿಸುವ ಯಜ್ಞವು ಕಾಮ್ಯಯಜ್ಞ.

ಸೃಷ್ಟಿ ಕಾರ್ಯವೂ ಯಜ್ಞ. ವಿಶ್ವದಲ್ಲಿ ಘಟಿಸುವ ಸಮಸ್ತ ಸಕಾರಾತ್ಮಕ ಚಟುವಟಿಕೆಗಳೂ ಸಹ ಯಜ್ಞ ಹಾಗೂ ಇಡೀ ಜೀವನವೇ ಯಜ್ಞ - ಯಜ್ನೋ ವೈ ಶ್ರೇಷ್ಠತಮಂ ಕರ್ಮ - ಆಜೀವಂ ಯಜ್ಞ ತನುತೇ - ಜೀವನಂ ಹಿ ಯಜ್ಞ ಇತಿ.

ಅಧ್ವರ ಎಂದರೆ ಪ್ರಯಾಣ ಹಾಗೂ ಈ ಪದವು ಯಜ್ಞ ಪದಕ್ಕೆ ಸಮಾನಾರ್ಥಕ. ಸಕಾರಾತ್ಮಕ ಮತ್ತು ನಕಾರಾತ್ಮಕ ಶಕ್ತಿಗಳ ನಡುವಿನ ಘರ್ಷಣೆಯೊಂದಿಗೆ ಆಧ್ಯಾತ್ಮಿಕ ಗುರಿಯೆಡೆಗೆ ಪಯಣಿಸುವ ಕ್ರಿಯೆಯನ್ನು ದೃಶ್ಯೀಕರಿಸಿಕೊಳ್ಳುವುದೇ ಯಜ್ಞ.

ಅಂತರ್ಯಜ್ಞದ ಕೇಂದ್ರೀಕರಣವನ್ನು ಯಜುರ್ವೇದದಲ್ಲಿ ಸ್ಪಷ್ಟವಾಗಿ ಕಾಣಬಹುದು:

ಅಗ್ನಿಃ - ಪಶುರಾಸೀತ್ ತೇನಾಯಜಂತ ಸ ಏತಲ್ಲೋಕಮಜಯಧ್ಯಸ್ಮಿನ್ನಗ್ನಿ ಸ ತೆ ಲೋಕೋ ಭವಿಷ್ಯತಿ ತಂ ಜೇಷ್ಯಸಿ ಪಿಬೈತಾ ಆಪಃ
ಇದೇ ರೀತಿಯಾಗಿ ವಾಯು ಹಾಗೂ ಸೂರ್ಯರಿಗೂ.

ಇಲ್ಲಿ ಅಗ್ನಿ, ವಾಯು ಹಾಗೂ ಸೂರ್ಯರನ್ನು ಸ್ಪಷ್ಟವಾಗಿ ಬಲಿಕೊಡುವ ಪಶುಗಳೆಂದು ಸೂಚಿಸಲಾಗಿದೆ. ಇಲ್ಲಿ ಎರಡು ವಿಧವಾದ ಬಲಿಕೊಡುವ ರೀತಿಗಳಿವೆ. ಅವುಗಳೆಂದರೆ - ಪಶುಯಜ್ಞ (ಪಶುಗಳನ್ನು ಬಲಿಕೊಡುವುದು) ಹಾಗೂ ಅಪಶುಯಜ್ಞ (ಪಶುರಹಿತ ಬಲಿಗಳು). ಎರಡನೇ ರೀತಿಗೆ ಉದಾಹರಣೆಯೆಂದರೆ ಅತಿಥಿಯಜ್ಞ, ಸ್ವಾಧ್ಯಾಯಯಜ್ಞ. ಶತಪಥ ಬ್ರಾಹ್ಮಣದಲ್ಲಿ ಐದು ರೀತಿಯ ಯಜ್ಞಗಳ ಬಗ್ಗೆ ವಿವರಗಳಿವೆ. ಅವುಗಳೆಂದರೆ - ಭೂತಯಜ್ಞ, ಮನುಷ್ಯಯಜ್ಞ, ಪಿತೃಯಜ್ಞ, ದೇವಯಜ್ಞ ಹಾಗೂ ಬ್ರಹ್ಮಯಜ್ಞ. ಇಲ್ಲಿ ಸ್ವಾಧ್ಯಾಯಯಜ್ಞ ಅಂದರೆ ವೇದಾಧ್ಯಯನವು ಬ್ರಹ್ಮಯಜ್ಞದ ರೂಪಾಂತರವೆಂದು ವಿವರಿಸಲಾಗಿದೆ.

ಅಥರ್ವವೇದದಲ್ಲಿ ಯಜ್ಞದ ಪ್ರಕ್ರಿಯೆಯಾದ ಬಲಿಗಳ ಬಗ್ಗೆ ಅಂತರಾರ್ಥವನ್ನು ನೋಡಬಹುದು:

ಯಜ್ಞಸ್ಯ ಚಕ್ಷುಃ ಪ್ರಭೃತಿರ್ಮುಖಂ ಚ ವಾಚಾ ಶ್ರೋತ್ರೇಣ ಮನಸಾ ಜುಹೋಮಿ|
ಇಮಂ ಯಜ್ಞಂ ವಿತತಂ ವಿಶ್ವಕರ್ಮಣಾ ದೇವಾ ಯಂತು ಸುಮನಸ್ಯ ಮಾನಾಃ||

ಯಜ್ಞದ ಯಜಮಾನನು ಇಲ್ಲಿ ತಿಳಿಸುವುದೇನೆಂದರೆ, "ನಾನು ಯಜ್ಞವನ್ನು ನನ್ನ ಕಣ್ಣುಗಳು, ಮಾತು, ಕಿವಿಗಳು ಹಾಗೂ ಮನಸ್ಸುಗಳ ಮೂಲಕ ಮಾಡುವೆ." ಈ ನುಡಿಗಳು ಸ್ಪಷ್ಟವಾಗಿ ಅಂತರ್ಯಜ್ಞದ ಬಗೆಗೆ ಸೂಚಿಸುವುದು. ಈ ಯಜ್ಞದ ಮೂಲಕ ಯಜಮಾನನು ತನ್ನ ಇಂದ್ರಿಯ ಸಾಮರ್ಥ್ಯವನ್ನು ಹಾಗೂ ಮಾನಸಿಕ ಶಕ್ತಿಯನ್ನು ಕೋರುತ್ತಾನೆ. ಹೀಗೆ ಯಜ್ಞವನ್ನು ಉತ್ತಮವಾದ ಕಾರ್ಯವೆಂದು ಬಣ್ಣಿಸಲಾಗಿದೆ (ಯಜ್ನೋ ವೈ ಶ್ರೇಷ್ಠತಮಂ ಕರ್ಮ).

ಅಧ್ವರವು ಯಜ್ಞ ಪದಕ್ಕೆ ಸಮಾನಾರ್ಥವಾದದ್ದು. ವೇದ ಋಷಿಗಳು ತಮ್ಮ ಜೀವನದಲ್ಲಿನ ಸಮಸ್ತ ಅನ್ವೇಷಣೆಯನ್ನು ಅಧ್ವರ ಅಥವಾ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುವೆಡಗಿನ ಪ್ರಯಾಣವೆಂದು ಪರಿಗಣಿಸಿದ್ದರು. ಯಜ್ಞವನ್ನು ಹೋರಾಟವೆಂದೂ ಪರಿಗಣಿಸಬಹುದು. ಇದು ವಿಶ್ವದಲ್ಲಿನ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ನಡುವಿನ ಭೀಕರ ಹೋರಾಟ.

ಬಹಿರ್ಯಜ್ಞದಲ್ಲಿ ನೀಡುವ ಅರ್ಪಣೆ ಅಥವಾ ಅಹುತಿಗಳಾದ ತುಪ್ಪ ಇತರೆ ಪದಾರ್ಥಗಳು ಕ್ರಿಯೆ, ಸಂತಸ ಮತ್ತು ಅನಂದಗಳ ಸಂಕೇತ. ಯಜ್ಞದ ಫಲವು ಗೋ ಸಂಪತ್ತಿನ ವೃದ್ಧಿ, ಪುತ್ರಕಾಮೇಷ್ಠಿ ಇತರೆ. ಗೋವು ಜ್ಞಾನಜ್ಯೋತಿಯ ಬೆಳಗುವಿಕೆಯಾದರೆ, ಅಶ್ವವು (ಕುದುರೆ) ಶಕ್ತಿ, ಸಾಮರ್ಥ್ಯ ಅಥವಾ ಸಕ್ರಿಯ ಶಕ್ತಿಗಳಾಗಿ ಸಂಕೇತಿಸಲಾಗಿದೆ.

ಅಧ್ವರ್ಯು - ಎಲ್ಲ ಪುರೋಹಿತರಿಗೂ ಮುಂದಾಳು. ಯಜ್ಞದ ಸಂಪೂರ್ಣ ಜವಾಬ್ದಾರಿಯು ಇವನ ಮೇಲೇ ಇರುವುದು.
ಮಾತರಿಶ್ವಾನ್ - ವಾಯು ಅಂತರಂಗ ಯಜ್ಞದಲ್ಲಿ ಅಧ್ವರ್ಯು ಪುರೋಹಿತ.

ಅಧ್ವರ - ಯಜ್ಞ ಪದಕ್ಕೆ ಮತ್ತೊಂದು ಹೆಸರು. ಅಧ್ವರ ಎಂದರೆ ವೇದ ಋಷಿಗಳು (ಅಧ್ವಾನಾಮ್ ರತಿ) ಅಧ್ವರ್ಯುವಿನ ನೇತೃತ್ವದಲ್ಲಿ ಕೊನೆಯ ಗುರಿಯಾದ ಅಮರತ್ತ್ವ ಮತ್ತು ಸತ್ಯ ಹಾಗೂ ಪರಮಾನಂದವನ್ನು ತಲುಪಲು ಕೈಗೊಳ್ಳುವ ದೀರ್ಘ ಯಾತ್ರೆ.

ಉದ್ಗಾತರ್ ಪುರೋಹಿತನು ಸಾಮ ಮಂತ್ರ ಗಾನದಿಂದ ದೇವತೆಗಳನ್ನು ತೃಪ್ತಿಪಡಿಸುವನು. ಅದಿತ್ಯನು ಉದ್ಗಾತರ್ ಆಗಿ ಕಾರ್ಯ ನಿರ್ವಹಿಸುವನು ಮತ್ತು ಅವನ ಗಾಯನವು

(ಉದ್ಗೀತ) ಸುತ್ತಲೂ ಪ್ರತಿಧ್ವನಿಸುತ್ತದೆ.

ನಾಲ್ಕನೇ ಋತ್ವಿಕ್ ಬ್ರಹ್ಮ. ಬ್ರಹ್ಮನು ಯಜ್ಞದ ಸಮಸ್ತ ಆಗುಹೋಗುಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗುವನು. ಅವನು ಮೌನವಾಗಿರುವನು ಮತ್ತು ಓಂ ಮಂತ್ರವನ್ನು ಸೂಕ್ತ ಸಮಯದಲ್ಲಿ ಸಮ್ಮತಿ ಸೂಚಕವಾಗಿ ಉಚ್ಚರಿಸುವನು. ಬ್ರಹ್ಮನೇ ಮಂತ್ರಗಳ ದೇವತೆ ಹಾಗಾಗಿ ಬ್ರಹ್ಮಣಸ್ಪತಿ.

ಮೂಲ: ಡಾ.ಜಯಂತಿ ಮನೋಹರ ಅವರ "Symbolism of Rig-Veda" ಕೃತಿಯಿಂದ ಸ್ಫೂರ್ತಿಯನ್ನು ಪಡೆಯಲಾಗಿದೆ.
ಕನ್ನಡಕ್ಕೆ : ಗುರುಪ್ರಸಾದ್ ಹಾಲ್ಕುರಿಕ

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು

ವೇದಾರ್ಥವಿಚಾರದಲ್ಲಿ ಪ್ರಾಚೀನರ ಪ್ರಯತ್ನಗಳು ವೇದದ ಭಾಗವೇ ಆಗಿರುವ ಬ್ರಾಹ್ಮಣಗಳು ಸ್ವತಃ ಅರ್ಥನಿರೂಪಣೆಯಲ್ಲಿ ತೊಡಗಿವೆ. ಆದರೆ ಇವು ಮಂತ್ರಾರ್ಥಗಳನ್ನು ವಿವರಿಸುವುದಿಲ್ಲ...